Site icon Vistara News

Petrol Diesel Price: ಪೆಟ್ರೋಲ್, ಡೀಸೆಲ್ ದರ ಏರಿಕೆಗೂ ಚುನಾವಣಾ ಫಲಿತಾಂಶಕ್ಕೂ ಸಂಬಂಧವಿಲ್ಲ ಎಂದ ಸಿಎಂ

Petrol Diesel Price

ವಿಜಯಪುರ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೂ (Petrol Diesel Price) ಚುನಾವಣಾ ಫಲಿತಾಂಶಕ್ಕೂ‌ ಯಾವುದೇ ಸಂಬಂಧವಿಲ್ಲ. ಪ್ರಜಾಪ್ರಭುತ್ವದಲ್ಲಿ ಸೋಲು ಗೆಲುವು ಇದ್ದದ್ದೇ. ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆಯೇ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಗ್ಗೆ ಜಿಲ್ಲೆಯ ಇಂಚಗೇರಿ ಗ್ರಾಮದ ಹೆಲಿಪ್ಯಾಡ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಜಯಪುರದಲ್ಲಿ ನಾವು ಸೋತಿದ್ದೇವೆ. ಕರ್ನಾಟಕದಲ್ಲೂ ನಾವು ನಿರೀಕ್ಷೆ ಮಾಡಿದಷ್ಟು ಸ್ಥಾನಗಳು ಬಂದಿಲ್ಲ. ವಿಜಯಪುರದಲ್ಲಿ ಗೆಲ್ಲುತ್ತೇವೆ ಎಂಬ ನಿರೀಕ್ಷೆಯಿತ್ತು. ಕರ್ನಾಟಕದಲ್ಲಿ ಕಳೆದ ಚುನಾವಣೆಗೆ ಹೋಲಿಕೆ ಮಾಡಿದರೆ, ಈ ಬಾರಿ ಒಂಬತ್ತು ಸ್ಥಾನಗಳನ್ನು ಗಳಿಸಿದ್ದೇವೆ. ಬಿಜೆಪಿ ಕಳೆದ ಬಾರಿ 25 ಇದ್ದದ್ದು ಈ ಬಾರಿ 19 ಕ್ಕೆ ಇಳಿದಿದೆ. ನಮಗೆ 13% ಮತ ಹಂಚಿಕೆಯಾಗಿದೆ. ನಾವು ಸೋತಿದ್ದೇವೆಯೇ? ನಮ್ಮ ಲೆಕ್ಕಾಚಾರದ ಪ್ರಕಾರ, ನಿರೀಕ್ಷೆ ಮಾಡಿದಷ್ಟು ಸ್ಥಾನಗಳು ಬಂದಿಲ್ಲ ಅಷ್ಟೇ ಎಂದರು.

ಸೋತಿರುವುದು ಬಿಜೆಪಿ

ಚುನಾವಣೆಯಲ್ಲಿ ಸೋತಿರುವುದು ಬಿಜೆಪಿ. ಕಳೆದ ಬಾರಿ 303 ಸ್ಥಾನಗಳನ್ನು ಪಡೆದು ಈ ಬಾರಿ 240 ಸ್ಥಾನಗಳನ್ನು ಪಡೆದು ಬಿಜೆಪಿ ಸೋತಿದೆ. ಕಳೆದ ಬಾರಿ 31% ಈ ಬಾರಿ 41% ಮತ ಹಂಚಿಕೆಯಾಗಿದೆ. 15 ಸ್ಥಾನ ಬರಬಹುದೆಂಬ ನಿರೀಕ್ಷೆಯಿತ್ತು. ನಾವು ಸೋತಿದ್ದೇವೆಯೇ ಎಂದರು. ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ಕಡಿಮೆ ಮತ ಬಂದಿದೆ, ಮೋದಿ ಅಲೆ ಕಡಿಮೆಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಬೇರೆ ಕಡೆಗಿಂತ ರಾಜ್ಯದಲ್ಲಿ ಪೆಟ್ರೋಲ್ ಬೆಲೆ ಕಡಿಮೆಯೇ ಇದೆ

ಪೆಟ್ರೋಲ್, ಡೀಸೆಲ್ ದರ ಏರಿಕೆಗೂ ಚುನಾವಣಾ ಫಲಿತಾಂಶಕ್ಕೂ ಸಂಬಂಧವಿಲ್ಲ. 2021ರ ಏಪ್ರಿಲ್ 11ರಂದು ಪೆಟ್ರೋಲ್ ಮೇಲೆ ಶೇ.35 ತೆರಿಗೆ ಹಾಗೂ ಡೀಸೆಲ್ ಮೇಲೆ ಶೇ.24 ತೆರಿಗೆ ಹಾಕುತ್ತಿದ್ದರು. ನಂತರ ಕೇಂದ್ರದಲ್ಲಿ ಇಳಿಕೆ ಮಾಡಿದ್ದರಿಂದ ಇವರೂ 35 ರಿಂದ 25.92 ಕ್ಕೆ ನಂತರ ಇಳಿಸಿದರು. ಡೀಸೆಲ್ ಮೇಲೆ 14.34ಕ್ಕೆ ಇಳಿಸಿದರು. ಶೇ.7 ರೂಪಾಯಿಯಷ್ಟು ಕಡಿಮೆ ಮಾಡಿದರು. ಏಕೆಂದರೆ ಕೇರಳ ಆಗಲಿ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರ, ತಮಿಳುನಾಡು ಕಡಿಮೆ ಮಾಡಲಿಲ್ಲ. ಈಗ ಕರ್ನಾಟಕದಲ್ಲಿ 99.85 ರೂ ಪೆಟ್ರೋಲ್ ಬೆಲೆಯಿದೆ. ನಿನ್ನೆಯಿಂದ ಮೂರು ರೂಪಾಯಿ ಹೆಚ್ಚು ಮಾಡಿದ್ದೇವೆ. 102 ರೂ.ಗೆ ಹೆಚ್ಚಾಗಿದೆ. ಇದು ತಮಿಳುನಾಡಿಗೆ ಸಮವಾಗಿದೆ. ಕೇರಳದ ಕಾಸರಗೋಡಿನಲ್ಲಿ 106.66 ರೂ.ಗಳಿದೆ. ಆಂಧ್ರದ ಅನಂತಪುರದಲ್ಲಿ 109.44 , ತೆಲಂಗಾಣದ ಹೈದರಾಬಾದ್‌ನಲ್ಲಿ 107.40 ಹಾಗೂ ಮಹಾರಾಷ್ಟ್ರದಲ್ಲಿ 104.46 ರೂ.ಇದೆ. ಇವೆಲ್ಲಕ್ಕೆ ಹೋಲಿಸಿದರೆ ನಮ್ಮ ದರ ಕಡಿಮೆ ಇದೆ ಎಂದರು.

ಎಚ್.ಡಿ.ಕುಮಾರಸ್ವಾಮಿ ಅವರು ಕರ್ನಾಟಕದ ಇತಿಹಾಸದಲ್ಲಿ ಪೆಟ್ರೋಲ್ ಬೆಲೆ ಇಷ್ಟು ದುಬಾರಿಯಾಗಿರಲಿಲ್ಲ ಎಂದು ಹೇಳಿಕೆ ನೀಡಿರುವ ಬಗ್ಗೆ ಮಾತನಾಡಿ, ಕುಮಾರಸ್ವಾಮಿ ಈ ಹಿಂದೆ ಇದ್ದಾಗ ಶೇ 35% ಇತ್ತು. ಬಿಜೆಪಿ ಸರ್ಕಾರ ಇರುವ ರಾಜಸ್ಥಾನದಲ್ಲಿ 104.86 ರೂ.ಗಳಿದೆ ಹಾಗೂ ಮಧ್ಯಪ್ರದೇಶದಲ್ಲಿ 106.47 ರೂ. ಗಳಿದೆ. ಕರ್ನಾಟದಲ್ಲಿ ಈ ರಾಜ್ಯಗಳಿಗಿಂತ ಕಡಿಮೆ ಇದೆ. ಪಕ್ಕದ ರಾಜ್ಯಗಳಿಗೆ ಸಮವಾಗಿರಲಿ ಎಂಬ ಕಾರಣಕ್ಕೆ ಬೆಲೆ ಏರಿಕೆ ಮಾಡಿರಲಿಲ್ಲ. ಈಗ ಸ್ವಲ್ಪ ಏರಿಕೆಯಾಗಿದೆ, ಇತರೆ ರಾಜ್ಯಗಳಲ್ಲಿ ಇದಕ್ಕಿಂತ ಹೆಚ್ಚಿದೆ ಎಂದರು.

ಅನುದಾನ ನೀಡಲಾಗಿದೆ

ಗ್ಯಾರಂಟಿಗಳ ಬಗ್ಗೆ ಕಾಂಗ್ರೆಸ್‌ನಲ್ಲಿ ಕೆಲವರು ಅಸಮಾಧಾನ ವ್ಯಕ್ತಪಡಿಸಿರುವ ಬಗ್ಗೆ ಮಾತನಾಡಿ, ಅನುದಾನವನ್ನು ನೀಡಲಾಗಿದೆ. ಗ್ಯಾರಂಟಿಗಳನ್ನು ಬಡವರ ಅನುಕೂಲಕ್ಕಾಗಿ ಜಾರಿಮಾಡಲಾಗಿದೆ, ಚುನಾವಣೆಗಾಗಿ ಅಲ್ಲ ಎಂದು ತಿಳಿಸಿದರು.

Exit mobile version