Site icon Vistara News

Nisha Yogeshwar: ಕಾಂಗ್ರೆಸ್‌ ಸೇರುವೆ ಎಂದು ಕಣ್ಣೀರಿಟ್ಟ ನಿಶಾ ಯೋಗೇಶ್ವರ್; ಮತ್ತೆ ವಾಪಸ್‌ ಕಳುಹಿಸಿದ ಡಿಕೆಶಿ!

Nisha Yogeshwar

ಬೆಂಗಳೂರು: ಬಿಜೆಪಿ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್‌ ಅವರ ಪುತ್ರಿ ನಿಶಾ ಯೋಗೇಶ್ವರ್‌ (Nisha Yogeshwar) ಕಾಂಗ್ರೆಸ್‌ ಸೇರ್ಪಡೆಗೆ ತುದಿಗಾಲ ಮೇಲೆ ನಿಂತಿದ್ದು, ಇದಕ್ಕಾಗಿ ಕಾಂಗ್ರೆಸ್‌ ನಾಯಕರನ್ನು ನಿರಂತರವಾಗಿ ಭೇಟಿಯಾಗುತ್ತಿದ್ದಾರೆ. ಇತ್ತೀಚೆಗೆ ಭೇಟಿಯಾಗಿದ್ದಾಗ ಅಪ್ಪ-ಮಗಳನ್ನು ಬೇರೆ ಮಾಡಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದ್ದರು. ಇದೀಗ ಮತ್ತೊಮ್ಮೆ ಕೆಪಿಸಿಸಿ ಕಚೇರಿಗೆ ನಿಶಾ ಯೋಗೇಶ್ವರ್‌ ಹೋಗಿ, ಕಾಂಗ್ರೆಸ್‌ಗೆ ಸೇರಿಸಿಕೊಳ್ಳುವಂತೆ ಡಿಸಿಎಂ ಮುಂದೆ ಕಣ್ಣೀರು ಹಾಕಿದ್ದಾರೆ.

ಕೆಪಿಸಿಸಿ ಕಚೇರಿಗೆ ಸೋಮವಾರ ನಿಶಾ ಯೋಗೇಶ್ವರ್‌ ದಿಢೀರಣೆ ಭೇಟಿ ನೀಡಿದ್ದಾರೆ. ಈ ವೇಳೆ ಡಿಕೆಶಿ ಅವರ ಕಾಲಿಗೆ ನಮಸ್ಕರಿಸಿ ಮಾತುಕತೆ ನಡೆಸಿದರು. ಯಾವುದೋ ಕೆಲಸದ ನಿಮಿತ್ತ ಹೋಗುತ್ತಿದ್ದ ಡಿಕೆಶಿ ಅವರು ತಲೆಯಲ್ಲಿ ಏನೋ ಇದೆ, ಮತ್ತೆ ಕರೆ ಮಾಡುತ್ತೇನೆ ಹೋಗಮ್ಮ ಎಂದ ಹೇಳಿ ಕಳುಹಿಸಿದ್ದಾರೆ. ಆದರೆ, ನಿಶಾ ಯೋಗೇಶ್ವರ್‌ ಮಾತ್ರ ತಮ್ಮನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳಬೇಕು ಎಂದು ಪಟ್ಟು ಹಿಡಿದು ಕಣ್ಣೀರಿಟ್ಟಿದ್ದಾರೆ.

ಇದನ್ನೂ ಓದಿ | Lok Sabha Election 2024: ಗನ್‌ ಇಟ್ಟುಕೊಂಡು ಬಂದು ಸಿಎಂಗೆ ಹಾರ ಹಾಕಿದ ವ್ಯಕ್ತಿ! ಭದ್ರತಾ ವೈಫಲ್ಯ?

ಅಪ್ಪ-ಮಗಳನ್ನು ದೂರಮಾಡಲ್ಲ ಎಂದಿದ್ದ ಡಿಕೆಶಿ

ಇತ್ತೀಚೆಗೆ ಮಾತನಾಡಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು, ನಿಶಾ ಯೋಗೇಶ್ವರ್ ಕಾಂಗ್ರೆಸ್ ಸೇರುವುದಾಗಿ ಭೇಟಿಯಾಗಿದ್ದರು. ಪಾಪ ಧೈರ್ಯವಂತ ಹೆಣ್ಣು ಮಗಳು. ಈಗ ಏನೋ ಧೈರ್ಯ ಮಾಡಿದ್ದಾಳೆ. ಆದರೆ, ಅಪ್ಪ – ಮಗಳನ್ನು ದೂರ ಮಾಡಬಾರದು ಅಂತ ನಾನು ಸುಮ್ಮನೆ ಇದ್ದೇನೆ. ನಾಳೆ ಜನ ನನ್ನನ್ನು ಪ್ರಶ್ನೆ ಮಾಡಬಾರದಲ್ಲವೇ? ನೀವೇಕೆ ಅಪ್ಪ – ಮಗಳನ್ನು ದೂರ ಮಾಡಿದಿರಿ ಎಂದು ಕೇಳಬಾರದಲ್ಲವೇ? ಆ ಕಾರಣಕ್ಕಾಗಿಯೇ ನಾನು ಸುಮ್ಮನೆ ಇದ್ದೇನೆ ಎಂದು ಹೇಳಿದ್ದರು.

ನಿಶಾ ಹಾಗೂ ಅವರ ತಾಯಿ ಇಬ್ಬರೂ ನನಗೆ ಪರಿಚಯವಿದ್ದಾರೆ. ಆದರೆ, ಅವರ ಕುಟುಂಬದಲ್ಲಿ ಏನೇನಿದೆಯೋ? ಸಿ.ಪಿ. ಯೋಗೇಶ್ವರ್ ಈಗಿನ ಸಂಸಾರದ ಬಗ್ಗೆ ನನಗೆ ಗೊತ್ತಿಲ್ಲ. ಆದರೆ, ನಾಳೆ ಅಪ್ಪ – ಮಗಳು ಸರಿ ಹೋಗಬಹುದು. ಹೀಗಾಗಿ ನಾನು ಅಪ್ಪ – ಮಗಳನ್ನು ದೂರ ಮಾಡಬಾರದು ಎಂದು ಇನ್ನೂ ತೀರ್ಮಾನ ಹೇಳಿಲ್ಲ. ನಾಳೆ ಆ ಹೆಣ್ಣು ಮಗಳಿಗೆ ಮದುವೆ ಮಾಡಬೇಕಿದೆ. ಅದಕ್ಕೆ ಅಕ್ಷತೆ ಕಾಳು ಹಾಕಬೇಕು, ಹಾಲು ಎರೆಯಬೇಕು. ಈಗಾಗಲೇ ಆಕೆಗೆ ಮದುವೆ ಆಗಿ ಅವರದ್ದೇ ಕುಟುಂಬ ಇದ್ದಿದ್ದರೆ ನಿಶಾ ಅವರ ಪಕ್ಷ ಸೇರ್ಪಡೆ ವಿಚಾರ ಬೇರೆಯಾಗುತ್ತಿತ್ತು ಎಂದು ಡಿ.ಕೆ. ಶಿವಕುಮಾರ್‌ ಹೇಳಿದ್ದರು.

ಇದನ್ನೂ ಓದಿ | Lok Sabha Election 2024: ಎಚ್‌ಡಿಕೆ ಕಾಣೆಯಾಗಿದ್ದಾರೆ! ಇನ್ನು ಜನರಿಗೆ ಸಿಗ್ತಾರಾ; ಏನಿದು ಪೋಸ್ಟರ್?

ಅಪ್ಪನ ವಿರುದ್ಧ ಸ್ಪರ್ಧೆಗೆ ರೆಡಿಯಾದರೇ ನಿಶಾ

ಇತ್ತೀಚೆಗೆ ಮಾಧ್ಯಮಗಳೊಂದಿಗೆ ನಿಶಾ ಯೋಗೇಶ್ವರ್ ಮಾತನಾಡುತ್ತಾ‌, ತಾವು ಕಾಂಗ್ರೆಸ್‌ ಸೇರ್ಪಡೆಯಾಗಲು ತಂದೆಯವರ ಸಹಮತವೂ ಇದೆ ಎಂದು ಹೇಳಿದ್ದರು. ಅಲ್ಲದೆ, ಕಾಂಗ್ರೆಸ್‌ನಿಂದ ಟಿಕೆಟ್‌ ಸಿಕ್ಕಿದರೆ ಚನ್ನಪಟ್ಟಣದಿಂದ ಸ್ಪರ್ಧಿಸಲು ಸಿದ್ಧ ಎಂದು ಹೇಳಿಕೆ ನೀಡಿದ್ದರು. ಅಂದರೆ, ಹಾಲಿ ಶಾಸಕ ಎಚ್‌.ಡಿ. ಕುಮಾರಸ್ವಾಮಿ ಅವರು ಮಂಡ್ಯದಿಂದ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಿದ್ದು, ಅಲ್ಲಿ ಜಯ ಸಾಧಿಸಿದರೆ ಚನ್ನಪಟ್ಟಣ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯಬೇಕು. ಹೀಗಾಗಿ ಅಂತಹ ಸಂದರ್ಭದಲ್ಲಿ ಚನ್ನಪಟ್ಟಣದಿಂದ ಸ್ಪರ್ಧೆ ಮಾಡಲು ಸಿದ್ಧ ಎಂದು ಎಂಬರ್ಥದಲ್ಲಿ ಹೇಳಿದ್ದರು. ಅಲ್ಲದೆ, ಎಚ್‌ಡಿಕೆ ರಾಜೀನಾಮೆ ನೀಡಿದರೆ, ಚನ್ನಪಟ್ಟಣ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿ ಸಿ.ಪಿ. ಯೋಗೇಶ್ವರ್‌ ಕಣಕ್ಕಿಳಿಯುವ ಸಾಧ್ಯತೆಯೇ ಹೆಚ್ಚು ಎಂಬ ಮಾತುಗಳು ಕೇಳಿಬರುತ್ತಿದೆ. ಹೀಗಾಗಿ ಡಿಕೆ ಬ್ರದರ್ಸ್‌ ಕೊನೇ ಘಳಿಗೆಯಲ್ಲಿ ಯಾವ ರೀತಿ ತೀರ್ಮಾನವನ್ನು ಕೈಗೊಳ್ಳಲಿದ್ದಾರೆ ಎಂಬುದರ ಮೇಲೆ ಎಲ್ಲವೂ ನಿರ್ಧಾರವಾಗಲಿದೆ.

Exit mobile version