Site icon Vistara News

Shivamogga Dasara 2022 | ಶಿವಮೊಗ್ಗದ ಅದ್ಧೂರಿ ದಸರಾಕ್ಕೆ ಚಾಲನೆ

Shivamogga Dasara 2022

ಶಿವಮೊಗ್ಗ: ಮಲೆನಾಡಿನ ರಾಜಧಾನಿ ಶಿವಮೊಗ್ಗದಲ್ಲಿ ನಡೆಯುವ ಐತಿಹಾಸಿಕ ದಸರಾಕ್ಕೆ (Shivamogga Dasara 2022 ) ವೃಕ್ಷ ಮಾತೆ, ಪದ್ಮಶ್ರೀ ಪುರಸ್ಕೃತೆ ತುಳಸಿಗೌಡ ಸೋಮವಾರ ಚಾಲನೆ ನೀಡಿದ್ದಾರೆ.

ಮಹಾನಗರ ಪಾಲಿಕೆ ವತಿಯಿಂದ ನಗರದ ಕೋಟೆ ಶ್ರೀ ಚಂಡಿಕಾದುರ್ಗಾ ಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ನಾಡದೇವಿ ಚಾಮುಂಡೇಶ್ವರಿಯನ್ನು ಪ್ರತಿಷ್ಠಾಪನೆ ಮಾಡಿ, ಪೂಜೆ ಸಲ್ಲಿಸಲಾಯಿತು. ಬಳಿಕ ಪದ್ಮಶ್ರೀ ಪುರಸ್ಕೃತೆ ತುಳಸಿಗೌಡ ದೀಪ ಬೆಳಗುವ ಮೂಲಕ ದಸರಾ ಉದ್ಘಾಟಿಸಿದರು.

ಮೆರವಣಿಗೆಯಲ್ಲಿ ಪಾಲಿಕೆಯ ಮೇಯರ್​ ಸುನೀತಾ ಅಣ್ಣಪ್ಪ ಮತ್ತು ಸದಸ್ಯರು

ಈ ಸಂದರ್ಭದಲ್ಲಿ ಮಾತನಾಡಿದ ತುಳಸಿಗೌಡ ಅವರು, ಗಿಡ ನೆಟ್ಟರೆ ಮಳೆ ಬರುತ್ತದೆ. ಪರಿಸರ ಉಳಿಸಿದರೆ ಮಾತ್ರ ಮಳೆ, ಬೆಳೆಯಾಗಿ ದೇಶ ಸುಭಿಕ್ಷವಾಗುತ್ತದೆ. ನಾನು ಓದಿಲ್ಲ, ಭಾಷಣಕಾರಳೂ ಅಲ್ಲ. ನನಗೆ ದೇವಿ ವಿಗ್ರಹ ನೋಡಿ ತುಂಬಾ ಸಂತೋಷವಾಗಿದೆ. ಆ ಚಾಮುಂಡೇಶ್ವರಿ ನಾಡಿನ ಜನತೆಗೆ ಸಕಲ ಸೌಭಾಗ್ಯ ಕೊಡಲಿ ಎಂದು ಹಾರೈಸಿದರು.

ಶಾಸಕ ಕೆ.ಎಸ್. ಈಶ್ವರಪ್ಪ ಮಾತನಾಡಿ, ರಾಜ್ಯದಲ್ಲಿ ಮೈಸೂರು ಬಿಟ್ಟರೆ ಶಿವಮೊಗ್ಗದಲ್ಲಿ ಅತ್ಯಂತ ಸಂಭ್ರಮದಿಂದ ಆಚರಿಸಿಕೊಂಡು ಬರಲಾಗಿದೆ. ಈ ಬಾರಿ ಶಿವಮೊಗ್ಗ ಮಹಾನಗರ ಪಾಲಿಕೆಗೆ “ಸ್ವಚ್ಛ ಶಿವಮೊಗ್ಗʼʼ ಎಂಬ ರಾಷ್ಟ್ರೀಯ ಪ್ರಶಸ್ತಿ ರಾಷ್ಟ್ರಪತಿಗಳ ಮುಖಾಂತರ ಪಾಲಿಕೆಗೆ ದೊರೆತಿರುವುದು ದಸರಾದ ಮೆರಗಿಗೆ ಇನ್ನೊಂದು ಗರಿ ಸೇರಿದಂತಾಗಿದೆ. ಇದು ನಮ್ಮೆಲ್ಲರಿಗೂ ಹೆಮ್ಮೆ ತಂದಿದೆ ಎಂದರು.

ಅದ್ಧೂರಿ ದಸರಾ ಮೆರವಣಿಗೆಯ ದೃಶ್ಯ

ಅಸುರೀ ಶಕ್ತಿಗಳ ನಾಶವಾಗಿ ಭಾರತೀಯರಿಗೆ ಎಲ್ಲದರಲ್ಲೂ ವಿಜಯ ಸಿಗಲಿ ಎಂದು ನವರಾತ್ರಿಯಲ್ಲಿ ನವದುರ್ಗೆ ಪೂಜಿಸಿ ವಿಜದಶಮಿ ಆಚರಿಸುತ್ತೇವೆ. ಹಿಂದಿನಿಂದಲೂ ದೇಶದಲ್ಲಿ ಪರಕೀಯ ಶಕ್ತಿಗಳು ತೊಂದರೆ ಕೊಡುತ್ತಾ ಬಂದಿವೆ. ಆಗ ಎಲ್ಲಾ ಸಂದರ್ಭಗಳಲ್ಲೂ ನಮ್ಮ ದೇಶ ಭಕ್ತ ಭಾರತೀಯರು ಅವರನ್ನು ಎದುರಿಸಿ ಗೆದ್ದಿದ್ದಾರೆ. ಈಗ ಮತ್ತೆ ದೇಶ ವಿದ್ರೋಹಿಗಳು ಅಲ್ಲಲ್ಲಿ ದೇಶದ್ರೋಹ ಚಟುವಟಿಕೆ ನಡೆಸುತ್ತಿದ್ದಾರೆ. ರಾಷ್ಟ್ರದ್ರೋಹಿ ಶಕ್ತಿಗಳ ಆಟ ಇನ್ನುಮುಂದೆ ನಡೆಯುವುದಿಲ್ಲ. ನಾವೆಲ್ಲಾ ಚಾಮುಂಡೇಶ್ವರಿ ಮುಂದೆ ದೇಶ ರಕ್ಷಣೆಯ ಶಪಥ ಮಾಡಬೇಕಾಗಿದೆ ಎಂದರು.

ಮಹಿಳಾ ದಸರಾದಲ್ಲಿ ಸಾಧಕಿಯರಿಗೆ ಸನ್ಮಾನ

ಇದಕ್ಕೂ ಮುನ್ನ ಬೆಳ್ಳಿ ಅಂಬಾರಿಯಲ್ಲಿ ನೂತನವಾಗಿ ನಿರ್ಮಿಸಿದ ಬಂಗಾರದ ಕಿರೀಟ ಹೊತ್ತ ದೇವಿ ಚಾಮುಂಡೇಶ್ವರಿ ವಿಗ್ರಹವನ್ನು ಮಹಾನಗರ ಪಾಲಿಕೆ ಆವರಣದಿಂದ ಕೋಟೆ ಚಂಡಿಕಾ ದುರ್ಗಾ ಪರಮೇಶ್ವರಿ ದೇವಾಲಯದವರೆಗೆ ಮೆರವಣಿಗೆಯಲ್ಲಿ ಜಾನಪದ ಕಲಾತಂಡಗಳೊಂದಿಗೆ ತರಲಾಯಿತು.

ರಾಜ್ಯ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯ ಉದ್ಘಾಟನೆ

ಈ ಸಂದರ್ಭದಲ್ಲಿ ಮೇಯರ್ ಸುನಿತಾ ಅಣ್ಣಪ್ಪ, ಉಪಮೇಯರ್ ಶಂಕರ್ ಗನ್ನಿ, ಪಾಲಿಕೆ ವಿಪಕ್ಷ ನಾಯಕಿ ರೇಖಾ ರಂಗನಾಥ್, ಪಾಲಿಕೆ ಸದಸ್ಯರಾದ ಚನ್ನಬಸಪ್ಪ, ಯಮುನಾ ರಂಗೇಗೌಡ, ವಿಶ್ವನಾಥ್, ಜ್ಞಾನೇಶ್ವರ್, ಹೆಚ್.ಸಿ. ಯೋಗೀಶ್, ಕಲ್ಪನಾ ರಮೇಶ್, ಅನಿತಾ ರವಿಶಂಕರ್, ಮಂಜುನಾಥ್, ವಿಶ್ವಾಸ್, ಶಿವಕುಮಾರ್, ರಾಜು, ಮಂಜುಳಾ ಶಿವಣ್ಣ, ಲಕ್ಷ್ಮಿ ಶಂಕರನಾಯ್ಕ್, ಸುರೇಖಾ ಮುರಳೀಧರ್, ಸಂಗೀತಾ ನಾಗರಾಜ್, ಶಿರೀಶ್, ಸೂಡಾ ಅಧ್ಯಕ್ಷ ನಾಗರಾಜ್, ಪಾಲಿಕೆ ಆಯುಕ್ತ ಮಾಯಣ್ಣ ಗೌಡ, ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಮಾರಪ್ಪ, ಕಾರ್ಯದರ್ಶಿ ಗೋವಿಂದ ಮತ್ತಿತರರು ಇದ್ದರು.

ಇದನ್ನೂ ಓದಿ | Dasara 2022 | ಹೊಂಬುಜ ದಸರಾ ನವರಾತ್ರಿಗೆ ಪಾರಂಪರಿಕ ಚಾಲನೆ; ಸಿಗಂಧೂರಿನಲ್ಲಿ ಶರನ್ನವರಾತ್ರಿ ಸಂಭ್ರಮ

Exit mobile version