Site icon Vistara News

7th Pay Commission : ಪ್ರಾಥಮಿಕ ಶಾಲಾ ಶಿಕ್ಷಕರ ವೇತನ ಡಬಲ್‌, ಐದೇ ದಿನ ಶಾಲೆ: 7ನೇ ವೇತನ ಆಯೋಗಕ್ಕೆ ಶಿಕ್ಷಕರ ಸಂಘ ಸಲಹೆ

ವೇತನ ಶ್ರೇಣಿ

#image_title

ಬೆಂಗಳೂರು: ಪ್ರಾಥಮಿಕ ಶಾಲಾ ಶಿಕ್ಷಕರ ವೇತನ ಶ್ರೇಣಿಯನ್ನು ದ್ವಿಗುಣಗೊಳಿಸಬೇಕು, ಮುಖ್ಯ ಗುರುಗಳಿಗೆ ಪ್ರತ್ಯೇಕ ವೇತನ ಶ್ರೇಣಿ, ಐದೇ ದಿನ ಶಾಲೆ ನಡೆಸಬೇಕು, ಗುಣಾತ್ಮಕ ಶಿಕ್ಷಣಕ್ಕೆ ಸರ್ಕಾರಿ ಶಾಲೆಗಳಲ್ಲಿ ತರಗತಿಗೊಬ್ಬ ಶಿಕ್ಷಕರು ಬೇಕು: ಹೀಗೆ 25 ಪ್ರಮುಖ ಅಂಶಗಳನ್ನು ಅನುಷ್ಠಾನ ಮಾಡಲು ಒತ್ತಾಯಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ 7ನೇ ರಾಜ್ಯ ವೇತನ ಆಯೋಗಕ್ಕೆ ವರದಿ ಸಲ್ಲಿಸಲಾಗಿದೆ.

7ನೇ ವೇತನ ಆಯೋಗದಿಂದ ನಿಗದಿಗೊಳಿಸಿದ ಪ್ರಶ್ನಾವಳಿಗಳಿಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ರಾಜ್ಯದ ಶಿಕ್ಷಕರ ಕಾರ್ಯಭಾರ, ಜವಾಬ್ದಾರಿ ಕೆಲಸದ ಒತ್ತಡ ಹಾಗೂ ಅವರ ವಿದ್ಯಾರ್ಹತೆ, ಶ್ರಮ ಇವೆಲ್ಲವುಗಳ ಆಧಾರದ ಮೇಲೆ ಹಾಗೂ ಕೇಂದ್ರ ಸರ್ಕಾರ ಮತ್ತು ನೆರೆಹೊರೆ ರಾಜ್ಯಗಳಿಗಿಂತ ಶಿಕ್ಷಣದಲ್ಲಿ ಕರ್ನಾಟಕವು ಅತ್ಯುತ್ತಮ ಸ್ಥಾನದಲ್ಲಿದ್ದು, ರಾಜ್ಯದ ಸಾಕ್ಷರತೆಯ ಪ್ರಮಾಣ ಶೇ. 78.2ರಷ್ಟಾಗಲು ಪ್ರಾಥಮಿಕ ಶಾಲಾ ಶಿಕ್ಷಕರ ಪರಿಶ್ರಮವೇ ಕಾರಣ ಎಂದು ವರದಿಯಲ್ಲಿ ತಿಳಿಸಲಾಗಿದೆ. ಇದರ ಜತೆಗೆ 25 ಪ್ರಮುಖ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ 135ಕ್ಕೂ ಹೆಚ್ಚು ಪುಟಗಳ ವರದಿಯನ್ನು ಸಂಘದ ಮಹಾಪೋಷಕ ವಿ.ಎಂ.ನಾರಾಯಣಸ್ವಾಮಿ, ರಾಜ್ಯಾಧ್ಯಕ್ಷ ಶಂಭುಲಿಂಗನಗೌಡ ಪಾಟೀಲ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ನೇತೃತ್ವದಲ್ಲಿ ವೇತನ ಆಯೋಗಕ್ಕೆ ಸಲ್ಲಿಸಲಾಗಿದೆ.

ಪ್ರಮುಖ ಅಂಶಗಳು

1) ರಾಜ್ಯದ ಶಿಕ್ಷಕರ ಕಾರ್ಯಭಾರ ಗುರುತಿಸಿ ಪ್ರಾಥಮಿಕ ಶಾಲಾ ಶಿಕ್ಷಕರು ಹಾಲಿ ಪಡೆಯುತ್ತಿರುವ ವೇತನ ಶ್ರೇಣಿ 25,800-51,400 ರೂ. ಅನ್ನು ದ್ವಿಗುಣಗೊಳಿಸಿ 51,600-1,02,800 ರೂ. ಆರಂಭಿಕ ಪ್ರತ್ಯೇಕ ವೇತನ ಶ್ರೇಣಿಯನ್ನು ನಿಗದಿಗೊಳಿಸುವುದು.

a) ಮೇಲ್ಕಂಡ ರೀತಿ 10 ವರ್ಷ ಸೇವೆ ಸಲ್ಲಿಸಿದ ಶಿಕ್ಷಕರಿಗೆ ನೀಡುವ ಕಾಲಮಿತಿ ಬಡ್ತಿ ವೇತನ ಶ್ರೇಣಿಯನ್ನು ದ್ವಿಗುಣಗೊಳಿಸಿ 55,300-1,05,300ರ ಪ್ರತ್ಯೇಕ ವೇತನ ಶ್ರೇಣಿ ನಿಗದಿಗೊಳಿಸುವುದು.

b) ಮೇಲ್ಕಂಡ ರೀತಿ 15 ವರ್ಷ ಸೇವೆ ಸಲ್ಲಿಸಿದ ಸ್ವಯಂ ಚಾಲಿತ ಬಡ್ತಿ ವೇತನ ಶ್ರೇಣಿ 30,350-58,250 ಅನ್ನು ದ್ವಿಗುಣಗೊಳಿಸಿ 60,700-1,16,500ರೂ. ಪ್ರತ್ಯೇಕ ವೇತನ ಶ್ರೇಣಿ ನಿಗದಿ ಮಾಡುವುದು.

c) ಪದವೀಧರ ಶಿಕ್ಷಕರು ಹಾಲಿ ಪಡೆಯುತ್ತಿರುವ ವೇತನ ಶ್ರೇಣಿ 27,650-52,650ನ್ನು ದ್ವಿಗುಣಗೊಳಿಸಿ, 55,300-1,05,300ರೂ. ಪ್ರತ್ಯೇಕ ವೇತನ ಶ್ರೇಣಿ ನಿಗದಿ ಮಾಡುವುದು.

2) 5ನೇ ವೇತನ ಆಯೋಗದ ಮಾದರಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ, ಮುಖ್ಯೋಪಾಧ್ಯಾಯರಿಗೆ ಇತರೆ ಸರ್ಕಾರಿ ನೌಕರರಿಗೆ ನೀಡುವ ವೇತನ ಹೆಚ್ಚಳಕ್ಕಿಂತ ಶೇಕಡ ಶೇ.20 ರಷ್ಟು ವಿಶೇಷ ವೇತನ ನೀಡುವಂತೆ ಶಿಫಾರಸು ಮಾಡುವುದು.

3) ಹುದ್ದೆ ಇದ್ದು ಪ್ರತ್ಯೇಕ ವೇತನ ಶ್ರೇಣಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಿಗೆ ಇರುವುದಿಲ್ಲ. ಇದನ್ನು ಗಮನಿಸಿ, ಕೇರಳ ರಾಜ್ಯದ ಮಾದರಿಯಲ್ಲಿ ಮುಖ್ಯೋಪಾಧ್ಯಾಯರ ಹುದ್ದೆಗಳನ್ನು ಸೃಜಿಸುವುದರ ಜತೆಗೆ 15 ವರ್ಷದ ಸ್ವಯಂ ಚಾಲಿತ ಬಡ್ತಿ ವೇತನ ಶ್ರೇಣಿ ನಂತರ ಇರುವ ವೇತನ ಶ್ರೇಣಿಗಳನ್ನು ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಹುದ್ದೆಗಳಿಗೆ ಸೃಜಿಸಿ ಶಿಫಾರಸು ಮಾಡುವುದು.

4) ವೇತನ ಶ್ರೇಣಿಗಳನ್ನು ನಿಗದಿಗೊಳಿಸುವಾಗ ಸೇವಾ ಹಿರಿತನದ ಆಧಾರದ ಮೇಲೆ (Service Weightage) ನೀಡಿ ವೇತನ ಶ್ರೇಣಿಗಳನ್ನು ನಿಗದಿಗೊಳಿಸಿ ವೇತನ ಬಡ್ತಿಗಳನ್ನು ನೀಡುವಂತೆ ಶಿಫಾರಸು ಮಾಡುವುದು.

5) ವಾರ್ಷಿಕ ಬಡ್ತಿಗಳನ್ನು (Rate of increaments) ನೀಡುವಾಗ ಮೂಲ ವೇತನಕ್ಕೆ ಅನುಗುಣವಾಗಿ ಶೇಕಡ ಶೇ. 5 ರಷ್ಟು ಪ್ರಮಾಣದಲ್ಲಿ ವಾರ್ಷಿಕ ವೇತನ ಬಡ್ಡಿ ದರಗಳನ್ನು ನಿಗದಿಗೊಳಿಸುವಂತೆ ಶಿಫಾರಸು ಮಾಡುವುದು.

6) ಈಗಿರುವ ವೇತನ ಶ್ರೇಣಿ ವ್ಯವಸ್ಥೆಯಲ್ಲಿ ಕೂಡುವಿಕೆ (Bunching system) ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ನಿರೀಕ್ಷಿಸಿದ ಪ್ರಮಾಣದಷ್ಟು ವೇತನ ಹೆಚ್ಚಳವಾಗಿಲ್ಲ. ಕಾರಣ ಒಂದು ವೇತನ ಶ್ರೇಣಿಯಿಂದ ಮತ್ತೊಂದು ವೇತನ ಶ್ರೇಣಿಗೆ ಗರಿಷ್ಠ ಪ್ರಮಾಣವನ್ನು ನಿಗದಿಗೊಳಿಸುವುದರ ಜತೆಗೆ ವೇತನ ಶ್ರೇಣಿಗಳನ್ನು ಸಂಪೂರ್ಣ ಪರಿಷ್ಕರಿಸಿ, ಪುನರ್ ರಚಿಸಿ ಸರ್ಕಾರಕ್ಕೆ ಶಿಫಾರಸು ಮಾಡಬೇಕಾಗಿ ವಿನಂತಿಸಲಾಗಿದೆ.

ಉದಾಹರಣೆ:|
a) 1994 ರಿಂದ 1998 ರವರೆಗೆ ಸೇವೆಗೆ ಸೇರಿದವರ ವೇತನ ಶ್ರೇಣಿ ಒಂದೇ ಆಗಿದೆ.
b) 2005 ರಿಂದ 2008ರವರೆಗೆ ಸೇವೆಗೆ ಸೇರಿದ ಶಿಕ್ಷಕರ ವೇತನ ಶ್ರೇಣಿ ಒಂದೇ ಆಗಿದೆ.
ಈ ಕುರಿತು ಆಗಿರುವ ವ್ಯತ್ಯಾಸಗಳನ್ನು ಸರಿಪಡಿಸಲು “ಸೂಕ್ತ ಸೇವಾ ವೇಟೇಜ್’ ಅನ್ನು ನೀಡಿ ಸೇವೆಯಲ್ಲಿ ಹಿರಿತನ ಹೊಂದಿದದವರಿಗೆ ಸೇವೆಗನುಸಾರ ನ್ಯಾಯ ಒದಗಿಸಬೇಕಾಗಿ ವಿನಂತಿಸಲಾಗಿದೆ.

7) ಪ್ರತಿ 5 ವರ್ಷಕ್ಕೆ ಮುಂದಿನ ವೇತನ ಶ್ರೇಣಿಗೆ ಶಿಕ್ಷಕರಿಗೆ ಮುಂಬಡ್ತಿ ನೀಡುವ ಕುರಿತು. ರಾಜ್ಯದ ಪ್ರಾಥಮಿಕ ಶಾಲೆಗಳಲ್ಲಿ 1,56,000 ಶಿಕ್ಷಕರು ಕಾರ್ಯನಿರ್ವಹಿಸುತ್ತಿರುವುದರಿಂದ, ಎಲ್ಲರಿಗೂ ಏಕಕಾಲಕ್ಕೆ ಬಡ್ತಿ ಸಿಗುವುದು ಕಷ್ಟ ಸಾಧ್ಯ. ಪ್ರತಿ 5 ವರ್ಷಕ್ಕೊಮ್ಮೆ ಮುಂದಿನ ಹಂತದ ವೇತನ ಶ್ರೇಣಿಗೆ (ಸೂಪರ್ ಟೈಮ್ ಸ್ಕೇಲ್ ಮಾದರಿಯಲ್ಲಿ) ಅವರ ವೇತನವನ್ನು ನಿಗಧಿಗೊಳಿಸಿ ವೇತನ ಮುಂಬಡ್ತಿ ನೀಡಬೇಕು.

8) ಮನೆ ಬಾಡಿಗೆ ಭತ್ಯೆ ಈಗಿರುವ ವ್ಯವಸ್ಥೆಯಲ್ಲಿ ಶೇಕಡಾ 10ರಷ್ಟು ಇದ್ದು, ಮನೆ ಬಾಡಿಗೆ ಭತ್ಯೆ ಶೇಕಡ 15ಕ್ಕೆ, ಶೇಕಡಾ 20 ರಷ್ಟಿರುವ ಮನೆ ಬಾಡಿಗೆ ಭತ್ಯೆಯನ್ನು ಶೇಕಡಾ 25ಕ್ಕೆ ಶೇಕಡಾ 30ರಷ್ಟಿರುವ ಮನೆ ಬಾಡಿಗೆ ಭತ್ಯೆಯನ್ನು ಶೇ. 35ಕ್ಕೆ ಹೆಚ್ಚಿಸಲು ಶಿಫಾರಸು ಮಾಡಬೇಕು.

9) ಕನಿಷ್ಠ ವೇತನ 36,000 ರೂ ಹಾಗೂ ಗರಿಷ್ಠ ವೇತನ 3, 10,000 ರೂ. ನಿಗದಿಗೊಳಿಸಬೇಕು.

10) ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸೇವಾ ಜ್ಯೇಷ್ಠತೆಯ ಆಧಾರದ ಮೇಲೆ ವಿಷಯ ಪರಿವೀಕ್ಷಕ, ಶಿಕ್ಷಣಾಧಿಕಾರಿ, ಉಪನಿರ್ದೇಶಕರ ಹುದ್ದೆಯ ವರೆಗೆ ಬಡ್ತಿ ನೀಡುವಂತೆ ಶಿಫಾರಸು, ವಿದ್ಯಾರ್ಹತೆಯ ಆಧಾರದ ಮೇಲೆಯೂ ಸಹ ಉಪನಿರ್ದೇಶಕರ ಹುದ್ದೆಯ ವರೆಗೆ ಬಡ್ತಿ ನೀಡುವಂತೆ ಶಿಫಾರಸು ಮಾಡುವುದು.

11) ರಾಜ್ಯದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರು ಸೇವೆಗೆ ಸೇರಿದ ಮೇಲೆ, ಬಡ್ತಿ ಹೊಂದಿದ ಮೇಲೆ ಅವರಿಗೆ ನಿರಂತರ ಸೇವೆ ಪರಿಗಣಿಸಿ 15, 20, 25 ವರ್ಷದ ಬಡ್ತಿಗಳನ್ನು ನ್ಯಾಯಯುತವಾಗಿ ನೀಡಬೇಕು. ಆದರೆ, ಈ ರೀತಿ ಬಡ್ತಿಗಳನ್ನು ನೀಡದೇ ಇರುವುದರಿಂದ ಬಡ್ತಿ ಹೊಂದಿದ ಮುಖ್ಯ ಗುರುಗಳಿಗೆ ಹಾಗೂ ಪ್ರಾಥಮಿಕ ಶಾಲೆಯಿಂದ ಪ್ರೌಢ ಶಾಲೆಗೆ ಹಾಗೂ ಪ್ರೌಢ ಶಾಲೆಯಿಂದ ಮುಂದಿನ ಹಂತಕ್ಕೆ ಬಡ್ತಿ ಹೊಂದಿದ ಶಿಕ್ಷಕರು ತಮಗಿಂತ ಸೇವೆಯಲ್ಲಿ ಕಡಿಮೆ ಸೇವೆ ಸಲ್ಲಿಸಿದ ನೌಕರರಿಗಿಂತ ಕಡಿಮೆ ವೇತನವನ್ನು ಪಡೆಯುತ್ತಿದ್ದಾರೆ. ಕಾರಣ ಈ ವಿಷಯವನ್ನು 6ನೇ ವೇತನ ಆಯೋಗದಲ್ಲಿ ಶಿಫಾರಸು ಮಾಡಿದ್ದರೂ ಕೂಡ ಇದನ್ನು ಜಾರಿಗೊಳಿಸದೇ ಬಡ್ತಿ ಹೊಂದಿದ ಶಿಕ್ಷಕರಿಗೆ ಅನ್ಯಾಯವಾಗುತ್ತಿದೆ. ಹೀಗಾಗಿ ಇದನ್ನು ಅತ್ಯಂತ ನ್ಯಾಯಯುತವಾಗಿ ಗಮನಿಸಿ ಬಡ್ತಿ ಹೊಂದಿದ ಶಿಕ್ಷಕರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕೆಂದು ಹಾಗೂ ಅವರ ನಿರಂತರ ಸೇವೆಯನ್ನು ಪರಿಗಣಿಸಿ ವೇತನ ಬಡ್ತಿಗಳನ್ನು ನೀಡಬೇಕೆಂದು ಒತ್ತಾಯಿಸಲಾಗಿದೆ.

12) ರಾಜ್ಯ ಸರ್ಕಾರಿ ನೌಕರರಿಗೆ ನಗದು ರಹಿತ ಆರೋಗ್ಯ ಸೌಲಭ್ಯ ಘೋಷಿಸಿದ್ದು, ಈ ಯೋಜನೆಯ ಆದೇಶದಲ್ಲಿ ಆಯಾ ವೃಂದದ ಕನಿಷ್ಠ ಮೂಲ ವೇತನದ ಪ್ರತಿಶತ 1 ರಷ್ಟು ಮೊತ್ತವನ್ನು ಕಡಿತಗೊಳಿಸಿ ಯೋಜನೆ ಜಾರಿಗೊಳಿಸಲು ತೀರ್ಮಾನಿಸಿದ್ದು, ಈ ಆದೇಶವನ್ನು ಕೈಬಿಟ್ಟು ಪೋಲಿಸ್ ಇಲಾಖೆಯ ಆರೋಗ್ಯ ಭಾಗ್ಯ ಮಾದರಿಯಲ್ಲಿ ಉಚಿತವಾಗಿ ಸಂಪೂರ್ಣ “ನಗದು ರಹಿತ” (Completely Cashless Treatment) ಯೋಜನೆ ಜಾರಿ ಮಾಡಬೇಕು.

13) ವಾರದಲ್ಲಿ 5 ದಿನ ಕಾರ್ಯ ನಿರ್ವಹಿಸುವ ಶಾಲಾ ಆಡಳಿತ ವ್ಯವಸ್ಥೆ ಬೇರೆ ರಾಜ್ಯದಲ್ಲಿದ್ದು, ಅದೇ ಮಾದರಿಯಲ್ಲಿ ವಾರದಲ್ಲಿ 5 ದಿನ ಮಾತ್ರ ಶಾಲೆಗಳು ಕಾರ್ಯನಿರ್ವಹಿಸುವಂತೆ ಶಿಫಾರಸು ಮಾಡಬೇಕಾಗಿ ವಿನಂತಿಸಲಾಗಿದೆ.

14) ಪ್ರತಿ ಸರ್ಕಾರಿ ಶಾಲೆಗೆ ಒಬ್ಬ ಮುಖ್ಯೋಪಾಧ್ಯಾಯ, ಪ್ರತಿ ವಿಷಯಕ್ಕೆ ಒಬ್ಬ ಶಿಕ್ಷಕ ನೇಮಕಾತಿಗೊಳಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಬೇಕಾಗಿ ವಿನಂತಿಸಲಾಗಿದೆ.

15) ಈಗಾಗಲೇ ಕೆಲವು ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭವಾಗಿದ್ದು, ಉಳಿದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಪ್ರಾರಂಭಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಬೇಕು.

16) ಎಲ್ಲಾ ಕಿರಿಯ, ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಣವನ್ನು ಕಡ್ಡಾಯಗೊಳಿಸಿರುವುದರಿಂದ ರಾಜ್ಯದ ಎಲ್ಲಾ ಶಾಲೆಗಳಿಗೆ ದೈಹಿಕ ಶಿಕ್ಷಕರನ್ನು ನೇಮಕ ಮಾಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ದೈಹಿಕ ಮತ್ತು ಉರ್ದು ಶಾಲಾ ಶಿಕ್ಷಕರಿಗೆ ಉನ್ನತ ಮಟ್ಟದ ಮುಂಬಡ್ತಿ ನೀಡುವಂತೆ ಶಿಫಾರಸು ಮಾಡಬೇಕು.

17) ಪ್ರಾಥಮಿಕ ಶಾಲೆಯಲ್ಲಿ ಒಂದೇ ರೀತಿಯ ಆಡಳಿತ ವ್ಯವಸ್ಥೆ, ಬೋಧನಾ ವ್ಯವಸ್ಥೆ, ಪಠ್ಯವಸ್ತು, ಪಠ್ಯಕ್ರಮ ಒಂದೇ ಆಗಿದ್ದು, ಪ್ರತ್ಯೇಕ ವೇತನ ಶ್ರೇಣಿಗಳನ್ನು ನಿಗಧಿಗೊಳಿಸುವುದರಿಂದ ಶಾಲಾ ಆಡಳಿತ ವ್ಯವಸ್ಥೆಯಲ್ಲಿ ತೊಂದರೆಯಾಗುತ್ತದೆ. ಆದ್ದರಿಂದ ಪ್ರಾಥಮಿಕ ಶಾಲಾ ವೃಂದದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಶಿಕ್ಷಕರಿಗೆ ಯಾವುದೇ ಭೇದ-ಭಾವ ಮಾಡದೇ ಉನ್ನತವಾದ ಏಕರೂಪದ ವೇತನ ಶ್ರೇಣಿಯನ್ನು ನಿಗದಿಗೊಳಿಸಬೇಕು.

18) ರಾಜ್ಯದಲ್ಲಿ ಹೊಸದಾಗಿ ವೃಂದ ಬದಲಾವಣೆಗಳನ್ನು ಮಾಡಿ ಹಾಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಒಂದು ರೀತಿಯ ವೇತನ ಶ್ರೇಣಿ, ಪದವಿ ಆಧಾರದ ಮೇಲೆ ಇನ್ನೊಂದು ವೇತನ ಶ್ರೇಣಿ ನಿಗಧಿಗೊಳಿಸುವುದು ಪ್ರಾಥಮಿಕ ಶಾಲಾ ಆಡಳಿತ ದೃಷ್ಠಿಯಿಂದ ಸಮಂಜಸವಲ್ಲ. ಕಾರಣ ಪ್ರಾಥಮಿಕ ಶಾಲಾ ವೃಂದದಲ್ಲಿ ಕಾರ್ಯ ನಿರ್ವಹಿಸುವ ಎಲ್ಲಾ ಶಿಕ್ಷಕರಿಗೆ ಉನ್ನತವಾದ ವೇತನವನ್ನು ನಿಗದಿಗೊಳಿಸಬೇಕು.

19) ಕರ್ನಾಟಕ ರಾಜ್ಯದಲ್ಲಿ 3 ರೀತಿಯ ಶಾಲಾ ಆಡಳಿತ ವ್ಯವಸ್ಥೆ ಇದ್ದು,

  1. ಕಿರಿಯ ಪ್ರಾಥಮಿಕ ಶಾಲೆಗಳು
  2. ಹಿರಿಯ ಪ್ರಾಥಮಿಕ ಶಾಲೆಗಳು (250ಕ್ಕಿಂತ ಕಡಿಮೆ ಮಕ್ಕಳಿರುವ)
  3. ಪದವಿಧರೇತರ ಮಾದರಿ ಪ್ರಾಥಮಿಕ ಶಾಲೆಗಳು (250ಕ್ಕಿಂತ ಹೆಚ್ಚು ಮಕ್ಕಳಿರುವ)

ಕೇರಳ ಸರ್ಕಾರ ಇದೇ ರೀತಿಯಾದ 3 ಹಂತದಲ್ಲಿ ಆಡಳಿತ ವ್ಯವಸ್ಥೆಯನ್ನು ಹೊಂದಿದ್ದು, ಆ ಮಾದರಿಯಲ್ಲಿ ರಾಜ್ಯದ ಹಂತದ ಎಲ್ಲಾ ಶಾಲೆಗಳಿಗೆ ಮುಖ್ಯೋಪಾಧ್ಯಾಯರ ಹುದ್ದೆಗಳನ್ನು ಮಂಜೂರು ಮಾಡುವುದರೊಂದಿಗೆ ಕೇರಳ ಸರ್ಕಾರದ ಮಾದರಿಯಲ್ಲಿ ಪ್ರತ್ಯೇಕವಾದ ವೇತನ ಶ್ರೇಣಿಗಳನ್ನು ನಿಗದಿಗೊಳಿಸುವಂತೆ ಶಿಫಾರಸ್ಸು ಮಾಡಬೇಕು.

20) ದೇಶಾದ್ಯಂತ ಒಂದೇ ರೀತಿಯ ಜಿಎಸ್‌ಟಿ ವ್ಯವಸ್ಥೆ ಇದ್ದು ವೇತನ ವ್ಯವಸ್ಥೆಯಲ್ಲಿಯೂ ಸಹ ಒಂದೇ ರೀತಿ ಇರುವಂತೆ ಅಂದರೆ ಕೇಂದ್ರ ಸರ್ಕಾರಕ್ಕಿಂತ ಉನ್ನತವಾದ ವೇತನ ಶ್ರೇಣಿ ವ್ಯವಸ್ಥೆ ಇರುವಂತೆ ಸರ್ಕಾರಕ್ಕೆ ಶಿಫಾರಸು ಮಾಡಬೇಕು. (one nation one tax, one pension, one salary system)

21) ಕೇರಳ ಸರ್ಕಾರ ಮೂಲ ವೇತನದ ಜತೆಗೆ ಹೆಚ್ಚಿನ ಪ್ರಮಾಣದಲ್ಲಿ ಫಿಟ್‌ಮೆಂಟ್‌ ಅನ್ನು ನೀಡಿ ವಿಲೀನಗೊಳಿಸಿ, ಹೊಸ ವೇತನ ಶ್ರೇಣಿಗಳನ್ನು ಸೃಷ್ಟಿಸಿ ವೇತನ ನಿಗದಿಗೊಳಿಸಿದೆ. ಹೆಚ್ಚಿನ ಫಿಟ್‌ಮೆಂಟ್‌ ನೀಡಿದ್ದರಿಂದ ಮೂಲ ವೇತನ ಹೆಚ್ಚಳವಾಗಿದೆ. ಈ ಮೂಲ ವೇತನದಲ್ಲಿ ಇಂದಿನ ತುಟ್ಟಿಭತ್ಯೆ ಮುಂದುವರಿಸಿಕೊಂಡು ಹೋಗಿದ್ದರಿಂದ ವೇತನದ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ವೇತನ ಆಯೋಗ ಈ ಕುರಿತು ಪರಿಶೀಲಿಸಿ ಶಿಕ್ಷಕರಿಗೆ ಹೆಚ್ಚಿನ ವೇತನ ಪ್ರಮಾಣವನ್ನು ನಿಗದಿಗೊಳಿಸಬೇಕು.

22) ಸರ್ಕಾರಿ ಶಾಲೆಗಳಲ್ಲಿ ಗಣಕೀಕರಣ ಕೆಲಸ ಹಾಗೂ ಇಲಾಖೆಗೆ ಮಾಹಿತಿಯನ್ನು ಒದಗಿಸುವ ಕಾರ್ಯ ಹೆಚ್ಚು ಇರುವುದರಿಂದ ರಾಜ್ಯದ ಪ್ರತಿ ಸರ್ಕಾರಿ ಶಾಲೆಗಳಿಗೆ ಒಬ್ಬ ಡಿ ಗ್ರೂಪ್ ನೌಕರರನ್ನು ಒದಗಿಸಬೇಕು.

23) ರಾಜ್ಯದ ಪ್ರತಿ ಸರ್ಕಾರಿ ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್‌ಗಳನ್ನು ಹಾಗೂ ಗಣಕಯಂತ್ರಗಳನ್ನು ಒದಗಿಸುವ ಮೂಲಕ ರಾಜ್ಯದ ಎಲ್ಲಾ ಶಾಲೆಗಳನ್ನು ಡಿಜಿಟಲ್ ಶಾಲೆಗಳಾಗಿ ಪರಿವರ್ತಿಸಬೇಕೆಂದು ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು.

24) ಶಿಕ್ಷಣ ಹಕ್ಕು ಕಾಯ್ದೆಯ ನಿಯಮಗಳ ಪ್ರಕಾರ 150ಕ್ಕಿಂತ ಹೆಚ್ಚು ಮಕ್ಕಳಿರುವ ಕಿರಿಯ ಪ್ರಾಥಮಿಕ ಶಾಲೆಗಳಿಗೆ ಮಕ್ಕಳು : ಶಿಕ್ಷಕರ ಅನುಪಾತ (30:1) ಪರಿಗಣಿಸದೇ ಮುಖ್ಯ ಗುರುಗಳ ಹುದ್ದೆಯನ್ನು ಮಂಜೂರು ಮಾಡುವ ಅವಕಾಶವಿದ್ದು, ಸದರಿ ನಿಯಮದಂತೆ ಕ್ರಮಕೈಗೊಳ್ಳಲು ಶಿಫಾರಸು ಮಾಡಬೇಕಾಗಿ ವಿನಂತಿಸಲಾಗಿದೆ.

25) 1 ರಿಂದ 8ನೇ ತರಗತಿಯ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಣ ಹಕ್ಕು ಕಾಯ್ದೆಯ ಪ್ರಕಾರ 1 ರಿಂದ 5ನೇ ತರಗತಿಯಲ್ಲಿ 150ಕ್ಕಿಂತ ಹೆಚ್ಚು ಮಕ್ಕಳಿದ್ದಲ್ಲಿ ಒಬ್ಬರು ಮುಖ್ಯ ಗುರು ಹುದ್ದೆ ಹಾಗೂ 6 ರಿಂದ 8ನೇ ತರಗತಿಯಲ್ಲಿ 100ಕ್ಕಿಂತ ಹೆಚ್ಚು ಮಕ್ಕಳಿದ್ದರೆ ಅದೇ ಶಾಲೆಗೆ ಮತ್ತೊಂದು ಮುಖ್ಯಗುರು ಹುದ್ದೆ ಮಂಜೂರು ಮಾಡುವಂತೆ ಶಿಫಾರಸು ಮಾಡುವುದು.

26) 2024-2025 ಕೇಂದ್ರ ಸರ್ಕಾರದ 8ನೇ ವೇತನ ಆಯೋಗ ರಚನೆಯಾಗಿ ವರದಿ ಕೊಡುವ ಸಂಭವವಿದೆ, ಕಾರಣ ಈ ಅಂಶ ಪರಿಗಣಿಸಿ ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕ, ಮುಖ್ಯೋಪಾಧ್ಯಾಯರಿಗೆ ಪ್ರತ್ಯೇಕ ವೇತನ ಶ್ರೇಣಿ ನಿಗದಿಗೊಳಿಸಿ ಶಿಫಾರಸು ಮಾಡಬೇಕು.

ವೇತನ ಆಯೋಗಕ್ಕೆ ವರದಿ ಸಲ್ಲಿಸುವಾಗ ಅಖಿಲ ಭಾರತ ಪ್ರಾಥಮಿಕ ಶಿಕ್ಷಕರ ಫೆಡರೇಷನ್‌ನ ಕಾರ್ಯಾಧ್ಯಕ್ಷ ಬಸವರಾಜ ಗುರಿಕಾರ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಕೆ.ನಾಗೇಶ್, ಸಹ ಕಾರ್ಯದರ್ಶಿಗಳಾದ ಚೇತನ್ ಎಚ್.ಎಸ್. ಹಾಗೂ ಸುಮತಿ.ಜಿ. ಬಾಗಲಕೋಟೆ ಜಿಲ್ಲಾಧ್ಯಕ್ಷ ಬಸವರಾಜ ಬಾಗೇನವರ್, ಧಾರವಾಡ ಜಿಲ್ಲಾಧ್ಯಕ್ಷ ವಿ.ಎಫ್.ಚುಳಕಿ, ಕಾರ್ಯದರ್ಶಿ ರಾಜಶೇಖರ ಹೊನ್ನಪ್ಪನವರ, ಬಣವಿ, ಜಂಗಳಿ, ವಿಜಯನಗರ ಜಿಲ್ಲಾಧ್ಯಕ್ಷ ಬವರಾಜ ಸಂಗಪ್ಪನವರ, ಚಿತ್ರದುರ್ಗ ಜಿಲ್ಲಾಧ್ಯಕ್ಷ ಮಾರುತೇಶ್.ಆರ್, ರಾಮನಗರ ಜಿಲ್ಲಾಧ್ಯಾಕ್ಷ ರಮೇಶ್, ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ನಾರಾಯಣಸ್ವಾಮಿ, ಕಾರ್ಯದರ್ಶಿ ಅಶೋಕ್‌ ಕುಮಾರ್, ತುಮಕೂರು ಜಿಲ್ಲಾಧ್ಯಕ್ಷ ಪರಶಿವಮೂರ್ತಿ, ಕಾರ್ಯದರ್ಶಿ ಚಿಕ್ಕಣ್ಣ, ತಿಮ್ಮೇಗೌಡ, ಮಂಡ್ಯ ಜಿಲ್ಲಾಧ್ಯಕ್ಷ ಮಂಜುನಾಥ್, ರಮೇಶ್, ಬೆಂಗಳೂರು ಗ್ರಾಮಾಂತರ ಜಿಲ್ಲೆ ಅಧ್ಯಕ್ಷ ಎಂ.ಶ್ರೀನಿವಾಸಪ್ಪ ಹಾಗೂ ಕಲಬುರ್ಗಿ ಜಿಲ್ಲೆಯ ನಾಗರಾಜು, ಕೊಪ್ಪಳ ಜಿಲ್ಲೆಯ ಶ್ಯಾಗೋಟಿ ಹಾಗೂ ಇತರರು ಉಪಸ್ಥಿತರಿದ್ದರು.

ಇದನ್ನೂ ಓದಿ | 7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

Exit mobile version