Site icon Vistara News

Peacock meat : ಮಾಂಸಕ್ಕಾಗಿ ನವಿಲುಗಳ ಸಂಹಾರ; ಭಕ್ಷಣೆಗೆ ಮುಂದಾಗಿದ್ದ ಮೂವರ ಬಂಧನ

Peacock meat

ತುಮಕೂರು: ರಾಜ್ಯದಲ್ಲಿ ಹುಲಿ ಉಗುರಿನ ಪೆಂಡೆಂಟ್ ಪ್ರಕರಣ ಸದ್ದು ಮಾಡುತ್ತಿರುವ ಬೆನ್ನಲ್ಲೇ ರಾಷ್ಟ್ರಪಕ್ಷಿ ನವಿಲು ಮಾಂಸ (Peacock meat) ಭಕ್ಷಣೆಗೆ ಮುಂದಾಗಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ತುಮಕೂರಿನ (Tumkur News) ಮಾರನಾಯಕನಪಾಳ್ಯದಲ್ಲಿ ಘಟನೆ ನಡೆದಿದೆ.

ಬಿಟ್ಟಿಂಗ್ ನಾಯಕ್, ಬೈಷಾಕ್ ದಾವು, ದುಬಾ ಕಾಪತ್ ಬಂಧಿತ ಆರೋಪಿಗಳಾಗಿದ್ದು, ಇವರೆಲ್ಲವೂ ಒರಿಸ್ಸಾ ಮೂಲದವರಾಗಿದ್ದಾರೆ. ಮಾರನಾಯಕನಪಾಳ್ಯದ ಇಟ್ಟಿಗೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಇವರುಗಳು ನವಿಲು ಮಾಂಸ ಗಟ್ಟಿಯಾಗಿದ್ದು, ರುಚಿಯಾಗಿ ಇರುತ್ತದೆ ಎಂದು ಬೇಟೆಯಾಡುತ್ತಿದ್ದರು.

ಮೂವರನ್ನು ವಶಕ್ಕೆ ಪಡೆದ ಅರಣ್ಯಾಧಿಕಾರಿಗಳು

ಕಳೆದ ಹಲವು ದಿನಗಳಿಂದ ನವಿಲುಗಳನ್ನು ಕೊಂದು ತಿನ್ನುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಅರಣ್ಯಾಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ 1.5 ಕೆ.ಜಿ ನವಿಲಿನ ಹಸಿ ಮಾಂಸ, ನವಿಲಿನ ಎರಡು ಕಾಲುಗಳು, ಬೇಯಿಸಿದ ಮಾಂಸ ಹಾಗೂ ನವಿಲು ಹಿಡಿಯಲು ಬಳಸುತ್ತಿದ್ದ ಬಲೆಗಳು, ಉರುಳುಗಳು, ಮಾಂಸ ಬೇಯಿಸಿದ್ದ ಪಾತ್ರೆಗಳನ್ನು ವಶಕ್ಕೆ ಪಡೆಯಲಾಗಿದೆ.

ವಶಕ್ಕೆ ಪಡೆದ ಮಾಂಸವನ್ನು ಅರಣ್ಯಾಧಿಕಾರಿಗಳು ಎಫ್ಎಸ್ಎಲ್‌ಗೆ ಕಳುಹಿಸಿದ್ದಾರೆ. ಬಂಧಿತರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ಅಧಿಕಾರಿಗಳು ತನಿಖೆಯನ್ನು ಮುಂದುವರಿಸಿದ್ದಾರೆ.

ಹುಲಿಯುಗುರು ಇರುವ ಡಾಲರ್‌ ಹಾಕಿಕೊಂಡಿದ್ದ ಇಬ್ಬರು ಅರ್ಚಕರ ಅರೆಸ್ಟ್‌

ಚಿಕ್ಕಮಗಳೂರು: ಹುಲಿಯ ಉಗುರು (Tiger Nail) ರಾಜ್ಯದಲ್ಲಿ ರಾದ್ಧಾಂತವನ್ನೇ ಸೃಷ್ಟಿ ಮಾಡಿದೆ. ಬಿಗ್‌ ಬಾಸ್‌ (BBK Season 10) ಸ್ಪರ್ಧಿ ವರ್ತೂರು ಸಂತೋಷ್‌ (Varthur santhosh Arrest) ಅವರನ್ನು ದೊಡ್ಮನೆಗೇ ಹೋಗಿ ಅರಣ್ಯಾಧಿಕಾರಿಗಳು ಅರೆಸ್ಟ್‌ ಮಾಡಿದ ಬಳಿಕ ಸಾರ್ವಜನಿಕರು ಅರಣ್ಯಾಧಿಕಾರಿಗಳು ಮತ್ತು ಪೊಲೀಸರಿಗೆ ದೂರು ಕೊಡಲು ಆರಂಭ ಮಾಡಿದ್ದಾರೆ. ಅರಣ್ಯಾಧಿಕಾರಿಗಳು ಕೂಡಾ ತಕ್ಷಣ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆಗೆ ಒಳಗಾಗಿದ್ದಾರೆ. ಇದರ ಫಲವಾಗಿ ನಾಲ್ವರು ಸೆಲೆಬ್ರಿಟಿಗಳ ಮನೆ ಮೇಲೆ ಬುಧವಾರ ದಾಳಿ ನಡೆದಿದೆ. ಇದೇ ವೇಳೆ ಚಿಕ್ಕಮಗಳೂರಿನಲ್ಲಿ (Chikkamagaluru News) ಇಬ್ಬರು ಅರ್ಚಕರ ಬಂಧನವೂ (Two priests arrested) ನಡೆದಿದೆ.

ಹುಲಿ ಉಗುರಿನ ಡಾಲರ್‌ ಹಾಕಿಕೊಂಡಿದ್ದ ಚಿಕ್ಕಮಗಳೂರಿನ ಇಬ್ಬರು ಅರ್ಚಕರನ್ನು ಬುಧವಾರ ಅರಣ್ಯಾಧಿಕಾರಿಗಳು ಬಂಧಿಸಿದ್ದು, ಅವರಿಂದ ಮೂರು ಹುಲಿಯುಗುರಿನ ಪೆಂಡೆಂಟ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ಚಿಕ್ಕಮಗಳೂರಿನ ಬಹು ಪ್ರಸಿದ್ಧ ಖಾಂಡ್ಯ ಮಾರ್ಕಾಂಡೇಶ್ವರ ದೇವಾಲಯದ ಇಬ್ಬರು ಅರ್ಚಕರಾದ ಕೃಷ್ಣಾನಂದ ಹೊಳ್ಳ, ನಾಗೇಂದ್ರ ಜೋಯಿಸ ಅವರೇ ಬಂಧನಕ್ಕೆ ಒಳಗಾದವರು. ಇವರಿಂದ ಮೂರು ಹುಲಿ ಉಗುರನ್ನು ಪಡೆದುಕೊಳ್ಳಲಾಗಿದೆ. ಇನ್ನಿಬ್ಬರನ್ನು ಅರಣ್ಯ ಇಲಾಖೆಯ ಸಿಬ್ಬಂದಿ ವಿಚಾರಣೆ ನಡೆಸುತ್ತಿದ್ದಾರೆ.

ಈ ಇಬ್ಬರು ಅರ್ಚಕರು ಹುಲಿಯುಗುರಿನ ಪೆಂಡೆಂಟ್‌ ಧರಿಸುತ್ತಿದ್ದಾರೆ ಎಂದು ಈಮೇಲ್‌ ಮೂಲಕ ದೂರು ನೀಡಲಾಗಿತ್ತು. ಇದನ್ನು ಪರಿಗಣಿಸಿದ ಬಾಳೆಹೊನ್ನೂರು ವಲಯ ಅರಣ್ಯ ಅಧಿಕಾರಿಗಳು ದೇವಸ್ಥಾನಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿದರು. ಮೇಲ್ನೋಟಕ್ಕೆ ಅದು ಹುಲಿಯುಗುರು ಎಂದು ತಿಳಿಯುತ್ತಿದ್ದಂತೆಯೇ ಅವರು ಪ್ರಕರಣ ದಾಖಲಿಸಿಕೊಂಡು ಬಂಧನವನ್ನೂ ಮಾಡಿದ್ದಾರೆ.

ತುಂಗಾ ತೀರದಲ್ಲಿರುವ ಖಾಂಡ್ಯ ದೇವಸ್ಥಾನ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಮಾರ್ಕಾಂಡೇಶ್ವರ ದೇಗುಲ ಇದಾಗಿದ್ದು, ಸಾಕಷ್ಟು ಭಕ್ತರು ಬರುತ್ತಾರೆ. ಈ ಅರ್ಚಕರು ಕೂಡಾ ಸಾಕಷ್ಟು ಜನಪ್ರಿಯರು.

ಇವರು ತಮ್ಮ ಅಜ್ಜ-ಮುತ್ತಜ್ಜನ ಕಾಲದಿಂದಲೇ ಹುಲಿ ಉಗುರನ್ನು ಹೊಂದಿದ್ದು, ಪೆಂಡೆಂಟ್‌ ಆಗಿ ಈಗಲೂ ಬಳಸುತ್ತಿದ್ದರು. ಆದರೆ, ಈಗ ವರ್ತೂರು ಸಂತೋಷ್‌ ಪ್ರಕರಣ ಎದ್ದು ಬಂದ ಹಿನ್ನೆಲೆಯಲ್ಲಿ ಎಲ್ಲ ಕಡೆಯಿಂದಲೂ ಅವರ ಮೇಲೆ ಕಣ್ಣು ಬಿದ್ದಿದೆ. ಈ ಹುಲಿಯುಗುರಿನ ಕಾಲಮಾನ, ಅದು ಅವರ ಕೈಗೆ ಸಿಕ್ಕಿದ ಬಗೆಗಳನ್ನು ಅರಣ್ಯಾಧಿಕಾರಿಗಳು ತನಿಖೆಗೆ ಒಳಪಡಿಸಲಿದ್ದಾರೆ. ಮೂಲತಃ ಇದನ್ನು ಎಫ್‌ಎಸ್‌ಎಲ್‌ ಪರೀಕ್ಷೆಗೆ ಒಳಪಡಿಸಿ ಅದು ನಿಜಕ್ಕೂ ಹುಲಿಯುಗುರೇ ಎಂದು ನೋಡಬೇಕಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version