Site icon Vistara News

ವಿಜಯನಗರ ವಿವಿ ಪತ್ರಿಕೋದ್ಯಮ ವಿಭಾಗದ ಅಧ್ಯಯನ ಮಂಡಳಿ ರಚನೆ; ಕೋಣೆಮನೆ ಸಹಿತ ಐವರ ನಾಮನಿರ್ದೇಶನ

Hariprakash Konemane

ಬಳ್ಳಾರಿ: ಬಳ್ಳಾರಿಯಲ್ಲಿರುವ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ (Vijayanagara Shri Krishnadevaraya University) ಪತ್ರಿಕೋದ್ಯಮ ವಿಭಾಗದ (Journalism Department) ಅಧ್ಯಯನ ಮಂಡಳಿಯನ್ನು (Studies Committee) ರಚಿಸಿ ಆದೇಶ ಹೊರಡಿಸಲಾಗಿದೆ. ವಿಸ್ತಾರ ನ್ಯೂಸ್‌ನ ಸಿಇಒ ಮತ್ತು ಪ್ರಧಾನ ಸಂಪಾದಕರಾದ ಹರಿಪ್ರಕಾಶ್‌ ಕೋಣೆಮನೆ (Hariprakash Konemane) ಸೇರಿದಂತೆ ಐವರನ್ನು ಅಧ್ಯಯನ ಮಂಡಳಿಗೆ ನಾಮ ನಿರ್ದೇಶನ (Five members nominated) ಮಾಡಲಾಗಿದೆ.

ವಿವಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ವಿಭಾಗದ (Journalism and Mass communication studies department) ಸ್ನಾತಕ ಮತ್ತು ಸ್ನಾತಕೋತ್ತರ ಪದವಿಯ ಸಂಯುಕ್ತ ಅಧ್ಯಯನ ಮಂಡಳಿಯನ್ನು ಕುಲಪತಿಗಳ ಸೂಚನೆಯಂತೆ ರಚಿಸಲಾಗಿದೆ. ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯಿದೆ -2000ರ ನಿಯಮ 33ರನ್ವಯ ಹಾಗೂ ವಿಶ್ವವಿದ್ಯಾಲಯದ ಅಧ್ಯಯನ ಮಂಡಳಿಯ ಪರಿ ನಿಯಮಾವಳಿ (3) ಮತ್ತು (5)ರ ಪ್ರಕಾರ ಇದರ ರಚನೆಯಾಗಿದೆ.

ಅಧ್ಯಯನ ಮಂಡಳಿಗೆ ನಾಮನಿರ್ದೇಶನಗೊಂಡ ಸದಸ್ಯರು ಇವರು

1.ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ ಇದರ ಸಮಾಜ ವಿಜ್ಞಾನ ನಿಕಾಯದ ಡೀನ್‌ ಈ ಅಧ್ಯಯನ ಮಂಡಳಿಯ ಅಧ್ಯಕ್ಷರಾಗಿರುತ್ತಾರೆ.

2. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿರುವ ಪ್ರಾಧ್ಯಾಪಕ ಪ್ರೊ. ಜೆ.ಎಮ್‌. ಚಂದುನವರ್‌ ಅವರನ್ನು ಬಾಹ್ಯ ಸದಸ್ಯರಾಗಿ ನಾಮಕರಣ ಮಾಡಲಾಗಿದೆ.

3.ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಸತೀಶ್‌ ಕುಮಾರ್‌ ಅವರು ಅಧ್ಯಯನ ಮಂಡಳಿಯ ಬಾಹ್ಯ ಸದಸ್ಯರಾಗಿರುತ್ತಾರೆ.

4. ವಿಸ್ತಾರ ಮೀಡಿಯಾ ಪ್ರೈವೆಟ್‌ ಲಿಮಿಟೆಡ್‌ನ ಸಿಇಒ ಮತ್ತು ಪ್ರಧಾನ ಸಂಪಾದಕರಾಗಿರುವ ಹರಿಪ್ರಕಾಶ್‌ ಕೋಣೆಮನೆ ಅವರು ವಿಶೇಷ ಆಹ್ವಾನಿತರಾಗಿರುತ್ತಾರೆ.

5. ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ ಇದರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿರುವ ರಾಕೇಶ್‌ ವಿ. ತಾಳಿಕೋಟೆ ಅವರು ಆಂತರಿಕ ಸದಸ್ಯರಾಗಿರುತ್ತಾರೆ.

ಸದಸ್ಯರ ಅಧಿಕಾರಾವಧಿ ಎಷ್ಟು?

ಕುಲಪತಿಗಳ ಅನುಮೋದನೆಯಂತೆ ನಾಮ ನಿರ್ದೇಶನಗೊಂಡಿರುವ ಈ ಸದಸ್ಯರ ಅಧಿಕಾರಾವಧಿಯು ಅಧಿಸೂಚನೆ ಪ್ರಕಟಗೊಂಡ ದಿನದಿಂದ ಮೂರು ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಜಾರಿಯಲ್ಲಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ : Vishwadarshana Education Society : ಡಾ. ವಿಜಯ ಸಂಕೇಶ್ವರ ಮೀಡಿಯಾ ಸ್ಕೂಲ್ ಶೀಘ್ರ ಕಾರ್ಯಾರಂಭ

ನೂತನ ಕುಲಸಚಿವರಾಗಿ ರುದ್ರೇಶ್‌ ಎಸ್‌.ಎನ್‌. ಅಧಿಕಾರ ಸ್ವೀಕಾರ

ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ  ನೂತನ ಕುಲಸಚಿವರಾಗಿ ಕೆಎಎಸ್ ಅಧಿಕಾರಿಯಾದ ರುದ್ರೇಶ್ ಎಸ್ ಎನ್ ಅವರು ಕಳೆದ ಸೆಪ್ಟೆಂಬರ್‌ 13ರಂದು ಅಧಿಕಾರ ಸ್ವೀಕರಿಸಿದರು. ರುದ್ರೇಶ್‌ ಅವರು ಈ ಹಿಂದೆ ಬಳ್ಳಾರಿ ಮಹಾನಗರ ಪಾಲಿಕೆಯ ಆಯುಕ್ತರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಕುಲಸಚಿವರಾಗಿದ್ದ ಪ್ರೊ. ಎಸ್‌.ಸಿ. ಪಾಟೀಲ್ ಅವರು ರುದ್ರೇಶ್ ಎಸ್‌.ಎನ್ ಅವರಿಗೆ ಸೆ. 13ರಂದು ಅಧಿಕಾರವನ್ನು ಹಸ್ತಾಂತರ ಮಾಡಿದರು ಎಂದು ವಿವಿ ಪ್ರಕಟಣೆ ತಿಳಿಸಿದೆ.

Exit mobile version