Site icon Vistara News

DK Shivakumar: ವಿವಿಧ ಸಮಸ್ಯೆ ಹೊತ್ತು ಬಂದವರಿಗೆ ಸ್ಥಳದಲ್ಲೇ ಪರಿಹಾರ ಒದಗಿಸಿದ ಡಿ.ಕೆ. ಶಿವಕುಮಾರ್

bagilige bantu sarkara sevege irali sahakara programme in channapattana

ಚನ್ನಪಟ್ಟಣ: ತಾಲೂಕಿನ ಕೋಡಂಬಳ್ಳಿ ಹಾಗೂ ಅಕ್ಕೂರು ಜಿಲ್ಲಾ ಪಂಚಾಯಿತಿ ಮಟ್ಟದಲ್ಲಿ ಸರ್ಕಾರದ ವತಿಯಿಂದ ಸೋಮವಾರ ನಡೆದ “ಬಾಗಿಲಿಗೆ ಬಂತು ಸರ್ಕಾರ ಸೇವೆಗೆ ಇರಲಿ ಸಹಕಾರ” ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್‌ (DK Shivakumar), ವಿವಿಧ ಸಮಸ್ಯೆ ಹೊತ್ತು ಬಂದವರಿಗೆ ಸ್ಥಳದಲ್ಲೇ ಪರಿಹಾರ ಒದಗಿಸಿದರು.

ಕಾರ್ಯಕ್ರಮದಲ್ಲಿ (Kannada News) ವ್ಯಾಪ್ತಿಯಲ್ಲಿ ಖಾತೆ ಮಾಡಿಕೊಡಲು 15- 20 ಸಾವಿರ ರೂ. ಲಂಚ ತೆಗೆದುಕೊಳ್ಳುತ್ತಿದ್ದಾರೆ ಎಂದು ಗ್ರಾಮ ಪಂಚಾಯತಿ ಅಧ್ಯಕ್ಷೆ ಪೂರ್ಣಿಮಾ ದೂರು ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್, ಲಂಚ ಪಡೆಯುವ ಪಿಡಿಓ, ಗ್ರಾಮ ಲೆಕ್ಕಿಗರು ಬೇರೆ ಜಾಗ ಹುಡುಕಿಕೊಳ್ಳಿ. ನನ್ನ ಕ್ಷೇತ್ರದ ಜನರಿಗೆ ತೊಂದರೆ ಆಗಬಾರದು‌ ಎಂದರು.

ಮುಂದಿನ 15 ದಿನಗಳಲ್ಲಿ ಲಂಚ ಪಡೆಯುತ್ತಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಮುಂದಿನ ದಿನಗಳಲ್ಲಿ ಈ ಬಗ್ಗೆ ದೂರುಗಳು ಬರಬಾರದು ಎಂದು ಜಿಲ್ಲಾ ಪಂಚಾಯಿತಿ ಸಿಇಒ ದಿಗ್ವಿಜಯ ಬೋಡಕೆ ಅವರಿಗೆ ಖಡಕ್ ಸೂಚನೆ ನೀಡಿದರು.

ಇದನ್ನೂ ಓದಿ: Samsung: ಸ್ಯಾಮ್‌ಸಂಗ್‌ನಿಂದ ಮ್ಯೂಸಿಕ್ ಫ್ರೇಮ್ ಬಿಡುಗಡೆ; ವಿಶೇಷತೆ ಏನು, ಬೆಲೆ ಎಷ್ಟು?

ಶ್ರವಣಯ್ಯನ ತೋಪಿನ ಸುಶೀಲ, ರತ್ನಮ್ಮ, ರಾಜಮ್ಮ, ಚಿಕ್ಕತಾಯಮ್ಮ ಸೇರಿದಂತೆ 21 ಕ್ಕೂ ಹೆಚ್ಚು ಜನ ಕಳೆದ 10 ವರ್ಷಗಳಿಂದ ಮನೆಗಳಿಗೆ ಹಕ್ಕುಪತ್ರ ನೀಡುತ್ತಿಲ್ಲ ಎಂದು ದೂರಿದಾಗ, ಮುಂದಿನ ವಾರದೊಳಗೆ ಇವರಿಗೆ ಹಕ್ಕು ಪತ್ರಗಳನ್ನು ನೀಡಬೇಕು ಎಂದು ಸೂಚಿಸಿದರು. ಸ್ಥಳದಲ್ಲೇ ಇದ್ದ ಜಿಲ್ಲಾಧಿಕಾರಿಗಳು ಮುಂದಿನ ವಾರ ಖುದ್ದಾಗಿ ನಾನೇ ಬಂದು ನಿಮ್ಮ ಸಮಸ್ಯೆಗಳನ್ನು ಬಗೆಹರಿಸುತ್ತೇನೆ ಎಂದು ತಿಳಿಸಿದರು.

ನಿಮ್ಮನ್ನು ನೋಡಲು ಮಾತ್ರ ಬಂದಿದ್ದೇನೆ

“ಅರ್ಜಿ ಎಲ್ಲಿ, ಏನು ಸಮಸ್ಯೆ” ಎಂದು ಡಿಸಿಎಂ ಅವರ ಪ್ರಶ್ನೆಗೆ ಉತ್ತರಿಸಿದ ಚನ್ನಪಟ್ಟಣದ ನಿವಾಸಿ ಶಿವಗಂಗಮ್ಮ, “ಗೃಹಲಕ್ಷ್ಮಿ, ಅನ್ನಭಾಗ್ಯ ಮತ್ತು ಶಕ್ತಿ ಯೋಜನೆಯಿಂದ ನನಗೆ ತುಂಬಾ ಒಳ್ಳೆಯದಾಗಿದೆ, ನನ್ನದು ಏನೂ ಸಮಸ್ಯೆ ಇಲ್ಲ. ನಿಮ್ಮನ್ನು ನೋಡಲು ಮಾತ್ರ ಬಂದಿದ್ದೇನೆ” ಎಂದಾಗ ಡಿಸಿಎಂ ನಕ್ಕು ಹಿರಿಯ ಜೀವದ ಆಶೀರ್ವಾದ ಪಡೆದು “ನಿನ್ನಂತೆ ಎಲ್ಲರ ಸಮಸ್ಯೆಯು ಇಲ್ಲದಂತೆ ಆಗಲಿ ಕಣವ್ವ” ಎಂದರು.

ಹಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ

ಬಳಿಕ ಕೊಂಡಾಪುರ ಕೃಷ್ಣ ಎಂಬುವವರು, ಜಮೀನು ನನ್ನ ಹೆಸರಿಗೆ ಆಗಿ 5 ವರ್ಷಗಳು ಕಳೆದರೂ ಖಾತೆ ನೀಡುತ್ತಿಲ್ಲ ಎಂದು ಡಿಸಿಎಂ ಬಳಿ ಹೇಳಿದಾಗ, ಪಕ್ಕದಲ್ಲೇ ಇದ್ದ ಜಿಲ್ಲಾಧಿಕಾರಿಗಳು ಡಿಸಿಎಂ ಸೂಚನೆ ಮೇರೆಗೆ ತಕ್ಷಣ ಕಂದಾಯ ಅಧಿಕಾರಿಗೆ ಕರೆ ಮಾಡಿ ಕೂಡಲೇ ದಾಖಲೆ ನೀಡುವಂತೆ ತಿಳಿಸಿದರು.

ಅಂಬಾಡಳ್ಳಿಯ ರೇಣುಕಮ್ಮ, ಮಾದಾಪುರ ಗ್ರಾಮದ ಚಿಕ್ಕಮ್ಮ ಎಂಬುವವರು ನಮಗೆ ಒಂದು ವರ್ಷ ಕಳೆದರೂ ಗೃಹಲಕ್ಷ್ಮಿ ಹಣ ಬಂದಿಲ್ಲ ಎಂದಾಗ “ಮುಂದಿನ ತಿಂಗಳು ಬರುವಂತೆ ಮಾಡುತ್ತೇನೆ” ಎಂದು ಡಿಸಿಎಂ ಈ ವೇಳೆ ಭರವಸೆ ನೀಡಿದರು.

ಇದನ್ನೂ ಓದಿ: Kannada New Movie: ‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ʼಚಿನ್ನಮ್ಮʼ ಹಾಡಿಗೆ ಗೋಲ್ಡನ್ ಸ್ಟಾರ್ ಅಭಿಮಾನಿಗಳು ಫಿದಾ

ಈ ವೇಳೆ ಪೋಡಿ, ಪಹಣಿ, ಬಗರ್ ಹುಕುಂ, ವಸತಿ ಯೋಜನೆಗೆ ಸಂಬಂಧಿಸಿದ ಹೆಚ್ಚಿನ ಮನವಿಗಳು ಸಲ್ಲಿಕೆಯಾದವು.

Exit mobile version