Site icon Vistara News

Real Heroes : 11 ಗಂಟೆಯಲ್ಲಿ 18 ಎಕರೆ ಉಳುಮೆ; ಇದು ಜೋಡೆತ್ತುಗಳ ಪವರ್‌; ಯಂತ್ರಗಳನ್ನೂ ಮೀರಿಸಿದ ಸಾಧನೆ

Jodethu record

ರಾಯಚೂರು: ಕೇವಲ 11 ಗಂಟೆ ಅವಧಿಯಲ್ಲಿ 18 ಎಕರೆ ಜಮೀನನ್ನು ಉಳುಮೆ (Ploughing using animals) ಮಾಡುವ ಮೂಲಕ ಬಿಸಿಲೂರಿನ ಜೋಡೆತ್ತುಗಳು ಭರ್ಜರಿ ಸಾಧನೆ (Real Heroes) ಮಾಡಿವೆ, ಹೊಸ ದಾಖಲೆಯನ್ನೇ (Bullocks create history) ಬರೆದಿವೆ. ಇದೆಂಥಾ ಸಾಧನೆ ಎಂದು ನೀವು ಕೇಳುವುದಾದರೆ ಒಂದು ಹೋಲಿಕೆ ಇಲ್ಲಿದೆ. ನೀವು ಯಂತ್ರಗಳ ಮೂಲಕ ಉಳುಮೆ (Ploughing by Machine) ಮಾಡುವುದಾದರೂ ಈ ಅವಧಿಯಲ್ಲಿ ಇಷ್ಟೊಂದು ಭೂಮಿಯನ್ನು ಉಳುಮೆ ಮಾಡಿ ಹದಗೊಳಿಸಲು ಸಾಧ್ಯವೇ ಇಲ್ಲ!

ಅದರಲ್ಲೂ ಬಿಸಿಲೂರಿನ ಗಟ್ಟಿ ನೆಲದಲ್ಲಿ ರಿಯಲ್‌ ಜೋಡೆತ್ತುಗಳು ಸಾಂಪ್ರದಾಯಿಕ ಉಳುಮೆ ಮೂಲಕ ಈ ದಾಖಲೆ ಸೃಷ್ಟಿಸಿವೆ. ಮುಷ್ಟೂರು ಗ್ರಾಮದ ರೈತ ಯಂಕಪ್ಪ ಎಂಬವರ ಈ ಜೋಡೆತ್ತುಗಳೇ ಸಾಧನೆ ಮಾಡಿದ ಶಕ್ತಿವಂತ ಪ್ರಾಣಿಗಳು. ಇವರ ಸಾಧನೆಗೆ ಪ್ರಶಂಸೆಗಳ ಮಹಾಪೂರವೇ ವ್ಯಕ್ತವಾಗಿದೆ. ಅವುಗಳನ್ನು ಬೆನ್ನು ಬಿದ್ದು, ಪ್ರೀತಿಸಿ, ಬೆಳೆಸಿ ಗದ್ದೆಯಲ್ಲಿ ಉಳುಮೆ ಮಾಡಿ ಯಂತ್ರಗಳನ್ನೂ ಮೀರಿಸುವಂತೆ ಮಾಡಿದ್ದು ರೈತ ಯಂಕಪ್ಪ ಅವರ ಶಕ್ತಿ.

ಮಾನ್ವಿ ತಾಲೂಕಿನ ಮುಷ್ಟೂರು ಗ್ರಾಮದ ರೈತ ಯಂಕಪ್ಪ ಅವರು 5 ವರ್ಷಗಳ ಹಿಂದೆ ಜೋಡೆತ್ತುಗಳನ್ನು ಖರೀದಿಸಿದ್ದರು. ಇತ್ತೀಚಿನ ದಿನಗಳಲ್ಲಿ ಮಳೆಯಾಗದೆ ಇರುವ ಹಿನ್ನೆಲೆಯಲ್ಲಿ, ನಿತ್ಯ ಕೃಷಿಯಲ್ಲಿ ಬ್ಯುಸಿ ಆಗಿರೋ ಎತ್ತುಗಳಿಗೆ ಕೆಲವು ದಿನಗಳಿಂದ ವಿಶ್ರಾಂತಿ ನೀಡಲಾಗಿತ್ತು. ಆದರೆ ಬರಿ ವಿಶ್ರಾಂತಿಯಿಂದ ಎತ್ತುಗಳು ಹಾಳಾಗಬಾರದೆಂದು ಉಳುಮೆಗೆ ನೊಗ ಕಟ್ಟಿದ್ದರು.

ಸಾಮಾನ್ಯವಾಗಿ ಮುಂಗಾರು ಸಮಯದಲ್ಲಿ ರೈತರು ಬೀಜವನ್ನು ಬಿತ್ತನೆ ಮಾಡುವ ಮೊದಲು, ಮಾಗಿ ಉಳುಮೆಯನ್ನು ಮಾಡಿ ಜಮೀನನ್ನು ಸಿದ್ಧಗೊಳಿಸುತ್ತಾರೆ. ನಂತರ ಮಳೆಯಾಗಿ ಭೂಮಿ ಹಸಿಯಾದ ನಂತರ ತೇವಾಂಶವನ್ನು ನೋಡಿಕೊಂಡು ಬಿತ್ತನೆ ಮಾಡುತ್ತಾರೆ. ಹೀಗಿರುವಾಗ ರೈತ ಯಂಕಪ್ಪ ಮಾಗಿ ಉಳುಮೆಯಲ್ಲಿ ಸಾಧನೆಗೈಯುವ ಕನಸು ಕಂಡಿದ್ದರು.

ಅದರಂತೆ ತನ್ನ 18 ಎಕರೆ ಕೃಷಿ ಭೂಮಿಯ ಉಳುಮೆಗೆ ಒಂದು‌ ಸಮಯ ನಿಗದಿ ಮಾಡಿದರು. ರಾತ್ರಿ ಒಂದು ಗಂಟೆ ಸುಮಾರಿಗೆ ಜಮೀನಿಗೆ ತೆರಳಿದ್ದ ರೈತ ಯಂಕಪ್ಪ ಉಳುಮೆ ಮಾಡಲು ಶುರು ಮಾಡಿದರು. ಒಟ್ಟು 18 ಎಕರೆ ಕೃಷಿ ಭೂಮಿಯನ್ನು 11 ಗಂಟೆಯಲ್ಲಿ ಉಳುಮೆ ಮಾಡಿ ಮುಗಿಸಿದರು.

ಈ ಮೂಲಕ‌ ರೈತ ಯಂಕಪ್ಪನ ಜೋಡೆತ್ತುಗಳು ಹೊಸ ದಾಖಲೆ ಸೃಷ್ಟಿಸಿದಂತೆ ಅಗಿದೆ. ಸಾಮಾನ್ಯ ಎತ್ತುಗಳು ಒಂದು ಎಕರೆ ಉಳುಮೆಗೆ ಒಂದುವರೆ ಗಂಟೆಯಿಂದ ಎರಡು ಗಂಟೆ ಸಮಯ ತೆಗೆದುಕೊಳ್ಳುತ್ತವೆ. ಆದರೆ ಈ ರೈತ ಯಂಕಪ್ಪ ಎತ್ತುಗಳು ಅಲ್ಪ ಅವಧಿಯಲ್ಲಿ 18 ಎಕರೆ ಉಳುಮೆ ಮಾಡಿದ್ದು ನಿಜಕ್ಕೂ ಅಚ್ಚರಿ ಮೂಡಿಸಿದೆ.

ಹೆಮ್ಮೆಯ ಎತ್ತುಗಳನ್ನು ಉಳುಮೆಗೆ ಸಿದ್ಧಪಡಿಸಿದವನು

ಅದರಲ್ಲೂ ಟ್ರಾಕ್ಟರ್ ಮೂಲಕ ಉಳುಮೆ ಮಾಡಿದರೂ ದಿನಕ್ಕೆ 15 ಎಕರೆ ಮಾತ್ರ ಉಳುಮೆ ಮಾಡಲು ಮಾತ್ರ ಸಾಧ್ಯ. ಈ‌ ಮಧ್ಯೆ ಎತ್ತುಗಳ ಹಿಂದೆ ಇಬ್ಬರೂ ರೈತರಾದ ಬಸವರಾಜ್ ಮತ್ತು ಶರಣಪ್ಪ ನಿರಂತರವಾಗಿ ಹಿಂದೆ ಓಡಾಟ ನಡೆಸಿದ್ದಾರೆ. ಈ ಜೋಡೆತ್ತುಗಳ ಸಾಧನೆಗೆ ಮುಷ್ಟೂರು ಗ್ರಾಮಸ್ಥರು ಪುಲ್ ಖುಷಿಯಾಗಿದ್ದಾರೆ. ಈ‌ ಸೀಮೆ ತಳಿಯ ಎತ್ತುಗಳನ್ನು ನೋಡಲು ಬೇರೆ ಬೇರೆ ಊರುಗಳಿಂದ ರೈತರು ನಿತ್ಯ ಬರುತ್ತಿದ್ದಾರೆ.

ಇದನ್ನೂ ಓದಿ: ರಾಜ ಮಾರ್ಗ ಅಂಕಣ : ದತ್ತಣ್ಣ ಎಂಬ ಜೀನಿಯಸ್‌; ಅಪರೂಪದ ನಟನ ಸಿನಿ ಜರ್ನಿಯ ಟಾಪ್‌ 10 ಪಾತ್ರಗಳು

Exit mobile version