Site icon Vistara News

Shivamogga attack | ಸಮೀರ್‌ ತಂಗಿ ಚುಡಾವಣೆ ಆರೋಪದ ಹಿಂದೆ ಷಡ್ಯಂತ್ರ ಎಂದ ಹಿಂದು ಸಂಘಟನಗಳು

Shivamogga- sunil sameer

ಸಾಗರ: ಬಜರಂಗ ದಳ ಸಾಗರ ನಗರ ಸಹ ಸಂಚಾಲಕ ಸುನಿಲ್ ಮೇಲೆ ಅನಗತ್ಯವಾಗಿ ಗೂಬೆ ಕೂರಿಸುವ ಪ್ರಯತ್ನ (Shivamogga attack) ನಡೆಯುತ್ತಿದ್ದು, ಏನೂ ತಪ್ಪು ಮಾಡದ ಸುನಿಲ್‍ನನ್ನು ಷಡ್ಯಂತ್ರದ ಮೂಲಕ ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ಸಾಗುತ್ತಿದೆ ಎಂದು ಹಿಂದುಪರ ಸಂಘಟನೆಯ ಅ.ಪು. ನಾರಾಯಣಪ್ಪ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಸ್ಲಿಮರು ಸಮೀರ್ ತಂಗಿಯ ಮೂಲಕ ಸುನಿಲ್ ತನ್ನನ್ನು ಚುಡಾಯಿಸುತ್ತಿದ್ದ ಎಂದು ಆರೋಪ ಹೊರಿಸುವ ಷಡ್ಯಂತ್ರ ನಡೆಸುತ್ತಿದ್ದಾರೆ. ಪ್ರಕರಣದ ದಿಕ್ಕು ತಪ್ಪಿಸಲು ಸುನೀಲ್ ಮೇಲೆ ಸುಳ್ಳು ಆರೋಪ ಹೊರಿಸಲಾಗುತ್ತಿದೆ ಎಂದರು. ಪ್ರಕರಣವನ್ನು ಮುಚ್ಚಿ ಹಾಕಿ ಸುನೀಲ್‍ನನ್ನು ತಪ್ಪಿತಸ್ಥನ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನ ನಡೆಸಲಾಗುತ್ತಿದ್ದು, ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿರುವ ಹಿಂದು ಸಂಘಟನೆಗಳ ಕಾರ್ಯಕರ್ತರು

ಬಜರಂಗ ದಳದ ಜಿಲ್ಲಾ ಸಂಚಾಲಕ ರಾಜೇಶ್ ಗೌಡ ಮಾತನಾಡಿ, ಸಂಘ ಪರಿವಾರದ ಸಂಘಟನೆಗಳು ನೀಡಿದ ಸಾಗರ ಬಂದ್ ಕರೆಯಿಂದ ಹತಾಶರಾಗಿರುವ ಕೆಲವರು ಬಜರಂಗ ದಳದ ನಿಷ್ಠಾವಂತ ಕಾರ್ಯಕರ್ತ ಸುನಿಲ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಆರೋಪ ಬಿತ್ತರಿಸುವ ಕೆಲಸ ಮಾಡುತ್ತಿದ್ದಾರೆ. ಜಿಹಾದಿಗಳು ಸುನೀಲ್ ಮೇಲೆ ಅಪಪ್ರಚಾರ ಮಾಡುವ ಪ್ರಯತ್ನ ನಡೆಸುತ್ತಿದ್ದು, ಇದರ ಹಿಂದೆ ಹಿಂದುಗಳ ಪರವಾಗಿ ಕೆಲಸ ಮಾಡುತ್ತಿರುವವರ ಧೈರ್ಯವನ್ನು ಕುಗ್ಗಿಸುವ ಯತ್ನ ನಡೆಸಲಾಗುತ್ತಿದೆ. ಪೊಲೀಸ್ ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.

ವಿಶ್ವ ಹಿಂದೂ ಪರಿಷತ್ ತಾಲೂಕು ಅಧ್ಯಕ್ಷ ರವೀಶ್ ಮಾತನಾಡಿ, ಸುನಿಲ್ ಸಂಘಟನೆಯ ಎಲ್ಲ ಕಾರ್ಯದಲ್ಲೂ ಮುಂಚೂಣಿಯಲ್ಲಿ ನಿಲ್ಲುತ್ತಿರುವುದನ್ನು ಸಹಿಸದ ಮುಸ್ಲಿಂ ಜಿಹಾದಿಗಳು ಅವರ ಮೇಲೆ ಮಾರಣಾಂತಿಕ ಹಲ್ಲೆಗೆ ಪ್ರಯತ್ನ ನಡೆಸಿದ್ದಾರೆ. ಹಿಜಾಬ್, ಗೋಹತ್ಯೆ, ಗೋ ಕಳ್ಳಸಾಗಾಣಿಕೆ, ಲವ್ ಜಿಹಾದ್ ಹೀಗೆ ಎಲ್ಲ ಸಂದರ್ಭದಲ್ಲೂ ಸುನಿಲ್ ಧೈರ್ಯವಾಗಿ ಕೆಲಸ ಮಾಡುತ್ತಿದ್ದನು. ಅವನನ್ನು ಹೋರಾಟದಿಂದ ಹಿಮ್ಮೆಟ್ಟಿಸಲು ಈ ಕೃತ್ಯ ನಡೆಸಲಾಗಿದ್ದು,
ಸುನೀಲ್ ವಿರುದ್ದ ಅಪಪ್ರಚಾರ ಮಾಡುವುದನ್ನು ಸಹಿಸುವುದಿಲ್ಲ ಎಂದರು.

ಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ರಾಘವೇಂದ್ರ ಕಾಮತ್, ಹಿಂದೂ ಜಾಗರಣಾ ಸಮಿತಿ ಅಧ್ಯಕ್ಷ ಕೆ.ಎಚ್.ಸುಧೀಂದ್ರ, ಪ್ರಮುಖರಾದ ನಂದೀಶ್ ಸೂರಗುಪ್ಪೆ, ಕಿರಣ್ ಗೌಡ ಹಾಜರಿದ್ದರು.

ಇದನ್ನೂ ಓದಿ | Shivamogga attack |ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್‌: ಸುನಿಲ್‌ ವಿರುದ್ಧ ಸಮೀರ್‌ ತಂಗಿಯಿಂದ ಚುಡಾವಣೆ ದೂರು ದಾಖಲು

Exit mobile version