Site icon Vistara News

Vistara News Launch | ಕಾರವಾರದಲ್ಲಿ ವಿಸ್ತಾರ ಕನ್ನಡ ಸಂಭ್ರಮ, ಇದು ಜಿಲ್ಲೆಯ ಹೆಮ್ಮೆಯ ಚಾನೆಲ್ ಎಂಬ ಶ್ಲಾಘನೆ

ಕಾರವಾರ: ಮಾಧ್ಯಮಗಳು ಸುದ್ದಿಗಳನ್ನು ಬಿತ್ತರಿಸದೇ ಇದ್ದರೆ ಜಗತ್ತಿನಲ್ಲಿ ನಡೆಯುತ್ತಿರುವ ವಿದ್ಯಮಾನಗಳು ನಮ್ಮ ಅರಿವಿಗೆ ಬರುವುದಿಲ್ಲ. ಹಾಗಾಗಿ ಮಾಧ್ಯಮಗಳ ಪಾತ್ರ ಮುಖ್ಯ ಎಂದು ಕಾರವಾರ-ಅಂಕೋಲಾ ಶಾಸಕಿ ರೂಪಾಲಿ ನಾಯ್ಕ ಹೇಳಿದರು. ಇದು ಉತ್ತರ ಕನ್ನಡ ಜಿಲ್ಲೆಯವರು ಹೆಮ್ಮೆಪಡುವ ಟಿವಿ ಚಾನೆಲ್ ಎಂದವರು ಅಭಿಪ್ರಾಯಪಟ್ಟರು.

ಕಾರವಾರದ ಗುರುಭವನದಲ್ಲಿ ನಡೆದ ವಿಸ್ತಾರ ಕನ್ನಡ ಸಂಭ್ರಮ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು (Vistara News Launch ) ಮಾತನಾಡಿದರು.
ಮಾಧ್ಯಮಗಳು ಗ್ರಾಮೀಣ ಭಾಗಗಳಲ್ಲಿನ ಸಮಸ್ಯೆಗಳ ಕುರಿತು ವರದಿ ಮಾಡುವುದರ ಜೊತೆಗೆ ಸರ್ಕಾರದ ಯೋಜನೆಗಳ ಕುರಿತು ಗ್ರಾಮೀಣ ಮಟ್ಟದಲ್ಲಿ ಜನರಿಗೆ ತಿಳಿಸುವಂತಹ ಕಾರ್ಯಕ್ರಮಗಳನ್ನು ಮಾಡಬೇಕು. ಭ್ರಷ್ಟಾಚಾರದ ಕುರಿತು ಸತ್ಯಾಸತ್ಯತೆಯನ್ನು ಬಯಲಿಗೆ ಎಳೆಯುವಂತಹ ಕಾರ್ಯ ಮಾಡಬೇಕು. ನೂತನವಾಗಿ ಪ್ರಾರಂಭವಾಗಿರುವ ವಿಸ್ತಾರ ನ್ಯೂಸ್ ರಾಜ್ಯ, ರಾಷ್ಟ್ರಮಟ್ಟದಲ್ಲೂ ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದು ರೂಪಾಲಿ ನಾಯ್ಕ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರಾಮಾ ನಾಯ್ಕ ಮಾತನಾಡಿ, ಇದೀಗ ಎಲ್ಲೆಲ್ಲೂ ವಿದ್ಯುನ್ಮಾನ ಮಾಧ್ಯಮಗಳು ವಿಜ್ರಂಬಿಸುತ್ತಿದ್ದು, ಮುದ್ರಣ ಮಾದ್ಯಮ ಮುದುಡಿ ಹೋಗುತ್ತಿದೆ. ಇಂತಹ ಸಂದರ್ಭದಲ್ಲಿ ನೂತನ ಮಾಧ್ಯಮವಾಗಿ ಪ್ರವೇಶಿಸುತ್ತಿರುವ ವಿಸ್ತಾರ ನ್ಯೂಸ್ ಪ್ರಜಾಪ್ರಭುತ್ವದ ನಾಲ್ಕನೇಯ ಸ್ತಂಭವಾಗಿ ಪ್ರಜೆಗಳ ಆಶೋತ್ತರಗಳನ್ನು ಎತ್ತಿಹಿಡಿಯುವ ಗುರುತರ ಜವಾಬ್ದಾರಿಯನ್ನು ನಿಭಾಯಿಸುವ ವಿಶ್ವಾಸವಿದೆ ಎಂದರು.

ಮುಖ್ಯ ಅತಿಥಿಗಳಾಗಿದ್ದ ಸೇಂಟ್ ಮಿಲಾಗ್ರಿಸ್ ಸೌಹಾರ್ದ ಕೋ-ಆಪರೇಟಿವ್ ಬ್ಯಾಂಕ್‌ನ ಸಂಸ್ಥಾಪಕ ನಿರ್ದೇಶಕರಾದ ಜಾರ್ಜ್ ಫರ್ನಾಂಡೀಸ್ ಅವರು ಮಾತನಾಡಿ, ನಮ್ಮ ಜಿಲ್ಲೆಯ ಯಲ್ಲಾಪುರದವರಾದ, ರಾಜ್ಯದೆಲ್ಲೆಡೆ ಪ್ರಖ್ಯಾತಿಯನ್ನು ಹೊಂದಿರುವ ಹರಿಪ್ರಕಾಶ್ ಕೋಣೆಮನೆ ಅವರು ವಿಸ್ತಾರ ನ್ಯೂಸ್‌ನ ಮುಂದಾಳತ್ವವನ್ನ ವಹಿಸಿರುವುದು ನಮ್ಮೆಲ್ಲರಿಗೆ ಹೆಮ್ಮೆಯ ವಿಷಯ. ಮುಂದಿನ ದಿನಗಳಲ್ಲಿ ವಿಸ್ತಾರ ನ್ಯೂಸ್ ಜಿಲ್ಲೆಯ ಜನರ ಮನೆ, ಮನಗಳಿಗೆ ವಿಸ್ತಾರಗೊಳ್ಳಲಿ ಎಂದು ಹಾರೈಸಿದರು.

ನಮ್ಮ ಜಿಲ್ಲೆಯ ಹೆಮ್ಮೆಯ ಚಾನೆಲ್…
ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದ ಜಿಲ್ಲಾ ಪತ್ರಿಕಾಭವನ ನಿರ್ವಹಣಾ ಸಮಿತಿಯ ಅಧ್ಯಕ್ಷ ಟಿ.ಬಿ.ಹರಿಕಾಂತ್ ಅವರು ಮಾತನಾಡಿ, ರಾಜ್ಯದ ಬಹುತೇಕ ಸುದ್ದಿ ವಾಹಿನಿಗಳಲ್ಲಿ ನಮ್ಮ ಉತ್ತರ ಕನ್ನಡ ಜಿಲ್ಲೆಯವರ ಪ್ರಾಬಲ್ಯ ಸಾಕಷ್ಟಿದೆ. ವಿಶ್ವೇಶ್ವರ ಭಟ್, ರವಿ ಹೆಗಡೆ, ಶಶಿಧರ ಭಟ್ ಸೇರಿದಂತೆ ಇನ್ನೂ ಹಲವರು ವಿವಿಧ ಸುದ್ದಿ ಮಾಧ್ಯಮಗಳ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇದೀಗ ನಮ್ಮ ಜಿಲ್ಲೆಯ ಜನಪ್ರಿಯ ಪತ್ರಕರ್ತ ಹರಿಪ್ರಕಾಶ್ ಕೋಣೆಮನೆ ಅವರ ನೇತೃತ್ವದಲ್ಲಿ ವಿಸ್ತಾರ ಮೀಡಿಯಾ ಎಂಬ ಬೃಹತ್ ಮಾಧ್ಯಮ ಸಂಸ್ಥೆ ಉದಯವಾಗಿರುವುದು ನಮಗೆಲ್ಲ ಹೆಮ್ಮೆಯ ಸಂಗತಿ. ಈ ಸಂಸ್ಥೆಯ ನಿರ್ದೇಶಕರಾದ ಶ್ರೀನಿವಾಸ ಹೆಬ್ಬಾರ್ ಯಲ್ಲಾಪುರದವರು. ವಿಸ್ತಾರ ನ್ಯೂಸ್ ಡಿಜಿಟಲ್‌ನ ಮುಖ್ಯಸ್ಥರಾದ ರಮೇಶ್‌ಕುಮಾರ್‌ ನಾಯಕ್ ಕೂಡ ಹೊನ್ನಾವರದವರು. ಹಾಗಾಗಿ ವಿಸ್ತಾರ ನ್ಯೂಸ್ ನಮ್ಮ ಜಿಲ್ಲೆಯ ಚಾನೆಲ್ ಎಂದು ಹೆಮ್ಮೆಯಿಂದ ಹೇಳಬಹುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಗರಸಭೆಯ ಅಧ್ಯಕ್ಷರಾದ ಡಾ. ನಿತಿನ್ ಪಿಕಳೆ ಅವರು ಮಾತನಾಡಿ, ಮಾಧ್ಯಮಗಳು ಸಮಾಜದ ವೈದ್ಯರಿದ್ದಂತೆ. ಸಮಾಜದ ಕುಂದು ಕೊರತೆಗಳನ್ನು ಸರಿಪಡಿಸಿ, ಸುಧಾರಣೆ ತರುವಲ್ಲಿ ಮಾಧ್ಯಮಗಳ ಪಾತ್ರ ಬಹುಮುಖ್ಯವಾದದ್ದು ಎಂದರು.

ಕಾರ್ಯಕ್ರಮಕ್ಕೂ ಮುನ್ನ ಕಾರವಾರದ ಕಲ್ಪನಾರಶ್ಮಿ ಕಲಾಲೋಕ ಹಾಗೂ ಸ್ಥಳೀಯ ನೃತ್ಯ ತಂಡದವರಿಂದ ನಾಡಿನ ಇತಿಹಾಸ ಸಾರುವ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕಾರ್ಯಕ್ರಮವನ್ನು ಶ್ರೀಮಾಯಿ ನಾಯ್ಕ ನಿರೂಪಿಸಿದರು. ವಿಸ್ತಾರ ನ್ಯೂಸ್ ಜಿಲ್ಲಾ ವರದಿಗಾರ ಸಂದೀಪ ಸಾಗರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ಯಾಮೆರಾಮನ್ ಸಾಯಿಕಿರಣ ಬಾಬ್ರೇಕರ್ ವಂದಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಸದಸ್ಯರು, ಪತ್ರಕರ್ತರು, ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
……………

Exit mobile version