ಶಿರಸಿ: ಇಲ್ಲಿನ ಶಿರಸಿ ತಾಲೂಕಿನ ಕೋಣನಬಿಡ್ಕಿ ಬಳಿ ಭೀಕರ ರಸ್ತೆ ಅಪಘಾತದಲ್ಲಿ (road Accident) ಚಾಲಕನೊಬ್ಬ ಪ್ರಾಣ ಬಿಟ್ಟಿದ್ದಾನೆ. ಟೆಂಪೋ ಹಾಗೂ ಟಾಟಾ ಏಸ್ ವಾಹನದ ನಡುವೆ ಅಪಘಾತ ನಡೆದಿದ್ದು, ಟಾಟಾ ಎಸ್ ವಾಹನದ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಇಸ್ಮಾಯಿಲ್ ರಾಮನಬೈಲ್ ಮೃತ ದುರ್ದೈವಿ.
ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ಸ್ಪೆಕ್ಟರ್ ಸೀತಾರಾಮ ಪಿ. ತನಿಖೆಯನ್ನು ಮುಂದುವರಿಸಿದ್ದಾರೆ.
ಹೊನ್ನಾಳಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಗೃಹಿಣಿ ಸಾವು; ಕೊಲೆ ಎಂದು ಪೋಷಕರ ಆರೋಪ
ದಾವಣಗೆರೆಯ ಹೊನ್ನಾಳಿ ತಾಲೂಕಿನ ಕತ್ತಲಗೆರೆ ಗ್ರಾಮದಲ್ಲಿ ಗೃಹಿಣಿಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಅನಿತಾ (28) ಎಂಬುವವರು ಮೃತಪಟ್ಟಿದು, ವರದಕ್ಷಿಣೆ ಕಿರುಕುಳದ (Dowry Harassment) ಆರೋಪ ಕೇಳಿ ಬಂದಿದೆ.
ಅನಿತಾ ಕಳೆದ ಐದು ವರ್ಷಗಳ ಹಿಂದೆ ಕತ್ತಲಗೆರೆಯ ಅಶೋಕ್ ಎಂಬುವವರ ಜತೆ ವಿವಾಹವಾಗಿದ್ದರು. ಮದುವೆಯಾದ ದಿನದಿಂದ ಗಂಡನ ಮನೆಯವರಿಂದ ನಿರಂತರ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು ಎಂದು ಅನಿತಾ ಕುಟುಂಬಸ್ಥರು ಆರೋಪಿಸಿದ್ದಾರೆ. ಅಲ್ಲದೆ ಅಶೋಕ್ಗೆ ಬೇರೆ ಯುವತಿ ಜತೆ ಅನೈತಿಕ ಸಂಬಂಧವಿತ್ತು ಎನ್ನಲಾಗಿದೆ. ಹೀಗಾಗಿ ಅನಿತಾಳಿಗೆ ಕಿರುಕುಳ ನೀಡಿ ಹತ್ಯೆ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: Weather Report: ಈ 8 ಜಿಲ್ಲೆಗಳಲ್ಲಿ ಇನ್ನೊಂದು ವಾರ ಭಾರಿ ಮಳೆ; ಬಿಸಿಲ ಬೇಗೆಯಿಂದ ಸಿಗಲಿದೆ ಕೊಂಚ ರಿಲೀಫ್
ಅನಿತಾ ಹಾಗೂ ಅಶೋಕ್ಗೆ ಇಬ್ಬರು ಪುಟ್ಟ ಮಕ್ಕಳಿದ್ದಾರೆ. ಅನಿತಾ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಗಂಡನ ಮನೆಯವರು ತಲೆಮರೆಸಿಕೊಂಡಿದ್ದಾರೆ. ಸದ್ಯ ಈ ಸಂಬಂಧ ಬಸವ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ