Site icon Vistara News

Robbery Case: ಅತಿಯಾಸೆ ಗತಿಗೇಡು; ದರೋಡೆ ಕಥೆ ಕಟ್ಟಿದವನೇ ಈಗ ಖಾಕಿ ಖೆಡ್ಡಾಕ್ಕೆ ಬಿದ್ದ!

ಬೆಂಗಳೂರು: ಇಲ್ಲಿನ ಚಾಮರಾಜಪೇಟೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ರಾಬರಿ (Robbery Case) ಕಥೆ ಕಟ್ಟಿದವನೇ ಈಗ ಖಾಕಿ ಖೆಡ್ಡಾಕ್ಕೆ ಬಿದ್ದಿರುವ ಘಟನೆ ನಡೆದಿದೆ. ಕಳ್ಳತನ ಆಗಿದೆ ಎಂದು ದೂರು ನೀಡಿದವನೇ ಈಗ ಕಂಬಿ ಹಿಂದೆ ಸಿಲುಕುವಂತಾಗಿದೆ. ಮೂಲರಾಮ್‌ ಬಂಧಿತ ಆರೋಪಿ.

ವಿಕ್ರಮ್ ಎಂಬಾತ ಬಂಧಿತ ಮೂಲರಾಮ್‌ಗೆ 10 ಲಕ್ಷ ರೂ. ಹಣವನ್ನು ನೀಡಿ ಅಶೋಕ್ ಎಂಬುವರಿಗೆ ತಲುಪಿಸುವಂತೆ ಹೇಳಿದ್ದರು. ಆದರೆ ದುರಾಸೆಗೆ ಬಿದ್ದ ಮೂಲರಾಮ್‌ ಹೇಗಾದರೂ ಮಾಡಿ 10 ಲಕ್ಷ ರೂ. ತಾನೇ ಲಪಟಾಯಿಸಲು ಯೋಜನೆ ಮಾಡಿದ್ದ. ಇದಕ್ಕಾಗಿ ಮಾಸ್ಟರ್‌ ಪ್ಲ್ಯಾನ್‌ ಮಾಡಿ ರಾಬರಿ ಕಥೆಯೊಂದನ್ನು ಕಟ್ಟಿದ್ದ.

ಜನವರಿ 13ರ ರಾತ್ರಿ 8 ಗಂಟೆಗೆ ನಗರದ ಸಿರ್ಸಿ ಸರ್ಕಲ್ ಬಳಿ ಖಾಲಿ ಬ್ಯಾಗ್ ಎಸೆದು ಬಳಿಕ ಅನುಮಾನ ಬಾರದಂತೆ ತನ್ನ ಕೈಯನ್ನು ತಾನೇ ಕೊಯ್ದುಕೊಂಡಿದ್ದ. ಬಳಿಕ ಯಾರೋ ಕಳ್ಳರು ಹಣ ಕಿತ್ತುಕೊಂಡು ರಾಬರಿ ಮಾಡಿದ್ದಾರೆಂದು ಖುದ್ದು ಚಾಮರಾಜಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದ.

ಪೊಲೀಸರಿಗೆ ಮೂಡಿತು ಅನುಮಾನ
ಮೂಲರಾಮ್‌ ಚಾಪೆ ಕೆಳಗೆ ತೂರಿದರೆ ಪೊಲೀಸರು ರ೦ಗೋಲಿ ಕೆಳಗೆ ತೂರಿ ಪ್ರಕರಣವನ್ನು ಬೇದಿಸಿದ್ದಾರೆ. ಮೂಲರಾಮ್‌ ಕೈಮೇಲಿನ ಗಾಯ ನೋಡಿ ಈತನ ಮೇಲೆಯೇ ಪೊಲೀಸರಿಗೆ ಅನುಮಾನ ಮೂಡಿತ್ತು. ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಸಲಿ ವಿಚಾರ ಬೆಳಕಿಗೆ ಬಂದಿದೆ. ಮೂಲರಾಮ್‌ ಮನೆಯಲ್ಲಿ ಬಚ್ಚಿಟ್ಟಿದ್ದ 10 ಲಕ್ಷ ರೂ. ಹಣವನ್ನು ರಿಕವರಿ ಮಾಡಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಇದನ್ನೂ ಓದಿ | Youth drowned : ಈಜಲು ಹೋದ ಕಾಲೇಜು ವಿದ್ಯಾರ್ಥಿ ಸೀತಾಮಡುವಿನಲ್ಲಿ ನೀರುಪಾಲು

Exit mobile version