Site icon Vistara News

Tragic death | ವಾಕಿಂಗ್‌ ಹೊರಟಿದ್ದ ಯುವಕನಿಗೆ ಅಪರಿಚಿತ ವಾಹನ ಡಿಕ್ಕಿ: ಎರಡು ತುಂಡಾಗಿ ಬಿದ್ದ ದೇಹ

Terdal

ತೇರದಾಳ (ಬಾಗಲಕೋಟೆ): ಬೆಳಗ್ಗೆ ವಾಕಿಂಗ್‌ ಹೊರಟಿದ್ದ ಯುವಕನೊಬ್ಬನಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಬಾಗಲಕೋಟೆ ಜಿಲ್ಲೆಯ ತೇರದಾಳ ಪಟ್ಟಣದ ದಾನಿಗೊಂಡ ಆಸ್ಪತ್ರೆ ಬಳಿ ಘಟನೆ ನಡೆದಿದೆ. ಪಟ್ಟಣದ ಸವದಿ ನಗರದ ನಿವಾಸಿಯಾಗಿರುವ ಸುಜಿತ್ ಗಿರಿಮಲ್ಲಪ್ಪ ತಮದಡ್ಡಿ(೨೬) ಮೃತರು.

ಸುಜಿತ್‌ ಅವರು ಬೆಳಗ್ಗೆ ಎದ್ದು ವಾಕಿಂಗ್‌ ಹೋಗುತ್ತಿದ್ದರು. ರಸ್ತೆಯ ಬದಿಯಲ್ಲಿ ಸಾಗುತ್ತಿದ್ದ ಅವರಿಗೆ ಯಾವುದೋ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ನೆಲಕ್ಕೆ ಉರುಳಿದ ಅವರ ಮೇಲೆಯೇ ವಾಹನ ಹರಿದಿದೆ. ಅವರ ದೇಹದ ಕೆಳಗಿನ ಭಾಗ ಜರ್ಜರಿತವಾಗಿದ್ದು, ಹೆಚ್ಚು ಕಡಿಮೆ ಮೇಲ್ಭಾಗ ಮತ್ತು ಕೆಳಭಾಗ ಬೇರೆ ಬೇರೆ ಆದಂತಿದೆ.

ತೇರದಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಡಿಕ್ಕಿ ಹೊಡೆದು ಪರಾರಿಯಾಗಿರುವ ವಾಹನವನ್ನು ಪತ್ತೆ ಹಚ್ಚಲು ಪ್ರಯತ್ನಿಸಲಾಗುತ್ತಿದೆ. ಸ್ಥಳೀಯ ಕಟ್ಟಡಗಳಲ್ಲಿರುವ ಸಿಸಿ ಟಿವಿ ಫೂಟೇಜ್‌ಗಳ ಪರಿಶೀಲನೆಯಿಂದ ಡಿಕ್ಕಿ ಹೊಡೆದ ವಾಹನ ಪತ್ತೆಹಚ್ಚಬಹುದು ಎಂದು ಹೇಳಲಾಗುತ್ತಿದೆ.

ಇದು ಕೇವಲ ಅಪಘಾತವೇ ಅಥವಾ ಬೇರೆ ಏನಾದರೂ ಷಡ್ಯಂತ್ರಗಳು ಇವೆಯೇ ಎನ್ನುವ ಬಗ್ಗೆಯೂ ಪರಿಶೀಲನೆ ನಡೆಯುತ್ತಿದೆ.

ಇದನ್ನೂ ಓದಿ | Accident | ಕ್ಯಾಂಟರ್‌ ಡಿಕ್ಕಿ, ಪಾದಚಾರಿ ಸಾವು

Exit mobile version