Site icon Vistara News

Child Scientist : ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ; ಎ.ಎಸ್‌. ಶ್ರೀಶಾಗೆ ಬಾಲ ವಿಜ್ಞಾನಿ ಪ್ರಶಸ್ತಿ

Shreesha Child Scientist

ಮಡಿಕೇರಿ: ನಗರದ ಜಿ.ಪಂ. ಸಭಾಂಗಣದಲ್ಲಿ ನಡೆದ ಕೊಡಗು ಜಿಲ್ಲಾ ಮಟ್ಟದ 31ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಜಿಲ್ಲಾ ಬಾಲ ವಿಜ್ಞಾನಿ ಪ್ರಶಸ್ತಿ ಪುರಸ್ಕೃತ ವಿದ್ಯಾರ್ಥಿನಿ ಕೊಡಗು ಜಿಲ್ಲೆ ಸುಂಟಿಕೊಪ್ಪ ಸಮೀಪದ ಕೊಡಗರಹಳ್ಳಿ ಸುಂಟಿಕೊಪ್ಪ ನಾಡು ಪ್ರೌಢಶಾಲೆಯ ಎ.ಎಸ್.ಶ್ರೀಶಾಳನ್ನು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಬೋಸರಾಜ್ ಅವರು ಮಂಗಳವಾರ ಸನ್ಮಾನಿಸಿದರು.

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಜಿಲ್ಲಾಡಳಿತ, ಜಿ.ಪಂ., ಶಾಲಾ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಜಿಲ್ಲಾ ಸಮಿತಿಯ ವತಿಯಿಂದ ಮಡಿಕೇರಿ ನಗರದ ಕೊಡಗು ವಿದ್ಯಾಲಯದಲ್ಲಿ ಈಚೆಗೆ ಏರ್ಪಡಿಸಿದ್ದ ಕೊಡಗು ಜಿಲ್ಲಾಮಟ್ಟದ 31ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ 2023ರಲ್ಲಿ “ಕಲುಷಿತಗೊಳ್ಳುತ್ತಿರುವ ನದಿ ತೀರಗಳು” ಎಂಬ ವಿಷಯದ ಕುರಿತು ವೈಜ್ಞಾನಿಕ ಯೋಜನಾ ಪ್ರಬಂಧ ಮಂಡಿಸಿದ್ದಳು ಶ್ರೀಶಾ.

ಕೊಡಗರಹಳ್ಳಿ ಸುಂಟಿಕೊಪ್ಪನಾಡು ಪ್ರೌಢಶಾಲೆಯ ವಿದ್ಯಾರ್ಥಿನಿ ಎ.ಎಸ್.ಶ್ರೀಶಾಳಿಗೆ ಶುಭ ಹಾರೈಸಿದ ಸಚಿವರು, ವಿದ್ಯಾರ್ಥಿಗಳು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ದೇಶದ ಪ್ರಗತಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಇದನ್ನೂ ಓದಿ : Viral Science: ಪುರುಷರ ಆಯುಸ್ಸು 141 ವರ್ಷಗಳಾದರೆ, ಮಹಿಳೆಯರದ್ದು 130 ವರ್ಷವಂತೆ!

ಮುಖ್ಯಮಂತ್ರಿಯವರ ಕಾನೂನು ಸಲಹೆಗಾರು ಹಾಗೂ ಶಾಸಕರಾದ ಎ.ಎಸ್ ಪೊನ್ನಣ್ಣ , ಶಾಸಕರಾದ ಡಾ.ಮಂತರ್ ಗೌಡ, ಎಂ.ಪಿ.ಸುಜಾ ಕುಶಾಲಪ್ಪ, ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ಡಿಸಿ ವೆಂಕಟ್‍ರಾಜಾ, ಎಸ್.ಪಿ.ರಾಮರಾಜನ್, ಡಿಡಿಪಿಐ ಎಂ.ಚಂದ್ರಕಾಂತ್, ಬಾಲ ವಿಜ್ಞಾನಿಯ ಮಾರ್ಗದರ್ಶಿ ಶಿಕ್ಷಕಿ ಶೋಭಾ, ವಿದ್ಯಾರ್ಥಿನಿಯ ಪೋಷಕರಾದ ಸಂಧ್ಯಾ ಮತ್ತು ಶ್ರೀಜು ಇದ್ದರು.

Exit mobile version