Site icon Vistara News

ಮುಕ್ತಿ ಬೇಕೆಂದು ʼಅರುಂಧತಿʼ ಸಿನಿಮಾ ಶೈಲಿಯಲ್ಲಿ ಬೆಂಕಿ ಹಚ್ಚಿಕೊಂಡ ಯುವಕ

arundhathi

ತುಮಕೂರು: ತೆಲುಗಿನ ʻಅರುಂಧತಿʼ ಸಿನಿಮಾ ನೋಡಿ ಚಿತ್ರದಲ್ಲಿರುವಂತೆಯೇ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಅರುಂಧತಿ ಸಿನಿಮಾ ನೋಡಿ, ಮುಕ್ತಿ ಬೇಕೆಂದು ಈತ ಮೈಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. 22 ವರ್ಷದ ರೇಣುಕಾ ಆತ್ಮಹತ್ಯೆಗೆ ಯತ್ನಿಸಿದ ಯುವಕ.‌

ತುಮಕೂರು ಮಧುಗಿರಿ ತಾಲ್ಲೂಕು ಗಿಡ್ಡಯ್ಯನಪಾಳ್ಯದಲ್ಲಿ ಘಟನೆ ನಡೆದಿದೆ. ಗಿಡ್ಡಯ್ಯನಪಾಳ್ಯದ ನಿವಾಸಿ ಸಿದ್ದಪ್ಪ ಎಂಬುವವರ ಮಗನಾದ ರೇಣುಕಾ, ತುಮಕೂರು ನಗರದಲ್ಲಿ ಪಿಯುಸಿ ಓದುತ್ತಿದ್ದ. ತುಂಬಾ ಸಿನಿಮಾ ನೋಡುತ್ತಿದ್ದ ಈತ ನಿನ್ನೆ ಕಾಲೇಜು ಮುಗಿಸಿಕೊಂಡು ಗ್ರಾಮಕ್ಕೆ ವಾಪಸಾಗಿದ್ದು, ಮನೆಯಲ್ಲಿ ಅರುಂಧತಿ ಸಿನಿಮಾ ವೀಕ್ಷಿಸಿದ್ದ. ‌

ಇದಾದ ಬಳಿಕ ಪುರವರಕ್ಕೆ ತೆರಳಿ ಬಂಕ್‌ನಿಂದ 20 ಲೀಟರ್ ಪೆಟ್ರೋಲ್ ತಂದಿದ್ದ. ತಂದೆಗೆ ಸೇರಿದ ರೇಷ್ಮೆ ತೋಟದಲ್ಲಿ ಒಂದು ಲೀಟರ್‌ ಪೆಟ್ರೋಲ್ ಸುರಿದುಕೊಂಡು ಬೆಂಕಿ‌ ಹಚ್ಚಿಕೊಂಡ. ಬೆಂಕಿ ಹಚ್ಚಿಕೊಂಡಿದ್ದನ್ನು ನೋಡಿದ ಪೋಷಕರು ತಕ್ಷಣವೇ ಬಳಿಗೆ ಧಾವಿಸಿ ಬೆಂಕಿ ನಂದಿಸಿ ಮಗನ ಪ್ರಾಣ ರಕ್ಷಿಸಿದ್ದಾರೆ. ಯಾಕೆ ಹೀಗೆ ಮಾಡಿದೆ ಎಂದು ಕೇಳಿದಾಗ, ʼʼನನಗೆ ಮುಕ್ತಿ ಬೇಕು, ಮುಕ್ತಿ ಬೇಕುʼʼ ಎಂದು ಬಡಬಡಿಸಿದ್ದಾನೆ.

ರೇಣುಕಾನಿಗೆ ಮಧುಗಿರಿ ಹಾಗೂ ತುಮಕೂರಿನಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ‌ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಕೊಡಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಮದುವೆಯಾದ ಮೂರೇ ತಿಂಗಳಲ್ಲಿ ವಧು ಆತ್ಮಹತ್ಯೆ, ಪ್ರಿಯಕರನಿಂದ ದೂರ ಮಾಡಿದ್ದಕ್ಕೆ ಬೇಸರ

Exit mobile version