Site icon Vistara News

ಗೃಹಸಚಿವರ ಗ್ರಾಮದಲ್ಲಿ ಮಹಿಳೆಯನ್ನು ಬೆತ್ತಲೆಗೊಳಿಸಿ ಅತ್ಯಾಚಾರಕ್ಕೆ ಯತ್ನ

ಶಿವಮೊಗ್ಗ : ಕೂಲಿ ಮಾಡಿ ಜೀವಿಸುತ್ತಿದ್ದ ದಂಪತಿ ಆಸ್ಪತ್ರೆಯಿಂದ ರಾತ್ರಿ 9ರ ವೇಳೆ ಮನೆಗೆ ಬರುತ್ತಿದ್ದಾಗ ನಾಲ್ವರು ಯುವಕರ ಗುಂಪು ಮಹಿಳೆಯನ್ನು ಬೆತ್ತಲೆಗೊಳಿಸಿ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ತೀರ್ಥಹಳ್ಳಿ ತಾಲೂಕಿನ ಆರಗ ಗ್ರಾಮದಲ್ಲಿ ನಡೆದಿದೆ. ಊರಿನ ಪ್ರವೇಶದ್ವಾರದ ಬಳಿ  ಅಡ್ಡಗಟ್ಟಿದ ನಾಲ್ವರು ಯುವಕರು ಪತಿಗೆ ಮನಬಂದಂತೆ ಥಳಿಸಿ ರಸ್ತೆಯಂಚಿಗೆ ಬಿಸಾಡಿ, ಮಹಿಳೆಯನ್ನು ಪಕ್ಕದ ರಬ್ಬರ್ ತೋಟಕ್ಕೆ ಎಳೆದೊಯ್ದು  ಬೆತ್ತಲೆಗೊಳಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಇದು ಗೃಹಸಚಿವ ಆರಗ ಜ್ಞಾನೇಂದ್ರ ಅವರ ಗ್ರಾಮ.

ಇದನ್ನೂ ಓದಿ |ಕಾರವಾರದಿಂದ ಬೆಂಗಳೂರಿನವರೆಗೆ ಸ್ಕೇಟಿಂಗ್ ಮೂಲಕ ಬಂದ 63 ಮಕ್ಕಳು

ಮೇ 9 ರಂದು ಸಂಜೆ ವೇಳೆ ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಮಹಿಳೆಯನ್ನು  ತೀರ್ಥಹಳ್ಳಿ ಆಸ್ಪತ್ರೆಗೆ ಪತಿ ಕರೆದುಕೊಂಡು ಹೋಗಿದ್ದರು. ಅಲ್ಲಿ ವೈದ್ಯರಿಲ್ಲದ ಕಾರಣ ಔಷಧಿ ಖರೀದಿಸಿ ಊರಿಗೆ ಬಂದಿಳಿಯುವಾಗ ರಾತ್ರಿ 9 ಗಂಟೆಯಾಗಿತ್ತು. ಆರಗ ಗೇಟಿನಲ್ಲಿ ಬಸ್ ಇಳಿದು ನಡೆದುಕೊಂಡು ಹೋಗುವಾಗ ಊರಿನ ಮಸೀದಿ ಹತ್ತಿರ ದೇವರಗುಡಿ ನಿವಾಸಿಗಳಾದ ಸಂಪತ್ ಬಿನ್ ಉಮೇಶ ಗೌಡ, ಆದರ್ಶ ಬಿನ್ ಪುಟ್ಟಪ್ಪಗೌಡ ಮತ್ತು ಇನ್ನಿಬ್ಬರು ಅಪರಿಚಿತರು  ಅಡ್ಡಗಟ್ಟಿ  ಪತಿಯ ಮುಖ, ಕೈಕಾಲುಗಳಿಗೆ ಹೊಡೆದಿದ್ದಾರೆ.  ತೀವ್ರ ಗಾಯಗೊಂಡ ಅವರನ್ನು ರಸ್ತೆಯಂಚಿಗೆ ಬಿಸಾಡಿದ್ದು, ಅವರನ್ನು ಬಿಡಿಸಲು ಹೋದ ಮಹಿಳೆಯನ್ನು ರಬ್ಬರ್ ತೋಟಕ್ಕೆ ಎಳೆದೊಯ್ದು ಬಲವಂತವಾಗಿ ಬಟ್ಟೆ ಬಿಚ್ಚಿಸಿ  ಅಂಗಾಂಗಗಳನ್ನು ಸ್ಪರ್ಶಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎಂದು ಮಹಿಳೆ ದೂರಿನಲ್ಲಿ ವಿವರಿಸಿದ್ದಾರೆ.

ಈ ವೇಳೆ ಜೋರಾಗಿ ಕಿರುಚಿಕೊಂಡಾಗ ಗಂಡ ಎಚ್ಚರಗೊಂಡು ಅವರೂ ಕೂಗಿದರು. ಈ ವೇಳೆ ಕಿಡಿಗೇಡಿಗಳು ಓಡಿಹೋಗಿದ್ದಾರೆ. ಈ ದಿನ ಉಳಿದುಕೊಂಡೆ, ನಿನ್ನನ್ನು ಅತ್ಯಾಚಾರ ಮಾಡದೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಓಡಿಹೋಗಿದ್ದಾರೆ ಎಂದು ದೂರಿನಲ್ಲಿ ಮಹಿಳೆ ಹೇಳಿದ್ದಾರೆ. ಜೀವಭಯದಿಂದ ತ್ತತರಿಸುತ್ತಿದ್ದ ತಮ್ಮನ್ನು ಸ್ಥಳೀಯರಾದ ಚಂದ್ರ, ದಿನೇಶ ಎನ್ನುವವರು ರಕ್ಷಿಸಿ ರಿಕ್ಷಾದಲ್ಲಿ ಮನೆಗೆ ಕಳುಹಿಸಿದ್ದಾರೆ. ಮಾನ ರಕ್ಷಣೆಗೆ ವೇಲನ್ನು ಸುತ್ತಿಕೊಂಡು ಮನೆಗೆ ಹೋಗಿದ್ದೇನೆ. ರಾತ್ರಿ ಮನೆಯಲ್ಲಿ ಕಳೆದು ಮೇ 10ರಂದು ತೀರ್ಥಹಳ್ಳಿ  ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾಗಿ ಸಂತ್ರಸ್ಥೆ ವಿವರಿಸಿದ್ದಾರೆ.

ಈ ಕೇಸಿಗೆ ಸಂಬಂಧಪಟ್ಟಂತೆ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಐಪಿಸಿ 341, 323, 353, 354a, 354b 506 ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಿರುವುದಾಗಿ ಮತ್ತು ಅಟ್ರಾಸಿಟಿ ಅಡಿಯಲ್ಲಿ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ : ಹುಡುಗಿ ಪೋಟೋ ತೋರಿಸಿ ಹತ್ಯೆ: ಬಿಜೆಪಿ ಕಾರ್ಯಕರ್ತನ ಸಾವಿನ ರಹಸ್ಯ ಬಯಲು

Exit mobile version