Site icon Vistara News

ವಿಸ್ತಾರ TOP 10 NEWS | ಜುಂಜುನ್ವಾಲಾ ನಿರ್ಗಮನದಿಂದ ಅಮೃತ ಸ್ವಾತಂತ್ರ್ಯೋತ್ಸವ ಸಂಭ್ರಮದ ಸಿದ್ಧತೆ, ಭದ್ರತೆವರೆಗಿನ ಪ್ರಮುಖ ಸುದ್ದಿಗಳಿವು

vistara top 10 news

ಬೆಂಗಳೂರು: ಆಕಾಶಕ್ಕೇ ಏಣಿ ಇಟ್ಟ ಷೇರು ಸರದಾರ ರಾಕೇಶ್‌ ಜುಂಜುನ್ವಾಲಾ ಇದ್ದಕ್ಕಿದ್ದಂತೆ ನಿರ್ಗಮಿಸಿದ್ದಾರೆ. ಸದ್ದೇ ಮಾಡದೆ ಬರೀ ಲೆಕ್ಕಾಚಾರದಲ್ಲೇ ಶ್ರೀಮಂತನಾಗಿ ನಮ್ಮ ದೇಶದ ವಾರೆನ್‌ ಬಫೆಟ್‌ ಎಂದೇ ಖ್ಯಾತರಾದ ಅವರ ಹಠಾತ್‌ ನಿಧನ ಎಲ್ಲರನ್ನೂ ಬಹುವಾಗಿ ಕಾಡಿದೆ. ಇನ್ನು ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಮೃತ ಘಳಿಗೆ ಸನ್ನಿಹಿತವಾಗುತ್ತಿದೆ. ದೇಶ ಅದರಲ್ಲೂ ಬೆಂಗಳೂರು ಭಾರಿ ಎಚ್ಚರಿಕೆಯಿಂದ ಸಿದ್ಧವಾಗುತ್ತಿದೆ. ಮಾಣೆಕ್‌ ಷಾ ಪರೇಡ್‌ನ ಸಾಂಪ್ರದಾಯಿಕ ಆಚರಣೆ, ಚಾಮರಾಜಪೇಟೆಯಲ್ಲಿ ನಡೆಯಲಿರುವ ಸ್ವಾತಂತ್ರ್ಯೋತ್ಸವ ಮತ್ತು ಕಾಂಗ್ರೆಸ್‌ನ ಪಾದಯಾತ್ರೆಗಳ ಹಿನ್ನೆಲೆಯಲ್ಲಿ ರಾಜಧಾನಿ ಬಿಗಿ ಭದ್ರತೆಯ ಕೋಟೆಯಾಗಿದೆ. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂಬಂಧ ಹಲವಾರು ವಿಶೇಷ ಮತ್ತು ಕುತೂಹಲಕಾರಿ ಲೇಖನ, ವಿಡಿಯೊಗಳನ್ನು ವಿಸ್ತಾರ ನ್ಯೂಸ್‌ ಪ್ರಸ್ತುತಪಡಿಸಿದೆ. ಇನ್ನುಳಿದಂತೆ ಸಚಿವ ಮಾಧುಸ್ವಾಮಿ ಅವರು ಸರಕಾರದ ಕಾರ್ಯವೈಖರಿ ಬಗ್ಗೆ ಆಡಿದ ಮಾತಿನಿಂದ ಬೆಂಕಿಯ ಕಿಡಿ ಎದ್ದಿದೆ. ಹೀಗೆ ಭಾರಿ ಚರ್ಚೆಗೆ ಕಾರಣವಾದ ವಿದ್ಯಮಾನಗಳಿಗೆ ಸಂಬಂಧಿಸಿದ ಟಾಪ್‌ ೧೦ ಸುದ್ದಿ, ಬರಹಗಳ ಝಲಕ್‌ ಮತ್ತು ಅದರ ಲಿಂಕ್‌ಗಳನ್ನು ಒಳಗೊಂಡ ವಿಸ್ತಾರ ಟಾಪ್‌ ೧೦ ನ್ಯೂಸ್‌ ಇಲ್ಲಿದೆ.

೧. ಷೇರು ಪೇಟೆ ಸಾಹುಕಾರ, ಆಕಾಸ್‌ ಏರ್‌ನ ಸೂತ್ರಧಾರ ರಾಕೇಶ್‌ ಜುಂಜುನ್ವಾಲಾ ಇನ್ನಿಲ್ಲ
ಷೇರುಪೇಟೆಯಲ್ಲಿ ಬಿಗ್‌ಬುಲ್‌ ಎಂದೇ ಹೆಸರಾದ ಖ್ಯಾತ ಹೂಡಿಕೆದಾರ ರಾಕೇಶ್‌ ಜುಂಜುನ್ವಾಲಾ ಇನ್ನಿಲ್ಲ. ಮಧುಮೇಹದಿಂದ ಬಳಲುತ್ತಿದ್ದ ಅವರು ಅಲ್ಪ ಕಾಲದ ಅಸೌಖ್ಯದಿಂದ ತಮ್ಮ ೬೨ನೇ ವಯಸ್ಸಿನಲ್ಲಿ ಭಾನುವಾರ ನಿಧನರಾಗಿದ್ದಾರೆ. ಇತ್ತೀಚೆಗಷ್ಟೇ ಅವರು ಕಡಿಮೆ ದರದ ಆಕಾಸ್‌ ಏರ್‌ಲೈನ್ಸ್‌ ಆರಂಭಿಸುವ ಮೂಲಕ ಜನಸಾಮಾನ್ಯರಿಗೂ ಚಿರಪರಿಚಿತರಾಗಿದ್ದರು. ಸಂಪೂರ್ಣ ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

೨. ಜುಂಜುನ್ವಾಲಾ: 5 ಸಾವಿರ ಹೂಡಿಕೆಯಿಂದ 45 ಸಾವಿರ ಕೋಟಿ ಒಡೆಯನಾದ ಕಥೆ
ಷೇರು ಮಾರುಕಟ್ಟೆಯ ಸರದಾರ, ಭಾರತದ ವಾರೆನ್‌ ಬಫೆಟ್‌ ಎಂದೇ ಖ್ಯಾತರಾಗಿದ್ದ ರಾಕೇಶ್‌ ಜುಂಜುನ್ವಾಲಾ ಕೇವಲ ೫,೦೦೦ ರೂ. ಹೂಡಿಕೆ ಮೂಲಕ ಷೇರು ಪೇಟೆ ಪ್ರವೇಶ ಮಾಡಿ ಈಗ ೪೫,೮೨೦ ಕೋಟಿ ರೂ. ಸಂಪತ್ತಿನ ಒಡೆಯರಾಗಿದ್ದಾರೆ. ಆದಾಯ ತೆರಿಗೆ ಇಲಾಖೆಯ ಅಧಿಕಾರಿಯೊಬ್ಬರ ಮಗ ಸ್ವಪ್ರಯತ್ನ, ಶ್ರದ್ಧೆ ಮತ್ತು ಲೆಕ್ಕಾಚಾರಗಳಿಂದಲೇ ಶ್ರೀಮಂತನಾದ ಸ್ಫೂರ್ತಿದಾಯಕ ಕಥೆ. ಸಂಪೂರ್ಣ ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

೩. ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ದೇಶ ರೆಡಿ, ಬುಲೆಟ್‌ಪ್ರೂಫ್‌ ಶೀಲ್ಡ್‌ನಲ್ಲಿ ಮೋದಿ ಭಾಷಣ?
ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆಗೆ ಇಡೀ ದೇಶವೇ ಸಂಭ್ರಮದಿಂದ ಅಣಿಯಾಗುತ್ತಿದೆ. ರಾಷ್ಟ್ರಾದ್ಯಂತ ನಾನಾ ರೀತಿಯ ಕಾರ್ಯಕ್ರಮಗಳು ಆಯೋಜನೆಯಾಗಿವೆ. ಇದರ ನಡುವೆ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಇದೇ ವೇಳೆ ಇನ್ನೊಂದು ಸುದ್ದಿ ಬರುತ್ತಿದೆ, ಅದೇನೆಂದರೆ, ಕೆಂಪು ಕೋಟೆಯಲ್ಲಿ ೯ನೇ ಬಾರಿಗೆ ಸ್ವಾತಂತ್ರ್ಯೋತ್ಸವ ಭಾಷಣ ಮಾಡಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇದೇ ಮೊದಲ ಬಾರಿಗೆ ಬುಲೆಟ್‌ಪ್ರೂಫ್‌ ಗಾಜಿನ ಹಿಂದೆ ನಿಂತು ದೇಶವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ ಎಂದು. ಇದರ ಸತ್ಯಾಸತ್ಯತೆ ಸೋಮವಾರ ಬೆಳಗ್ಗೆ ಗೊತ್ತಾಗಲಿದೆ. ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

೪. ಅಮೃತ ಮಹೋತ್ಸವ: ಬೆಂಗಳೂರಿನಲ್ಲಿ ಬಿಗಿ ಭದ್ರತೆ, ಚಾಮರಾಜಪೇಟೆ ಮೈದಾನಕ್ಕೆ ಡ್ರೋನ್‌ ಕಾವಲು
75‌ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಸೋಮವಾರ ಸಾಲು ಸಾಲು ಕಾರ್ಯಕ್ರಮಗಳು ನಡೆಯಲಿವೆ. ಪ್ರಮುಖವಾಗಿ ಮಾಣೆಕ್ ಶಾ ಪರೇಡ್ ಗ್ರೌಂಡ್‌, ವಿವಾದಿತ ಚಾಮರಾಜಪೇಟೆ ಮೈದಾನದಲ್ಲಿ ಧ್ವಜಾರೋಹಣ, ಕಾಂಗ್ರೆಸ್‌ ಸ್ವಾಂತಂತ್ರ್ಯ ನಡಿಗೆ ಹಾಗೂ ಬಿಜೆಪಿ ಕಾರ್ಯಕ್ರಮಗಳು ನಡೆಯುವ ಹಿನ್ನೆಲೆಯಲ್ಲಿ ಸಿಲಿಕಾನ್‌ ಸಿಟಿಯಲ್ಲಿ ಅಭೂತಪೂರ್ವ ಪೊಲೀಸ್‌ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಡ್ರೋನ್ ಕ್ಯಾಮೆರಾ ಮೂಲಕ ಪ್ರಮುಖ ಪ್ರದೇಶಗಳಲ್ಲಿ ನಿಗಾ ಇಡಲಾಗಿದೆ. ಪೂರ್ಣ ವರದಿಗಾಗಿ ಕ್ಲಿಕ್‌ ಮಾಡಿ

೫. ಪಾದಯಾತ್ರೆಗೆ ಕಾಂಗ್ರೆಸ್‌ ರೆಡಿ: ಟಿಪ್ಪು ಬ್ಯಾನರ್‌ ನಾಶಕ್ಕೂ ಶಿವಮೊಗ್ಗದ ಸಾವರ್ಕರ್‌ ವಿವಾದಕ್ಕೂ ನಂಟು
ಬೆಂಗಳೂರಿನಲ್ಲಿ ಸೋಮವಾರ ಆಯೋಜಿಸಿರುವ ಸ್ವಾತಂತ್ರ್ಯ ಪಾದಯಾತ್ರೆಗೆ ಕಾಂಗ್ರೆಸ್‌ ಸಜ್ಜಾಗಿದೆ. ಈ ನಡುವೆ, ಶನಿವಾರ ರಾತ್ರಿ ಬೆಂಗಳೂರಿನಲ್ಲಿ ಅಳವಡಿಸಲಾಗಿದ್ದ ಬ್ಯಾನರನ್ನು ನಾಶ ಮಾಡಿದ ಕಿಡಿಗೇಡಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಪುನೀತ್‌ ಕೆರೆಹಳ್ಳಿ ಸತ್ಯನಾರಾಯಣ ಪೂಜೆ ನೆಪದಲ್ಲಿ ಪೊಲೀಸರನ್ನು ಒಂದು ಗಂಟೆ ಕಾಯಿಸಿದ್ದಾನೆ. ಅಂದ ಹಾಗೆ, ಈ ಬ್ಯಾನರ್‌ ನಾಶಕ್ಕೂ ಶಿವಮೊಗ್ಗದ ಶಿವಪ್ಪ ನಾಯಕ ಮಾಲ್‌ನಲ್ಲಿ ನಡೆದ ಸಾವರ್ಕರ್‌ ಫೋಟೊ ವಿವಾದಕ್ಕೂ ನಂಟಿದೆ. ವಿವರ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

6. ದೇಶಕ್ಕೆ 75ರ ಹೊಸ್ತಿಲಲ್ಲಿ ಓದಲೇಬೇಕಾದ ದೇಶದ್ದೇ ಕಥೆಗಳಿವು!
ದೇಶಕ್ಕೆ ಸ್ವಾತಂತ್ರ್ಯ ಬಂದು ೭೫ ವರ್ಷಗಳಾದುವು. ಅಮೃತಮಹೋತ್ಸವದ ಹೊಸ್ತಿಲಲ್ಲಿ ನಿಂತು ಹಿಂತಿರುಗಿ ನೋಡಿದಾಗ ಆಗಿನ ಘಟನೆಗಳನ್ನು ಕಲ್ಪನೆ ಮಾಡುವುದಕ್ಕೂ ಇಂದಿನ ಯುವಪೀಳಿಗೆಗೆ ಸಾಧ್ಯವಿಲ್ಲ. ಇತಿಹಾಸದಲ್ಲಿ ಅಲ್ಲಲ್ಲಿ ಚದುರಿಹೋದ ವಿವರಗಳನ್ನು ಓದಿಕೊಂಡರೂ, ಪರಿಸ್ಥಿತಿಯನ್ನು ಕಲ್ಪನೆಗೆ ತಂದು ಊಹಿಸಿ ನೋಡುವುದು ಕಷ್ಟವೇ. ಹೀಗೆ ಸಾಹಿತ್ಯ ಕೃತಿಗಳ ಮೂಲಕ ದೇಶಕ್ಕೆ ಸ್ವಾತಂತ್ರ್ಯ ಬಂದ ಕಾಲಘಟ್ಟದ, ವಿಭಜನೆಯ ಸಮಯದ, ಕಥಾಹಂದರವನ್ನಿಟ್ಟುಕೊಂಡು ಬಂದ ಕೃತಿಗಳಲ್ಲಿ ಯುವಪೀಳಿಗೆ ಓದಲೇ ಬೇಕಾದ ಐದು ಕೃತಿಗಳನ್ನಿಲ್ಲಿ ಪಟ್ಟಿ ಮಾಡಿದ್ದೇವೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

7. India@75 | ಆತ್ಮನಿರ್ಭರತೆಯತ್ತ ಭಾರತೀಯ ರಕ್ಷಣಾ ಉದ್ಯಮ
ಕಳೆದ 75 ವರ್ಷಗಳ ಇತಿಹಾಸದಲ್ಲಿ ಭಾರತದ ರಕ್ಷಣಾ ಉತ್ಪಾದನೆಯ ಸಾಧನೆ ಗಮನಾರ್ಹ. ಇದೀಗ ಕೇಂದ್ರ ಸರ್ಕಾರ ʼಆತ್ಮ ನಿರ್ಭರ ಭಾರತʼ ಅಭಿಯಾನಕ್ಕೆ ಒತ್ತು ನೀಡುತ್ತಿದೆ. ಇದು ನಮ್ಮ ರಕ್ಷಣಾ ಉತ್ಪಾದನೆಗೆ ಭರವಸೆಯ ವೇಗ ನೀಡಿದೆ. ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ರಕ್ಷಣಾ ವಿಶ್ಲೇಷಕ ಗಿರೀಶ್‌ ಲಿಂಗಣ್ಣ ಹಲವು ಆಯಾಮಗಳನ್ನು ಚರ್ಚಿಸಿದ್ದಾರೆ. ವಿವರ ಲೇಖನಕ್ಕಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

8. ಸರ್ಕಾರ ನಡೀತಾ ಇಲ್ಲ, ಕಾಲ ತಳ್ತಾ ಇದ್ದೀವಿ ಅಷ್ಟೆ: ಬೆಂಕಿ ಹಚ್ಚಿದೆ ಮಾಧು ಸ್ವಾಮಿ ಮಾತು
ಈಗಾಗಲೆ ಸಚಿವ ಉಮೇಶ್‌ ಕತ್ತಿ, ಮಾಜಿ ಶಾಸಕ ಸುರೇಶ್‌ ಗೌಡ ನೀಡಿದ ಹೇಳಿಕೆಯಿಂದ ಎದ್ದ ವಿವಾದದಿಂದ ಹೊರಬರುತ್ತಿರುವ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರಕ್ಕೆ ಮತ್ತೊಂದು ಮುಜುಗರ ಎದುರಾಗಿದೆ. ಈ ಸರ್ಕಾರ ನಡೀತಾ ಇಲ್ಲ, ಹೇಗೊ ಎಂಟು ತಿಂಗಳು ಕಳೆದರೆ ಸಾಕು ಎಂದು ಮ್ಯಾನೇಜ್‌ ಮಾಡ್ತಾ ಇದ್ದೀವಿ ಎಂದು ಹಿರಿಯ ರಾಜಕಾರಣಿ, ಸರ್ಕಾರದಲ್ಲಿ ಕಾನೂನು ಸಚಿವರಾಗಿರುವ ಜೆ.ಸಿ. ಮಾಧುಸ್ವಾಮಿ ಆಡಿರುವ ಮಾತು ಈಗ ವೈರಲ್‌ ಆಗಿದೆ. ವಿವರ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

೯. ಪ್ರಧಾನಿ ಮೋದಿಗೆ ಕಾಮನ್ವೆಲ್ತ್‌ ಸಾಧಕರು ಕೊಟ್ಟ ಗಿಫ್ಟ್‌ಗಳು ಯಾವುವು?
ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಪದಕ ಗೆದ್ದು ಸಾಧನೆ ಮಾಡಿದ ಅಥ್ಲೀಟ್‌ಗಳಿಗೆ ದೇಶದ ಜನ, ಪ್ರಧಾನಿ ಗಿಫ್ಟ್‌ ನೀಡುವುದು ಸಾಮಾನ್ಯ. ಆದರೆ, ಈ ಬಾರಿ ಕ್ರೀಡಾಪಟುಗಳೇ ಪ್ರಧಾನಿ ಮೋದಿ ಅವರಿಗೆ ಕಾಣಿಕೆ ನೀಡಿದ್ದಾರೆ. ಹಾಗಿದ್ದರೆ ಯಾರ್ಯಾರು, ಏನೇನು ಉಡುಗೊರೆ ಕೊಟ್ಟರು. ಒಂದು ಕುತೂಹಲಕಾರಿ ವರದಿ ಇಲ್ಲಿದೆ.

೧೦. ಈಜಿಪ್ಟ್​ ಚರ್ಚ್​​​ನಲ್ಲಿ ಭೀಕರ ಅಗ್ನಿದುರಂತ: 41 ಮಂದಿ ದುರ್ಮರಣ
ಈಜಿಪ್ಟ್​ನ ಕಾಪ್ಟಿಕ್ ಸಮುದಾಯಕ್ಕೆ ಸೇರಿದ ಚರ್ಚ್​​ನಲ್ಲಿ ಭೀಕರ ಬೆಂಕಿ ದುರಂತ ಸಂಭವಿಸಿ 41 ಮಂದಿ ದುರ್ಮರಣ ಹೊಂದಿದ್ದಾರೆ. ಕೈರೋದ ವಾಯುವ್ಯದಲ್ಲಿರುವ ಅಬು ಸೈಫೈನ್​ ಚರ್ಚ್​​​ನಲ್ಲಿ ಈ ಅವಘಡವಾಗಿದ್ದು, ಬೆಂಕಿ ಹೊತ್ತಿಕೊಳ್ಳಲು ಸ್ಪಷ್ಟ ಕಾರಣ ಗೊತ್ತಾಗಿಲ್ಲ. ವಿವರ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version