Site icon Vistara News

Vistara News Launch | ಬ್ರೇಕಿಂಗ್ ನ್ಯೂಸ್ ಧಾವಂತದಲ್ಲಿ ಸಮಾಜ ಒಡೆಯುವ ಕೆಲಸ ಆಗಬಾರದು: ಸಂಸದ ಬಿ.ವೈ. ರಾಘವೇಂದ್ರ

Vistara News Launch

ಶಿವಮೊಗ್ಗ: ಇಲ್ಲಿನ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಶುಕ್ರವಾರ ವಿಸ್ತಾರ ಕನ್ನಡ ಸಂಭ್ರಮ (Vistara News Launch) ಕಾರ್ಯಕ್ರಮ ನಡೆಯಿತು. ನಗರದ ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಸಂಸದ ಬಿ.ವೈ.ರಾಘವೇಂದ್ರ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ನಂತರ ಮಾತನಾಡಿದ ಬಿ.ವೈ.ರಾಘವೇಂದ್ರ ಅವರು ಸುಸ್ಥಿರ ಸಮಾಜ, ಸಂಸ್ಕೃತಿ ನಿರ್ಮಾಣಕ್ಕೆ ವಿಸ್ತಾರ ನ್ಯೂಸ್ ಪ್ರೇರಣೆ ನೀಡಲಿ. ನಮ್ಮ ಸಂಸ್ಕೃತಿ ಶ್ರೀಮಂತಗೊಳಿಸುವ ಕೆಲಸ ಆಗಲಿ. ಬ್ರೇಕಿಂಗ್ ನ್ಯೂಸ್ ಧಾವಂತದಲ್ಲಿ ಸಮಾಜ ಒಡೆಯುವ ಕೆಲಸ ಆಗಬಾರದು. ಕೇಂದ್ರ ಸರ್ಕಾರ ವಿದ್ಯುನ್ಮಾನ ಚಾನೆಲ್‌ಗಳಿಗೆ ನೀತಿ ಸಂಹಿತೆ ರೂಪಿಸಿ ಜಾರಿಗೊಳಿಸಿದೆ ಎಂದರು.

ಸತ್ಯದ ವರದಿಯನ್ನು ನೀಡಲಿ- ಕೆಎಸ್‌ ಈಶ್ವರಪ್ಪ
ಮಾಜಿ ಸಚಿವ, ಶಾಸಕ ಕೆ.ಎಸ್.ಈಶ್ವರಪ್ಪ ಮಾತನಾಡಿ, ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದ ನಂತರವೂ ಸ್ವಾತಂತ್ರ್ಯದ ಬಗ್ಗೆ ಚರ್ಚೆ ಆಗುತ್ತಿರುವ ಹೊಸ್ತಿಲಲ್ಲಿ ಹಿರಿಯ ಪತ್ರಕರ್ತ ಹರಿಪ್ರಕಾಶ್ ಕೋಣೆಮನೆ ನೇತೃತ್ವದ ವಿಸ್ತಾರ ನ್ಯೂಸ್ ಲೋಕಾರ್ಪಣೆಗೊಂಡಿರುವುದು ಸಂತಸದ ವಿಷಯ. ವಿಸ್ತಾರ ನ್ಯೂಸ್ ಸತ್ಯದ ವರದಿಯನ್ನು ನೀಡುವಂತಾಗಲಿ ಎಂದು ಹಾರೈಸಿದರು.

ವಿವಿಧ ಕ್ಷೇತ್ರಗಳ ಪ್ರತ್ಯೇಕ ಯೂಟ್ಯೂಬ್‌ ಚಾನಲ್‌ನಲ್ಲಿ ವಿಸ್ತಾರ ಪ್ರಥಮ- ಬಸವ ಮರುಳಸಿದ್ದ ಸ್ವಾಮೀಜಿ
ಸಾನ್ನಿಧ್ಯ ವಹಿಸಿದ್ದ ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ ಮಾತನಾಡಿ, ವಿವಿಧ ಕ್ಷೇತ್ರಗಳಿಗೆ ಪ್ರತ್ಯೇಕವಾಗಿ ಯೂಟ್ಯೂಬ್‌ ಚಾನೆಲ್‌ಗಳನ್ನು ಹೊರತಂದಿರುವ ವಿಸ್ತಾರ ನ್ಯೂಸ್ ಪ್ರಯತ್ನ ಮಾಧ್ಯಮ ಲೋಕದಲ್ಲಿ ಪ್ರಥಮದ್ದು. ಸವಾಲಿನ ನಡುವೆ ಲೋಕಾರ್ಪಣೆಗೊಂಡಿರುವ ವಿಸ್ತಾರ ನ್ಯೂಸ್ ಎಲ್ಲ ಸವಾಲು, ಸ್ಪರ್ಧೆಗಳನ್ನು ಮೀರಿ ನಿಖರ, ಜನಪರ ಸುದ್ದಿ ನೀಡುವಂತಾಗಲಿ ಎಂದು ಹಾರೈಸಿದರು. ಹರಿಪ್ರಕಾಶ್ ಕೋಣೆಮನೆಯವರು ಬಹುಮುಖ ವ್ಯಕ್ತಿತ್ವ ಹೊಂದಿರುವ ಆಕರ್ಷಕ ಪತ್ರಕರ್ತರು. ಅವರು ನೇತೃತ್ವ ವಹಿಸಿದ್ದ ಎರಡೂ ರಾಜ್ಯಮಟ್ಟದ ಪತ್ರಿಕೆಗಳು ನಂಬರ್ ಒನ್ ಆದವು. ಒಂದು ಪತ್ರಿಕೆಯನ್ನು ಬಹುಮಾಧ್ಯಮ ಪತ್ರಿಕೆಯನ್ನಾಗಿ ರೂಪಿಸುವಲ್ಲಿ ಅವರ ಪ್ರಯತ್ನ ಶ್ಲಾಘನೀಯ. ಒಳ್ಳೆಯ ತಂಡ ಕಟ್ಟಿರುವ ಹರಿಪ್ರಕಾಶ್ ಕೋಣೆಮನೆಯವರು ಯಶಸ್ವಿ ಆಗುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ವಿಸ್ತಾರ ಕನ್ನಡ ಸಂಭ್ರಮದಲ್ಲಿ ಸರ್ಜಿ ಫೌಂಡೇಷನ್‌ನ ಮ್ಯಾನೇಜಿಂಗ್ ಟ್ರಸ್ಟಿ ಡಾ. ಧನಂಜಯ್ ಸರ್ಜಿ ಶುಭ ಹಾರೈಸಿದರು. ನಿರಂತರ ಟ್ರಸ್ಟ್‌ನ ಚೈತ್ರಾ, ಕಲಾವಿದ ವಿನಯ್ ನೇತೃತ್ವದ ಸಮೃದ್ಧ ಕಲಾವಿದರ ತಂಡ ಹಾಗೂ ವಿಸ್ತಾರ ನ್ಯೂಸ್‌ನ ಶಿವಮೊಗ್ಗ ಬ್ಯೂರೋ ಹೆಡ್ ವಿವೇಕ ಮಹಾಲೆ, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ, ಸೂಡಾ ಅಧ್ಯಕ್ಷ ನಾಗರಾಜ್ ಸೇರಿ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್, ಸೂಡಾ ಮಾಜಿ ಅಧ್ಯಕ್ಷ ಜ್ಯೋತಿಪ್ರಕಾಶ್, ಪಾಲಿಕೆ ಸದಸ್ಯ ಪ್ರಭಾಕರ್, ಶಿಕ್ಷಣ ತಜ್ಞ ಪ್ರೊ.ಬಿ.ಎಂ.ಕುಮಾರಸ್ವಾಮಿ, ರೋಟರಿ ಕ್ಲಬ್‌ನ ವಿಜಯಕುಮಾರ್, ನವ ಕರ್ನಾಟಕ ನಿರ್ಮಾಣ ವೇದಿಕೆಯ ರಮೇಶ್ ಗೌಡ, ರೋಟರಿ ಇನ್ನರ್ ವ್ಹೀಲ್ ಕ್ಲಬ್ ಸದಸ್ಯರು, ಮನ್ವಂತರ ಮಹಿಳಾ ಮಂಡಲ ಸದಸ್ಯರು, ಕರ್ನಾಟಕ ನಾಡು ರಕ್ಷಣಾ ವೇದಿಕೆ ಮತ್ತು ಕರುನಾಡು ಹಿರತಕ್ಷಣಾ ಸಮಿತಿ ಸದಸ್ಯರು ಸೇರಿದಂತೆ ಸಾರ್ವಜನಿಕರು ಪಾಲ್ಗೊಂಡಿದ್ದರು.

ಇದನ್ನೂ ಓದಿ | Siddaramaiah in Kolar | ನಾನೇನೂ ನಾಮಿನೇಷನ್‌ ಹಾಕ್ಲಿಕೆ ಹೋಗ್ತಿಲ್ಲ, ಚರ್ಚೆಗೆ ಹೋಗ್ತಿದೇನೆ ಅಷ್ಟೆ ಎಂದ ಸಿದ್ದರಾಮಯ್ಯ

Exit mobile version