Site icon Vistara News

Rajakaluve Encroachment: ಬೆಂಗಳೂರಲ್ಲಿ ಮತ್ತೆ ಜೆಸಿಬಿ ಗರ್ಜನೆ; ಉರುಳಲಿವೆಯೇ ಮತ್ತಷ್ಟು ಅಕ್ರಮ ಒತ್ತುವರಿ ಕಟ್ಟಡ?

Encroachment

ಬೆಂಗಳೂರು: ರಾಜಕಾಲುವೆ ಒತ್ತುವರಿದಾರರಿಗೆ (Rajakaluve Encroachment) ಬಿಬಿಎಂಪಿ ಶಾಕ್‌ (BBMP) ಕೊಡಲು ಮುಂದಾಗಿದ್ದು, ಬೆಂಗಳೂರಲ್ಲಿ ಮತ್ತೆ ಜೆಸಿಬಿ ಗರ್ಜಿಸಲಿದೆ. ಕಳೆದ ವರ್ಷ ಬೆಂಗಳೂರಿನ ಐಟಿ ಕಾರಿಡಾರ್‌ಗಳಲ್ಲಿ ಅಕ್ಷರಶಃ ಪ್ರವಾಹ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಧಾರಾಕಾರ ಮಳೆಗೆ (Bengaluru Rain) ಜನವಸತಿ ಪ್ರದೇಶಗಳು ಜಲಾವೃತಗೊಂಡಿತ್ತು.

ನಗರದ ರಸ್ತೆಗಳೆಲ್ಲವೂ ನದಿಯಂತಾಗಿ, ಮಿನಿ ಐಲ್ಯಾಂಡ್‌ ರೀತಿ ಪರಿವರ್ತನೆ ಆಗಿತ್ತು. ಐಷಾರಾಮಿ ಕಾರು, ಬೈಕ್‌ನಲ್ಲಿ ಓಡಾಡುತ್ತಿದ್ದವರು, ಮನೆಯಿಂದ ಹೊರಬರಲು ತೆಪ್ಪವನ್ನು ಬಳಸುವ ಪರಿಸ್ಥಿತಿ ನಿರ್ಮಾಣವಾಗಿತ್ತು. ದೇಶದೆಲ್ಲೆಡೆ ಬೆಂಗಳೂರಿನ ಅವ್ಯವಸ್ಥೆಯ ಚರ್ಚೆಯೂ ನಡೆದಿತ್ತು. ರಾಜಕಾಲುವೆ ಒತ್ತುವರಿಯೇ ಇದಕ್ಕೆಲ್ಲ ಮೂಲ ಕಾರಣವೆಂದು ಆರೋಪಿಸಲಾಗಿತ್ತು.

ಹೀಗಾಗಿ, ಈ ಬಾರಿಯ ಮುಂಗಾರು ಪ್ರವೇಶಕ್ಕೂ ಮುನ್ನವೇ ಬಿಬಿಎಂಪಿ ಸನ್ನದ್ಧವಾಗಿದ್ದು, ಮತ್ತೆ ಒತ್ತುವರಿದಾರರಿಗೆ ಬಿಸಿ ಮುಟ್ಟಿಸಲು ತಯಾರಿ ನಡೆಸಿದೆ. ಮಹಾದೇವಪುರ, ಸರ್ಜಾಪುರ, ಮಾರತ್‌ಹಳ್ಳಿ ಹಾಗೂ ಬೆಳ್ಳಂದೂರು ಮಳೆ ಹಾನಿ ಪ್ರದೇಶಗಳಾಗಿವೆ. ಅನಾಹುತಗಳು ಮತ್ತೆ ಮರುಕಳಿಸುವುದನ್ನು ತಪ್ಪಿಸಲು ಅಕ್ರಮವಾಗಿ ಒತ್ತುವರಿ ಮಾಡಿಕೊಂಡ ಸ್ಥಳಗಳನ್ನು ತೆರವು ಮಾಡಲು ಬಿಬಿಎಂಪಿ ಮುಂದಾಗಿದ್ದು, ಮುಂದಿನ ವಾರದಿಂದ ಅಖಾಡಕ್ಕೆ ಇಳಿಯಲಿದೆ.

ಪ್ರತಿ ವರ್ಷ ನೀರು ನಿಂತು ಸಮಸ್ಯೆಗೆ ಕಾರಣವಾಗುವ ಖಾಸಗಿ ಆಸ್ತಿಯನ್ನು ಖರೀದಿ ಮಾಡಲು ಬಿಬಿಎಂಪಿ ತಯಾರಿ ನಡೆಸಿದೆ. ಬೆಂಗಳೂರಿನಲ್ಲಿ ನೀರು ನಿಂತು ಸಮಸ್ಯೆ ಉಂಟು ಮಾಡುವ ಸ್ಥಳವನ್ನು ಗುರುತಿಸಲು ಮುಂದಾಗಿದೆ. ಜತೆಗೆ ಸಮಸ್ಯೆಗೆ ಕಾರಣವಾಗುವ ಖಾಸಗಿಯವರ ಆಸ್ತಿಯಾಗಿದ್ದರೂ, ಪರಿಹಾರ ನೀಡಿ ತೆರವು ಕಾರ್ಯಾಚರಣೆ ಮಾಡಲು ಮುಂದಾಗಿದೆ.

ನೂರಕ್ಕೂ ಹೆಚ್ಚು ಮಾಲೀಕರಿಂದ ಸ್ಟೇ ಆರ್ಡರ್‌

ಬಿಬಿಎಂಪಿ ಹಾಗೂ ಕಂದಾಯ ಇಲಾಖೆಯು ಈ ಹಿಂದೆ ಒತ್ತುವರಿ ಆಗಿದ್ದ ನೂರಾರು ಸ್ಥಳಗಳನ್ನು ಗುರುತಿಸಿ 200 ಸ್ಥಳಗಳಲ್ಲಿ ತೆರವು ಕೆಲಸ ಮಾಡಿತ್ತು. ತೆರವು ಕಾರ್ಯಾಚರಣೆ ಗಮನಿಸಿ ಆತಂಕಕ್ಕೊಳಗಾದ 118 ಕಟ್ಟಡ ಮಾಲೀಕರು ಸ್ಟೇ ಆರ್ಡರ್ ಕೋರಿ ಕೋರ್ಟ್ ಮೆಟ್ಟಿಲೇರಿದ್ದರು. ಆ ಸಂದರ್ಭದಲ್ಲಿ ಕೋರ್ಟ್‌ನಲ್ಲಿ ದಾಖಲೆಗಳನ್ನು ಸಲ್ಲಿಸದೆ ಬಿಬಿಎಂಪಿ ಹಾಗೂ ಕಂದಾಯ ಇಲಾಖೆ ತನ್ನ ಪ್ರಕ್ರಿಯೆಯನ್ನು ತಡ ಮಾಡಿತಾದರೂ, ಈಗ ತಕ್ಕ ಉತ್ತರವನ್ನು ನೀಡಲು ಸಜ್ಜಾಗಿದೆ.

ನ್ಯಾಯಾಲಯದಲ್ಲಿರುವ 118 ಪ್ರಕರಣಗಳ ಕುರಿತಾಗಿ ಸಂಕ್ಷಿಪ್ತ ಮಾಹಿತಿಯನ್ನು ಸಂಗ್ರಹಿಸಿರುವ ಬಿಬಿಎಂಪಿ ಹಾಗೂ ಕಂದಾಯ ಇಲಾಖೆ, ಈಗ ಕೋರ್ಟ್‌ಗೆ ಉತ್ತರ ನೀಡಲಿದೆ. ಸರ್ಕಾರಿ ಜಾಗದಲ್ಲಿ ಏನಾದರೂ ಕಟ್ಟಡ ಕಟ್ಟಿಕೊಂಡಿರುವುದು ಗಮನಕ್ಕೆ ಬಂದರೆ, ಯಾವುದೇ ಪರಿಹಾರವಿಲ್ಲದೇ ತೆರವು ಮಾಡುವುದಾಗಿ ತಿಳಿಸಿದೆ. ಒಂದು ವೇಳೆ ಖಾಸಗಿ ಸ್ವತ್ತಿನಲ್ಲಿ ರಾಜಕಾಲುವೆ ಹಾದುಹೋಗಿ ಅದರಿಂದ ಮಳೆ ನೀರು ನಿಲ್ಲುತ್ತಿದ್ದರೆ, ಆ ಖಾಸಗಿ ಬಿಲ್ಡಿಂಗ್‌ಗಳನ್ನೂ ಬಿಬಿಎಂಪಿ ಖರೀದಿಸಿ ನಂತರ ತೆರವು ಮಾಡಲಿದೆ. ಸದ್ಯದ ಮಟ್ಟಿಗೆ ಇಂತಹ 10 ರಿಂದ 18 ಕಟ್ಟಡಗಳನ್ನು ಖರೀದಿ ಮಾಡಿ ರಾಜಕಾಲುವೆ ಸಮಸ್ಯೆ ಸರಿಪಡಿಸಲಾಗುತ್ತದೆ ಎಂಬ ಮಾಹಿತಿ ಲಭಿಸಿದೆ.

ಇದನ್ನೂ ಓದಿ: Weather Report: ರಾಜ್ಯದಲ್ಲಿ ಇನ್ನೆರಡು ದಿನ ಮಳೆ ಸಾಧ್ಯತೆ; ಯಾವ ಜಿಲ್ಲೆಗಳಲ್ಲಿ?

ಕಳೆದ ಬಾರಿ ಆದ ಸಣ್ಣಪುಟ್ಟ ಗೊಂದಲಗಳಿಂದ ಪಾಠ ಕಲಿತಿರುವ ಬಿಬಿಎಂಪಿ, ಈ ಬಾರಿ ಕಂದಾಯ ಇಲಾಖೆಯ ಮ್ಯಾಪ್‌ ಅನ್ನು ಆಧಾರವಾಗಿಟ್ಟುಕೊಂಡು ಪರಿಶೀಲನೆ ನಡೆಸಲಿದೆ. ಖಾಸಗಿ ಭೂಮಿಯಾಗಿದ್ದರೆ ಟಿಡಿಆರ್ ನೀಡಿ ಪ್ರಾಪರ್ಟಿಯನ್ನು ಸುಪರ್ದಿಗೆ ಪಡೆಯುತ್ತದೆ ಅಥವಾ ಖರೀದಿ ಮಾಡಿ ಸುಪರ್ದಿಗೆ ಪಡೆಯುತ್ತದೆ.

Exit mobile version