Site icon Vistara News

Road Accident : ಚಲಿಸುತ್ತಿದ್ದ ಸ್ಕೂಟರ್‌ ಮೇಲೆ ತುಂಡಾಗಿ ಬಿದ್ದ ವಿದ್ಯುತ್‌ ತಂತಿ; ಸವಾರನ ಕುತ್ತಿಗೆಗೆ ತಂತಿ ಸಿಲುಕಿ ಗಂಭೀರ

Road Accident

ಉಡುಪಿ: ಚಲಿಸುತ್ತಿದ್ದ ಸ್ಕೂಟರ್ (Road Accident) ಮೇಲೆ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದು, ಸವಾರನ ಕುತ್ತಿಗೆ ಸಿಲುಕಿದ ಘಟನೆ ಉಡುಪಿಯ ಮಣಿಪಾಲದಲ್ಲಿ ನಡೆದಿದೆ. ಮಣಿಪಾಲದಲ್ಲಿ ಮೆಸ್ಕಾಂ ಅವಾಂತರಕ್ಕೆ ಕುಟುಂಬವೊಂದು ಸಂಕಷ್ಟವನ್ನು ಎದುರಿಸುತ್ತಿದೆ.

ಸವಾರ ಶಶಿಧರ ಶೆಟ್ಟಿ ಎಂಬುವವರು ಗಂಭೀರ ಗಾಯಗೊಂಡಿದ್ದಾರೆ. ಶಶಿಧರ ಮಣಿಪಾಲ ಇಂಡಸ್ಟ್ರಿಯಲ್ ಏರಿಯಾದ ಮಣಿಪಾಲ ಸಂಸ್ಥೆಯ ಯುನಿಟ್ 5 ಉದ್ಯೋಗಿಯಾಗಿದ್ದಾರೆ. ಕುಂಜಾರುಗಿರಿ ನಿವಾಸಿಯಾಗಿರುವ ಶಶಿಧರ ಶೆಟ್ಟಿ ಅವರು ಪತ್ನಿ, ಮಗುವಿನೊಂದಿಗೆ ಸ್ಕೂಟರ್‌ನಲ್ಲಿ ಬರುತ್ತಿದ್ದರು. ಮಗನನ್ನು ಶಾಲೆಗೆ ಬಿಡಲು ತೆರಳುತ್ತಿದ್ದರು.

ಅಲೆವೂರಿನಿಂದ ಮಣಿಪಾಲದತ್ತ ಬರುವಾಗ ಇಂಡಸ್ಟ್ರಿಯಲ್ ಏರಿಯ ಬಸ್ ನಿಲ್ದಾಣದ ಬಳಿ ಏಕಾಏಕಿ ಬಂದ ಗಾಳಿ ಸಹಿತ ಮಳೆಗೆ ವಿದ್ಯುತ್‌ ತಂತಿ ತುಂಡಾಗಿದೆ. ಅದೇ ರಸ್ತೆಯಲ್ಲಿ ಬರುತ್ತಿದ್ದ ಶಶಿಧರ ಶೆಟ್ಟಿ ಅವರ ಕುತ್ತಿಗೆ ತಂತಿ ಸುತ್ತುವರಿದ ಪರಿಣಾಮ ಮಗು, ಪತ್ನಿ ಸಮೇತ ಕೆಳಗೆ ಬಿದ್ದಿದ್ದರು.

ಕೂಡಲೇ ಸ್ಥಳೀಯರ ಸಹಾಯದೊಂದಿಗೆ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕಳೆದ ಜುಲೈ 22 ರಂದು ಘಟನೆ ನಡೆದಿದ್ದು, 15 ದಿನ ಕಳೆದರೂ ಇನ್ನು ಆಸ್ಪತ್ರೆಯಲ್ಲಿ ಶಶಿಧರ್‌ ಅವರಿಗೆ ಚಿಕಿತ್ಸೆ ಮುಂದುವರಿದಿದೆ. ಸದ್ಯ ಕುತ್ತಿಗೆ ಕೆಳಭಾಗದಲ್ಲಿ ಸ್ಪರ್ಶ ಜ್ಞಾನವಿಲ್ಲ. ಇತ್ತ ಮೆಸ್ಕಾಂ ಸೂಕ್ತ ಪರಿಹಾರ ನೀಡಲು ನಿರಾಕರಿಸುತ್ತಿದೆ. ಹೀಗಾಗಿ ಕ್ರೌಡ್ ಫಂಡಿಂಗ್ ಮೂಲಕ ಶಶಿಧರ್‌ ಕುಟುಂಬ ಚಿಕಿತ್ಸೆಗೆ ಪ್ರಯತ್ನಿಸುತ್ತಿದೆ. ಸಂಪೂರ್ಣ ಚಿಕಿತ್ಸೆಗೆ ಸುಮಾರು 15 ಲಕ್ಷ ರೂಪಾಯಿ ಅಗತ್ಯತೆ ಇದೆ. ಸರಕಾರದ, ಮೆಸ್ಕಾಂ ಇಲಾಖೆ ಸಹಾಯದ ನಿರೀಕ್ಷೆಯಲ್ಲಿದ್ದಾರೆ.

ಇದನ್ನೂ ಓದಿ: Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

ಹಂಪ್ಸ್ ತಪ್ಪಿಸಲು ಹೋಗಿ ನಿಂತಿದ್ದ ಬೈಕ್‌ಗಳ ಮೇಲೆ ನುಗ್ಗಿದ ಬಸ್

ದಾವಣಗೆರೆಯ ಬಾತಿ ಕೆರೆ ಸಮೀಪ ಹಂಪ್ಸ್ ತಪ್ಪಿಸಲು ಹೋಗಿ ನಿಂತಿದ್ದ ಬೈಕ್‌ಗಳ ಮೇಲೆ ಬಸ್‌ವೊಂದು ನುಗ್ಗಿದೆ. ಕೂದಲೆಳೆ ಅಂತರದಲ್ಲಿ ಬೈಕ್ ಸವಾರರು ಪಾರಾಗಿದ್ದಾರೆ. ಮಳೆ ಎಂದು ಸವಾರರು ಮರದ ಕೆಳಗೆ ನಿಂತಿದ್ದರು. ಈ ವೇಳೆ ದಾವಣಗೆರೆ ಕಡೆಯಿಂದ ಹರಿಹರ ಮಾರ್ಗವಾಗಿ ಹುಬ್ಬಳಿಗೆ ಹೊರಟ್ಟಿದ್ದ ಕೆಎಸ್‌ಆರ್‌ಟಿಸಿ ಬಸ್ ಹಂಪ್ಸ್ ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ, ಪಕ್ಕದಲ್ಲಿ ನಿಂತಿದ್ದ ಬೈಕ್ ಮೇಲೆ ಹತ್ತಿದೆ. ಅಪಘಾತದ ರಭಸಕ್ಕೆ ಮೂರು ಬೈಕ್‌ಗಳು ನಜ್ಜುಗುಜ್ಜಾಗಿದೆ. ಘಟನೆಯಲ್ಲಿ ನಾಲ್ವರಿಗೆ ಗಾಯವಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version