Site icon Vistara News

Operation Elephant : ತೋರಣಮಾವು ಗ್ರಾಮಕ್ಕೆ ಬೀಟಮ್ಮ ಗ್ಯಾಂಗ್‌ ಅಟ್ಯಾಕ್‌; ಅರಣ್ಯಾಧಿಕಾರಿಗಳಿಂದ ಹೈ ಅಲರ್ಟ್‌

Beetamma gang elephant attack Toranamavu village

ಚಿಕ್ಕಮಗಳೂರು: ಹಾಸನದ ಬೇಲೂರು ತಾಲೂಕಿನ ಕೊತ್ತನಹಳ್ಳಿ ಬಳಿ ಕಾಣಿಸಿಕೊಂಡಿದ್ದ ಬೀಟಮ್ಮ ಗುಂಪಿನ ಕಾಡಾನೆಗಳ ಹಿಂಡು, ಇದೀಗ ಚಿಕ್ಕಮಗಳೂರಲ್ಲಿ ಹಾವಳಿ (Operation Elephant) ನೀಡುತ್ತಿದೆ. ಬೀಟಮ್ಮ ಟೀಂ ಕೆ.ಆರ್‌. ಪೇಟೆಯ ನೀಲಗಿರಿ ಪ್ಲಾಂಟೇಶನ್ ಬಳಿ ಇದ್ದವು. ಇದೀಗ ತೋರಣ ಮಾವು ಗ್ರಾಮಕ್ಕೆ ಲಗ್ಗೆಯಿಟ್ಟಿವೆ.

ಹೀಗಾಗಿ ತೋರಣಮಾವು ಗ್ರಾಮ ಸೇರಿ ಸುತ್ತಮುತ್ತಲಿನ ಊರುಗಳಲ್ಲಿ ಅರಣ್ಯ ಇಲಾಖೆಯು ಹೈ ಅಲರ್ಟ್ ಘೋಷಿಸಿದೆ. ಅನವಶ್ಯಕವಾಗಿ ರಸ್ತೆ ಗಿಳಿಯದಂತೆ ಜನರಿಗೆ ಮೈಕ್‌ ಮೂಲಕ ಎಚ್ಚರಿಕೆಯನ್ನು ನೀಡುತ್ತಿದ್ದಾರೆ. ಕಾರ್ಮಿಕರು ಕಾಫಿ ತೋಟಕ್ಕೆ ಬೆಳಗಿನ ಹೊತ್ತು ಹೋಗದಿರಲು ಸೂಚನೆ ನೀಡಲಾಗಿದೆ. ಯಾವುದೇ ಸಮಯದಲ್ಲಾದರೂ ಕಾಫಿ ತೋಟಕ್ಕೆ ಕಾಡಾನೆ ನುಗ್ಗುವ ಸಾಧ್ಯತೆ ಇದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಹಳ್ಳಿಗಳನ್ನು ಸುತ್ತಿ ಅಧಿಕಾರಿಗಳು ಸೂಚನೆ ನೀಡುತ್ತಿದ್ದಾರೆ.

ಐದಾರು ಗ್ರಾಮಗಳ ವ್ಯಾಪ್ತಿಯಲ್ಲಿ 24 ಆನೆಗಳು ಸಂಚಾರ ಮಾಡುತ್ತಿವೆ. ತೋರಣ ಮಾವು, ಕೋಡುವಳ್ಳಿ, ಗೌತಮೇಶ್ವರ, ಆನೂರು, ದಿಣ್ಣೆಕೆರೆ ಗ್ರಾಮಗಳಲ್ಲಿ ಕಾಡಾನೆಗಳು ಕಾಣಿಸಿಕೊಳ್ಳುತ್ತಿವೆ. ಜತೆಗೆ ಸಿಕ್ಕ ಸಿಕ್ಕ ಕಾಫಿ ತೋಟಕ್ಕೆ ನುಗ್ಗಿ ಬೆಳೆಗಳನ್ನು ನಾಶ ಮಾಡುತ್ತಿವೆ.

ಕೆಲಸಗಾರರಿಗೆ ರಜೆ

ಬೀಟಮ್ಮನ ದಾಳಿಗೆ ಕಂಗಲಾಗಿರುವ ಕಾಫಿ ತೋಟದ ಮಾಲೀಕರು ಕೆಲಸಕ್ಕೆ ಬರುವ ಕಾರ್ಮಿಕರಿಗೆ ರಜೆ ನೀಡಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಯಾರೂ ತೋಟಕ್ಕೆ ಹೋಗದಂತೆ ಸೂಚನೆ ನೀಡಿದ್ದರು. ತೋಟದ ತುಂಬಾ 25ಕ್ಕೂ ಅಧಿಕ ಕಾಡಾನೆಗಳ ಹಿಂಡು ಓಡಾಡುತ್ತಿವೆ. ಕಾಫಿ ಕೊಯ್ಲಿಗೆ ಬಂದಿದ್ದು, ಆನೆ ಹಾವಳಿಯಿಂದ ಮಲೆನಾಡಿಗರು ಹೈರಾಣಾಗಿದ್ದಾರೆ.

ಇದನ್ನೂ ಓದಿ: Road Accident : ತಿರುವಿನಲ್ಲಿ ಸ್ಪೀಡಾಗಿ ಬಂದ ಬೈಕ್‌ ಸ್ಕಿಡ್‌ ಆಗಿ ಕಾರಿಗೆ ಡಿಕ್ಕಿ; ಸವಾರ ಗಂಭೀರ

ಬೀಟಮ್ಮ ಗುಂಪನ್ನು ಕಾಡಿಗಟ್ಟಲು ಅಧಿಕಾರಿಗಳ ಹರಸಾಹಸ

ಅಂದಹಾಗೇ ಜನವರಿ 29ರಂದು 30 ಕಾಡಾನೆಗಳ ಹಿಂಡು ಇಡೀ ದಿನ ಚಿಕ್ಕಮಗಳೂರು ನಗರದ ವಸತಿ ಶಾಲೆಯ ಬಳಿ ಬೀಡು ಬಿಟ್ಟಿತ್ತು. ಪಟಾಕಿ ಸಿಡಿಸಿ ಕಾಡಿಗಟ್ಟುವ ಪ್ರಯತ್ನವು ವಿಫಲವಾಗಿತ್ತು. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಸೋಮವಾರ ಸಂಜೆಯಿಂದ ಮಂಗಳವಾರ (ಜ.30) ಬೆಳಗ್ಗೆ 10 ಗಂಟೆಯವರೆಗೂ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ಚಿಕ್ಕಮಗಳೂರು ನಗರದ ಸುತ್ತಮುತ್ತಲಿನ 9 ಗ್ರಾಮಗಳಲ್ಲಿ 144 ಸೆಕ್ಷನ್ ಜಾರಿ‌ ಮಾಡಲಾಗಿತ್ತು.

ಅಭಿಮನ್ಯು ನೇತೃತ್ವದಲ್ಲಿ ಬೀಟಮ್ಮ ಗುಂಪಿನ ಆನೆಗಳನ್ನು ಕಾಡಿಗಟ್ಟಲು ಸಿದ್ಧತೆ ನಡೆದಿತ್ತು. ಚಿಕ್ಕಮಗಳೂರು ಬಳಿಯ ಮತ್ತಾವರಕ್ಕೆ ನಾಗರಹೊಳೆ ಹಾಗೂ ದುಬಾರೆಯಿಂದ ಎಂಟು ಸಾಕಾನೆಗಳು ಬಂದಿತ್ತು. ಸಾಕಾನೆಗಳಾದ ಅಭಿಮನ್ಯು, ಕರ್ನಾಟಕ ಭೀಮ, ಹರ್ಷ, ಧನಂಜಯ ಹಾಗೂ ಅಶ್ವತ್ಥಾಮ, ಸುಗ್ರೀವರಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಭೀಮ ಎಂಬ ಆನೆಯು ಬೀಟಮ್ಮ ಗ್ಯಾಂಗ್ ಸೇರಿದೆ. ಹಿಂದೆಲ್ಲ ಹಲವರನ್ನು ಭೀಮ ಬಲಿ ಪಡೆದಿದ್ದ. ಹೀಗಾಗಿ ಜನರಲ್ಲಿ ಹಾಗೂ ಅರಣ್ಯಾಧಿಕಾರಿಗಳಲ್ಲಿ ಮತ್ತಷ್ಟು ಆತಂಕ ಹೆಚ್ಚಿದೆ. ಬೇಲೂರಿನಲ್ಲಿ ದಾಂಧಲೆ ಎಬ್ಬಿಸಿದ್ದ ಬೀಟಮ್ಮ ಬೇಲೂರು ಮಾರ್ಗವಾಗಿ ಕೆ.ಆರ್.ಪೇಟೆ ಗ್ರಾಮಕ್ಕೆ ಆಗಮಿಸಿವೆ. ಇವುಗಳನ್ನು ಕಾಡಿಗೆ ವಾಪಸ್‌ ಕಳಿಸುವುದೇ ಅಧಿಕಾರಿಗಳಿಗೆ ತಲೆನೋವಾಗಿದೆ.

ಇದನ್ನೂ ಓದಿ: Elephant attack: ಹುಣಸೂರಿನಲ್ಲಿ ಕಾಡಾನೆ ದಾಳಿಗೆ ರೈತ ಬಲಿ

ಮೈಸೂರಿನ ಕೋಳಿ ಫಾರಂನಲ್ಲಿ ಬೋನಿಗೆ ಬಿದ್ದ ಚಿರತೆ

ಮೈಸೂರಿನ ದಾರಿಪುರ ಗ್ರಾಮದಲ್ಲಿ ಚಿರತೆಯೊಂದು ಬೋನಿಗೆ ಬಿದ್ದಿದೆ. ಮೈಸೂರಲ್ಲಿ ಚಿರತೆ ಹಾವಳಿ ಹೆಚ್ಚಾಗಿತ್ತು.ದಾರಿಪುರದಲ್ಲಿ ಚಿರತೆ ಕಾಣಿಸಿಕೊಂಡು, ಆತಂಕವನ್ನು ಹೆಚ್ಚಿಸಿತ್ತು. ಹೀಗಾಗಿ ಅರಣ್ಯಾಧಿಕಾರಿಗಳು ದಾರಿಪುರದ ಕೋಳಿ ಫಾರಂನಲ್ಲಿ ಬೋನು ಇರಿಸಿದ್ದರು. ಕೋಳಿ ಬೇಟೆಯಾಡಲು ಬಂದ ಚಿರತೆ ಬೋನಿಗೆ ಬಿದ್ದಿದೆ. ಸುಮಾರು ಎರಡು ವರ್ಷದ ಹೆಣ್ಣು ಚಿರತೆ ಸೆರೆಯಾಗಿದೆ.

ಸ್ಥಳಕ್ಕೆ ಆರ್‌ಎಫ್‌ಓ ಸುರೇಂದ್ರ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬೋನಿಗೆ ಬಿದ್ದ ಚಿರತೆಯನ್ನು ಅರಣ್ಯಕ್ಕೆ ಸುರಕ್ಷಿತವಾಗಿ ರವಾನಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version