Site icon Vistara News

Short Circuit : 24 ನವಜಾತ ಶಿಶುಗಳಿದ್ದ ಐಸಿಯು ವಾರ್ಡ್‌ನಲ್ಲಿ ಶಾರ್ಟ್ ಸರ್ಕ್ಯೂಟ್; ಎಸಿ ಬ್ಲಾಸ್ಟ್‌!

short circuit in ICu ward

ಹಾಸನ: ಹಾಸನದ ವೈದ್ಯಕೀಯ ಬೋಧಕ ಆಸ್ಪತ್ರೆಯಲ್ಲಿ ಆಗಷ್ಟೇ ಜನಿಸಿದ ನವಜಾತ ಶಿಶುಗಳನ್ನು ಐಸಿಯು ವಾರ್ಡ್‌ನಲ್ಲಿ (Short Circuit) ಇರಿಸಲಾಗಿತ್ತು. ಆದರೆ ದಿಢೀರ್‌ ಶಾರ್ಟ್‌ ಸರ್ಕ್ಯೂಟ್‌ನಿಂದಾಗಿ ಐಸಿಯು ಕೋಣೆಯೊಳೆಗೆ ದಟ್ಟವಾದ ಹೊಗೆ ತುಂಬಿಕೊಂಡಿತ್ತು. ಕೂಡಲೇ ಕೊಠಡಿಯ ಕಿಟಕಿ ಗಾಜುಗಳನ್ನು ಒಡೆದು‌ ಐಸಿಯುನಲ್ಲಿದ್ದ 24 ನವಜಾತ ಶಿಶುಗಳನ್ನು ಬೇರೆಡೆಗೆ ಶಿಫ್ಟ್ ಮಾಡಲಾಗಿದೆ.

ಐಸಿಯುನ ಎಸಿಯ ವಿದ್ಯುತ್ ಪರಿವರ್ತಕ (Power Converter) ಬ್ಲಾಸ್ಟ್ ಆಗಿದ್ದೇ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ. ಎಸಿಯಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಬೆಂಕಿಯನ್ನು ನಂದಿಸಿದ್ದಾರೆ. ಆಸ್ಪತ್ರೆಯ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತವೊಂದು ತಪ್ಪಿದೆ.

ಶಾರ್ಟ್‌ ಸರ್ಕ್ಯೂಟ್‌ನಿಂದಾಗಿ ಕ್ಷಣ ಕಾಲ ಪೋಷಕರು ಕಂಗಾಲಾಗಿದ್ದರು. ಸದ್ಯ ಎಲ್ಲ ಶಿಶುಗಳನ್ನು ಬೇರೆಡೆಗೆ ರವಾನಿಸಲಾಗಿದ್ದು, ಪೋಷಕರು ಹಾಗೂ ಸಿಬ್ಬಂದಿ ನಿಟ್ಟುಸಿರು ಬಿಟ್ಟಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹಿಮ್ಸ್‌ನ ನಿರ್ದೇಶಕ ರವಿಕುಮಾರ್, ಜಿಲ್ಲಾ ಶಸ್ತ್ರ ಚಿಕಿತ್ಸಕ‌ ಕೃಷ್ಣಮೂರ್ತಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಅವಘಡಕ್ಕೆ ಕಾರಣವೇನು ಎಂಬುದರ ಕುರಿತು ಆಸ್ಪತ್ರೆ ಸಿಬ್ಬಂದಿ ಬಳಿ ಮಾಹಿತಿ ಪಡೆದರು. ಆಸ್ಪತ್ರೆಯವರು ಕಾಲ ಕಾಲಕ್ಕೆ ದುರಸ್ಥಿಯನ್ನು ಹಿಂದುಳಿದಿದ್ದರಾ, ಅಥವಾ ಓವರ್‌ಲೋಡ್‌ ಆಗಿ ಈ ಅವಘಡ ಸಂಭವಿಸಿದ್ದಯಾ ಎಂಬುದರ ಕುರಿತು ತನಿಖೆಯನ್ನು ನಡೆಸುತ್ತಿದ್ದಾರೆ.

ರೈಲು ಎಂಜಿನ್‌ನಲ್ಲಿ ಬೆಂಕಿ

ಕೆ.ಕೆ ಎಕ್ಸ್‌ಪ್ರೆಸ್‌ (Karnataka Express) ರೈಲಿನ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಪೈಲಟ್‌ನ ಸಮಯಪ್ರಜ್ಞೆಯಿಂದಾಗಿ ಅನಾಹುತವೊಂದು ತಪ್ಪಿದೆ. ಶನಿವಾರ (ಜು.1) ಸಂಜೆ 7.30ಕ್ಕೆ ಬೆಂಗಳೂರಿನಿಂದ ಹೊರಟ್ಟಿದ್ದ ಕೆಕೆ ಎಕ್ಸ್‌ಪ್ರೆಸ್‌ ರೈಲಿನ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅತಿ ವೇಗವಾಗಿ ಚಲಿಸುತ್ತಿದ್ದ ರೈಲಿನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಪೈಲಟ್‌ ರೈಲು ನಿಲ್ಲಿಸಿ, ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ.

ತಾಂತ್ರಿಕ ಸಮಸ್ಯೆಯಿಂದ ರೈಲು ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಬೆಂಗಳೂರಿನಿಂದ ದೆಹಲಿಗೆ ರೈಲು ಹೊರಟಿತ್ತು. ಭಾನುವಾರ ಬೆಳಗ್ಗೆ ಮಹಾರಾಷ್ಟ್ರ ಸೊಲ್ಲಾಪುರದ ಮೋಹಳ ತಾಲೂಕಿನ ಘಾಟಘೆ ಗ್ರಾಮದ ಸಮೀಪ ಬರುತ್ತಿದ್ದಂತೆ ಬೆಂಕಿ ಕಾಣಿಸಿಕೊಂಡು ದಟ್ಟ ಹೊಗೆ ಕಾಣಿಸಿಕೊಂಡಿದೆ. ಕೂಡಲೇ ಎಚ್ಚೆತ್ತುಕೊಂಡ ಪೈಲಟ್‌ ರೈಲು ಸ್ಥಗಿತಗೊಳಿಸಿದ್ದಾರೆ.

ಬೆಂಕಿ ಆವರಿಸುತ್ತಿದ್ದಂತೆ ಪೈಲಟ್‌ ರೈಲಿನಿಂದ ಜಿಗಿದಿದ್ದಾರೆ. ಪರಿಣಾಮ ಬೆಂಕಿ ತಗುಲಿದ್ದು ಗಾಯಗೊಂಡಿದ್ದಾರೆ. ಗಾಯಗೊಂಡಿದ್ದ ಪೈಲಟ್‌ನನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಪೈಲಟ್‌ನ ಸಮಯ ಪ್ರಜ್ಞೆಯಿಂದಾಗಿ ಸಾವಿರಾರು ಪ್ರಯಾಣಿಕರ ಜೀವ ಉಳಿದಿದೆ. ಸದ್ಯ ಸ್ಥಳಕ್ಕಾಗಮಿಸಿರುವ ಅಧಿಕಾರಿಗಳು ರೈಲಿಗೆ ಮತ್ತೊಂದು ಎಂಜಿನ್ ಜೋಡಣೆ ಮಾಡಿದ್ದು, ಅಲ್ಲಿಂದ ದೆಹಲಿಗೆ ಪ್ರಯಾಣ ಮುಂದುವರಿದಿದೆ.

ಎಂಜಿನ್‌ನಲ್ಲಿ ಕಾಣಿಸಿಕೊಂಡ ಬೆಂಕಿ

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version