Site icon Vistara News

Techie Death : ಕುಡಿತದ ಅಮಲಿನಲ್ಲಿ 33ನೇ ಮಹಡಿ ಮೇಲಿಂದ ಹಾರಿ ಬಿದ್ದ ಟೆಕ್ಕಿ ಸಾವು

Techie Death party

ಬೆಂಗಳೂರು: ಕುಡಿತದ ಅಮಲಿನಲ್ಲಿ (Alcohol Effect) ಕಂಡ ಕಂಡವರ ಮೇಲೆ ಹಲ್ಲೆ ಮಾಡುವವರನ್ನು ನೋಡಿದ್ದೇವೆ, ಕೊಲೆ ಮಾಡುವವರನ್ನು ನೋಡಿದ್ದೇವೆ. ಕುಡಿದ ಮೇಲೆ ಅವರಿಗೆ ತಾವು ಏನು ಮಾಡುತ್ತಿದ್ದೇವೆ ಅನ್ನೋದೇ ತಿಳಿಯದೆ ಈ ರೀತಿ ಮಾಡುತ್ತಾರೆ ಅಂತೇವೆ. ಆದರೆ, ಇಲ್ಲೊಬ್ಬ ಕುಡಿತದ ಅಮಲಿನಲ್ಲಿ ಏನು ಮಾಡುತ್ತಿದ್ದೇನೆ ಎನ್ನುವ ಅರಿವೇ ಇಲ್ಲದೆ, 33ನೇ ಮಹಡಿಯಿಂದ (Techie Death) ಬಿದ್ದು ಮೃತಪಟ್ಟಿದ್ದಾನೆ.

ಇಂತಹದೊಂದು ದುರ್ಘಟನೆ ಬೆಂಗಳೂರಿನ ಕೆ.ಆರ್.ಪುರಂ ಸಮೀಪದ ಕೊಡಿಗೆಹಳ್ಳಿಯಲ್ಲಿ ನಡೆದಿದೆ. ಉತ್ತರ ಪ್ರದೇಶ ಮೂಲದ ದಿಪಾಂಶು ಶರ್ಮಾ (27) ಮೃತ ದುರ್ದೈವಿ.

ಮೃತ ದಿಪಾಂಶು

ದಿಪಾಂಶು ತನ್ನ ಮೂವರು ಸ್ನೇಹಿತರೊಂದಿಗೆ ಎಣ್ಣೆ ಪಾರ್ಟಿ ಮಾಡುತ್ತಿದ್ದ. ಕುಡಿದ ಮತ್ತಿನಲ್ಲಿ ಬಾಲ್ಕನಿ ಬಳಿ ಬಂದಿದ್ದ. ಬಳಿಕ ಅದೇನು ತೋಚಿತೋ ಏಕಾಏಕಿ 33ನೇ ಮಹಡಿಯಿಂದ ಜಿಗಿದಿದ್ದಾನೆ. 33ನೇ ಮಹಡಿ ಮೇಲಿಂದ ಜಿಗಿದ ಪರಿಣಾಮ ಗಂಭೀರ ಗಾಯಗೊಂಡಿದ್ದ ದಿಪಾಂಶುನನ್ನು ಕೂಡಲೇ ಆತನ ಸ್ನೇಹಿತರು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ತಲೆಗೆ ಗಂಭೀರ ಪೆಟ್ಟಾಗಿದ್ದರಿಂದ ದಿಪಾಂಶು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಕೆ.ಆರ್. ಪುರಂ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ: KSRTC Bus : ಊರಿಂದ ಜನ ಕರೆಸಿ ಡ್ರೈವರ್‌ಗೆ ಹೊಡೆಸಿದ ಮಹಿಳೆಯರು!; ಮಾಡದ ತಪ್ಪಿಗೆ ಶಿಕ್ಷೆ!

ಫುಲ್ ಟೈಟ್‌! ಕುಡಿತದ ಅಮಲಿನಲ್ಲಿ ಕೈಯನ್ನೇ ಬ್ಲೇಡ್‌ನಿಂದ ಕತ್ತರಿಸಿಕೊಂಡ ಯುವಕ ಸಾವು

ಕುಡಿತದ ಅಮಲಿನಲ್ಲಿ ಏನು ಮಾಡುತ್ತಿದ್ದೇನೆ ಎನ್ನುವ ಅರಿವೇ ಇಲ್ಲದೆ, ತನ್ನನ್ನೇ ತಾನು ಬ್ಲೇಡಿನಿಂದ (Man injures hand with blade) ಕೊಯ್ದುಕೊಂಡಿದ್ದ ಘಟನೆಯು ನಡೆದಿತ್ತು.

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದ ನಿವಾಸಿಯಾಗಿರುವ ಪರಶುರಾಮ ತೇಲಸಂಗ (32) ಎಂಬಾತ ಕುಡಿತದ ಅಮಲಿನಲ್ಲಿ ಬ್ಲೇಡಿನಿಂದ ಕೊಯ್ದುಕೊಂಡಿದ್ದ. ಅವನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆಯಾದರೂ ಅತಿಯಾದ ರಕ್ತಸ್ರಾವದಿಂದ ಪ್ರಾಣ ಕಳೆದುಕೊಂಡಿದ್ದ.

ಪರಶುರಾಮ ತೇಲಸಂಗನಿಗೆ ಕುಡಿತದ ಹುಚ್ಚು ಜೋರಾಗಿತ್ತು. ಕುಡಿದು ಕಂಡ ಕಂಡಲ್ಲಿ ಬೀಳುತ್ತಿದ್ದ. ಅವರಿವರ ಜತೆ ಜಗಳ ಮಾಡುತ್ತಿದ್ದ. ಈ ನಡುವೆ ಕುಡಿದ ಮತ್ತಿನಲ್ಲೇ ಆತ ಭಾನುವಾರ ರಾತ್ರಿ ದೇವಸ್ಥಾನಕ್ಕೂ ಹೋಗಿದ್ದ!

ಭಾನುವಾರ ರಾತ್ರಿ ಸುಮಾರು 9 ಗಂಟೆಯ ವೇಳೆಗೆ ಚೆನ್ನಾಗಿ ಕುಡಿದುಕೊಂಡು ಗ್ರಾಮದ ಲಕ್ಷ್ಮೀ ದೇವಸ್ಥಾನಕ್ಕೆ ಹೋಗಿದ್ದ. ಆತ ಅಲ್ಲಿ ಬ್ಲೆಡ್‌ನಿಂದ ಕೈ ಕೊರೆದುಕೊಂಡಿದ್ದ. ಯಾರಿಗೋ ಸವಾಲು ಹಾಕಿ ಆತ ಈ ರೀತಿ ಬ್ಲೇಡ್‌ನಿಂದ ಕೊಯ್ದುಕೊಂಡಿದ್ದ ಎಂದು ಹೇಳಲಾಗಿದೆ. ಕೊಯ್ದುಕೊಂಡಾಗ ರಕ್ತ ಛಿಲ್ಲನೆ ಚಿಮ್ಮಿದೆ. ಇದನ್ನು ನೋಡಿದ ಸ್ಥಳೀಯರು ಆತನನ್ನು ಅಥಣಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಿಸದೆ ಸಾವು ಸಂಭವಿಸಿತ್ತು.

ಕಾಗವಾಡ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಇದಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಕುಡಿತ ಮತ್ತು ಮಾದಕ ವಸ್ತುಗಳ ಮತ್ತಿನಲ್ಲಿ ಕೆಲವರಿಗೆ ಬ್ಲೇಡಿನಿಂದ ಕೊಯ್ದುಕೊಂಡರೂ ನೋವಿನ ಅರಿವೇ ಆಗುವುದಿಲ್ಲವಂತೆ. ಹಾಗಂತ ರಕ್ತಸ್ರಾವ ಶುರುವಾದರೆ ನಿಲ್ಲುತ್ತದಾ? ನಿಲ್ಲುವುದಿಲ್ಲ. ಹೀಗಾಗಿ ಆತ ಪ್ರಾಣ ಕಳೆದುಕೊಂಡಿದ್ದಾನೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version