Site icon Vistara News

Road Accident: ಅತಿ ವೇಗ ತಂದ ಆಪತ್ತು; ನೆಲಮಂಗಲದಲ್ಲಿ ಭೀಕರ ರಸ್ತೆ ಅಪಘಾತಕ್ಕೆ ಒಬ್ಬನ ಮೃತ್ಯು, ಮತ್ತಿಬ್ಬರು ಗಂಭೀರ

#image_title

ನೆಲಮಂಗಲ/ಆನೇಕಲ್‌: ನೆಲಮಂಗಲದ ಹೊನ್ನಗಂಗಯ್ಯನ ಪಾಳ್ಯದಲ್ಲಿ ಭೀಕರ ಕಾರು ಅಪಘಾತ (Road Accident) ಸಂಭವಿಸಿದ್ದು, ಒಬ್ಬ ಸ್ಥಳದಲ್ಲಿಯೇ ಮೃತಪಟ್ಟಿದ್ದರೆ, ಇಬ್ಬರ ಸ್ಥಿತಿ ಗಂಭೀರವಾಗಿದೆ. ರೋಹಿತ್ ಕುಮಾರ್ (26) ಮೃತ ದುರ್ದೈವಿ. ಪ್ರದೀಪ್, ಅವಿನಾಶ್ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದೆ.

ಈ ಯುವಕರು ತಾವರೆಕೆರೆಯಿಂದ ಪಾರ್ಟಿ ಮುಗಿಸಿಕೊಂಡು ಬರುತ್ತಿದ್ದರು ಎನ್ನಲಾಗಿದೆ. ಅತಿ ವೇಗದ ಚಾಲನೆಯೇ ಅಪಘಾತಕ್ಕೆ ಕಾರಣವಾಗಿದ್ದು, ಕಾರು ನುಜ್ಜುಗುಜ್ಜಾಗಿದೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಂತಿದ್ದ ಕಂಟೇನರ್‌ಗೆ ಡಿಕ್ಕಿ ಹೊಡೆದ ಲಾರಿ

ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಅತ್ತಿಬೆಲೆ ಚೆಕ್ ಪೋಸ್ಟ್ ಬಳಿ ನಿಂತಿದ್ದ ಕಂಟೇನರ್‌ಗೆ ಹಿಂಬದಿಯಿಂದ ಬಂದ ಲಾರಿಯು ಡಿಕ್ಕಿ ಹೊಡೆದಿದೆ. ಹೊಸೂರು ಭಾಗದಿಂದ ಬರುತ್ತಿದ್ದ ಲಾರಿ ಕಂಟೇನರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸಂಪೂರ್ಣ ನುಜ್ಜುಗುಜ್ಜಾಗಿದೆ.

ಇತ್ತ ಅಪಘಾತದಲ್ಲಿ ಚಾಲಕ ಲಾರಿಯ ಮುಂಭಾಗದಲ್ಲಿ ಸಿಲುಕಿ ಪರದಾಡಬೇಕಾಯಿತು. ಎಲೆಕ್ಟ್ರಾನಿಕ್ ಸಿಟಿಯ ಅಗ್ನಿಶಾಮಕ ದಳದ ಅಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಲಾರಿಯ ಮುಂಬದಿಯ ಕಬ್ಬಿಣವನ್ನು ಕಟರ್ ಮಾಡಿ ಚಾಲಕ ನಾಗರಾಜನನ್ನು ಹೊರ ತೆಗೆಯಲಾಯಿತು.

ಇದನ್ನೂ ಓದಿ: Crime News : ಕುಡಿತದ ಮತ್ತಿನಲ್ಲಿ ಪತ್ನಿ ಮತ್ತು ಮಕ್ಕಳ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ನೇಣಿಗೆ ಶರಣಾದ!

ಚಾಲಕ ನಾಗರಾಜ್‌ರ ಎರಡೂ ಕಾಲುಗಳಿಗೆ ಗಂಭೀರ ಗಾಯವಾಗಿದ್ದು, ನೋವಿನಿಂದ ಒದ್ದಾಡುತ್ತಿದ್ದ ಚಾಲಕನನ್ನು ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Exit mobile version