Site icon Vistara News

Shakti Scheme : ಹೆಣ್ಮಕ್ಕಳ ಓಡಾಟದಿಂದ ಸಮಸ್ಯೆಯೇ? ವಿದ್ಯಾರ್ಥಿಗಳು, ಪುರುಷರಿಗಾಗಿ ಬರಲಿದೆ 4000 ಹೊಸ BUS

Shakti scheme protest

ಬೆಂಗಳೂರು: ರಾಜ್ಯದಲ್ಲಿ ಜಾರಿಗೆ ಬಂದಿರುವ ಮಹಿಳೆಯರ ಉಚಿತ ಪ್ರಯಾಣದ (Free Bus service) ಶಕ್ತಿ ಯೋಜನೆ (Shakti scheme)ಯಿಂದ ಮಹಿಳೆಯರಿಗೆ ತುಂಬ ಸಂತೋಷವಾಗಿದೆ. ಆದರೆ, ಮಹಿಳೆಯರ ಸಂಚಾರ ದಟ್ಟಣೆಯಿಂದ ತಮಗೆ ತೊಂದರೆಯಾಗುತ್ತಿದೆ ಎಂಬ ಕೂಗು ವಿದ್ಯಾರ್ಥಿಗಳು ಮತ್ತು ಪುರುಷರ ವಲಯದಿಂದ ಕೇಳಿಬಂದಿದೆ. ಇದನ್ನು ನಿವಾರಿಸುವುದಕ್ಕಾಗಿ ಕೆಎಸ್‌ಆರ್‌ಟಿಸಿ ಸಂಸ್ಥೆ ಹೊಸ ಪ್ಲ್ಯಾನ್‌ ಮಾಡಿದೆ. ರಾಜ್ಯದಲ್ಲಿ 4000 ಹೊಸ ಬಸ್‌ಗಳನ್ನು ಖರೀದಿಸಲು (4000 New KSRTC Buses purchase) ನಿರ್ಧರಿಸಿದೆ.

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಈ ವಿಷಯವನ್ನು ರಾಜ್ಯ ವಿಧಾನಸಭೆಯಲ್ಲಿ ಗುರುವಾರ ಪ್ರಕಟಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಗುರುವಾರ ರಾಜ್ಯ ವಿಧಾನಸಭೆಯಲ್ಲಿ ತಿಳಿಸಿದರು. ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರ ನೀಡುವ ವೇಳೆ ಈ ವಿಷಯ ಪ್ರಸ್ತಾಪಿಸಿದ ಅವರು, ಮಹಿಳೆಯರ ಸಬಲೀಕರಣದ ಈ ಯೋಜನೆ ತುಂಬ ಯಶಸ್ವಿಯಾಗಿದೆ. ಮಹಿಳೆಯರು ಖುಷಿಯಾಗಿದ್ದಾರೆ. ಆದರೆ, ಕೆಲವು ಕಡೆ ಮಹಿಳೆಯರ ಓಡಾಟದಿಂದ ವಿದ್ಯಾರ್ಥಿಗಳು ಮತ್ತು ಪುರುಷರ ಓಡಾಟಕ್ಕೆ ಬಸ್‌ಗಳಲ್ಲಿ ಜಾಗ ಸಿಗುತ್ತಿಲ್ಲ ಎಂಬ ದೂರುಗಳಿವೆ. ಅವುಗಳನ್ನು ನಿವಾರಿಸಲು ಹೊಸ ಬಸ್‌ ಖರೀದಿಸಲಾಗುವುದು ಎಂದು ಪ್ರಕಟಿಸಿದರು.

ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಹೇಳಿದ್ದೇನು?

  1. ಉಚಿತ ಪ್ರಯಾಣದ ಶಕ್ತಿ ಯೋಜನೆ ರಾಜ್ಯ ಸರ್ಕಾರಿ ರಸ್ತೆ ಸಾರಿಗೆ ಸಂಸ್ಥೆಗೆ (KSRTC) ಹೊಸ ಶಕ್ತಿಯನ್ನು ತುಂಬಿದೆ. ಇದರಿಂದ ಉತ್ತೇಜಿತವಾಗಿರುವ ಸರ್ಕಾರ ಸಂಸ್ಥೆಯ ಸೇವೆಯನ್ನು ಇನ್ನಷ್ಟು ವ್ಯವಸ್ಥಿತಗೊಳಿಸಲು ನಿರ್ಧರಿಸಿದೆ. ಇದರ ಭಾಗವಾಗಿ ಕೆಎಸ್‌ಆರ್‌ಟಿಸಿಗೆ ಹೊಸದಾಗಿ 4000 ಬಸ್‌ ಖರೀದಿಸಲು ಮತ್ತು 13000 ಚಾಲಕರು, ಕಂಡಕ್ಟರ್‌ಗಳು (Drivers and conductors) ಮತ್ತು ಮೆಕ್ಯಾನಿಕ್‌ಗಳನ್ನು ನೇಮಿಸಿಕೊಳ್ಳಲು (KSRTC Recruitment) ನಿರ್ಧರಿಸಿದೆ.
  2. ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡುವ ಶಕ್ತಿ ಯೋಜನೆಗೆ ಮುಂದಿನ 9 ತಿಂಗಳಲ್ಲಿ 2900 ಕೋಟಿ ರೂ. ಬೇಕಾಗುತ್ತದೆ. ಸರ್ಕಾರ ಇದನ್ನು ಒದಗಿಸಲಿದೆ.
  3. ನಾವು ಕೆಎಸ್‌ಆರ್‌ಟಿಸಿಗೆ ಹೊಸದಾಗಿ 4000 ಬಸ್‌ಗಳನ್ನು ಖರೀದಿ ಮಾಡಲು ನಿರ್ಧರಿಸಿದ್ದೇವೆ. ಶಕ್ತಿ ಯೋಜನೆಯಡಿ ಮಹಿಳೆಯರು ದೊಡ್ಡ ಪ್ರಮಾಣದಲ್ಲಿ ಬಸ್‌ ಹತ್ತುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳು ಮತ್ತು ಪುರುಷರ ಪ್ರಯಾಣಕ್ಕೆ ತೊಂದರೆಯಾಗುತ್ತಿದೆ ಎಂಬ ಆರೋಪಗಳನ್ನು ನಿವಾರಿಸುವ ಉದ್ದೇಶದಿಂದ ಬಸ್‌ಗಳ ಖರೀದಿ ಮಾಡಲಾಗುತ್ತಿದೆ.
  4. ಮಹಿಳೆಯರ ಓಡಾಟದಿಂದ ವಿದ್ಯಾರ್ಥಿಗಳು ಮತ್ತು ಪುರುಷರ ಓಡಾಟಕ್ಕೆ ತೊಂದರೆಯಾಗಬಾರದು ಎಂಬ ಕಳಕಳಿಯನ್ನು ಸರಕಾರ ಹೊಂದಿದೆ. ಇದರ ಜತೆಗೆ ನಾವು 13,000 ಹೊಸ ಚಾಲಕರು, ಕಂಡಕ್ಟರ್‌ಗಳು ಮತ್ತು ಮೆಕ್ಯಾನಿಕ್‌ಗಳನ್ನು ನೇಮಕ ಮಾಡಿಕೊಳ್ಳಲಿದ್ದೇವೆ.
  5. ಯಾರು ಏನೇ ಅಪಪ್ರಚಾರ ಮಾಡಿದರೂ ಶಕ್ತಿ ಯೋಜನೆ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿದೆ. ಮಹಿಳೆಯರು ಸಂತುಷ್ಟರಾಗಿದ್ದಾರೆ. 18 ಕೋಟಿ ಮಹಿಳೆಯರು ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸಿದ್ದಾರೆ ಎಂದರೆ ಅವರ ಸಬಲೀಕರಣ ಮಾಡಿದಂತಾಗಲಿಲ್ಲವೇ? ಅವರ ಹಣ ಉಳಿತಾಯವಾಗಲಿಲ್ಲವೇ? ಈಗ ಮಹಿಳೆಯರು ಯಾವುದೇ ಸಮಸ್ಯೆ ಇಲ್ಲದೆ ದೇವಸ್ಥಾನಗಳಿಗೆ ತಮ್ಮ ತವರು ಮನೆಗೆ ಹೋಗಿ ಬರುತ್ತಿದ್ದಾರೆ. ಇದು ಒಳ್ಳೆಯ ವಿಷಯವಲ್ಲವೇ?

ಇದನ್ನೂ ಓದಿ: Shakti Scheme : ಬಸ್‌ ನಿಲ್ಲಿಸದ್ದಕ್ಕೆ ಕಲ್ಲೆಸೆದ ವಿದ್ಯಾರ್ಥಿಗಳು; ಗಾಜು ಪೀಸ್‌ ಪೀಸ್!

ಯಾದಗಿರಿಯಲ್ಲಿ ಬಸ್‌ ನಿಲ್ಲಿಸದ್ದಕ್ಕೆ ಕಲ್ಲುತೂರಾಟ

ವಿದ್ಯಾರ್ಥಿಗಳಿಗೆ ಬಸ್‌ ಹತ್ತಲಾಗುತ್ತಿಲ್ಲ, ಹಲವು ಕಡೆ ದೂರು

ರಾಜ್ಯದ ನಾನಾ ಭಾಗಗಳಲ್ಲಿ ಪೀಕ್‌ ಅವರ್‌ಗಳಲ್ಲಿ ಅಗತ್ಯವಾಗಿ ಪ್ರಯಾಣಿಸಲೇಬೇಕಾದ ವಿದ್ಯಾರ್ಥಿಗಳು ಮತ್ತು ಉದ್ಯೋಗಸ್ಥ ಪುರುಷ ಸಂಚಾರಕ್ಕೆ ಶಕ್ತಿ ಯೋಜನೆಯಿಂದ ತೊಂದರೆಯಾಗುತ್ತಿದೆ ಎಂಬ ಆರೋಪಗಳಿವೆ. ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಮಹಿಳೆಯರೇ ತುಂಬಿರುತ್ತಾರೆ. ಹೀಗಾಗಿ ವಿದ್ಯಾರ್ಥಿಗಳು, ಉದ್ಯೋಗಸ್ಥರು ಬಸ್‌ ಹತ್ತಲಾಗದೆ ಕಾಲೇಜು ಮತ್ತು ಉದ್ಯೋಗ ಸ್ಥಳಕ್ಕೆ ಹೋಗಲು ಪರದಾಡಬೇಕಾಗಿದೆ ಎಂಬ ಆರೋಪವಿದೆ.

ಕೆಲವು ಊರಿಗಳಲ್ಲಂತೂ ದಿನಕ್ಕೆ ಒಂದೇ ಬಸ್‌ ಬರುತ್ತಿದ್ದು, ಅದು ಮಹಿಳೆಯರಿಂದಲೇ ತುಂಬಿರುತ್ತದೆ. ಸಂಜೆ ಪಟ್ಟಣದಿಂದ ಹಳ್ಳಿ ಕಡೆ ಹೋಗುವ ಬಸ್‌ಗಳಲ್ಲೂ ಮಹಿಳೆಯರೇ ತುಂಬಿರುತ್ತಾರೆ. ಇದರಿಂದ ಉಳಿದವರು ಸಮಸ್ಯೆ ಎದುರಿಸುತ್ತಿದ್ದಾರೆ. ಅವರು ದುಬಾರಿ ಹಣ ತೆತ್ತು ಬೇರೆ ವಾಹನಗಳನ್ನು ಆಶ್ರಯಿಸಬೇಕಾದ ಪರಿಸ್ಥಿತಿ ಇದೆ ಎಂಬ ದೂರುಗಳಿವೆ.

ಹಲವಾರು ಕಡೆಗಳಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ, ಕಲ್ಲು ತೂರಾಟವೂ ನಡೆದಿದೆ. ಶಕ್ತಿ ಯೋಜನೆಯನ್ನು ಬದಲಾಯಿಸಬೇಕು, ಪೀಕ್‌ ಅವರ್‌ನಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕೆ ಅವಕಾಶ ಕೊಡಬಾರದು ಎಂಬ ಕೂಗುಗಳು ಕೇಳಿಬಂದಿದ್ದವು.

ಆದರೆ, ರಾಜ್ಯ ಸರ್ಕಾರ ಶಕ್ತಿ ಯೋಜನೆಯಲ್ಲಿ ಯಾವುದೇ ಮಾರ್ಪಾಡು ಮಾಡಲು ಮುಂದಾಗಿಲ್ಲ. ವಿದ್ಯಾರ್ಥಿಗಳು ಮತ್ತು ಪುರುಷರ ಸಮಸ್ಯೆ ಪರಿಹಾರಕ್ಕೆ ಬಸ್‌ ಹೆಚ್ಚಳದ ಹೊಸ ಮಾರ್ಗವನ್ನು ಕಂಡುಕೊಳ್ಳಲು ಮುಂದಾಗಿದೆ.

Exit mobile version