Site icon Vistara News

Honey Bees Attack : ಸಾತೊಡ್ಡಿ ಫಾಲ್ಸ್‌ ವೀಕ್ಷಣೆಗೆ ತೆರಳಿದ್ದ 30ಕ್ಕೂ ಹೆಚ್ಚು ಪ್ರವಾಸಿಗರ ಮೇಲೆ ಜೇನು ದಾಳಿ

Honey bees Attack in karwar

ಕಾರವಾರ: ಜಲಪಾತ ವೀಕ್ಷಣೆಗೆ ತೆರಳಿದ್ದ ಪ್ರವಾಸಿಗರ ಮೇಲೆ ಜೇನು ಹುಳುಗಳು (Honey Bees Attack) ದಾಳಿ ಮಾಡಿವೆ. ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ ಸಾತೊಡ್ಡಿ ಜಲಪಾತದಲ್ಲಿ (Satoddi Falls) ಘಟನೆ ನಡೆದಿದೆ. ಕಳೆದ ಎರಡು ದಿನಗಳಲ್ಲಿ 30ಕ್ಕೂ ಅಧಿಕ ಪ್ರವಾಸಿಗರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಗಂಭೀರ ಗಾಯಗೊಂಡಿದ್ದ ನಾಲ್ವರು ಪ್ರವಾಸಿಗರಿಗೆ ಹುಬ್ಬಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಬೇಸಿಗೆ ಹಿನ್ನೆಲೆಯಲ್ಲಿ ನೀರಲ್ಲಿ ಆಟವಾಡಲು ಸಾತೊಡ್ಡಿ ಫಾಲ್ಸ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಜಲಪಾತದ ಬಳಿಯೇ ಪ್ರವಾಸಿಗರ ಮೇಲೆ ಜೇನುಹುಳಗಳ ದಾಳಿ ಮಾಡಿವೆ.

ಸದ್ಯ ಜೇನುಹುಳುಗಳ ದಾಳಿ ಹಿನ್ನೆಲೆಯಲ್ಲಿ ಜಲಪಾತ ವೀಕ್ಷಣೆಗೆ ಅರಣ್ಯ ಇಲಾಖೆಗೆ ನಿರ್ಬಂಧ ಹೇರಿದೆ. ಬಿಸಗೋಡ ಕ್ರಾಸ್‌ನಲ್ಲಿ ಬ್ಯಾನರ್ ಅಳವಡಿಸಿ ಪ್ರವಾಸಿಗರಿಗೆ ಸೂಚನೆ ನೀಡಿದೆ. ಏ.14ರಿಂದ ಅನಿರ್ದಿಷ್ಟ ಕಾಲದವರೆಗೆ ಜಲಪಾತ ವೀಕ್ಷಣೆಯನ್ನು ನಿರ್ಬಂಧಿಸಲಾಗಿದೆ ಎಂದು ಬ್ಯಾನರ್‌ ಹಾಕಲಾಗಿದೆ. ಇತ್ತ ಜಲಪಾತ ವೀಕ್ಷಣೆಗಾಗಿ ದೂರದೂರಿನಿಂದ ಬಂದು ಪ್ರವಾಸಿಗರು ಬೇಸರದಿಂದ ವಾಪಸ್ ತೆರಳುತ್ತಿದ್ದಾರೆ.

ಇದನ್ನೂ ಓದಿ: Wild Animals Attack : ವ್ಯಾಪಾರಿಯನ್ನು ತುಳಿದು ಕೊಂದ ಕಾಡಾನೆಗಳು; ಆಕಳಿನ ಹೊಟ್ಟೆ ಬಗೆದ ಚಿರತೆ

ಹುಲಿ ‌ಸೆರೆ ಕಾರ್ಯಾಚರಣೆ ವೇಳೆ ಹೆಜ್ಜೇನು ದಾಳಿ; ಬೆದರಿ ಓಡಿ‌ದ ಸಾಕಾನೆ ಭೀಮ

ಕೊಡಗು: ಹುಲಿ‌ ಸೆರೆ (Tiger attack) ಕಾರ್ಯಾಚರಣೆ ಮಾಡುತ್ತಿದ್ದ ತಂಡದ‌ ಮೇಲೆ‌ ಹೆಜ್ಜೇನು ದಾಳಿ (Honeybee Attack) ಮಾಡಿತ್ತು. ಕೊಡಗಿನ ಪೊನ್ನಂಪೇಟೆ ತಾಲೂಕಿನ ಹರಿಹರ ಗ್ರಾಮದಲ್ಲಿ ಘಟನೆ ನಡೆದಿತ್ತು. ಅರಣ್ಯಾಧಿಕಾರಿ ಕನ್ನಂಡ‌ ರಂಜನ್, ಮಾವುತ ಕುಳ್ಳ ಹಾಗೂ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಭೀಮ ಹೆಸರಿನ ಆನೆ ಮೇಲೆ‌ ಜೇನು ಹುಳುಗಳು ಎರಗಿತ್ತು.

ಹರಿಹರ ಗ್ರಾಮದಲ್ಲಿ ನಿನ್ನೆ ಬುಧವಾರ ಹುಲಿಯೊಂದು ಕಾಣಿಸಿಕೊಂಡಿತ್ತು. ವಿಷಯ ತಿಳಿಯುತ್ತಿದ್ದಂತೆ ಅರಣ್ಯಾಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದರು. ಹುಲಿ‌ಸೆರೆಗೆ ಗುರುವಾರ ಕಾರ್ಯಾಚರಣೆ ಆರಂಭಿಸಲಾಗಿತ್ತು. ಎರಡು ಸಾಕು ಆನೆ ಜತೆಗೆ 30ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದರು. ಈ ವೇಳೆ ಏಕಾಏಕಿ ಹೆಜ್ಜೇನು ದಾಳಿ ಮಾಡಿದೆ. ಹೆಜ್ಜೇನು ದಾಳಿಗೆ ಬೆದರಿ ಆನೆ ಭೀಮ ಓಡಿ‌ದ ಘಟನೆ ನಡೆದಿತ್ತು.

ಸದ್ಯ ಅಸ್ವಸ್ಥ ಅರಣ್ಯಾಧಿಕಾರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಸದ್ಯ ಇಂದಿನ ಕಾರ್ಯಾಚರಣೆಗೆ ತಾತ್ಕಾಲಿಕ ಬ್ರೇಕ್‌ ಹಾಕಲಾಗಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version