Site icon Vistara News

ಪಠ್ಯ ಪುಸ್ತಕ ತಿದ್ದುಪಡಿ: ಸರ್ಕಾರದಿಂದ ಅರಾಜಕ ನಿಲುವು ಎಂದ ಮಾಜಿ ಸಿಎಂ ಸಿದ್ದರಾಮಯ್ಯ

Multi-Specialty Hospital

ಬೆಂಗಳೂರು: ಪಠ್ಯ ಪುಸ್ತಕ ತಿದ್ದುಪಡಿಯ ಕುರಿತಾದ ಸರ್ಕಾರದ ಕ್ರಮ ಅರಾಜಕ ನಿಲುವಿನದ್ದು, ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ಲೋಪ ದೋಷಗಳಾಗಿವೆ ಎಂದು ಸರ್ಕಾರ ಕೊನೆಗೂ ಒಪ್ಪಿಕೊಂಡಿದೆ. ಆದರೆ ಏಳೆಂಟು ತಿದ್ದುಪಡಿಗಳನ್ನಷ್ಟೇ ಮಾಡಿ ತಿಪ್ಪೆ ಸಾರಿಸಲು ಹೊರಟಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, 1 ರಿಂದ 10ನೇ ತರಗತಿಯವರೆಗಿನ ಕನ್ನಡ ಭಾಷಾ ಪಠ್ಯ ಪುಸ್ತಕ, ಸಮಾಜ ವಿಜ್ಞಾನ ಪಠ್ಯ ಪುಸ್ತಕ ಹಾಗೂ ಸೀಮಿತ ತರಗತಿಗಳ ಪರಿಸರ ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದಂತೆ ಒಟ್ಟು 83 ಕಡೆ ತಿದ್ದುಪಡಿಗಳನ್ನು ಮಾಡಲಾಗಿದೆ. ಮಾಡಿರುವ ತಿದ್ದುಪಡಿಗಳಲ್ಲಿ ಬಹುತೇಕ ವಿವರಗಳು ಜೀವ ವಿರೋಧಿ ನಿಲುವಿನಿಂದ ಕೂಡಿವೆ ಎಂಬುದು ನಾಡಿನ ಶಿಕ್ಷಣ ತಜ್ಞರುಗಳ ಅಭಿಪ್ರಾಯವಾಗಿದೆ. ಆದರೆ ಸರ್ಕಾರ ತನ್ನ ಆದೇಶದಲ್ಲಿ ಏಳೆಂಟು ತಿದ್ದುಪಡಿಗಳನ್ನಷ್ಟೇ ಮಾಡಿದೆ. ಇದು ಸರಿಯಾದ ಕ್ರಮವಲ್ಲ ಎಂದು ಅವರು ಟೀಕಿಸಿದ್ದಾರೆ.

ರೋಹಿತ್ ಚಕ್ರತೀರ್ಥ ಸಮಿತಿ ಮಾಡಿರುವ ಶಿಫಾರಸುಗಳನ್ನು ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ತಜ್ಞರು ಪರಿಶೀಲನೆ ಮಾಡಿ ಆ ವಿವರಗಳು ನಾಡಿನ ಜ್ಞಾನ ಪರಂಪರೆಗೆ ಅನುಗುಣವಾಗಿವೆಯೆ? ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುತ್ತವೆಯೆ? ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿವೆಯೆ? ಮಕ್ಕಳಿಗೆ ಕಲಿಸುವ ಸಂಗತಿಗಳು ದೇಶದ ಹಾಗೂ ಜಗತ್ತಿನ ವಿವಿಧ ಜ್ಞಾನ ಶಾಖೆಗಳ ವಿದ್ವಾಂಸರು ಒರೆಗೆ ಹಚ್ಚಿ, ಪರಿಶೀಲಿಸಿ ಸರ್ವ ಸಮ್ಮತಿಯ ಅಭಿಪ್ರಾಯಕ್ಕೆ ಬರಲಾಗಿದೆಯೆ? ಎಂಬ ಅಂಶಗಳೆಲ್ಲ ಮೊದಲು ಇತ್ಯರ್ಥವಾಗಬೇಕಾಗುತ್ತದೆ ಎಂದರು.

ಇಲ್ಲದಿದ್ದರೆ ಯುಪಿಎಸ್‍ಸಿ, ಕೆಪಿಎಸ್‍ಸಿ ಮುಂತಾದ ಪರೀಕ್ಷಾ ಪ್ರಾಧಿಕಾರಗಳು ನಡೆಸುವ ಪರೀಕ್ಷೆಗಳಲ್ಲಿ ಹಾಗೂ ಜಗತ್ತಿನ ಬೇರೆ ಬೇರೆ ಕಾಲೇಜು, ವಿಶ್ವ ವಿದ್ಯಾಲಯಗಳಿಗೆ ಕಲಿಯಲು ಇಚ್ಛಿಸುವವರು ಸತ್ಯ ಸಂಗತಿಗಳಿಗೆ ವಿರುದ್ಧವಾದ ಅಂಶಗಳನ್ನು ಬರೆದು ಅಲ್ಲಿನ ಪರೀಕ್ಷೆಗಳಲ್ಲಿ ಪಾಸು ಮಾಡಲು ಸಾಧ್ಯವಿಲ್ಲ. ಆದ್ದರಿಂದ ಸಮಗ್ರ ತಿದ್ದುಪಡಿಗಳನ್ನು ಪರಿಶೀಲನೆ ಮಾಡಿದ ನಂತರವೇ ಮಕ್ಕಳಿಗೆ ಪಠ್ಯ ಪುಸ್ತಕಗಳನ್ನು ವಿತರಿಸಬೇಕು. ಪ್ರಸ್ತುತ ಸರ್ಕಾರ ಮಾಡಿರುವ ದುರುದ್ದೇಶದ ಅವಾಂತರಗಳನ್ನು ಪುಸ್ತಕಗಳಲ್ಲಿ ಸರಿಪಡಿಸದೆ ಎಸ್‍ಡಿಎಂಸಿಗಳು ಸ್ವತಃ ಝೆರಾಕ್ಸ್ ಮಾಡಿ ಮಕ್ಕಳಿಗೆ ವಿತರಿಸಲು ಹೇಳುತ್ತಿರುವುದು ಅರಾಜಕವಾದ ನಡೆಯಾಗಿದೆ ಎಂದು ಕಿಡಿಕಾರಿದ್ದಾರೆ.

ಹೀಗಾಗಿ ಕೂಡಲೆ ಅವಾಂತರಕಾರಿಯಾಗಿರುವ ಪುಸ್ತಕಗಳನ್ನು ವಾಪಸ್ಸು ಪಡೆದು, ಈ ಎಲ್ಲ ಅವಾಂತರಗಳು ಸರಿಯಾಗುವವರೆಗೆ ಬರಗೂರು ಸಮಿತಿಯು ಸಿದ್ಧಪಡಿಸಿದ್ದ ಪಠ್ಯ ಪುಸ್ತಕಗಳನ್ನೇ ಮುಂದುವರಿಸಬೇಕು. ಈ ಅವಾಂತರಗಳಿಗೆಲ್ಲ ಕಾರಣ ಕರ್ತರಾಗಿರುವವರೆಲ್ಲರಿಂದ ನಷ್ಟ ವಸೂಲಿ ಮಾಡಿ, ಕಾನೂನು ರೀತಿಯ ಕ್ರಮ ತೆಗೆದುಕೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.

ಇದನ್ನೂ ಓದಿ | ತೇಪೆ ಹಾಕಿದ ಬಟ್ಟೆ ಅಸಲಿಯಾಗದು: ಪಠ್ಯ ತಿದ್ದೋಲೆಗೆ ನಿರಂಜನಾರಾಧ್ಯ ಆಕ್ರೋಶ

Exit mobile version