Site icon Vistara News

Road Accident: ಕರಾಳ ಮಂಗಳವಾರ; ಮೂರು ಅಪಘಾತ, ಐದು ಸಾವು

koppala road accident two death

ಬೆಂಗಳೂರು: ರಾಜ್ಯದ ವಿವಿಧ ಕಡೆ ನಡೆದ ಮಂಗಳವಾರ ತಡರಾತ್ರಿ ಹಾಗೂ ಮುಂಜಾನೆ ನಡೆದ ಅಪಘಾತಗಳಲ್ಲಿ ಐದು ಮಂದಿ ಸಾವಿಗೀಡಾಗಿದ್ದು, ಹಲವು ಗಾಯಗೊಂಡಿದ್ದಾರೆ.

ಕೊಪ್ಪಳ: ಕೊಪ್ಪಳದಲ್ಲಿ ಕ್ಯಾಂಟರ್‌ಗೆ ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಇಬ್ಬರ ಸಾವಿಗೀಡಾಗಿದ್ದಾರೆ. ಓರ್ವನ ಸ್ಥಿತಿ ಚಿಂತಾಜನಕವಾಗಿದೆ. ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕು ವಣಗೇರಿ ಕ್ರಾಸ್ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಘಟನೆ ನಡೆದಿದೆ. ಮೃತರು ಹಾಗೂ ಗಾಯಾಳು ವಿಜಯಪುರ ಮೂಲದವರು ಎಂಬ ಮಾಹಿತಿ ದೊರೆತಿದೆ. ಕುಷ್ಟಗಿ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಲಾರಿಗೆ ಬೈಕ್‌ ಡಿಕ್ಕಿ, ತಾಯಿ- ಮಗ ಸಾವು

ಕೊಪ್ಪಳ ತಾಲೂಕಿನ ಮಂಗಳಾಪುರ ಬಳಿ ನಿಂತ ಲಾರಿಗೆ ಹಿಂಬದಿಯಿಂದ ಬೈಕ್ ಡಿಕ್ಕಿ ಹೊಡೆದು ತಾಯಿ ಹಾಗೂ ಮಗ ಇಬ್ಬರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ. ಮಂಗಳಾಪುರ ಬಳಿಯ ರಾಷ್ಟ್ರೀಯ ಹೆದ್ದಾರಿ 67ರಲ್ಲಿ ಘಟನೆ ನಡೆದಿದೆ. ಗಜೇಂದ್ರಗಡ ಮೂಲದ ಪುಟ್ಟರಾಜ ವಸ್ತ್ರದ ಹಾಗು ತಾಯಿ ಗಂಗಮ್ಮ ಸ್ಥಳದಲ್ಲಿಯೇ ಸಾವಿಗೀಡಾದವರು. ಸಂಜೆ ವೇಳೆ ಗಜೇಂದ್ರಗಡದಿಂದ ಹೊಸಪೇಟೆಗೆ ಹೊರಟಿದ್ದರು. ಸ್ಥಳಕ್ಕೆ ಕೊಪ್ಪಳ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

ಬೈಕಿಗೆ ಕಾರು ಡಿಕ್ಕಿ, ಸವಾರ ಸಾವು

ಚಿಕ್ಕಬಳ್ಳಾಪುರ: ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಸಾವಿಗೀಡಾಗಿದ್ದು, ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಬಾಗೇಪಲ್ಲಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 44ರ ಪರಗೋಡು ಕ್ರಾಸ್ ಬಳಿ ಘಟನೆ ನಡೆದಿದೆ.

ಗುಡಿಬಂಡೆ ತಾಲೂಕಿನ ಕೋರೇನಹಳ್ಳಿ ಗ್ರಾಮದ ಗೋವಿಂದ (22) ಮೃತ ದುರ್ದೈವಿ. ಚೆಂಡೂರು ಗ್ರಾಮದ ನರಸಿಂಹ ಹಾಗೂ ಶ್ರೀನಿವಾಸ್‌ಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಬಾಗೇಪಲ್ಲಿ ಪಟ್ಟಣದಿಂದ ಸ್ವಗ್ರಾಮಕ್ಕೆ ತೆರಳುವ ವೇಳೆ ದುರ್ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಬಾಗೇಪಲ್ಲಿ ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ.

ಇದನ್ನೂ ಓದಿ: ಬಸ್‌ ರಶ್‌ ಇದ್ದಿದ್ದರಿಂದ ಬಾಗಿಲಲ್ಲಿ ನೇತಾಡುತ್ತಿದ್ದ ಬಾಲಕಿ ಆಯತಪ್ಪಿ ಬಿದ್ದು ಸಾವು; ಛೆ, ಬಸ್ ಹತ್ತಬಾರದಿತ್ತು ಎಂದ ಜನ

Exit mobile version