Site icon Vistara News

Road Accident : ಬೈಕ್‌ಗೆ ಸಿಮೆಂಟ್ ಮಿಕ್ಸರ್ ಲಾರಿ ಡಿಕ್ಕಿ; ಹಾರಿ ಬಿದ್ದು ಸವಾರ ಸಾವು

lorry accident

ಆನೇಕಲ್/ತುಮಕೂರು: ವೇಗವಾಗಿ ಬಂದ ಸಿಮೆಂಟ್‌ ಮಿಕ್ಸರ್‌ ಲಾರಿಯೊಂದು ಎದುರಿಗೆ ಬರುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ (Road Accident) ಸವಾರ ಹಾರಿ ಬಿದ್ದು ದಾರುಣವಾಗಿ ಮೃತಪಟ್ಟಿದ್ದಾರೆ. ಪುಟ್ಟೇನಹಳ್ಳಿ ನಿವಾಸಿ ಸತ್ಯೇಂದ್ರ ಸಿಂಗ್ ಮೃತ ದುರ್ದೈವಿ.

ಬೆಂಗಳೂರು ಬನ್ನೇರುಘಟ್ಟ ಮುಖ್ಯರಸ್ತೆಯ ಕೋಳಿಫಾರಂ ಗೇಟ್ ಬಳಿ ಈ ಅಪಘಾತ ನಡೆದಿದೆ. ಕಿರಿದಾದ ರಸ್ತೆಯಲ್ಲಿ ಅತಿವೇಗವಾಗಿ ಬಂದ ಲಾರಿ ಚಾಲಕನಿಗೆ ನಿಯಂತ್ರಣ ತಪ್ಪಿದೆ. ಇದರಿಂದಾಗಿ ಬೈಕ್ ಗುದ್ದಿದೆ, ಬಳಿಕ ಅಂಗಡಿಗಳಿಗೆ ನುಗ್ಗಿ ಲಾರಿ ಪಲ್ಟಿಯಾಗಿದೆ. ವೀವರ್ಸ್ ಕಾಲೋನಿಯಿಂದ ಕೋಳಿ ಫಾರಂ ಗೇಟ್ ಕಡೆಗೆ ಬರುತ್ತಿದ್ದ ಲಾರಿಯು, ಮೊದಲು ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದೆ. ಸತ್ಯೇಂದ್ರ ಗಾಡಿ ಮೇಲಿಂದ ಹಾರಿ ಬಿದ್ದು ಮೃತಪಟ್ಟಿದ್ದಾರೆ. ಸವಾರನ ಬೈಕ್ ಛಿದ್ರಗೊಂಡಿತ್ತು.

ಬೈಕ್ ಡಿಕ್ಕಿಯೊಡೆದು ಬಳಿಕ ಅಂಗಡಿಗಳಿಗೆ ಡಿಕ್ಕಿಯಾಗಿ ಲಾರಿ ಪಲ್ಟಿಯೊಡೆದಿದೆ. ಲಾರಿ ಅಂಗಡಿಗಳ ಮೇಲೆ ಉರುಳಿ ಬಿದ್ದ ಪರಿಣಾಮ ಅಂಗಡಿಗಳೆಲ್ಲವೂ ಧ್ವಂಸವಾಗಿದ್ದವು. ಕುಮಾರಸ್ವಾಮಿ ಸಂಚಾರಿ ಪೊಲೀಸರು‌ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಬೈಕ್‌ಗಳ ನಡುವೆ ಅಪಘಾತ; ಸವಾರ ಸಾವು

ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ಸವಾರನೊಬ್ಬ ಮೃತಪಟ್ಟಿದ್ದಾರೆ. ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಬೇಡತ್ತೂರು ಗ್ರಾಮದಲ್ಲಿ ಅಪಘಾತ ಸಂಭವಿಸಿದೆ. ಮೃತನ ಹೆಸರು ತಿಳಿದು ಬಂದಿಲ್ಲ. ಘಟನೆಯಲ್ಲಿ ಮತ್ತಿಬ್ಬರಿಗೆ ಗಾಯವಾಗಿದ್ದು, ಸ್ಥಳೀಯರು ತಾಲೂಕು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಮಿಡಿಗೇಶಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಭೀಕರ ಅಪಘಾತದಲ್ಲಿ ಬಸ್‌ ಛಿದ್ರ; ಡಾ.ರಾಜಕುಮಾರ್‌ ಫೋಟೊ ಮಾತ್ರ ಭದ್ರ!

ದಾವಣಗೆರೆ: ಸದಾಶಿವ ಆಯೋಗ ಜಾರಿಗೆ ಆಗ್ರಹಿಸಿ ಒಂದಷ್ಟು ಹೋರಾಟಗಾರರು ಬೆಳಗಾವಿ ಅಧಿವೇಶನದ ಸಮಯದಲ್ಲಿ ಪ್ರತಿಭಟಿಸಲು ಯೋಜಿಸಿದ್ದರು. ಅದರಂತೆ ತಡರಾತ್ರಿ ಖಾಸಗಿ ಬಸ್‌ ಮಾಡಿಕೊಂಡು ತೆರಳುತ್ತಿದ್ದರು. ಆದರೆ ದುರಾದೃಷ್ಟ ಎಂಬಂತೆ ದಾವಣಗೆರೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವಾಗ ಭೀಕರ ಅಪಘಾತ (Road Accident ) ಸಂಭವಿಸಿದೆ.

ಲಾರಿಗೆ ಬಸ್‌ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಬಸ್‌ ಮುಂಭಾಗ ಸಂಪೂರ್ಣ ನಜ್ಜು-ಗುಜ್ಜಾಗಿತ್ತು. ಈ ಅಪಘಾತದಲ್ಲಿ ಇಬ್ಬರು ಗಂಭೀರವಾಗಿದ್ದರೆ, 17 ಮಂದಿ ಗಾಯಗೊಂಡಿದ್ದರು. ಗಾಯಗೊಂಡಿದ್ದವರನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮಾದಿಗ ದಂಡೋರ ಜಾಗೃತಿ ಸಮಿತಿಯ ಬೆಂಗಳೂರು, ಚಿಕ್ಕಬಳ್ಳಾಪುರ, ಚಿಂತಾಮಣಿ ಪದಾಧಿಕಾರಿಗಳು ಸದಾಶಿವ ಆಯೋಗ ಜಾರಿಗೆ ಆಗ್ರಹಿಸಿ ಪ್ರತಿಭಟನೆ ತೆರಳುತ್ತಿದ್ದರು. ಈ ವೇಳೆ ಅವಘಡ ಸಂಭವಿಸಿದೆ. ದಾವಣಗೆರೆ ಉತ್ತರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.

ಭದ್ರವಾಗಿತ್ತು ರಾಜ್‌ಕುಮಾರ್‌ ಫೋಟೊ

ಇನ್ನು ಈ ಭೀಕರ ಅಪಘಾತದಲ್ಲಿ ಬಸ್‌ ಜಖಂಗೊಂಡಿತ್ತು. ಲಾರಿಯು ಮುಖಾಮುಖಿಯಾಗಿ ಬಸ್‌ಗೆ ಡಿಕ್ಕಿ ಹೊಡೆದ ರಭಸಕ್ಕೆ ಮುಂಭಾಗವೇ ಛಿದ್ರಛಿದ್ರಗೊಂಡಿತ್ತು. ಡ್ರೈವರ್‌ ಸೀಟ್‌ ಪೂರ್ತಿ ನಜ್ಜುಗುಜ್ಜಾಗಿತ್ತು. ಆದರೆ ಡ್ರೈವರ್‌ ಸೀಟ್‌ನಲ್ಲಿ ಅಳವಡಿಸಿದ್ದ ಡಾ. ರಾಜ್‌ಕುಮಾರ್‌ ಫೋಟೊಗೆ ಮಾತ್ರ ಯಾವುದೇ ಡ್ಯಾಮೇಜ್‌ ಆಗಿರಲಿಲ್ಲ. ಬಸ್‌ ಛಿದ್ರಗೊಂಡಿದ್ದರೆ, ಡಾ.ರಾಜ್‌ಕುಮಾರ್‌ ಫೋಟೋ ಭದ್ರವಾಗಿತ್ತು.

ಕೆಎಸ್‌ಆರ್‌ಟಿಸಿ ಬಸ್‌ ಹಿಂದಿನ ಚಕ್ರಕ್ಕೆ ಸಿಲುಕಿ ಮಹಿಳೆ ಸಾವು

ಬೆಂಗಳೂರಿನ ಮಹಿಳೆಯೊಬ್ಬರು ಮಂಡ್ಯ ಬಸ್‌ ನಿಲ್ದಾಣದಲ್ಲಿ (Mandya News) ಕೆಎಸ್‌ಆರ್‌ ಟಿಸಿ ಬಸ್‌ನಡಿಗೆ (KSRTC bus) ಸಿಲುಕಿ (Road accident) ಪ್ರಾಣ ಕಳೆದುಕೊಂಡಿದ್ದಾರೆ. ಪೂಜಾ ಭಾರತಿ(40) ಎಂಬವರೇ ಪ್ರಾಣ ಕಳೆದುಕೊಂಡ ಮಹಿಳೆ (Woman dead in accident).

ಬೆಂಗಳೂರಿನ ಅಡವಾಡಿಯ ಪೂಜಾ ಭಾರತಿ ಅವರು ಮಂಡ್ಯ ಬಸ್‌ ನಿಲ್ದಾಣಕ್ಕೆ ಪ್ರವೇಶ ಮಾಡುವಾಗ ಒಮ್ಮಿಂದೊಮ್ಮೆಗೆ ಬಸ್‌ ನುಗ್ಗಿ ಬಂದಿದೆ. ಬಸ್‌ ಏಕಾಏಕಿ ತಿರುಗಿದಾಗ ಅದರ ಹಿಂಬದಿಯ ಚಕ್ರಕ್ಕೆ ಸಿಲುಕಿ ಪೂಜಾ ಪ್ರಾಣ ಕಳೆದುಕೊಂಡಿದ್ದಾರೆ. ಮಂಡ್ಯದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೊದಲು ಈ ಘಟನೆಯಲ್ಲಿ ಮೃತಪಟ್ಟವರು ಒಬ್ಬ ವಿದ್ಯಾರ್ಥಿನಿ ಎಂದು ಹೇಳಲಾಗಿತ್ತು.

ಪೂಜಾ ಭಾರತಿ ಅವರು ಮಂಡ್ಯದ ಸಂಬಂಧಿಕರ ಮನೆಗೆ ಬಂದವರಾಗಿದ್ದು, ಅಲ್ಲಿಂದ ಮರಳಿ ಬೆಂಗಳೂರಿಗೆ ತೆರಳಲು ಬಸ್‌ ನಿಲ್ದಾಣಕ್ಕೆ ಬಂದಿದ್ದರು. ಆದರೆ, ಬಸ್‌ ಅವರ ಜೀವವನ್ನೇ ತೆಗೆದಿದೆ.

ಬಸ್‌ ನಿಲ್ದಾಣಗಳಲ್ಲಿ ಬಸ್‌ಗಳ ಚಾಲಕರು ಅತ್ಯಂತ ನಿರ್ಲಕ್ಷ್ಯದಿಂದ ವರ್ತಿಸುತ್ತಿರುವ ಘಟನೆಗಳು ಅಲ್ಲಲ್ಲಿ ಕಂಡುಬರುತ್ತಿವೆ. ಏಕಾಏಕಿ ನುಗ್ಗಿಸುವುದು, ಬೇಕಾಬಿಟ್ಟಿ ಟರ್ನ್‌ ಮಾಡುವುದು ಹೀಗೆ ಜನರ ಜೀವವನ್ನು ಅಪಾಯಕ್ಕೆ ಸಿಲುಕಿಸುವ ರೀತಿಯಲ್ಲಿ ಚಲಾಯಿಸುತ್ತಾರೆ ಎಂಬ ಆರೋಪವಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version