Site icon Vistara News

Agricultural Research: ಕೃಷಿ ವಿವಿಗಳಲ್ಲಿ ಸಂಶೋಧನೆಗಳು ಹೆಚ್ಚಾಗಬೇಕು: ಸಿಎಂ ಸಿದ್ದರಾಮಯ್ಯ

CM Siddaramaiah

ಬೆಂಗಳೂರು: ಹೆಚ್ಚುತ್ತಿರುವ ಜನಸಂಖ್ಯೆಗೆ ಪೂರಕವಾಗಿ ಆಹಾರ ಉತ್ಪಾದನೆ ಹೆಚ್ಚಿಸುವಲ್ಲಿ ಕೃಷಿ ವಿವಿಗಳ ಪಾತ್ರ ಬಹಳ ಮುಖ್ಯ. ಹೀಗಾಗಿ ಆಹಾರ ಉತ್ಪಾದನೆ ಇನ್ನಷ್ಟು ಹೆಚ್ಚಲು, ಗುಣಾತ್ಮಕ ಆಗಲು ಕೃಷಿ ವಿವಿಗಳ ಅಧ್ಯಯನ ಮತ್ತು ಸಂಶೋಧನೆಗಳು (Agricultural Research) ಹೆಚ್ಚಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ದೇಸಿ ಸಮ್ಮೇಳನ ಮತ್ತು ಬೇಕಿಂಗ್ ಮೌಲ್ಯ ವರ್ಧನಾ ಸಂಸ್ಥೆಯ ನೂತನ‌ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹಸಿರು ಕ್ರಾಂತಿ ಬಳಿಕ ದೇಶ ಆಹಾರ ಸ್ವಾವಲಂಭನೆಯನ್ನು ಸಾಧಿಸಿತು. ಅದಕ್ಕೂ ಮೊದಲು ಅವಲಂಭನೆ ಇತ್ತು. ಇತ್ತೀಚೆಗೆ ನಿಧನರಾದ ಕೃಷಿತಜ್ಞ ಸ್ವಾಮಿನಾಥನ್ ಅವರು ಈ ಹಸಿರು ಕ್ರಾಂತಿಗೆ ಬಹಳಷ್ಟು ಕೊಡುಗೆ ನೀಡಿದ್ದರು. ಹೀಗಾಗಿ ಆಹಾರ ಉತ್ಪಾದನೆ ಇನ್ನಷ್ಟು ಹೆಚ್ಚಲು, ಗುಣಾತ್ಮಕ ಆಗಲು ಕೃಷಿ ವಿವಿಗಳ ಅಧ್ಯಯನ ಮತ್ತು ಸಂಶೋಧನೆಗಳು ಹೆಚ್ಚಾಗಬೇಕು ಎಂದರು.

ಇದನ್ನೂ ಓದಿ | Corruption Charge : ರಾಜ್ಯದಲ್ಲಿ 1000 ಕೋಟಿ ರೂ. ಲಂಚ ಸಂಗ್ರಹ; ಬಿಜೆಪಿ ಗಂಭೀರ ಆರೋಪ

ಕುಷ್ಕಿ ಭೂಮಿ ಅತಿ ಹೆಚ್ವು ಇರುವ ರಾಜ್ಯ ನಮ್ಮದು. ವಾತಾವರಣ ಬದಲಾವಣೆಯಿಂದ ರಾಜ್ಯ ನಿರಂತರವಾಗಿ ಅತಿವೃಷ್ಟಿ, ಅನಾವೃಷ್ಟಿಗೆ ತುತ್ತಾಗುತ್ತಿದೆ. ಈ ಕಾರಣಕ್ಕೇ ನಮ್ಮ ರೈತರಿಗೆ ಕೃಷಿ, ತಜ್ಞರು ಮತ್ತು ತಂತ್ರಜ್ಞರ ನೆರವು ಅತ್ಯಗತ್ಯ ಎಂದರು.

ಇದಕ್ಕಾಗಿಯೇ ಕೃಷಿ ವಿವಿಗಳು ಹೆಚ್ಚು ಸಂಶೋಧನೆ ನಡೆಸಬೇಕು. ಸಂಶೋಧನೆಗಳು ರೈತರಿಗೆ ಪರಿಣಾಮಕಾರಿಯಾಗಿ ತಲುಪಬೇಕು. ಕಡಿಮೆ ಮಳೆಯಲ್ಲಿ, ಕಡಿಮೆ ನೀರಲ್ಲಿ ಎಂಥ ಬೆಳೆ ಬೆಳೆಯಬಹುದು, ಹವಾಮಾನ ವೈಪರೀತ್ಯಕ್ಕೆ ಬೆಳೆ ಹಾಳಾಗದಂತೆ ಏನು ಮಾಡಬೇಕು ಎನ್ನುವ ಕುರಿತಂತೆ ಹೆಚ್ಚೆಚ್ಚು ಅಧ್ಯಯನ, ಸಂಶೋಧನೆಗಳು ನಡೆದು ರೈತರಿಗೆ ತಲುಪುವಂಥಾಗಬೇಕು ಎಂದರು.

Lab to Land-Land to Lab

ಪ್ರಯೋಗಶಾಲೆಗಳಿಂದ ಕೃಷಿ ಭೂಮಿಗೆ ಏನು ತಲುಪಿದೆ, ಕೃಷಿ ಭೂಮಿಯ ಅನುಭವಗಳು ಮತ್ತು ಅಗತ್ಯಗಳು ಪ್ರಯೋಗ ಶಾಲೆಗಳಿಗೆ ಗೊತ್ತಾಗಬೇಕು. ಆಗ ಮಾತ್ರ ಸುಸ್ಥಿರ ಕೃಷಿ ಸಾಧ್ಯವಾಗುತ್ತದೆ. ಇದು ಸಾಧ್ಯವಾಗಬೇಕಾದರೆ Lab to Land-Land to Lab ಪರಿಕಲ್ಪನೆಯಲ್ಲಿ ವೈಜ್ಞಾನಿಕ ಕೆಲಸಗಳನ್ನು ಕೃಷಿ ವಿವಿಗಳು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕೃಷಿ ವಿವಿಗಳು ಅಭಿವೃದ್ಧಿ ಪಡಿಸಿರುವ ಹೊಸ ತಳಿಗಳು ರೈತರಿಗೆ ತಲುಪಿವೆಯಾ ಎಂದು ಪರೀಕ್ಷಿಸಿಕೊಳ್ಳಿ. ಇಲ್ಲದಿದ್ದರೆ ಹೊಸ ತಳಿಗಳು ಅಭಿವೃದ್ಧಿ ಮಾಡಿ ಏನು ಪ್ರಯೋಜನ ಎಂದ ಅವರು, ಸಂಶೋಧನೆ-ಅಧ್ಯಯನ ಮತ್ತು ವಿಸ್ತರಣಾ ಕಾರ್ಯಗಳಿಗೆ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು.

ಇದನ್ನೂ ಓದಿ | MB Patil: ಮೆಟ್ರೋದಲ್ಲಿ ಸಾಮಾನ್ಯರಂತೆ ಪ್ರಯಾಣಿಸಿ ಖುಷಿಪಟ್ಟ ಸಚಿವ ಎಂ.ಬಿ. ಪಾಟೀಲ್

ಕೃಷಿ ವಿಶ್ವ ವಿದ್ಯಾಲಯ, ರಾಷ್ಟ್ರೀಯ ಕೃಷಿ ವಿಸ್ತರಣಾ ಸಂಸ್ಥೆ, ಕೃಷಿ ಇಲಾಖೆ ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರದ ಶಾಸಕ, ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ವಹಿಸಿದ್ದರು. ಕೃಷಿ ಸಚಿವರಾದ ಎನ್.ಚಲುವರಾಯಸ್ವಾಮಿ, ಶಾಸಕರಾದ ಶರತ್ ಬಚ್ಚೇಗೌಡ, ಕೃಷಿ ವಿವಿ ಕುಲಪತಿಗಳಾದ ಡಾ.ಎಸ್.ವಿ.ಸುರೇಶ್ ಸೇರಿ ಹಲವು ಪ್ರಮುಖರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Exit mobile version