Site icon Vistara News

Video Viral | ಚಳ್ಳಕೆರೆ ತಹಸೀಲ್ದಾರ್‌ ವರ್ತನೆಗೆ ಜನಾಕ್ರೋಶ; ಕೆರೆ ಕೋಡಿಯಲ್ಲಿ ಬಿದ್ದು ಹೊರಳಾಟ!

video viral

ಚಿತ್ರದುರ್ಗ: ಸತತ ಮಳೆಗೆ ಕೆರೆ ಕೋಡಿ ಬಿದ್ದು ನಾನಾ ಅವಾಂತರವೇ ಸೃಷ್ಟಿಯಾಗಿದೆ. ಹೀಗಿರುವಾಗ ಸ್ಥಳ ಪರಿಶೀಲನೆ ಮಾಡಿ ಸಮಸ್ಯೆ ಬಗೆಹರಿಸಬೇಕಾದ ತಹಸೀಲ್ದಾರ್‌, ಕೋಡಿ ಬಿದ್ದಲ್ಲೇ ಮಲಗಿ ನೀರಲ್ಲಿ ಹೊರಳಾಡಿದ್ದಾರೆ. ಇಲ್ಲಿನ ಚಳ್ಳಕೆರೆ ತಾಲೂಕಿನ ನನ್ನಿವಾಳ ಗ್ರಾಮದ ತಹಸೀಲ್ದಾರ್‌ ಎನ್‌.ರಘುಮೂರ್ತಿ ವರ್ತನೆಗೆ ಜನಾಕ್ರೋಶ ವ್ಯಕ್ತವಾಗಿದೆ.

ಭಾರಿ ಮಳೆಯಿಂದ ನನ್ನಿವಾಳ ಕೆರೆ ಕೋಡಿಬಿದ್ದಿದೆ. ಈ ಸಂದರ್ಭದಲ್ಲಿ ಸ್ಥಳಕ್ಕೆ ತಹಸೀಲ್ದಾರ್‌ ರಘುಮೂರ್ತಿ ಭೇಟಿ ನೀಡಿದ್ದಾರೆ. ಕೆರೆಯನ್ನು ವೀಕ್ಷಿಸಿದ್ದಾರೆ. ಬಳಿಕ ನೀರಿಗಿಳಿದಿದ್ದಾರೆ. ಹಾಗೇ ಏಕಾಏಕಿ ನೀರಿನಲ್ಲಿ ಮಲಗಿ ಹೊರಳಾಡಿದ್ದಾರೆ. ಈ ಸಮಯದಲ್ಲಿ ಅಲ್ಲಿದ್ದವರು ಶಿಳ್ಳೆ ಹಾಕುತ್ತಾ, ಚಪ್ಪಾಳೆ ತಟ್ಟುತ್ತಾ ಜತೆಗೆ ಮಕ್ಕಳನ್ನು ಹರಿಯುವ ಕೋಡಿ ಮಧ್ಯೆ ಮಲಗಿಸಿ ಫೋಟೊಗೆ ಪೋಸ್‌ ಕೊಟ್ಟಿದ್ದಾರೆ. ಈ ವೇಳೆ ತಹಸೀಲ್ದಾರ್‌ ಸಹ ವಿವಿಧ ಭಂಗಿಗಳಲ್ಲಿ ಫೋಟೊಗೆ ಪೋಸ್‌ ನೀಡಿದ್ದಾರೆ.

ಸೆಲ್ಫಿಗೆ ಪೋಸ್‌ ಕೊಟ್ಟ ತಹಸೀಲ್ದಾರ್‌

ನೀರಿಗೆ ಇಳಿಯದಂತೆ ಗ್ರಾಮದವರಿಗೆ ಮುಂಜಾಗ್ರತೆ ಬಗ್ಗೆ ತಿಳಿವಳಿಕೆ ಹೇಳಬೇಕಾದವರೇ ಈ ರೀತಿ ವರ್ತಿಸಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಕಿಡಿಕಾರಿದ್ದಾರೆ. ಕೋಡಿ ಬಿದ್ದ ಸ್ಥಳದಲ್ಲಿ ಮಲಗಿ ಬೇಜವಾಬ್ದಾರಿ ಪ್ರದರ್ಶನ ಮಾಡಿದ್ದಾರೆಂದು ಕಮೆಂಟ್‌ ಮಾಡುತ್ತಿದ್ದಾರೆ.

ಇದನ್ನೂ ಓದಿ | ಮುರುಘಾಶ್ರೀ ಪ್ರಕರಣ | ಶ್ರೀಗಳ ಬಂಧನ ಹಿನ್ನೆಲೆ ಚಿತ್ರದುರ್ಗದಲ್ಲಿ ಹೈ ಅಲರ್ಟ್‌, ಮುಂದಿನ ಪ್ರಕ್ರಿಯೆ ಏನು?

Exit mobile version