Site icon Vistara News

Boy death | ನಿರ್ಮಾಣ ಹಂತದ ಕಟ್ಟಡದಲ್ಲಿ ಲಿಫ್ಟ್ ಅಳವಡಿಸಲು ತೆಗೆದಿದ್ದ ಗುಂಡಿಗೆ ಬಿದ್ದು ಬಾಲಕ ಸಾವು

ಗಗನ್‌ ಸಾವು

ಹಾಸನ: ನಿರ್ಮಾಣ ಹಂತದ ಕಟ್ಟಡದಲ್ಲಿ ಲಿಫ್ಟ್ ಅಳವಡಿಸಲು ತೆಗೆದಿದ್ದ ಗುಂಡಿಗೆ ಬಿದ್ದು ಬಾಲಕನೊಬ್ಬ ಮೃತಪಟ್ಟ ದಾರುಣ ಘಟನೆ (Boy death) ಹಾಸನ ಜಿಲ್ಲೆಯ ಹೊಳೆನರಸೀಪುರ ಪಟ್ಟಣದ ಕೋಟೆ ರಸ್ತೆಯಲ್ಲಿ ನಡೆದಿದೆ. ಗಗನ್ ಎಂಬ ಆರು ವರ್ಷದ ಬಾಲಕ ಮೃತ ದುರ್ದೈವಿ.

ಗಗನ್‌ನ ಅಜ್ಜ-ಅಜ್ಜಿ ಆಧಾರ್‌ ಕಾರ್ಡ್‌ ಮಾಡಿಸಲೆಂದು ಹೊಳೆ ನರಸೀಪುರ ಪಟ್ಟಣಕ್ಕೆ ಬಂದಿದ್ದರು. ಗಗನ್‌ ತಾನೂ ಬರುವುದಾಗಿ ಹಠ ಹಿಡಿದಿದ್ದ. ಹೀಗಾಗಿ ಅವನನ್ನೂ ಜತೆಗೆ ಕರೆದುಕೊಂಡು ಬಂದಿದ್ದರು. ಅಜ್ಜ, ಅಜ್ಜಿ ಆಧಾರ್‌ ಕಾರ್ಡ್ ಮಾಡಿಸುತ್ತಿದ್ದಾಗ ಹೊರಗಡೆ ಆಟವಾಡುತ್ತಿದ್ದ ಗಗನ್ ಒಮ್ಮಿಂದೊಮ್ಮೆಗೇ ನಾಪತ್ತೆಯಾಗಿದ್ದ.

ಆಧಾರ್‌ಕಾರ್ಡ್ ಮಾಡಿಸಿ ಹೊರ ಬಂದು ನೋಡಿದಾಗ ಗಗನ್‌ ಕಾಣಲಿಲ್ಲ ಎಂದು ಅಜ್ಜ- ಅಜ್ಜಿ ಇಬ್ಬರೂ ಅಲ್ಲಿಲ್ಲಿ ಹುಡುಕಾಡಿದರು. ಈ ವೇಳೆ ನಿರ್ಮಾಣ ಹಂತದ ಕಟ್ಟಡದಲ್ಲಿ ಲಿಫ್ಟ್ ಗಾಗಿ ತೆಗೆದಿದ್ದ ಗುಂಡಿಯಲ್ಲಿ ಗಗನ್ ಶವ ಪತ್ತೆಯಾಗಿದೆ. ಗಗನ್‌ ಆಟವಾಡುವಾಗ ಆಯತಪ್ಪಿ ಗುಂಡಿಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ.

ಅಮ್ಮನಿಲ್ಲದ ತಬ್ಬಲಿ ಮಗು
ಗಗನ್‌ನ ತಾಯಿ ಆತನ ಬಾಲ್ಯದಲ್ಲೇ ತೀರಿಕೊಂಡಿದ್ದು ಅಜ್ಜ- ಅಜ್ಜಿಯ ಪ್ರೀತಿಯಲ್ಲಿ ಬೆಳೆದಿದ್ದ. ಗಗನ್‌ನ ತಂದೆ ಮಿಲಿಟರಿಯಲ್ಲಿ ಕರ್ತವ್ಯದಲ್ಲಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Road Accident | ಬೊಲೆರೊ ವಾಹನ ಬೈಕ್‌ಗೆ ಡಿಕ್ಕಿ, ಶಿಕ್ಷಕ ಸಾವು

Exit mobile version