Site icon Vistara News

ಗಾಣಗಾಪುರ ದೇವಾಲಯದಲ್ಲಿ ನಕಲಿ ವೆಬ್‌ಸೈಟ್‌ ರಚಿಸಿ ವಂಚನೆ ಮಾಡಿದ್ದ ಅರ್ಚಕರಿಗೆ ನಿರೀಕ್ಷಣಾ ಜಾಮೀನು

ಕಲಬುರಗಿ: ಗಾಣಗಾಪುರ ಶ್ರೀ ದತ್ತ ದೇವಾಲಯದ ಹೆಸರಲ್ಲಿ ನಕಲಿ ವೆಬ್‌ಸೈಟ್ ಸೃಷ್ಟಿಸಿ‌ 35 ಕೋಟಿ ರೂ. ವಂಚನೆ ಮಾಡಿದ ಐವರು ಅರ್ಚಕರಿಗೆ ಕಲಬುರಗಿಯ ಸೆಷನ್ ಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಮುಜರಾಯಿ ಇಲಾಖೆಗೆ ಸೇರಿದ ಗಾಣಗಾಪುರದ ಶ್ರೀ ಶ್ರೀ ಗುರು ದತ್ತಾತ್ರೇಯ ದೇವಾಲಯವು ರಾಜ್ಯದ ಅತ್ಯಂತ ಹೆಚ್ಚು ಕಾಣಿಕೆ ಸಂಗ್ರಹವಾಗುವ ದೇಗುಲಗಳಲ್ಲಿ ಒಂದಾಗಿದೆ. ಇಲ್ಲಿಯ ಐವರು ಅರ್ಚಕರು ಸೇರಿ ಶ್ರೀ ದತ್ತಾತ್ರೇಯ ದೇವಾಲಯದ ಹೆಸರಲ್ಲಿ ನಕಲಿ ವೆಬ್‌ಸೈಟ್ ಹಾಗೂ ಇಮೇಲ್ ಸೃಷ್ಟಿಸಿದ್ದರು. ಈ ಮೂಲಕ ಹಣವನ್ನು ಸಂಗ್ರಹಿಸುತ್ತಿದ್ದರು. ವಿಷಯ ಬಹಿರಂಗವಾಗುತ್ತಿದ್ದಂತೆ ಅರ್ಚಕರಾದ ವಲ್ಲಭ ದಿನಕರ್ ಭಟ್, ಅಂಕೂರ್ ಪೂಜಾರಿ, ಪ್ರತೀಕ್ ಪೂಜಾರಿ, ಗಂಗಾಧರ್ ಪೂಜಾರಿ, ಶರತ್ ಭಟ್ ವಿರುದ್ಧ ಪ್ರಕರಣ ದಾಖಲಾಗಿತ್ತು.

ಮುಜಾರಾಯಿ ಇಲಾಖೆ ದೇವಸ್ಥಾನದ ಅಧಿಕೃತ ವೆಬ್‌ಸೈಟ್‌ ಒಂದನ್ನು ಹೊಂದಿದೆ. ಆದರೆ, ಅರ್ಚಕರು ಈ ವೆಬ್‌ಸೈಟ್‌ಗೆ ಬದಲಿಯಾಗಿ ದೇಗುಲದ ಹೆಸರಿನಲ್ಲಿ ಏಳೆಂಟು ನಕಲಿ ವೆಬ್‌ಸೈಟ್ ಸೃಷ್ಟಿಸಿದ್ದರು. ಈ ನಕಲಿ ವೆಬ್‌ಸೈಟ್ ಮೂಲಕ ದೇವರ ಸೇವೆಗೆ ಭಕ್ತರಿಂದ ಆನ್‌ಲೈನ್‌ ಮೂಲಕ ಹಣ ಪಡೆಯಲಾಗುತ್ತಿತ್ತು. ದೇವಸ್ಥಾನಕ್ಕೆ ಸಲ್ಲಬೇಕಿದ್ದ ಕಾಣಿಕೆಯನ್ನು ಕೂಡ ಅರ್ಚಕರು ತಮ್ಮ ಖಾತೆಗಳಿಗೆ ಹಾಕಿಸಿಕೊಂಡು ಸರ್ಕಾರದ ಬೊಕ್ಕಸಕ್ಕೆ ಕೋಟಿ ಕೋಟಿ ರೂಪಾಯಿ ವಂಚಿಸಿದ್ದರು.

ಈ ಪ್ರಕರಣ ದಾಖಲಾಗುತ್ತಿದ್ದಂತೆಯೆ ಐವರು ಆರೋಪಿಗಳು ಮಹಾರಾಷ್ಟ್ರದಲ್ಲಿ ತೆಲೆ‌ಮರೆಸಿಕೊಂಡಿದ್ದರು. ಅಲ್ಲದೆ, ಮಹಾರಾಷ್ಟ್ರದಿಂದಲೇ ಕಲಬುರಗಿಯ ಸೆಷನ್‌ ಕೋರ್ಟ್‌ಗೆ ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದರು. ಇದೀಗ ಕಲಬುರಗಿಯ ಸೆಷನ್ ಕೋರ್ಟ್‌ನಿಂದ ಜಾಮೀನು ಮಂಜೂರು ಮಾಡಲಾಗಿದೆ.

ಇದನ್ನೂ ಓದಿ: ಗಾಣಗಾಪುರ ದತ್ತ ದೇವರ ಹೆಸರಿನಲ್ಲಿ ನಕಲಿ ವೆಬ್‌ಸೈಟ್‌; ಅರ್ಚಕರಿಂದ ವಂಚನೆ

Exit mobile version