Site icon Vistara News

Ayodhya Ram Mandir | ರಾಮನಗರದ ಭಕ್ತರಿಂದ ರಾಮ ಮಂದಿರಕ್ಕೆ ಬೆಳ್ಳಿ ಇಟ್ಟಿಗೆ, ರೇಷ್ಮೆ ಸೀರೆ, ಶಲ್ಯ ಸಮರ್ಪಣೆ

Ayodhya Ram Mandir

ಅಯೋಧ್ಯೆ (ಉತ್ತರ ಪ್ರದೇಶ): ಕರ್ನಾಟಕದ ರಾಮನಗರ ಜಿಲ್ಲೆಯಿಂದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರ ನೇತೃತ್ವದಲ್ಲಿ ಅಯೋಧ್ಯೆಗೆ ತೆರಳಿದ್ದ 150 ಯಾತ್ರಾರ್ಥಿಗಳ ತಂಡದಿಂದ ಭವ್ಯ ಶ್ರೀರಾಮ ಮಂದಿರ ನಿರ್ಮಾಣಕ್ಕೆ (Ayodhya Ram Mandir) 1.50 ಕೆ.ಜಿ. ತೂಕದ ಬೆಳ್ಳಿ ಇಟ್ಟಿಗೆ, ಸೀತಾಮಾತೆಗೆ ಸ್ಥಳೀಯ ರೇಷ್ಮೆ ಸೀರೆ, ರಾಮ-ಲಕ್ಷ್ಮಣರಿಗೆ ಶಲ್ಯಗಳನ್ನು ಗುರುವಾರ ಸಮರ್ಪಿಸಲಾಯಿತು.

ಗುರುವಾರ ಬೆಳಗ್ಗೆ ಸಚಿವರ ನೇತೃತ್ವದ ತಂಡವು ಕನ್ನಡಿಗ ಅರ್ಚಕರಾದ ಗೋಪಾಲ್‌ ಭಟ್‌ ಮತ್ತು ಅವರ ತಂಡ ಸಮ್ಮುಖದಲ್ಲಿ ಪೂಜೆ ಸಲ್ಲಿಸಿತು. ಈ ಸಂದರ್ಭದಲ್ಲಿ ಅಯೋಧ್ಯೆಯ ಪವಿತ್ರ ಮೃತ್ತಿಕೆಯನ್ನು ಕೂಡ ಶಾಸ್ತ್ರೋಕ್ತವಾಗಿ ಪೂಜಿಸಿ, ಸಚಿವರು ಮತ್ತು ಅವರ ಸಹಯಾತ್ರಾರ್ಥಿಗಳಿಗೆ ವಿತರಿಸಲಾಯಿತು. ಈ ಮೃತ್ತಿಕೆಯನ್ನು ರಾಮದೇವರ ಬೆಟ್ಟಕ್ಕೆ ಸಮರ್ಪಿಸಲಾಗುವುದು ಎಂದು ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ತಿಳಿಸಿದರು.

ಬಳಿಕ, ಮಂದಿರದ ಆವರಣದಲ್ಲಿ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪಕ್ ರಾಯ್‌ ಮತ್ತು ನ್ಯಾಸದ ಪದಾಧಿಕಾರಿಗಳಿಗೆ ಈ ಕಾಣಿಕೆಗಳನ್ನು ರಾಮನಗರ ಜಿಲ್ಲೆಯ ಪರವಾಗಿ ಸಚಿವರು ಹಸ್ತಾಂತರಿಸಿದರು.

ಇದನ್ನೂ ಓದಿ | ಬಿ.ಎಸ್‌. ಯಡಿಯೂರಪ್ಪ ನಮ್ಮ ಪಿತಾಮಹ: ಹಾಡಿ ಹೊಗಳಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ

ಈ ಸಂದರ್ಭದಲ್ಲಿ ಮಾತನಾಡಿದ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರು, ರಾಮದೇವರ ಬೆಟ್ಟದ ತಾಣವಾದ ರಾಮನಗರವು ಪರಮಾತ್ಮನಾದ ಶ್ರೀರಾಮನ ಹೆಸರನ್ನೇ ಹೊತ್ತಿದೆ. ಜತೆಗೆ ಈ ಬೆಟ್ಟದಲ್ಲಿ ದೇಶದಲ್ಲೇ ಅಪರೂಪವಾಗಿರುವ ರಣಹದ್ದಿನ ಸಂತತಿ ಉಳಿದುಕೊಂಡಿದೆ. ರಾಮಾಯಣದಲ್ಲೂ ಈ ಸಂತತಿಗೆ ಸೇರಿದ ಜಟಾಯು, ಸಂಪಾತಿಗಳ ಪಾತ್ರವಿದೆ. ಹೀಗೆ ರಾಮನಗರ, ರಾಮ ಮತ್ತು ರಾಮಾಯಣಗಳ ನಡುವೆ ಮಧುರ ಬಾಂಧವ್ಯವಿದೆ ಎಂದು ಸ್ಮರಿಸಿದರು.

ಶ್ರೀರಾಮನು ನಮ್ಮ ಪರಂಪರೆ, ಸಂಸ್ಕೃತಿ ಮತ್ತು ಭಾರತೀಯತೆಯ ಪ್ರತೀಕವಾಗಿದ್ದಾನೆ. ನಮ್ಮೆಲ್ಲರ ಪಾಲಿನ ಆದರ್ಶಮೂರ್ತಿಯಾಗಿರುವ ಶ್ರೀರಾಮನಿಗೆ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣವಾಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. 2024ರ ಜನವರಿಯ ಹೊತ್ತಿಗೆ ಮಂದಿರದ ಕಾಮಗಾರಿಗಳು ಮುಗಿದು, ಜನರಿಗೆ ದರ್ಶನಕ್ಕೆ ಮುಕ್ತಗೊಳಿಸಲಾಗುವುದು ಎಂದು ನುಡಿದರು.

ರಾಮನಗರ ಜಿಲ್ಲೆಯಿಂದ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರ ನೇತೃತ್ವದಲ್ಲಿ ಅಯೋಧ್ಯೆಗೆ ತೆರಳಿದ್ದ ಯಾತ್ರಾರ್ಥಿಗಳಿಂದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರನ್ನು ಸನ್ಮಾನಿಸಲಾಯಿತು.

ರಾಮನಿಂದ ನಮ್ಮಲ್ಲಿ ರಾಮರಾಜ್ಯದ ಪರಿಕಲ್ಪನೆ ಬಂದಿದೆ. ತ್ರೇತಾಯುಗದಿಂದಲೂ ರಾಮನು ಭಾರತೀಯರನ್ನು ಒಗ್ಗೂಡಿಸುವ ಶಕ್ತಿಯಾಗಿ ಉಳಿದುಕೊಂಡು ಬಂದಿದ್ದಾನೆ. ಇಲ್ಲಿ ನಿರ್ಮಿಸಲಾಗುತ್ತಿರುವ ರಾಮ ಮಂದಿರಕ್ಕೆ ತಮ್ಮ ಕಾಣಿಕೆಯೂ ಇರಬೇಕೆಂದು ರಾಮನಗರದ ಭಕ್ತ ಮಹಾಶಯರು ಅಪೇಕ್ಷೆ ವ್ಯಕ್ತಪಡಿಸಿದರು. ಈ ಮೂಲಕ ರಾಮನಗರದ ಜನತೆಗೆ ಪರಮಾತ್ಮನ ಆಶೀರ್ವಾದ ಸಿಕ್ಕಿದೆ ಎಂದು ಸಚಿವರು ಬಣ್ಣಿಸಿದರು.

ಪೂಜೆಯ ಬಳಿಕ ಸಚಿವರು ಮತ್ತು ಯಾತ್ರಾರ್ಥಿಗಳು ಪ್ರಗತಿಯಲ್ಲಿರುವ ಮಂದಿರವನ್ನು ವೀಕ್ಷಿಸಿ, ದೇಗುಲದಲ್ಲಿ ದರ್ಶನ ಪಡೆದು ಪುನೀತರಾದರು. ಸಚಿವರ ಜತೆ ರಾಮನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ದೇವರಾಜು, ರಾಜ್ಯ ರೇಷ್ಮೆ ಕೈಗಾರಿಕೆ ಉದ್ಯಮಗಳ ನಿಗಮದ ಅಧ್ಯಕ್ಷ ಗೌತಮ್‌ ಗೌಡ ಸೇರಿದಂತೆ ಹಲವರು ಇದ್ದರು.

ಇದನ್ನೂ ಓದಿ | ರಾಮನಗರದಿಂದ ಕಣಕ್ಕಿಳಿಯಲಿದ್ದಾರೆ ನಿಖಿಲ್‌ ಕುಮಾರಸ್ವಾಮಿ: ಹಾಗಾದರೆ ಎಚ್‌ಡಿಕೆ ಸ್ಪರ್ಧೆ ಎಲ್ಲಿಂದ?

Exit mobile version