Site icon Vistara News

ವಿಸ್ತಾರ TOP 10 NEWS | ಒಕ್ಕಲಿಗರ ಮೀಸಲು ಹೆಚ್ಚಳ ಬೇಡಿಕೆಯಿಂದ ಕಾಂಗ್ರೆಸ್‌ ಎಲೆಕ್ಷನ್‌ವರೆಗೆ ಪ್ರಮುಖ ಸುದ್ದಿಗಳು

top 10 news17-10

ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲು ಪ್ರಮಾಣವನ್ನು ಹೆಚ್ಚಿಸಿದ ಬೆನ್ನಿಗೇ ಒಕ್ಕಲಿಗ ಸಮುದಾಯ ತನ್ನ ಕೋಟಾವನ್ನು ಶೇ. ೪ರಿಂದ ೧೨ಕ್ಕೆ ಹೆಚ್ಚಿಸಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟಿದೆ. ಇದು ಮೀಸಲು ಹೆಚ್ಚಳ ಬೇಡಿಕೆಯ ಹೊಸ ಸರಣಿಗೆ ಕಾರಣವಾಗುವ ನಿರೀಕ್ಷೆಯಿದೆ. ನೂತನ ಕಾಂಗ್ರೆಸ್‌ ಅಧ್ಯಕ್ಷರನ್ನು ನಿರ್ಧರಿಸುವ ಮಹತ್ವದ ಸಾಂಸ್ಥಿಕ ಚುನಾವಣೆಯ ಮತದಾನ ಪ್ರಕ್ರಿಯೆ ಸೋಮವಾರ ಪೂರ್ಣಗೊಂಡಿದೆ. ಬೆಂಗಳೂರಿನ ರಸ್ತೆ ಗುಂಡಿ ಒಬ್ಬ ಮಹಿಳೆ ಬಿದ್ದು ಗಂಭೀರ ಗಾಯಗೊಳ್ಳುವ ಮೂಲಕ ನಗರದ ಅವ್ಯವಸ್ಥೆ ವಿರುದ್ಧ ಆಕ್ರೋಶ ಭುಗಿಲೇಳುವಂತಾಗಿದೆ. ಉಳಿದಂತೆ ಕೃಷಿ ಸಮ್ಮಾನ್‌ ಯೋಜನೆಯಡಿ ರೈತರ ಖಾತೆಗೆ ಹಣ ಸಂದಾಯವಾಗಿದೆ, ವಾಟ್ಸ್‌ ಆ್ಯಪ್‌ನಲ್ಲಿ ಎಡಿಟ್‌ ಆಪ್ಶನ್‌ ಜತೆಗೆ ಒಂದು ಗ್ರೂಪ್‌ನಲ್ಲಿ ೧೦೨೪ ಜನರಿಗೆ ಅವಕಾಶ ಸಿಗಲಿದೆ ಎಂಬ ಸಂತಸದ ಸುದ್ದಿಯೂ ಇದೆ ವಿಸ್ತಾರ TOP 10 NEWSನಲ್ಲಿ.

1. SCST ಮೀಸಲು| ಒಕ್ಕಲಿಗರಿಂದಲೂ ಮೀಸಲು ಹೆಚ್ಚಳ ಬೇಡಿಕೆ: 4%ನಿಂದ 12ಕ್ಕೆ ಏರಿಸಿ ಎಂದ ನಿರ್ಮಲಾನಂದನಾಥ ಸ್ವಾಮೀಜಿ

ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿಯನ್ನು ಹೆಚ್ಚಿಸಲು ಸರ್ಕಾರ ನಿರ್ಧರಿಸಿದ ಬೆನ್ನಿಗೇ ಉಳಿದ ಸಮುದಾಯಗಳಿಂದ ಮೀಸಲು ಹೆಚ್ಚಳದ ಬೇಡಿಕೆ ಬರಲಿದೆ ಎಂಬ ಅಭಿಪ್ರಾಯ ನಿಜವಾಗಿದೆ. ರಾಜ್ಯದ ಪ್ರಬಲ ಸಮುದಾಯಗಳಲ್ಲಿ ಒಂದಾದ ಒಕ್ಕಲಿಗರ ಸಮುದಾಯ ತಮಗಿರುವ ಮೀಸಲು ಕೋಟಾವನ್ನು ಶೇ. ೪ರಿಂದ ಶೇ. ೧೨ಕ್ಕೆ ಏರಿಸಬೇಕು ಎಂಬ ಹಕ್ಕೊತ್ತಾಯ ಮಂಡಿಸಿದೆ. ನಮಗೆ ಶೇ. ೪ ಮೀಸಲಾತಿ ಸಾಕಾಗುವುದಿಲ್ಲ. ಅದನ್ನು ಶೇ. ೧೨ಕ್ಕೆ ಏರಿಸಬೇಕು ಎಂದು ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧಿಪತಿಗಳಾಗಿರುವ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಆಗ್ರಹಿಸಿದ್ದಾರೆ. ಪೂರ್ಣ ಸುದ್ದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

2. Congress President Poll | ಬಳ್ಳಾರಿಯಲ್ಲಿ ಮತ ಹಾಕಿದ ರಾಹುಲ್‌; ಖರ್ಗೆ ಬೆಂಗಳೂರಲ್ಲಿ, ತರೂರ್‌ ತಿರುವನಂತಪುರದಲ್ಲಿ, 96% ಮತ ಚಲಾವಣೆ

ನೂರಾರು ವರ್ಷ ಇತಿಹಾಸ ಹೊಂದಿರುವ ರಾಷ್ಟ್ರೀಯ ಪಕ್ಷ ಕಾಂಗ್ರೆಸ್‌ನ ೫ನೇ ಅಧ್ಯಕ್ಷೀಯ ಚುನಾವಣೆಯ (Congress President Poll) ಮತದಾನ ಸೋಮವಾರ ನಡೆಯಿತು. ರಾಜ್ಯದಲ್ಲಿ ೫೦೩ ಮಂದಿಯ ಪೈಕಿ ೫೦೧ ಮತಗಳು ಚಲಾವಣೆಯಾದವು. ಭಾರತ್‌ ಜೋಡೋ ಯಾತ್ರೆಯಲ್ಲಿರುವ ರಾಹುಲ್‌ ಗಾಂಧಿ ಬಳ್ಳಾರಿಯಲ್ಲಿ, ಅಧ್ಯಕ್ಷೀಯ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅವರು ಬೆಂಗಳೂರಿನಲ್ಲಿ, ಇನ್ನೊಬ್ಬ ಅಭ್ಯರ್ಥಿ ಶಶಿ ತರೂರ್‌ ತಿರುವನಂತಪುರದಲ್ಲಿ ಮತ ಹಾಕಿದರು. ಒಟ್ಟಾರೆಯಾಗಿ ಶೇ. ೯೬ ಮತ ಚಲಾವಣೆಯಾಗಿದೆ. ಅಕ್ಟೋಬರ್‌ ೧೯ರಂದು ಮತ ಎಣಿಕೆ ನಡೆದು ಅಧ್ಯಕ್ಷರ ಆಯ್ಕೆ ಘೋಷಣೆ ಆಗಲಿದೆ. ಪೂರ್ಣ ಸುದ್ದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

3. ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ; ಸದ್ಯವೇ ಸರ್ಕಾರದ ಗುಡ್‌ ನ್ಯೂಸ್‌?

ಸೇವಾ ನಿರತ ಪದವೀಧರ ಶಿಕ್ಷಕರನ್ನು ಸ್ಪರ್ಧಾತ್ಮಕ ಪರೀಕ್ಷೆ ಇಲ್ಲದೇ, ಶೇ.40ರಷ್ಟು ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಬೇಕೆಂಬ ಪ್ರಸ್ತಾಪಕ್ಕೆ ಕೊನೆಗೂ ಆರ್ಥಿಕ ಇಲಾಖೆಯು ಒಪ್ಪಿಗೆ ನೀಡಿದೆ. ಇನ್ನೆರಡು ದಿನಗಳಲ್ಲಿ ಈ ಪ್ರಸ್ತಾಪವನ್ನು ಶಿಕ್ಷಣ ಇಲಾಖೆಗೆ ಕಳುಹಿಸುವ ಸಾಧ್ಯತೆಗಳಿದ್ದು, ಶಿಕ್ಷಣ ಇಲಾಖೆಯು ಅಂತಿಮವಾಗಿ ಈ ಪ್ರಸ್ತಾಪವನ್ನು ಸಚಿವ ಸಂಪುಟದ ಅನುಮೋದನೆಗಾಗಿ ಕಳುಹಿಸಿಕೊಡಲಿದೆ. ಪೂರ್ಣ ಸುದ್ದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

4. PM-KISAN | ಪ್ರಧಾನಿ ಮೋದಿಯಿಂದ ಪಿಎಂ-ಕಿಸಾನ್‌ 12ನೇ ಕಂತು 16,000 ಕೋಟಿ ರೂ. ಬಿಡುಗಡೆ

ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ಪಿಎಂ-ಕಿಸಾನ್‌ (PM-KISAN) ಯೋಜನೆಯ ಅಡಿಯಲ್ಲಿ ರೈತರಿಗೆ 12ನೇ ಕಂತಿನಲ್ಲಿ 16,000 ಕೋಟಿ ರೂ.ಗಳನ್ನು ಸೋಮವಾರ ಬಿಡುಗಡೆಗೊಳಿಸಿದರು.‌ ದೀಪಾವಳಿಗೆ ಹಾಗೂ ಚಳಿಗಾಲದ ಅವಧಿಯ ಬೆಳೆಯ ಬಿತ್ತನೆಗೆ ಮುನ್ನ ರೈತರಿಗೆ ಈ ನೆರವು ಸಿಗುತ್ತಿದೆ. ಪಿಎಂ-ಕಿಸಾನ್‌ ಯೋಜನೆಯ ಅಡಿಯಲ್ಲಿ ಇದುವರೆಗೆ ಒಟ್ಟು 2.16 ಲಕ್ಷ ಕೋಟಿ ರೂ. ಬಿಡುಗಡೆಯಾಗಿದೆ. ಪೂರ್ಣ ಸುದ್ದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

5. ಇನ್ನು ವಾಟ್ಸ್ಆ್ಯಪ್ ಮೆಸೇಜ್‌ ಎಡಿಟ್‌ ಮಾಡ್ಬೋದು, ಒಂದು ಗ್ರೂಪ್‌ಗೆ 1024 ಸದಸ್ಯರನ್ನು ಸೇರಿಸಬಹುದು

ಬಳಕೆದಾರರಿಗೆ ಶೀಘ್ರವೇ ವಾಟ್ಸ್ಆ್ಯಪ್ ಮೆಸೇಜ್ ಎಡಿಟ್ (Edited Message) ಮಾಡುವ ಅವಕಾಶ ದೊರೆಯಲಿದೆ. ಈ ವಿಷಯವನ್ನು ಈ ಹಿಂದೆಯೇ ವಾಟ್ಸ್ಆ್ಯಪ್ ಸ್ವತಃ ಘೋಷಣೆ ಮಾಡಿದೆ. ಹೊಸ ನ್ಯೂಸ್ ಏನೆಂದರೆ, ವಾಟ್ಸ್ಆ್ಯಪ್ ಸಂದೇಶವನ್ನು ಎಡಿಟ್ ಮಾಡಿದ್ದರೆ, ಅಂಥ ಮೆಸೇಜ್ ಮೇಲೆ Edited ಎಂಬ ಲೇಬಲ್ ಕಾಣಿಸಿಕೊಳ್ಳುತ್ತಿದೆ! ಇದೇವೇಳೆ ವಾಟ್ಸ್ಆ್ಯಪ್‌ನ ಒಂದು ಗ್ರೂಪ್‌ನಲ್ಲಿ ಇನ್ನು ೧೦೨೪ ಮಂದಿಗೆ ಅವಕಾಶ ಸಿಗಲಿದೆ. ಪೂರ್ಣ ಸುದ್ದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

6. ಸಮಯಪ್ರಜ್ಞೆಯಿಂದ ಕೆಲಸ ಮಾಡಿ: ಜಿಲ್ಲಾಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ಫುಲ್‌ ಕ್ಲಾಸ್‌

ಜಿಲ್ಲಾಧಿಕಾರಿಗಳು ಸಮಯೋಚಿತ ತೀರ್ಮಾನಗಳ ಮೂಲಕ ಜನರಿಗೆ ನೆರವಾಗಬೇಕು. ಸಮಯಪ್ರಜ್ಞೆ ಮತ್ತು ಸ್ಥಿತಪ್ರಜ್ಞತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಲಹೆ ನೀಡಿದರು. ʻʻಈಗ ಬಹಳಷ್ಟು ಅಧಿಕಾರಿಗಳು ಜಿಲ್ಲಾಧಿಕಾರಿ ಹುದ್ದೆಯ ಅಧಿಕಾರ ಭಾಗವನ್ನಷ್ಟೇ ನೋಡುತ್ತಾರೆ. ಆ ಹುದ್ದೆಯ ಜವಾಬ್ದಾರಿ ಮತ್ತು ಆಡಳಿತದ ಪರಿಣಾಮವನ್ನು ಗಮನಕ್ಕೆ ತೆಗೆದುಕೊಳ್ಳುವುದಿಲ್ಲ. ಆದರೆ ಆಳುವುದು ಬೇರೆ, ಆಡಳಿತ ಮಾಡುವುದು ಬೇರೆ. ಇದನ್ನು ಗಮನದಲ್ಲಿರಿಸಿಕೊಂಡು ಕಾರ್ಯ ನಿರ್ವಹಿಸಿʼʼ ಎಂದು ಮುಖ್ಯಮಂತ್ರಿಗಳು ಹೇಳಿದರು. ಪೂರ್ಣ ಸುದ್ದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

7. ರಾಜಧಾನಿಯಲ್ಲಿ ರಸ್ತೆ ಗುಂಡಿಗೆ ಬಿದ್ದು ಮಹಿಳೆ ಗಂಭೀರ, ಗುಂಡಿ ತಪ್ಪಿಸಲು ಹೋದಾಗ ಬಡಿದ ಬಸ್‌

ಬೆಂಗಳೂರು: ರಾಜಧಾನಿಯ ರಸ್ತೆ ಗುಂಡಿಗಳು ಸೋಮವಾರ ಮುಂಜಾನೆ ಒಂದು ಗಂಭೀರ ಅವಘಡದೊಂದಿಗೆ ಮತ್ತೆ ಸುದ್ದಿಯಲ್ಲಿವೆ. ನಗರದ ಓಕುಳಿಪುರಂ ಹತ್ತಿರದ ಸುಜಾತಾ ಥಿಯೇಟರ್ ಬಳಿ ರಸ್ತೆಗುಂಡಿ ತಪ್ಪಿಸಲು ಹೋಗಿ ಮಹಿಳೆಯೊಬ್ಬರು ಸ್ಕೂಟರ್‌ ಸಮೇತ ಉರುಳಿಬಿದ್ದಿದ್ದು, ಅವರ ಕಾಲಿನ ಮೇಲೆ ಬಸ್‌ನ ಚಕ್ರ ಹರಿದಿದೆ. ಅವರು ಗಂಭೀರ ಗಾಯಗೊಂಡಿದ್ದಾರೆ. ಬೆಂಗಳೂರಿನಲ್ಲಿ ರಸ್ತೆ ಹೊಂಡಗಳು ಮರಣ ಗುಂಡಿಗಳಾಗಿದ್ದು, ಇದರ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಪೂರ್ಣ ಸುದ್ದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

‌8. NameiD Fresh Food | ಬೆಂಗಳೂರು ಮೂಲದ ಐಡಿ ಫ್ರೆಶ್‌ನಿಂದ ಹರಿಯಾಣದಲ್ಲಿ ಉತ್ಪಾದನಾ ಘಟಕ

ಬೆಂಗಳೂರು ಮೂಲದ ಆಹಾರ ಕಂಪನಿ ಐಡಿ ಫ್ರೆಶ್‌ ಫುಡ್‌, ಹರಿಯಾಣದಲ್ಲಿ ತನ್ನ ನೂತನ ಉತ್ಪಾದನಾ ಘಟಕವನ್ನು ಆರಂಭಿಸಿದೆ. ಉತ್ತರ ಭಾರತದಲ್ಲಿನ ಮಾರುಕಟ್ಟೆಯಲ್ಲಿ ಗ್ರಾಹಕರ ಬೇಡಿಕೆಯನ್ನು ಪೂರೈಸುವ ಸಲುವಾಗಿ ಕಂಪನಿಯು ಹರಿಯಾಣದಲ್ಲಿ ಉತ್ಪಾದನಾ ಘಟಕವನ್ನು ಸ್ಥಾಪಿಸಿದೆ. ಮುಖ್ಯವಾಗಿ ದಿಲ್ಲಿ-ಎನ್‌ಸಿಆರ್‌ ವ್ಯಾಪ್ತಿಯ ಗ್ರಾಹಕರಿಗೆ ಉತ್ಪನ್ನಗಳ ಮಾರಾಟಕ್ಕೆ ಅನುಕೂಲವಾಗಲಿದೆ. ಪೂರ್ಣ ಸುದ್ದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

9. ವಿಸ್ತಾರ Explainer | ಒಂದು ರಾಷ್ಟ್ರ, ಒಂದು ರಸಗೊಬ್ಬರ, ಏನಿದು ಯೋಜನೆ? ಏನು ಲಾಭ?

ದೇಶದಲ್ಲಿ ರಸಗೊಬ್ಬರ ಬ್ರ್ಯಾಂಡ್‌ಗಳಲ್ಲಿ ಏಕರೂಪತೆ ತರಲು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಒಂದು ರಾಷ್ಟ್ರ, ಒಂದು ರಸಗೊಬ್ಬರ (One Nation One Fertiliser) ಯೋಜನೆಗೆ ಚಾಲನೆ ನೀಡಿದ್ದಾರೆ. ‘ಪ್ರಧಾನ ಮಂತ್ರಿ ಭಾರತೀಯ ಜನ ಉರ್ವರಕ್‌ ಪರಿಯೋಜನೆ’ (PMBJP) ಎಂಬುದು ಯೋಜನೆಯ ಹೆಸರಾಗಿದೆ. ಹಾಗಾದರೆ, ಏನಿದು ಯೋಜನೆ? ಯಾಕಾಗಿ ಯೋಜನೆ ಜಾರಿಗೊಳಿಸಲಾಗಿದೆ? ಇದರಿಂದ ರೈತರಿಗೆ ಏನು ಲಾಭ ಎಂಬುದರ ಕಿರು ಮಾಹಿತಿ (ವಿಸ್ತಾರ Explainer) ವಿಸ್ತಾರ ನ್ಯೂಸ್‌ ಡಾಟ್‌ಕಾಂನಲ್ಲಿದೆ. ಪೂರ್ಣ ಸುದ್ದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

10. T20 World Cup | ಎರಡು ಬಾರಿಯ ಚಾಂಪಿಯನ್‌ ತಂಡಕ್ಕೆ ಸೋಲುಣಿಸಿದ ಕ್ರಿಕೆಟ್‌ ಶಿಶು

ಆಸ್ಟ್ರೇಲಿಯಾದಲ್ಲಿ ಆರಂಭಗೊಂಡಿರುವ ಟಿ೨೦ ವಿಶ್ವ ಕಪ್‌ನ (T20 World Cup) ಮೊದಲ ಸುತ್ತಿನ ಹಣಾಹಣಿಗಳಲ್ಲಿ ಅಚ್ಚರಿಯ ಫಲಿತಾಂಶಗಳು ಮೂಡಿ ಬರುತ್ತಿವೆ. ಭಾನುವಾರ ಏಷ್ಯಾ ಕಪ್‌ ಚಾಂಪಿಯನ್‌ ಶ್ರೀಲಂಕಾ ತಂಡವನ್ನು ನಮೀಬಿಯಾ ತಂಡ ಭರ್ಜರಿ ೫೫ ರನ್‌ಗಳಿಂದ ಮಣಿಸಿ ಅಚ್ಚರಿ ಮೂಡಿಸಿದ್ದರೆ, ಸೋಮವಾರ ಎರಡು ಬಾರಿಯ ಟಿ೨೦ ವಿಶ್ವ ಕಪ್‌ ಚಾಂಪಿಯನ್‌ ವೆಸ್ಟ್‌ ಇಂಡೀಸ್‌ ತಂಡವನ್ನು ಕ್ರಿಕೆಟ್‌ ಶಿಶು ಸ್ಕಾಟ್ಲೆಂಡ್‌ ತಂಡ ಅಮೋಘ ೪೨ ರನ್‌ಗಳಿಂದ ಸೋಲಿಸಿದೆ. ಪೂರ್ಣ ಸುದ್ದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಮತ್ತಷ್ಟು ಸುದ್ದಿಗಳು

ಆಧುನಿಕ ಭಗೀರಥ ಕೆರೆ ಕಾಮೇಗೌಡರು ಇನ್ನಿಲ್ಲ
ನಾ ಕಂಡ ಕಾಂತಾರ | ನಕಲಿ ನಾಸ್ತಿಕ ಜಗತ್ತು ಮತ್ತು ಅಸಲಿ ಆಸ್ತಿಕ ಜಗತ್ತಿನ ನಡುವಿನ ಹೋರಾಟ! (ನಿತ್ಯಾನಂದ ವಿವೇಕವಂಶಿ ಅಂಕಣ)
ರಾಜ ಮಾರ್ಗ ಅಂಕಣ | ಆರ್ಕಿಮಿಡೀಸ್‌ನ ಸಾಧನೆ ಗೊತ್ತು, ಯುರೇಕಾದ ಕಥೆ ಗೊತ್ತು, ಜೀವನದ ಅಂತ್ಯ ಹೇಗಾಯ್ತು ಗೊತ್ತಾ?
Motivational story: ಅವನ ಮುಂಗೋಪದ ಮಾತಿಗೆ ಮುಗುಳ್ನಗುವೇ ಉತ್ತರ!

Exit mobile version