Site icon Vistara News

Road Accident: ಬೈಕ್‌ಗೆ ಡಿಕ್ಕಿ ಹೊಡೆದ ಸಿಮೆಂಟ್‌ ಮಿಕ್ಸರ್‌ ಲಾರಿ; ಸ್ಥಳದಲ್ಲೇ ಸವಾರ ಮೃತ್ಯು

Road Accident in Kanakagiri taluk

ಆನೇಕಲ್: ಸಿಮೆಂಟ್ ಮಿಕ್ಸರ್ ಲಾರಿಗೆ ಬೈಕ್ ಸವಾರನೊಬ್ಬ (Road Accident) ಬಲಿಯಾಗಿದ್ದಾನೆ. ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ದೊಮ್ಮಸಂದ್ರ ಬಳಿ ಬೈಕ್‌ಗೆ ಸಿಮೆಂಟ್‌ ಮಿಕ್ಸರ್‌ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ, ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತನು ಉತ್ತರ ಪ್ರದೇಶ ಮೂಲದ ಕಾರ್ಮಿಕನೆಂದು ತಿಳಿದು ಬಂದಿದ್ದು, ಲಾರಿ ಚಾಲಕನ ಅತಿವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಸ್ಥಳಕ್ಕೆ ಸರ್ಜಾಪುರ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಬಸ್‌ ಪಲ್ಟಿ; ಚುನಾವಣಾ ಕರ್ತವ್ಯಕ್ಕೆ ಹೊರಟಿದ್ದ 15ಕ್ಕೂ ಹೆಚ್ಚು ಮಂದಿಗೆ ಗಾಯ

ವಿಜಯಪುರ ಜಿಲ್ಲೆಯ ಜಿ. ಮುದ್ದೇಬಿಹಾಳ ತಾಲೂಕಿನ ಹಳ್ಳೂರು ಕ್ರಾಸ್‌ನಲ್ಲಿ ಬಸ್‌ ಅಪಘಾತಕ್ಕೀಡಾಗಿದೆ. ಚುನಾವಣಾ ಕರ್ತವ್ಯದ ಮೇಲೆ‌ ಹೊರಟಿದ್ದ ಬಸ್‌ ಒಂದು ಪಲ್ಟಿಯಾಗಿ (Road accident) 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಬಸ್‌ನ ಆಕ್ಸಿನ್‌ ತುಂಡಾಗಿ ನಿಯಂತ್ರಣ ತಪ್ಪಿ ಬಸ್‌ ಪಲ್ಟಿಯಾಗಿದೆ ಎನ್ನಲಾಗಿದೆ.

ಬಸ್ಸಿನಲ್ಲಿ ಸುಮಾರು 40ಕ್ಕೂ ಅಧಿಕ ಮಂದಿ ಪ್ರಯಾಣಿಕರಿದ್ದರು. ಇವರಲ್ಲಿ 15ಕ್ಕೂ ಅಧಿಕ ಮಂದಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಲಾಗಿದೆ. ವಿಷಯ ತಿಳಿದು ಮುದ್ದೇಬಿಹಾಳ ಚುನಾವಣಾಧಿಕಾರಿ ಚಂದ್ರಕಾಂತ ಪವಾರ್ ಗಾಯಾಳುಗಳ ನೆರವಿಗೆ ಧಾವಿಸಿದ್ದಾರೆ.

ಸಿಂದಗಿ ವಿಧಾನಸಭಾ ಕ್ಷೇತ್ರದ ಮತಕೇಂದ್ರ ತರಬೇತಿಗೆ ಸಿಬ್ಬಂದಿಯನ್ನು ಕರೆದೊಯ್ಯುತ್ತಿದ್ದ ಬಸ್‌ ಇದಾಗಿದ್ದು, ಮತಕೇಂದ್ರಕ್ಕೆ ಹೋಗುವಾಗ ದಾರಿ ಮಧ್ಯೆ ಈ ಘಟನೆ ಸಂಭವಿಸಿದೆ. ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆಗೆ ಸಂಬಂಧಿಸಿ ದೂರು ದಾಖಲಾಗಿದೆ.

ಮನೆ ಕುಸಿದು ಮಹಿಳೆ ಮತ್ತು 24 ದಿನದ ಹಸುಗೂಸು ದುರ್ಮರಣ

ಸತತ ಮಳೆಯಿಂದಾಗಿ ಮನೆಯೊಂದು ಕುಸಿದು (House collapse) ಮಹಿಳೆ ಹಾಗೂ 24 ದಿನದ ಹಸುಗೂಸು ಮೃತಪಟ್ಟ ದಾರುಣ ಘಟನೆ ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕಿನ ಜೀರಾಳ ಗ್ರಾಮದಲ್ಲಿ ನಡೆದಿದೆ.

ಸೋಮವಾರ ರಾತ್ರಿ ನಡೆದ ದುರಂತದಲ್ಲಿ ಪ್ರಾಣ ಕಳೆದುಕೊಂಡ ದುರ್ದೈವಿಗಳನ್ನು ಫಕೀರಮ್ಮ ಭೋವಿ (55) ಎಂದು ಗುರುತಿಸಲಾಗಿದೆ. 24 ದಿನದ ಹಸುಗೂಸು ಹೆಸರು ಇಡುವ ಮೊದಲೇ ಪ್ರಾಣ ಕಳೆದುಕೊಂಡಿದೆ. ಬಾಣಂತಿ ತಾಯಿ ಕನಕಮ್ಮಗೆ ಗಂಭೀರ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕನಕಮ್ಮ ಅವರು ಹೆರಿಗೆಗಾಗಿ ತವರು ಮನೆಗೆ ಬಂದಿದ್ದರು. ಹೆರಿಗೆಯಾಗಿ 24 ದಿನಗಳಷ್ಟೇ ಕಳೆದಿತ್ತು. ತಾಯಿ ಫಕೀರಮ್ಮ ಅವರು ಮಗಳ ಆರೈಕೆ ಮಾಡುತ್ತಿದ್ದರು.

ಇದನ್ನೂ ಓದಿ: Murder Case: ಕ್ಷುಲ್ಲಕ ಕಾರಣಕ್ಕೆ ಕುಡುಗೋಲಿನಿಂದ ಹೆಂಡತಿಯನ್ನು ಕೊಚ್ಚಿ ಕೊಂದ ಪಾಪಿ ಗಂಡ

ಇತ್ತೀಚೆಗೆ ಈ ಭಾಗದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಮನೆಯ ಗೋಡೆ ಜರ್ಜರಿತವಾಗಿತ್ತು. ಸೋಮವಾರ ರಾತ್ರಿ ತಾಯಿ, ಮಗಳು ಮತ್ತು ಮೊಮ್ಮಗಳು ಮಲಗಿದ್ದ ವೇಳೆ ಗೋಡೆ ಉರುಳಿಬಿದ್ದಿದೆ. ಮಣ್ಣಿನ ಅಡಿಯಲ್ಲಿ ಸಿಲುಕಿದ ಅಜ್ಜಿ ಮತ್ತು ಮಗು ಮೃತಪಟ್ಟಿದೆ. ಕನಕಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ ಇದಾಗಿದ್ದು, ಪ್ರಕರಣ ದಾಖಲಾಗಿದೆ.

Exit mobile version