Site icon Vistara News

Road Accident : ಬಸ್‌ ಡಿಕ್ಕಿಯಾಗಿ ಆಟೋದಲ್ಲಿದ್ದವರು ಅಪ್ಪಚ್ಚಿ; ಬೈಕ್‌ ಆ್ಯಕ್ಸಿಡೆಂಟ್‌ನಲ್ಲಿ ಅಪ್ರಾಪ್ತರಿಬ್ಬರು ಸಾವು!

road Accident in kalaburagi

ಕಲಬುರಗಿ/ತುಮಕೂರು: ದಿನೇದಿನೆ ರಸ್ತೆ ಅಪಘಾತ (Road Accident) ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಾವು-ನೋವಿಗೆ ಕಾರಣವಾಗುತ್ತಿದೆ. ಆಟೋ ಮತ್ತು ಕೆಕೆಆರ್‌ಟಿಸಿ ಬಸ್‌ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಪರಿಣಾಮ ಆಟೋ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಇಬ್ಬರು ಸ್ಥಳದಲ್ಲೇ ಅಪ್ಪಚಿಯಾಗಿ ಮೃತಪಟ್ಟಿದ್ದಾರೆ.

ಕಲಬುರಗಿಯ ಸೆಂಟ್ರೆಲ್ ಜೈಲ್ ಬಳಿ ಘಟನೆ ನಡೆದಿದೆ. ಸರ್ಕಾರಿ ಬಸ್‌ ರಾಯಚೂರಿನಿಂದ ಕಲಬುರಗಿ ಕಡೆ ಬರುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಸಂಚಾರಿ 1 ಪೊಲೀಸರು ಭೇಟಿ ನೀಡಿ ಪರೀಶೀಲನೆ ನಡೆಸಿದ್ದಾರೆ. ಅಪಘಾತದಲ್ಲಿ ಮೃತರ ಗುರುತು ಸಿಗದಷ್ಟು ಗಂಭೀರ ಗಾಯಗವಾಗಿದೆ. ಪೊಲೀಸರು ಗುರುತು ಪತ್ತೆಗೆ ಹರಸಾಹಸ ಪಡುತ್ತಿದ್ದಾರೆ. ಇನ್ನು ಬಸ್‌ನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ. ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಇದನ್ನೂ ಓದಿ: Honeybee Attack: ಶಾಲೆಯಲ್ಲಿ ಆಟವಾಡುತ್ತಿದ್ದ ಮಕ್ಕಳ ಮೇಲೆ ಜೇನು ದಾಳಿ

ಬೈಕ್‌ಗೆ ಕಾರು ಡಿಕ್ಕಿ; ಅಪ್ರಾಪ್ತರು ಸಾವು!

ತುಮಕೂರು ನಗರದ ಶೆಟ್ಟಿಹಳ್ಳಿ ವೃತ್ತದ ಬಳಿ ನಡೆದ ಬೈಕ್‌ಗೆ ಇನೋವಾ ಕಾರು‌ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್‌ನಲ್ಲಿದ್ದ ಅಪ್ರಾಪ್ತರು ಸ್ಥಳದಲ್ಲೇ ಜೀವ ಬಿಟ್ಟಿದ್ದಾರೆ. ಪ್ರಥಮ್(15), ವಿಜಯ್ (15) ಮೃತ ಸವಾರರು.

ಇವರಿಬ್ಬರು ಕೌತಮಾರನಹಳ್ಳಿ ಗ್ರಾಮದ ನಿವಾಸಿಗಳಾಗಿದ್ದಾರೆ. ಇನ್ನೂ ಲೈಸನ್ಸ್‌ ಇಲ್ಲದೆ ಇದ್ದರೂ ಬೈಕ್‌ ಚಾಲನೆ ಮಾಡಿರುವುದು ಕಂಡು ಬಂದಿದೆ. ನಿರ್ಲಕ್ಷ್ಯ ಚಾಲನೆಯಿಂದಲೇ ಅಪಘಾತ ಸಂಭವಿಸಿರುವ ಶಂಕೆ ಇದೆ. ಸದ್ಯ ತುಮಕೂರು ಪೂರ್ವ ಸಂಚಾರಿ ಪೊಲೀಸರು ಭೇಟಿ ನೀಡಿದ್ದು, ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಜೆಸಿಬಿ ಸಮೇತ ನಾಲೆಗೆ ಉರುಳಿದ ವ್ಯಕ್ತಿ ಸಾವು; ಧಗ ಧಗೆನೇ ಹೊತ್ತಿ ಉರಿದ ಬಸ್‌!

ಮಂಡ್ಯ/ವಿಜಯಪುರ : ನಾಲೆಗೆ ಜೆಸಿಬಿ ಪಲ್ಟಿಯಾಗಿ ಸ್ಥಳದಲ್ಲೆ ವ್ಯಕ್ತಿಯೊರ್ವ ಮೃತಪಟ್ಟಿದ್ದಾನೆ. ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ಗ್ರಾಮದ ಕೊಡಿಶೆಟ್ಟಿಪುರ ಬಳಿಯ ಜಕ್ಕನಹಳ್ಳಿ ರಸ್ತೆಯಲ್ಲಿರುವ ನಾಲೆಯಲ್ಲಿ (Road Accident) ಘಟನೆ ನಡೆದಿದೆ.

ತಮಿಳುನಾಡು ಮೂಲದ ಶಬರಿ (32) ಮೃತ ದುರ್ದೈವಿ. ಪಿಕೆಕೆಆರ್‌ಟಾರ್ ಪ್ಲಾಂಟ್‌ನಲ್ಲಿ ಶಬರಿ ಕೆಲಸ ಮಾಡುತ್ತಿದ್ದ. ಜೆಸಿಬಿಯ ಸಹಾಯಕನಾಗಿ ಕೆಲಸ ನಿರ್ವಹಿಸುತ್ತಿದ್ದ. ಶುಕ್ರವಾರ ಕಾಲುವೆ ರಸ್ತೆಯಲ್ಲಿ ಹೋಗುವಾಗ ಆಯತಪ್ಪಿ ಜೆಸಿಬಿಯು ನಾಲೆಗೆ ಉರುಳಿದೆ. ಜೆಸಿಬಿ ಅಡಿಗೆ ಸಿಲುಕಿ ಶಬರಿ ಸ್ಥಳದಲ್ಲೆ ಮೃತಪಟ್ಟಿದ್ದಾರೆ.

ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಇದನ್ನೂ ಓದಿ: Physical Abuse : ಬೆಂಗಳೂರಲ್ಲಿ ಯುವತಿ ಪ್ರಜ್ಞೆ ತಪ್ಪಿಸಿ ಗ್ಯಾಂಗ್‌ ರೇಪ್‌!

ಚಲಿಸುತ್ತಿದ್ದಂತೆ ಬಸ್‌ನಲ್ಲಿ ಬೆಂಕಿ- ಓಡಿ ಹೋದ ಪ್ರಯಾಣಿಕರು!

ಬೆಂಗಳೂರಿನಿಂದ ವಿಜಯಪುರಕ್ಕೆ ಆಗಮಿಸುತ್ತಿದ್ದ ಬಸ್‌ವೊಂದು ಹೊತ್ತಿ ಉರಿದಿದೆ. ಜನತಾ ಟ್ರಾವೆಲ್ಸ್‌ಗೆ ಸೇರಿದ ಬಸ್‌ ಪೂರ್ತಿ ಸುಟ್ಟು ಕರಕಲಾಗಿದೆ. ವಿಜಯಪುರ ತಾಲೂಕಿನ ಹಿಟ್ಟನಹಳ್ಳಿ ಬಳಿ ಎನ್‌ಎಚ್ 50ರಲ್ಲಿ ಶುಕ್ರವಾರ ಬೆಳಗ್ಗೆ 6.30ಕ್ಕೆ ಚಲಿಸುತ್ತಿದ್ದ ಬಸ್‌ನ ಎಡಬದಿಯಲ್ಲಿರುವ ಹಿಂಭಾಗದ ಟೈರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಇದನ್ನೂ ಗಮನಿಸಿದ ಚಾಲಕ ಕೂಡಲೇ ಕೂಡಲೇ ಎಚ್ಚೆತ್ತುಕೊಂಡು ಎಲ್ಲ ಪ್ರಯಾಣಿಕರನ್ನು ಬಸ್‌ನಿಂದ ಕೆಳಗಿಳಿಸಿದ್ದಾರೆ. ನೋಡನೋಡುತ್ತಿದ್ದಂತೆ ಬಸ್‌ನಲ್ಲಿ ಸಣ್ಣದಾಗಿ ಕಾಣಿಸಿಕೊಂಡ ಬೆಂಕಿ ಕಿಡಿಯು ಕ್ಷಣ ಮಾತ್ರದಲ್ಲಿ ವ್ಯಾಪಿಸಿ ಸುಟ್ಟುಕರಲಾಗಿದೆ. ಬಸ್‌ನೊಳಗೆ ಇದ್ದ ಪ್ರಯಾಣಿಕರ ಲಗೇಜ್‌ ಹಾಗೂ ಅದರೊಳಗೆ ಇದ್ದ ಎಲ್ಲ ವಸ್ತುಗಳು ಸುಟ್ಟು ಭಸ್ಮವಾಗಿದೆ. ಆದರೆ ಚಾಲಕನ ಸಮಯಪ್ರಜ್ಞೆಯಿಂದಾಗಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ 36 ಮಂದಿ ಸೇಫಾಗಿದ್ದಾರೆ.

ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ವಿಜಯಪುರ ಗ್ರಾಮೀಣ ಪೊಲೀಸರು, ಅಗ್ನಿ ಶಾಮಕ‌ ದಳ ದೌಡಾಯಿಸಿ ಬೆಂಕಿ ನಂದಿಸಲು ಮುಂದಾದರು. ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ಅಧಿಕಾರಿಗಳು ಅನುವು ಮಾಡಿಕೊಟ್ಟರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version