Site icon Vistara News

Santro Ravi Case: ಗೃಹ ಸಚಿವರಿಗೆ ಐಪಿಸಿ ಸೆಕ್ಷನ್ ಬಗ್ಗೆ ಅರಿವಿಲ್ಲ; ಆರಗ ಈರುಳ್ಳಿ, ಬೆಳ್ಳುಳ್ಳಿ ಸಚಿವರಾಗಲಿ: ಕೆ. ದಿವಾಕರ್ ವ್ಯಂಗ್ಯ

K. Diwakar rippanpete

ರಿಪ್ಪನ್‌ಪೇಟೆ : ಸ್ಯಾಂಟ್ರೋ ರವಿಯಂತಹ (Santro Ravi Case) ವ್ಯಕ್ತಿಗಳಿಂದ ಆಮಿಷಕ್ಕೆ ಒಳಗಾಗುವಂತಹ ಪರಿಸ್ಥಿತಿ ಬಂದರೆ ಆತ್ಮಹತ್ಯೆ ದಾರಿ ತುಳಿಯುತ್ತೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ನೀಡಿರುವ ಹೇಳಿಕೆಯಿಂದ ಒಬ್ಬ ಗೃಹ ಸಚಿವನಾಗಿ ಅವರಿಗೆ ಐಪಿಸಿ ಸೆಕ್ಷನ್ ಬಗ್ಗೆ ಅರಿವಿಲ್ಲದಿರುವುದು ತಿಳಿಯುತ್ತದೆ ಎಂದು ಹೈಕೋರ್ಟ್‌ ಹಿರಿಯ ವಕೀಲ ಹಾಗೂ ಸಾಗರ ವಿಧಾನಸಭಾ ಕ್ಷೇತ್ರದ ಆಮ್‌ ಆದ್ಮಿ ಪಕ್ಷದ ಅಭ್ಯರ್ಥಿ ಕೆ. ದಿವಾಕರ್ ಹೇಳಿದರು.

ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಿಪ್ಪನ್ ಪೇಟೆ ಪಟ್ಟಣದ ಆಶ್ರಿತಾ ಸಭಾಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆತ್ಮಹತ್ಯೆ ಮಾಡಿಕೊಳ್ಳುವುದು ಅಪರಾಧ. ಪ್ರಚೋದನೆ ಕೊಡುವುದು ಕೂಡ ಅಪರಾಧವಾಗಿದೆ. ಅಂತಹದರಲ್ಲಿ ಸಾರ್ವಜನಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎನ್ನುವುದು ಒಬ್ಬ ಅಸಹಾಯಕ ಗೃಹ ಮಂತ್ರಿಯ ಆಕ್ರಂದನವಾಗಿದೆ. ಇವರ ಮೇಲೆ ಪೊಲೀಸರು ಸುಮೋಟೊ ಕೇಸ್ ದಾಖಲಿಸಿಕೊಂಡು ಕ್ರಮ ಕೈಗೊಳ್ಳಲಿ ಎಂದರು.

ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ವಿರುದ್ಧ ಹರಿಹಾಯ್ದ ದಿವಾಕರ್‌, ರಾಜ್ಯದಲ್ಲಿ ಈ ಬಾರಿ ನಮ್ಮ ಪಕ್ಷ ಸ್ಪರ್ಧೆ ಮಾಡುತ್ತರಿವುದು ಎಲ್ಲ ಪಕ್ಷಗಳ ನಿದ್ದೆಗೆಡಿಸಿದೆ. ವಿಧಾನಸಭಾ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷವು ಬೂತ್ ಮಟ್ಟದಿಂದ ಸದೃಢವಾಗಿದೆ. ಯುವಕರು ನಮ್ಮ ಪಕ್ಷದ ಸಿದ್ಧಾಂತಗಳನ್ನು ಮೆಚ್ಚಿ ಪಕ್ಷ ಸೇರ್ಪಡೆಯಾಗುವ ಮೂಲಕ ನವ ಭಾರತ ನಿರ್ಮಾಣ ಸಂಕಲ್ಪಕ್ಕೆ ಮುನ್ನುಡಿ ಹಾಕುತಿದ್ದಾರೆ ಎಂದರು.

ಇದನ್ನೂ ಓದಿ | Black Magic : ಕೊಡಗಿನ ದಟ್ಟಾರಣ್ಯದ ಮಧ್ಯೆ ವಾಮಾಚಾರ; ಬೆಟ್ಟತ್ತೂರು ಗ್ರಾಮದಲ್ಲಿ ಕೋಳಿ ಬಲಿ, ಗ್ರಾಮಸ್ಥರಲ್ಲಿ ಆತಂಕ

ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷ ಕೇವಲ ಭ್ರಷ್ಟಾಚಾರ ನಡೆಸುವುದರಲ್ಲೇ ನಿರತವಾಗಿದೆಯೇ ಹೊರತು ಅಭಿವೃದ್ಧಿ ಕಾರ್ಯಗಳ ಬಗ್ಗೆ ಕಿಂಚಿತ್ತೂ ಚಿಂತಿಸುತ್ತಿಲ್ಲ. ಕಾಂಗ್ರೆಸ್ ತನ್ನ ಇತಿಹಾಸದಲ್ಲಿಯೇ ಚುನಾವಣಾ ಪೂರ್ವ ಯಾವುದೇ ಯೋಜನೆ ಘೋಷಿಸುತ್ತಿರಲಿಲ್ಲ. ಆದರೆ, ಈ ಬಾರಿ ಆಮ್ ಆದ್ಮಿ ಪಕ್ಷದ ಪ್ರಣಾಳಿಕೆಯ ಕೆಲ ಯೋಜನೆಗಳನ್ನು ಕೃತಿಚೌರ್ಯ ನಡೆಸಿ ತನ್ನದೇ ಯೋಜನೆ ಎಂಬಂತೆ ಬಿಂಬಿಸಿಕೊಳ್ಳುವಂತಹ ಹತಾಶ ಪರಿಸ್ಥಿತಿಗೆ ಬಂದಿದೆ ಎಂದರು.

ಪಿಎಸ್‌ಐ ಹಗರಣ ಮತ್ತು ಸ್ಯಾಂಟ್ರೋ ರವಿ ಪ್ರಕರಣಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಆರಗ ಜ್ಞಾನೇಂದ್ರ ಒಳ್ಳೆಯ ವ್ಯಕ್ತಿ. ಆದರೆ ಒಬ್ಬ ಒಳ್ಳೆಯ ವ್ಯಕ್ತಿ ಎಂದಿಗೂ ಒಳ್ಳೆಯ ಗೃಹ ಸಚಿವನಾಗುವುದಿಲ್ಲ ಎಂಬುದನ್ನು ಜ್ಞಾನೇಂದ್ರ ಸಾಬೀತುಪಡಿಸಿದ್ದಾರೆ. ಪಿಂಪ್‌ಗಳ ಬಳಿಯಲ್ಲಿ ವ್ಯವಹಾರ ಮಾಡುವಂತಹ ಕೆಟ್ಟ ಮನಸ್ಥಿತಿ ಆರಗ ಜ್ಞಾನೇಂದ್ರ ಅವರದ್ದಲ್ಲ. ಆದರೆ, ಅವರ ಬೆನ್ನ ಹಿಂದಿರುವ ವ್ಯವಸ್ಥೆ ಪಿಂಪ್‌ಗಳ ರಕ್ಷಣೆ ಮಾಡುವಂತೆ ಪ್ರೇರೇಪಿಸುತ್ತದೆ. ಆದ್ದರಿಂದ ನಮ್ಮ ಜಿಲ್ಲೆಯ ಗೌರವಕ್ಕೆ ಚ್ಯುತಿ ತರದೇ ಗೃಹ ಸಚಿವ ಸ್ಥಾನ ತೊರೆದು ತೋಟಗಾರಿಕೆ, ಈರುಳ್ಳಿ ಅಥವಾ ಬೆಳ್ಳುಳ್ಳಿ ಸಚಿವರಾಗಲಿ ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ | Praveen Nettaru murder | ಪ್ರವೀಣ್‌ ನೆಟ್ಟಾರು ಕೊಲೆ: ತಲೆಮರೆಸಿಕೊಂಡಿರುವ ಇಬ್ಬರು ಪಿಎಫ್ಐ ನಾಯಕರಿಗಾಗಿ NIA ಶೋಧ

ಸಾಗರ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ಅವರು ಎಂಎಸ್ ಐಎಲ್ ಮಳಿಗೆ ತೆರೆಯುವುದೇ ಅಭಿವೃದ್ಧಿ ಎಂದುಕೊಂಡಿದ್ದಾರೆ. ಅದರಲ್ಲೂ ಎಂಎಸ್ ಐಎಲ್ ಮಳಿಗೆ ಕೇವಲ ಬಿಜೆಪಿ ಬಾವುಟ ಹಿಡಿದವರಿಗೆ ಮಾತ್ರ ಕೊಡುವುದರ ಮೂಲಕ ಎಂಎಸ್ ಐಎಲ್ ಅಂಗಡಿಯನ್ನು ಬಿಜೆಪಿ ಕಚೇರಿಯನ್ನಾಗಿ ಪರಿವರ್ತಿಸಿಕೊಂಡಿದ್ದಾರೆ. ಸಾಗರ ವಿಧಾನಸಭಾ ಕ್ಷೇತ್ರದ ಕೆಲ ಅಧಿಕಾರಿಗಳು ನಿಷ್ಪಕ್ಷಪಾತವಾಗಿ ವರ್ತಿಸುತಿದ್ದಾರೆ. ಆಡಳಿತ ಪಕ್ಷದ ಏಜೆಂಟ್ ರೀತಿ ವರ್ತಿಸುತಿದ್ದಾರೆ. ಅಂತಹವರ ಮೇಲೆ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗುವುದು. ಅಂತಹ ಭ್ರಷ್ಟ ಅಧಿಕಾರಿಗಳ ಮೇಲೆ ಆಮ್ ಆದ್ಮಿ ಪಕ್ಷ ಕಣ್ಣಿಟ್ಟಿರುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಶದ ಹೊಸನಗರ ತಾಲೂಕು ಉಪಾಧ್ಯಕ್ಷ ಹಸನಬ್ಬಾ , ಮುಖಂಡರಾದ ಸಂತೋಷ್ ಆಶ್ರಿತಾ, ಚೇತನ್ ಇನ್ನಿತರರಿದ್ದರು.

ಇದನ್ನೂ ಓದಿ | Rakhi Sawant | ಅಮ್ಮನ ಚಿಕಿತ್ಸೆಗೆ ಉದ್ಯಮಿ ಅಂಬಾನಿ ನಮಗೆ ಸಹಾಯ ಮಾಡುತ್ತಿದ್ದಾರೆ: ರಾಖಿ ಸಾವಂತ್‌!

Exit mobile version