Site icon Vistara News

ಕ್ರಾಂತಿಕಾರಕ ಬದಲಾವಣೆಗಾಗಿಯೇ ನೂತನ ಶಿಕ್ಷಣ ನೀತಿ: ನೃಪತುಂಗ ವಿವಿ ಉದ್ಘಾಟಿಸಿದ ಅಮಿತ್‌ ಷಾ

ಬೆಂಗಳೂರು: ಭಾರತವನ್ನು ಸಶಕ್ತವಾಗಿ ಕಟ್ಟಿ ಜಾಗತಿಕ ಮಟ್ಟದಲ್ಲಿ ಪ್ರತಿಷ್ಠಾಪಿಸುವುದು ಮತ್ತು ಯುವಜನರಿಗೆ ಉಜ್ವಲ ಅವಕಾಶಗಳನ್ನು ಒದಗಿಸಬೇಕೆನ್ನುವುದೇ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಸಂಕಲ್ಪವಾಗಿದೆ. ಈ ಕ್ರಾಂತಿಕಾರಕ ಬದಲಾವಣೆಗಳನ್ನು ತರಲೆಂದೇ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗಿದ್ದು, ಭಾರತವನ್ನು ಜ್ಞಾನಾಧರಿತ `ಸೂಪರ್ ಪವರ್’ ಮಾಡಲಾಗುವುದು ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಷಾ ಮಂಗಳವಾರ ಹೇಳಿದರು.

ಕೇಂದ್ರ ಸರ್ಕಾರದ ರಾಷ್ಟ್ರೀಯ ಉನ್ನತ ಶಿಕ್ಷಣ ಅಭಿಯಾನದಡಿ ಸ್ಥಾಪಿಸಲಾಗಿರುವ ನೃಪತುಂಗ ಏಕೀಕೃತ ವಿಶ್ವವಿದ್ಯಾಲಯವನ್ನು ಅಧಿಕೃತವಾಗಿ ಉದ್ಘಾಟಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ನೂತನ ವಿವಿ ಶೈಕ್ಷಣಿಕ ಸಮುಚ್ಚಯ ನಿರ್ಮಾಣಕ್ಕೆ ಶಂಕುಸ್ಥಾಪನೆ, ಲಾಂಛನ ಅನಾವರಣ ಮತ್ತು ಬಳ್ಳಾರಿಯಲ್ಲಿ ಸ್ಥಾಪಿಸಲಾಗಿರುವ ವಿಧಿವಿಜ್ಞಾನ ಪ್ರಯೋಗಾಲಯದ ವರ್ಚುಯಲ್ ಉದ್ಘಾಟನೆಯನ್ನೂ ನೆರವೇರಿಸಿದರು.

ದೇಶದಲ್ಲಿ ಸಂಭವಿಸುತ್ತಿರುವ ಶೈಕ್ಷಣಿಕ ಕ್ರಾಂತಿಯಲ್ಲಿ ಭಾರತೀಯ ಪ್ರಾದೇಶಿಕ ಭಾಷೆಗಳಿಗೆ ಮಹತ್ವದ ಸ್ಥಾನವಿದೆ. ಎನ್ಇಪಿಯನ್ನು ಕರ್ನಾಟಕವು ದೇಶದ ಮೊದಲ ರಾಜ್ಯವಾಗಿ ಜಾರಿಗೆ ತರುವ ಹೊಣೆಯನ್ನು ಸ್ವೀಕರಿಸಿರುವುದು ಶ್ಲಾಘನೀಯ ನಡೆಯಾಗಿದೆ. ವಿದ್ಯಾರ್ಥಿಗಳೇ ದೇಶದ ಭವಿಷ್ಯವಾಗಿದ್ದು, ಅವರಲ್ಲಿ ದೇಶಭಕ್ತಿಯ ಸಂಸ್ಕಾರವನ್ನು ಬೆಳೆಸಬೇಕಾಗಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ಇದು ಕೇಂದ್ರ ಸರಕಾರದ ಪ್ರತಿಜ್ಞೆಯಾಗಿದೆ ಎಂದು ಅವರು ಹೇಳಿದರು.

ಒಂದು ದೇಶ ದೊಡ್ಡದೊಡ್ಡ ಸಾಧನೆಗಳನ್ನು ಮಾಡಲು ವ್ಯಕ್ತಿಗಳ ಚಿಕ್ಕಚಿಕ್ಕ ಸಂಕಲ್ಪಗಳು ನಿರ್ಣಾಯಕ ಕೊಡುಗೆ ಕೊಡುತ್ತವೆ. ಈ ನಿಟ್ಟಿನಲ್ಲಿ, ದೇಶವನ್ನು ಪ್ರೀತಿಸುವಂತಹ ಶಿಕ್ಷಣವನ್ನು ಎನ್ಇಪಿ ಅಡಿಯಲ್ಲಿ ಒದಗಿಸಲಾಗುವುದು. ಇದು ಸಂಪೂರ್ಣ ಭಾರತೀಯ ದೃಷ್ಟಿಕೋನವನ್ನು ಹೊಂದಿದೆ. ದೇಶದ ಪ್ರಗತಿಯ ದೃಷ್ಟಿಯಿಂದ ಮುಂದಿನ 25 ವರ್ಷಗಳಿಗೆ ಅತಿಶಯ ಮಹತ್ವವಿದ್ದು, ಭಾರತವು ವಿಶ್ವಗುರು ಎನಿಸಿಕೊಳ್ಳುವುದು ನಿಶ್ಚಿತ ಎಂದು ಹೇಳಿದರು.

ಕಳೆದ ಎಂಟು ವರ್ಷಗಳಿಂದ ಈಚೆಗೆ ದೇಶದ ಗ್ರಾಮೀಣ ಭಾಗದಲ್ಲಿ 410 ಉನ್ನತ ಶಿಕ್ಷಣ ಸಂಸ್ಥೆಗಳನ್ನು ಅಸ್ತಿತ್ವಕ್ಕೆ ತರಲಾಗಿದೆ. ಜತೆಗೆ ಜಮ್ಮು-ಕಾಶ್ಮೀರದ ಲಡಾಖ್ ಮತ್ತು ಈಶಾನ್ಯ ಭಾರತ ಸೇರಿದಂತೆ ಉದ್ದಗಲಕ್ಕೂ ಕೇಂದ್ರೀಯ ವಿವಿ, ಏಮ್ಸ್, ಐಐಟಿಗಳು, ವೈದ್ಯಕೀಯ ಕಾಲೇಜುಗಳು ಮತ್ತು ಹೊಸ ಜ್ಞಾನಶಾಖೆಗಳ ವಿ.ವಿ.ಗಳನ್ನು ಆರಂಭಿಸಲಾಗಿದೆ. ಈ ಮೂಲಕ ದೇಶದ ಎಲ್ಲಾ ಭಾಗಗಳನ್ನೂ ಸಮಾನವಾಗಿ ಕಾಣಲಾಗುತ್ತಿದೆ.

ಪ್ರಧಾನಿ ಮೋದಿ ತಮ್ಮ ದಕ್ಷ ನೀತಿಗಳ ಮೂಲಕ ದೇಶವನ್ನು ಉತ್ಪಾದನಾ ಹಬ್ ಆಗಿ ಬೆಳೆಸುತ್ತಿದ್ದಾರೆ. ಇನ್ನೊಂದೆಡೆ, ಭಯೋತ್ಪಾದನೆ ಮತ್ತಿತರ ಪಿಡುಗುಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುತ್ತಿದೆ. ಇನ್ನು ಕೆಲವೇ ವರ್ಷಗಳಲ್ಲಿ ಭಾರತವು ಅಮೆರಿಕ ಮತ್ತು ಇಸ್ರೇಲ್ ದೇಶಗಳ ಮಟ್ಟಕ್ಕೆ ಬೆಳೆದು, ಬೆಳಗಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.

ಇದನ್ನೂ ಓದಿ | 2nd PU Exam: ಪಿಯುಸಿ ಪರೀಕ್ಷೆಗೂ ಹಿಜಾಬ್‌ ಧರಿಸುವಂತಿಲ್ಲ: ಶಿಕ್ಷಣ ಸಚಿವರ ಸ್ಪಷ್ಟನೆ

ಇ-ಬೀಟ್ ಪೊಲೀಸ್ ಪಹರೆ, ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಚಾಲನೆ

ರಾಜ್ಯ ಪೊಲೀಸ್ ಇಲಾಖೆಯ ಇ-ಬೀಟ್ (ಸ್ಮಾರ್ಟ್ ಪೊಲೀಸಿಂಗ್) ವ್ಯವಸ್ಥೆಗೂ ಚಾಲನೆ ನೀಡಿದರು. ಜತೆಗೆ, ಬಳ್ಳಾರಿಯ ವಿಧಿವಿಜ್ಞಾನ ಪ್ರಯೋಗಾಲಯವನ್ನೂ ಅಮಿತ್‌ ಷಾ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, `ಗುಜರಾತಿನಲ್ಲಿರುವ ವಿಧಿವಿಜ್ಞಾನ ವಿಶ್ವವಿದ್ಯಾಲಯದ ಒಂದು ಕ್ಯಾಂಪಸ್ಸನ್ನು ರಾಜ್ಯದಲ್ಲಿ ತೆರೆಯಲು ಕೇಂದ್ರ ಸರಕಾರವನ್ನು ಕೋರಲಾಗಿದ್ದು, 50 ಎಕರೆ ಜಮೀನನ್ನು ಮೀಸಲಿಡಲಾಗಿದೆ. ಇದಕ್ಕೆ ಅಮಿತ್‌ ಶಾ ಭಾಗಶಃ ಒಪ್ಪಿಗೆಯನ್ನೂ ಸೂಚಿಸಿದ್ದಾರೆ’ ಎಂದು ತಿಳಿಸಿದರು.

ಇದನ್ನೂ ಓದಿ | ಶಿಕ್ಷಣದಲ್ಲಿ ಭಾರತೀಯತೆ ರೂಪಿಸಲು ಎಲ್ಲರ ಸಹಕಾರ ಬೇಕು: ವಿಶ್ವದರ್ಶನ ಸಂಭ್ರಮದಲ್ಲಿ ಸಚಿವ ಬಿ. ಸಿ. ನಾಗೇಶ್

Exit mobile version