Site icon Vistara News

ಮದುವೆ ವಂಚನೆ | ವಿವಾಹ ಮಂಟಪಕ್ಕೆ ಓಡೋಡಿ ಬಂದಳು; ಅಷ್ಟರಲ್ಲಾಗಲೇ ಮುಗಿದೇ ಹೋಗಿತ್ತು ಗಂಡನ 2ನೇ ಮದುವೆ!

ಮದುವೆ ವಂಚನೆ

ಹಾಸನ: ಮದುವೆಯಾಗಿರುವ ವಿಚಾರ ಮುಚ್ಚಿಟ್ಟು ಗಂಡ ಎರಡನೇ ಮದುವೆ ಮಾಡಿಕೊಳ್ಳುತ್ತಿದ್ದ ವಿಚಾರ ಕೇಳಿ ಕಲ್ಯಾಣ ಮಂಟಪಕ್ಕೆ ಮೊದಲ ಪತ್ನಿ ಧಾವಿಸಿದ್ದಾಳೆ. ತರಾತುರಿಯಲ್ಲಿ ಬಂದ ಅವಳು ನಿಲ್ಲಿಸಿ ಎಂದು ಕೂಗಬೇಕು ಅಂದುಕೊಂಡಿದ್ದಳು. ಆದರೆ, ಅಷ್ಟರಲ್ಲಾಗಲೇ ಮದುವೆಯೇ ಮುಗಿದು ಹೋಗಿತ್ತು. ಇದರಿಂದ ಕೆಂಡಾಮಂಡಲವಾಗಿರುವ ಮಹಿಳೆ ಕೂಗಾಡಿ ರಂಪಾಟ ಮಾಡಿದ್ದು, ವರ ಪೊಲೀಸರ ವಶದಲ್ಲಿದ್ದಾನೆ.

ಯೋಧ ಕಿರಣ್ ಕುಮಾರ್ ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ. ವಿಧವೆ ಜತೆ ಮದುವೆಯಾಗಿದ್ದ ವಿಚಾರ ಮುಚ್ಚಿಟ್ಟು ಎರಡನೇ ಮದುವೆಯಾಗಿದ್ದಾನೆ. ವಿಧವೆಯಾಗಿದ್ದ ತನಗೆ ಎರಡು ವರ್ಷಗಳಿಂದ ತನ್ನನ್ನು ಮದುವೆಯಾಗುವುದಾಗಿ ನಂಬಿಸಿ, ಬಾಳು ಕೊಡುವುದಾಗಿ 6 ತಿಂಗಳ ಹಿಂದೆ ತಾಳಿಕಟ್ಟಿದ್ದ. ಆದರೆ, ಈ ವಿಚಾರ ಮುಚ್ಚಿಟ್ಟು ಈಗ ಬೇರೊಂದು ಮದುವೆಯಾಗಿದ್ದಾನೆ ಎಂದು ಮೊದಲ ಪತ್ನಿ ಆರೋಪಿಸಿದ್ದಾರೆ.

ಇದನ್ನೂ ಓದಿ | ನಿಗೂಢವಾಗಿ ನಾಪತ್ತೆಯಾಗಿದ್ದ ಬದಿಯಡ್ಕದ ದಂತವೈದ್ಯರ ಶವ ಪತ್ತೆ

ಹಾಸನ ನಗರದ ಹೊರ ವಲಯದ ಬೂವನಹಳ್ಳಿಯಲ್ಲಿ ವಿವಾಹ ನಡೆದಿದೆ. ಯೋಧನ ವಂಚನೆ ಬಗ್ಗೆ ಮಹಿಳೆ ಮಾಹಿತಿ ನೀಡುತ್ತಲೇ ಕಲ್ಯಾಣ ಮಂಟಪದಲ್ಲಿ ಅಲ್ಲೋಲ ಕಲ್ಲೋಲ ಉಂಟಾಯಿತು. ವರನ ಜತೆಗೆ ಮೊದಲ ಪತ್ನಿ ಯಾಕೆ ಎರಡನೇ ಮದುವೆಯಾದೆ ಎಂದು ಪ್ರಶ್ನಿಸಿ, ಗಲಾಟೆ ಮಾಡಿದ್ದರಿಂದ ಸ್ಥಳದಲ್ಲಿ ಗೊಂದಲದ ವಾತಾವರಣ ಉಂಟಾಯಿತು. ಈ ವೇಳೆ ಸ್ಥಳಕ್ಕೆ ಪೊಲೀಸರು ಆಗಮಿಸಿ, ವರನನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದರು.

ಎರಡು ಲಕ್ಷ ರೂಪಾಯಿ ಕೊಡುತ್ತೇನೆ ಮದುವೆ ಮನೆ ಬಳಿ ಹೋಗಬೇಡ ಎಂದು ಮಹಿಳೆ ಒಂದೆಡೆ ಆರೋಪಿಸಿದ್ದರೆ, ಮತ್ತೊಂದೆಡೆ ಆಕೆಯೇ 2 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಳು ಎಂದು ಯುವಕ ಪ್ರತ್ಯಾರೋಪ ಮಾಡಿದ್ದಾನೆ. ಮದುವೆ ನಿಲ್ಲಿಸೋಣ ಎಂದು ಕಲ್ಯಾಣ ಮಂಟಪಕ್ಕೆ ಬಂದಿದ್ದೆ. ಆದರೆ, ಆ ವೇಳೆಗೆ ಮದುವೆ ಮುಗಿದಿತ್ತು. ನನ್ನ ಗಂಡ ಸತ್ತು 5 ವರ್ಷವಾಗಿದೆ. ಹೀಗಾಗಿ ನನಗೆ ಬಾಳು ಕೊಡುವುದಾಗಿ ಹೇಳಿ ಮನೆಯಲ್ಲೇ ತಾಳಿ ಕಟ್ಟಿದ್ದ. ಈಗ 2ನೇ ಮದುವೆಯಾಗಿ ವಂಚಿಸಿದ್ದಾನೆ ಎಂದು ಮಹಿಳೆ ಆಪಾದಿಸಿದ್ದಾರೆ.

ಇದನ್ನೂ ಓದಿ | Road Accident | ಶಾಲಾ ಬಸ್‌ ಪಲ್ಟಿ; ಮಹಿಳೆ ಸಾವು, 12 ಮಂದಿಗೆ ಗಂಭೀರ ಗಾಯ

Exit mobile version