Site icon Vistara News

Self Harming : ಸ್ನೇಹಿತನ ಹೆಂಡ್ತಿಯಿಂದ ಪೊರಕೆ ಏಟು; ಮನನೊಂದು ನೇಣಿಗೆ ಶರಣು!

Srinivas

ಕೋಲಾರ : ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು ಎಂಬ ಮಾತು ಈ ಪ್ರಕರಣಕ್ಕೆ ಒಪ್ಪುತ್ತದೆ. ಕುಡಿದ ನಶೆಯಲ್ಲಿ ಸ್ನೇಹಿತನ ಪತ್ನಿ ಕುರಿತು ಆಡಿದ ಮಾತುಗಳೇ ವ್ಯಕ್ತಿಯೊಬ್ಬನ ಪ್ರಾಣ (Self Harming) ಕಸಿದಿದೆ.

ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಹುರುಳಗೆರೆ ಗ್ರಾಮದಲ್ಲಿ ಪೊರಕೆಯಿಂದ ಹೊಡೆದು, ಜಾತಿ ನಿಂದನೆ ಮಾಡಿದ್ದಕ್ಕೆ ವ್ಯಕ್ತಿಯೊಬ್ಬ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಶ್ರೀನಿವಾಸ್ (30) ನೇಣು ಬಿಗಿದುಕೊಂಡು ಮೃತಪಟ್ಟವನು.

ಈ ಶ್ರೀನಿವಾಸ್‌ ತನ್ನ ಸ್ನೇಹಿತರೊಂದಿಗೆ ಸೇರಿ ಬುಧವಾರ ರಾತ್ರಿ ಎಣ್ಣೆ ಪಾರ್ಟಿ ಮಾಡುತ್ತಿದ್ದ. ಎಣ್ಣೆ ಒಳಗೆ ಹೋಗುತ್ತಿದ್ದಂತೆ ಮನಸ್ಸಿನಲ್ಲಿ ಅಡಗಿದ್ದ ಮಾತುಗಳೆಲ್ಲವೂ ಹೊರ ಬಂದಿತ್ತು. ಕುಡಿದ ನಶೆಯಲ್ಲಿ ಶ್ರೀನಿವಾಸ ಜತೆಗೆ ಇದ್ದ ಸ್ನೇಹಿತ ಅಶೋಕ್‌ ಎಂಬಾತನ ಪತ್ನಿ ಮಂಜುಳಾ ಕುರಿತು ತಪ್ಪಾಗಿ ಮಾತಾಡಿದ್ದ. ಇದರಿಂದ ಸಿಟ್ಟಿಗೆದ್ದು ಅಶೋಕ್, ರಮೇಶ್, ಧರ್ಮಂದ್ರ, ಮಂಜು ಎಂಬುವವರು ಶ್ರೀನಿವಾಸನನ್ನು ಥಳಿಸಿದ್ದರು.

ಇದನ್ನೂ ಓದಿ: Road Accident : ಟಿಪ್ಪರ್ ಲಾರಿ ಹರಿದು ಆಟೋ ಚಾಲಕ ಸಾವು; ತಲೆ, ದೇಹವೆಲ್ಲ ನಜ್ಜುಗುಜ್ಜು!

ಬಳಿಕ ಈ ವಿಷಯವು ಅಶೋಕ್ ಪತ್ನಿ ಮಂಜುಳಗೂ ತಿಳಿದು ಆಕೆ ಪೊರಕೆಯಿಂದ ಶ್ರೀನಿವಾಸನಿಗೆ ಹೊಡೆದು, ಪರಿಶಿಷ್ಟ ಜಾತಿ ಹೆಸರೇಳಿ ನಿಂದಿಸಿದ್ದಾರೆ. ಈ ಕಾರಣಕ್ಕೆ ಶ್ರೀನಿವಾಸ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತನ ಕುಟುಂಬಸ್ಥರು ಮಾಲೂರು ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ ದೂರು ನೀಡಿದ್ದಾರೆ.

ಸ್ನೇಹಿತನೊಟ್ಟಿಗೆ ಹೋದವನು ಹೆಣವಾಗಿ ಪತ್ತೆ!

ರಾಯಚೂರಲ್ಲಿ ಮತ್ತೊಂದು ಅನುಮಾನಾಸ್ಪದ ಸಾವು ಪ್ರಕರಣವು ಬೆಳಕಿಗೆ ಬಂದಿದೆ. ಇಲ್ಲಿನ ತಿಮ್ಮಾಪುರ ಪೇಟೆಯಲ್ಲಿ ಯುವಕನೊಬ್ಬ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾನೆ. ರಮೇಶ್ (19) ಮೃತ ಯುವಕ.

ಬುಧವಾರ ಸಂಜೆ ಏರಿಯಾದಲ್ಲಿ ಗಣೇಶ ಮೂರ್ತಿ ಬಳಿ ಓಡಾಡಿಕೊಂಡಿದ್ದ. ಬಳಿಕ ರಾತ್ರಿ ರಮೇಶ್‌ನನ್ನು ಸ್ನೇಹಿತನೊಬ್ಬ ಕರೆದೊಯ್ದಿದ್ದ ಎನ್ನಲಾಗಿದೆ. ಉಮೇಶ್ ಎಂಬ ಮತ್ತೊಬ್ಬ ಸ್ನೇಹಿತನ ನಿರ್ಮಾಣ ಹಂತದ ಕಟ್ಟಡದ ಮೇಲೆ ರಮೇಶ್ ಮಲಗಿದ್ದ.

ಆದರೆ ಗುರುವಾರ ಬೆಳಗಿನ ಜಾವ ಎರಡನೇ ಅಂತಸ್ತಿನಿಂದ ಕೆಳಗಿರುವ ಟಿನ್ ಶೆಡ್ ಮನೆ ಮೇಲೆ ಹೆಣವಾಗಿ ಪತ್ತೆಯಾಗಿದ್ದಾನೆ. ಈ ಬಗ್ಗೆ ಮೃತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ನೇತಾಜಿ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಗ್ರಾಮದ ಜನರು ಜಮಾಯಿಸಿದ್ದರು.

ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ರಮೇಶ್‌ನ ಜತೆಗೆ ರಾತ್ರಿಯಿದ್ದ ಸ್ನೇಹಿತರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇದು ಆಕಸ್ಮಿಕ ಸಾವುವೋ ಅಥವಾ ಕೊಲೆಯೊ ಎಂಬುದರ ಕುರಿತು ತನಿಖೆಯನ್ನು ಮುಂದುವರಿಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version