Site icon Vistara News

Theft Case : ಕಾಲು ಉಳುಕಿದೆ ಎಂದು ಮನೆಗೆ ಬಂದ; ಮನೆಯೊಡತಿಯ ಕತ್ತು ಕೊಯ್ದ ಕಳ್ಳ!

Theft Case in bengaluru rural

ಆನೇಕಲ್: ಕಾಲು ಉಳುಕಿದೆ ಎಂದು ಮನೆಗೆ ಬಂದ ಕಳ್ಳನೊಬ್ಬ (Theft Case) ಮನೆಯೊಡತಿಯ ಕತ್ತು ಕೊಯ್ದು ಚಿನ್ನಾಭರಣ ದೋಚಿದ್ದಾನೆ. ಆನೇಕಲ್ ಪಟ್ಟಣದ ಲಕ್ಷ್ಮೀ ಚಿತ್ರಮಂದಿರ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಅಕ್ಕಯ್ಯಮ್ಮ ಎಂಬುವವರು ಗಂಭೀರ ಗಾಯಗೊಂಡಿದ್ದಾರೆ.

ವೃದ್ದೆ ಅಕ್ಕಯ್ಯಮ್ಮ ಹಾಗೂ ಪತಿ ನಾರಾಯಾಣಾಚಾರಿ ಕೈ-ಕಾಲು ಉಳುಕಿದರೆ ಮಂತ್ರ ಹಾಕಿ ಉಳುಕು ತೆಗೆಯುತ್ತಿದ್ದರು. ಕಳೆದ ಶನಿವಾರ ಉಳುಕು ಮಂತ್ರ ಹಾಕಿ ಎಂದು ವೃದ್ಧರ ಮನೆಗೆ ಕಳ್ಳನೊಬ್ಬ ಬಂದಿದ್ದ. ಮಂತ್ರ ಹಾಕಿಸಿಕೊಂಡು 50 ರೂಪಾಯಿ ಕೊಟ್ಟು ಹೋಗಿದ್ದ. ವೃದ್ದರು ಮಾತ್ರ ಮನೆಯಲ್ಲಿ ಇರುವುದನ್ನು ಖಚಿತ ಪಡಿಸಿಕೊಂಡ ಖದೀಮ ಹೊಂಚು ಹಾಕಿದ್ದ.

ಮತ್ತೆ ಸೋಮವಾರ ಬೆಳಗ್ಗೆ 8.30ರ ಸುಮಾರಿಗೆ ಮನೆಗೆ ಬಂದವನೇ ನೀವು ಮಂತ್ರ ಹಾಕಿದ್ದಕ್ಕೆ ನಮ್ಮ ಮಗು ಸಾವಿಗೀಡಾಗಿದೆ ಎಂದಿದ್ದ. ಮಾತಾಡುತ್ತಲೇ ಏಕಾಏಕಿ ಮನೆಯ ಬಾಗಿಲು ಹಾಕಿ, ಮನೆಯಲ್ಲಿರುವ ಒಡವೆ ಕೊಡಿ ಎಂದು ಬೆದರಿಕೆ ಹಾಕಿದ್ದ. ಒಡವೆ ನೀಡದೆ ಇದ್ದಾಗ ಈ ಮೊದಲೆ ತಂದಿದ್ದ ಕುಡಗೋಲಿನಿಂದ ವೃದ್ದೆ ಅಕ್ಕಯ್ಯಮ್ಮರ ಕತ್ತು ಕೊಯ್ದು ಮಾಂಗಲ್ಯ ಸರ ಕಿತ್ತೊಯ್ದಿದ್ದಾನೆ.

ಇದನ್ನೂ ಓದಿ: Love Failure: ಅವನನ್ನು ಕರ್ಕೊಂಡು ಬನ್ನಿ, ಇಲ್ಲದಿದ್ದರೆ ಮೇಲಿಂದ ಹಾರ್ತೀನಿ!

ಗಂಭೀರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ವೃದ್ಧೆಯ ಕೂಗಾಟ ಕೇಳಿ ಅಕ್ಕ ಪಕ್ಕದ ಮನೆಯ ನಿವಾಸಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಅಕ್ಕಯ್ಯಮ್ಮಗೆ ಗಂಭೀರ ಗಾಯವಾಗಿದ್ದು, ನಾರಾಯಣಾಚಾರಿಗೆ ಸಣ್ಣಪುಟ್ಟ ಗಾಯದಿಂದ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಇಬ್ಬರನ್ನು ಆನೇಕಲ್ ಪಟ್ಟಣದ ವಿಜಯ್ ನರ್ಸಿಂಗ್ ಹೋಂ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆಯನ್ನು ನೀಡಲಾಗುತ್ತಿದೆ.

ವೇಷ ಬದಲಿಸಿ ಬಂದ ಕಳ್ಳ

ಕೃತ್ಯ ಎಸಗಿ ಅಲ್ಲಿಂದ ಓಡಿ ಹೋದ ಕಳ್ಳ ಆಸ್ಪತ್ರೆ ಆವರಣದ ಒಳಗೆ ಹೋಗಿದ್ದಾನೆ. ನಂತರ ತಾನು ಧರಿಸಿದ್ದ ಶರ್ಟ್‌ ಬದಲಿಸಿಕೊಂಡು ಏನು ಆಗಿಲ್ಲ ಎಂಬಂತೆ ಹೊರ ಬಂದಿದ್ದಾನೆ. ಜರ್ಕಿನ್ ಬಿಚ್ಚಿ ಇನ್ಶರ್ಟ್ ಮಾಡಿಕೊಂಡು ಆಸ್ಪತ್ರೆ ಆವರಣದಿಂದ ಹೊರಬಂದು ಪರಾರಿ ಆಗಿದ್ದಾನೆ. ಕಳ್ಳನ ಚಲನವಲನವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಆನೇಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಖದೀಮನಿಗಾಗಿ ಹುಡುಕಾಟವನ್ನು ನಡೆಸುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

Exit mobile version