Site icon Vistara News

Shivamogga News : ಮದುವೆಗೆ 13 ದಿನ ಬಾಕಿ ಇರುವಾಗಲೇ ಬಾತ್‌ ರೂಮಿನಲ್ಲಿ ನೇಣಿಗೆ ಶರಣಾದಳು

Self harming Girl

ಶಿವಮೊಗ್ಗ: ಮಗಳ ಮದುವೆಗಾಗಿ ಆ ಪೋಷಕರು ಅದ್ಧೂರಿಯಾಗಿ ತಯಾರಿಯನ್ನು ಮಾಡಿಕೊಂಡಿದ್ದರು. ಅದಾಗಲೇ ಮಗಳ ಮದುವೆ ಕಾರ್ಡ್‌ ಅನ್ನು ಊರು ತುಂಬ ಹಂಚಿದ್ದರು. ಆದರೆ ಸಂಭ್ರಮದ ಮನೆಯಲ್ಲೀಗ ಸೂತಕ ಛಾಯೆ ಆವರಿಸಿದೆ. ಮದು ಮಗಳಾಗಿ ಹಸೆಮಣೆ ಏರಬೇಕಾದವಳು (Shivamogga News) ಸಾವಿನ ಮನೆ ಸೇರಿದ್ದಾಳೆ. ಮದುವೆಗೆ 13 ದಿನಗಳು ಇರುವಾಗ ಯುವತಿಯೊಬ್ಬಳು‌ ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾಳೆ.

ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನ ಕಟ್ಟೆಹಕ್ಲು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಚೈತ್ರ (26) ಮೃತ ಯುವತಿ. ಚೈತ್ರ ಮನೆಯ ಸ್ನಾನದ ಕೊಠಡಿಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಚೈತ್ರಗೆ ಮುಂದಿನ ಫೆಬ್ರವರಿ 4 ರಂದು ವಿವಾಹ ನಿಶ್ಚಯವಾಗಿತ್ತು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಎಂಕಾಂ ಪದವಿ ಪಡೆದಿದ್ದ ಚೈತ್ರ ಕಟ್ಟೆಹಕ್ಲಿನ ರಾಮಕೃಷ್ಣ ಮೆಡಿಕಲ್‌ನಲ್ಲಿ ಕೆಲಸ ಮಾಡುತ್ತಿದ್ದಳು. ನನಗೆ ಆರೋಗ್ಯ ಸಮಸ್ಯೆ ಇದೆ. ಹಾಗಾಗಿ ನನಗೆ ಮದುವೆ ಬೇಡವೆಂದು ವಿರೋಧ ಮಾಡುತ್ತಿದ್ದಳು ಎನ್ನಲಾಗಿದೆ. ಆದರೆ ಮನೆಯವರು ಮನವೊಲಿಸಿದ್ದರು ಎನ್ನಲಾಗಿದೆ.

ಸ್ಥಳಕ್ಕೆ ತೀರ್ಥಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:Suspicious Death : ಮನೆಯೊಳಗೆ ನೇತಾಡುತ್ತಿತ್ತು ಗ್ರಾಪಂ ಸದಸ್ಯೆ ಶವ; ಕೊಲೆಯೋ? ಆತ್ಮಹತ್ಯೆಯೋ?

ಕೈ ಹಾಗೂ ಕತ್ತು ಕೊಯ್ದುಕೊಂಡು ನೇಣಿಗೆ ಶರಣಾದ ಯುವಕ

ಆನೇಕಲ್/ಮಂಡ್ಯ: ಕೈ ಹಾಗೂ ಕತ್ತುಕೊಯ್ದು ಕೊಂಡು ನೇಣು ಬಿಗಿದಿರುವ ಸ್ಥಿತಿಯಲ್ಲಿ ಯುವಕನ ಮೃತದೇಹವು (Self Harming) ಪತ್ತೆಯಾಗಿದೆ. ಇದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಬೆಂಗಳೂರು ಹೊರವಲಯದ ಆನೇಕಲ್ ಪಟ್ಟಣದ ಥಳಿರಸ್ತೆಯಲ್ಲಿ ಘಟನೆ ನಡೆದಿದೆ. ವಿನಯ್ ಕುಮಾರ್ (24) ಮೃತ ದುರ್ದೈವಿ.

ವಿನಯ್‌ ಸರ್ಜಾಪುರ ಸಮೀಪದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಮೊದಲಿಗೆ ಕತ್ತರಿಯಲ್ಲಿ ಕೈ ಮತ್ತು ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ತದನಂತರ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಭಾನುವಾರ (ಜ.21) ಬೆಳಗ್ಗೆ 8 ಗಂಟೆ ಸುಮಾರಿಗೆ ಘಟನೆ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೂ ಮುನ್ನ ಮೊಬೈಲ್ ಸಿಮ್ ತೆಗೆದು ಬಿಸಾಡಿದ್ದಾನೆ. ಮೊಬೈಲ್ ಪೂರ್ತಿ ರೀಸ್ಟಾರ್ಟ್ ಮಾಡಿದ್ದಾನೆ. ಯಾವುದೋ ಬಲವಾದ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ಇದೆ. ವಿನಯ್‌ಗೆ ಹೆದರಿಸಿ ಯಾರಾದರೂ ಬ್ಲ್ಯಾಕ್‌ ಮೇಲ್ ಮಾಡಿದ್ದರಾ? ಇದರಿಂದ ಭಯಪಟ್ಟು ಆತ್ಮಹತ್ಯೆಗೆ ಶರಣಾದ್ನಾ ಎಂಬ ಪ್ರಶ್ನೆ ಉದ್ಭವಿಸಿದೆ.

ಸದ್ಯ ಆನೇಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆನೇಕಲ್ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ಮೃತದೇಹವನ್ನು ರವಾನೆ ಮಾಡಿದ್ದಾರೆ. ಜತೆಗೆ ಯುವಕನ ಮೊಬೈಲ್ ವಶಕ್ಕೆ ಪಡೆದು ತನಿಖೆಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ: Medical Negligence : ಗರ್ಭಕೋಶ ಶಸ್ತ್ರಚಿಕಿತ್ಸೆಗೆಂದು ಆಸ್ಪತ್ರೆ ಸೇರಿದಳು; ವೈದ್ಯರ ನಿರ್ಲಕ್ಷ್ಯಕ್ಕೆ ಸ್ಮಶಾನದ ಪಾಲಾದಳು

ಗಂಡನ ಕಿರುಕುಳಕ್ಕೆ ಬೇಸತ್ತು ನೇಣು ಬಿಗಿದುಕೊಂಡಳು

ಕೌಟುಂಬಿಕ ಕಲಹಕ್ಕೆ ಬೇಸತ್ತ ಮಹಿಳೆಯೊಬ್ಬಳು ನೇಣು ಬಿಗಿದುಕೊಂಡು ಮೃತಪಟ್ಟಿರುವ ಘಟನೆ ಮಂಡ್ಯದ ನೆಹರುನಗರ ಪೂರ್ವ ಬಡಾವಣೆಯಲ್ಲಿ ನಡೆದಿದೆ. ಪದ್ಮ.ವಿ (36) ಮೃತ ದುರ್ದೈವಿ.

ಪದ್ಮ ರಾಮನಗರ ತಾಲೂಕಿನ ಅಂಕನಹಳ್ಳಿ ಗ್ರಾಮದವಳು. ಮಂಡ್ಯದ ಸಿದ್ದರಾಜು ಎಂಬಾತನನ್ನು ಪ್ರೀತಿಸಿ ಪದ್ಮ ಮದುವೆ ಆಗಿದ್ದಳು. ಸಿದ್ದರಾಜು ಬಣ್ಣ ಬಳಿಯುವ ಕೆಲಸ ಮಾಡುತ್ತಿದ್ದ. 13 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿ ಜೀವನ ನಡೆಸುತ್ತಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದರು. ಇತ್ತೀಚೆಗೆ ಸಿದ್ದರಾಜು ಹಣಕ್ಕಾಗಿ ನಿತ್ಯ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಹೀಗಾಗಿ ಇದರಿಂದ ನೊಂದ ಪದ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾಳೆ. ಮಂಡ್ಯ ಪೂರ್ವ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version