Site icon Vistara News

Voter data | ಚಿಲುಮೆಯ ಕೆಂಪೇಗೌಡ ಸಿಕ್ಕಿದ, ರವಿ‌ ಕುಮಾರ್ ಎಲ್ಲಿ? ಆಪ್ತರು, ಸಂಬಂಧಿಗಳ ಮೇಲೆ ನಿಗಾ ಇಟ್ಟು ಶೋಧ

Ravi kumar - kempegowda chilume

ಬೆಂಗಳೂರು: ಮತದಾರರ ಮಾಹಿತಿ ಕಳವು ಮತ್ತು ಮಾರಾಟ ಮಾಡಿದ (voter data) ಆರೋಪ ಎದುರಿಸುತ್ತಿರುವ ಚಿಲುಮೆ ಸಂಸ್ಥೆಯ ಮುಖ್ಯಸ್ಥ ರವಿ ಕುಮಾರ್‌ಗಾಗಿ ಶೋಧ ಮುಂದುವರಿದಿದೆ. ಶನಿವಾರ ಸಂಜೆ ನಡೆಸಿದ ಸಾಹಸಿಕ ಕಾರ್ಯಾಚರಣೆಯಲ್ಲಿ ರವಿಕುಮಾರ್‌ ತಮ್ಮ ಕೆಂಪೇಗೌಡನನ್ನು ಪೊಲೀಸರು ಬಂಧಿಸಿದ್ದರು. ಕೆಂಪೇಗೌಡನನ್ನು ಶಿಡ್ಲಘಟ್ಟದಲ್ಲಿ ಬಂಧಿಸಿದ ಬಳಿಕ ಪೊಲೀಸರಿಗೆ ರವಿ ಕುಮಾರ್‌ ಬಗ್ಗೆ ಹಲವು ಸುಳಿವುಗಳು ಸಿಕ್ಕಿದ್ದು, ಇದನ್ನು ಆಧರಿಸಿ ಆಪ್ತರು ಮತ್ತು ಸಂಬಂಧಿಗಳ ಮೇಲೆ ಕಣ್ಣಿಟ್ಟು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ ರವಿ ಕುಮಾರ್‌ ಪತ್ನಿ ಐಶ್ವರ್ಯ ಪೊಲೀಸರ ವಶದಲ್ಲಿದ್ದು, ರವಿಕುಮಾರ್‌ ಬಂಧನ ಅತಿ ಶೀಘ್ರ ನಡೆಯುವ ಬಗ್ಗೆ ಪೊಲೀಸರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರವಿ ಕುಮಾರ್‌ ಬೆಂಗಳೂರು ನಗರ ಹಾಗೂ ಸುತ್ತಮುತ್ತಲ ಏರಿಯಾಗಳಲ್ಲಿ ಅಡಗಿಕೊಂಡಿರುವ ಮಾಹಿತಿ ಪೊಲೀಸರಿಗೆ ಇದೆ. ಹೀಗಾಗಿ ವಿಶೇಷ ತಂಡಗಳನ್ನು ಮಾಡಿಕೊಂಡು ಹುಡುಕಾಡುತ್ತಿದೆ. ನಾಲ್ಕು ದಿನಗಳ ಹಿಂದೆ ಮತದಾರರ ಗುರುತಿನ ಚೀಟಿ ವಂಚನೆ ಬಳಿಕ ರವಿಕುಮಾರ್‌ ಮತ್ತು ಕೆಂಪೇಗೌಡ ನಾಪತ್ತೆಯಾಗಿದ್ದರು.

ರವಿಕುಮಾರ್‌ ಸೋದರ ಕೆಂಪೇಗೌಡನನ್ನು ಹಿಡಿದದ್ದು ಹೇಗೆ?
ರವಿ ಕುಮಾರ್‌ ಮತ್ತು ಕೆಂಪೇಗೌಡ ಇಬ್ಬರೂ ತಲೆಮರೆಸಿಕೊಂಡಿದ್ದರು. ಅವರ ಪೈಕಿ ಕೆಂಪೇಗೌಡನನ್ನು ಶನಿವಾರ ಸಂಜೆ ಬಂಧಿಸಲಾಗಿದೆ. ಆತನ ಬಂಧನದ ಕಥೆ ರೋಚಕವಾಗಿದೆ. ಚಿಲುಮೆ ಸಂಸ್ಥೆಯ ಆರ್ಥಿಕ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ ಈತ ಶನಿವಾರ ಹಗಲಿಡೀ ತನ್ನ ತಾಣಗಳನ್ನು ಬದಲಾಯಿಸುತ್ತಿದ್ದ. ಪೊಲೀಸರು ಗುಪ್ತವಾಗಿಯೇ ಆತನ ಜಾಡನ್ನು ತಿಳಿದು ಬೆನ್ನಟ್ಟುತ್ತಿದ್ದರು.

ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ರವಿ ಕುಮಾರ್‌ ಮತ್ತು ಕೆಂಪೇ ಗೌಡ ಸ್ವಲ್ಪ ಕಾಲ ಜತೆಗಿದ್ದಂತೆ ಕಂಡುಬಂದಿದೆ. ಆದರೆ, ಬಳಿಕ ಒಟ್ಟಿಗಿದ್ದರೆ ಸಿಕ್ಕಿಬೀಳುತ್ತೇವೆ ಎಂದು ಬೇರೆ ಬೇರೆ ರೂಟ್‌ನಲ್ಲಿ ಹೋಗಿ ಅಡಗಿಕೊಂಡಿದ್ದಾರೆ. ಆದರೂ ಅವರಿಬ್ಬರ ಮಧ್ಯೆ ಸಂಪರ್ಕವಿತ್ತು ಎನ್ನುವುದು ಎನ್ನುವುದು ಪೊಲೀಸರಿಗೆ ಗೊತ್ತಾಗಿದೆ.

ಕೆಂಪೇಗೌಡನ ಸಿಡಿಆರ್‌ ಪರಿಶೀಲನೆ ನಡೆಸಿದರೂ ಪೊಲೀಸರಿಗೆ ಯಾವುದೇ ಕ್ಲೂ ಸಿಗಲಿಲ್ಲ. ಹೀಗಾಗಿ ಪೊಲೀಸರು ಒತ್ತಡ ಹೇರುವ ಉದ್ದೇಶದಿಂದ ಪತ್ನಿ ಶ್ರುತಿಯನ್ನು ಕರೆದುಕೊಂಡು ಬಂದಿದ್ದರು. ಟಿ ಬೇಗೂರಿನ ತೋಟದ ಮನೆಯಲ್ಲಿ ದಾಖಲೆಗಳನ್ನು ಇಟ್ಟ ಬಗ್ಗೆ ಮಾಹಿತಿ ಪಡೆದು ಆಕೆಯನ್ನು, ಆಕೆಯ ಪುಟ್ಟ ಮಗುವಿನ ಜತೆಗೇ ಕರೆದುಕೊಂಡು ಹೋಗಿದ್ದರು. ಈ ದೃಶ್ಯಗಳನ್ನು ನೋಡಿಯಾದರೂ ಆತ ಬಂದಾನು ಎನ್ನುವುದು ಪೊಲೀಸರ ಲೆಕ್ಕಾಚಾರ ಆಗಿತ್ತು.

ಆದರೆ, ಕೆಂಪೇ ಗೌಡ ಇಂಥ ಪಟ್ಟುಗಳಿಗೆ ಕರಗಲಿಲ್ಲ. ಜತೆಗೆ ಪತ್ನಿ ಶ್ರುತಿ ಕೂಡಾ ನನಗೇನೂ ಗೊತ್ತೇ ಇಲ್ಲ ಎಂಬಂತೆ ಮಾತನಾಡಿದ್ದರು. ಆದರೂ ಕೆಂಪೇ ಗೌಡ ತನ್ನ ಆಪ್ತ ಸ್ನೇಹಿತನ ಮನೆಗೆ ಹೋಗಿರಬಹುದು ಎಂಬ ಸಣ್ಣ ಸುಳಿವನ್ನು ಆಕೆ ಬಿಟ್ಟುಕೊಟ್ಟಿದ್ದರು. ಪೊಲೀಸರಿಗೆ ಅಷ್ಟು ಸಾಕಾಗಿತ್ತು. ಆತನ ಆಪ್ತ ಸ್ನೇಹಿತನ ನಂಬರ್‌ ಪಡೆದುಕೊಂಡು ಬೆನ್ನಟ್ಟಲು ಶುರು ಮಾಡಿದರು.

ಆಪ್ತ ಸ್ನೇಹಿತನನ್ನು ಹುಡುಕಿಕೊಂಡು ಪೊಲೀಸರು ನೆಲಮಂಗಲಕ್ಕೆ ಹೋಗಿದ್ದರು. ಅಲ್ಲಿ ಗೆಳೆಯನಿದ್ದ. ಆದರೆ, ಕೆಂಪೇ ಗೌಡ ಇರಲಿಲ್ಲ. ಕೆಂಪೇಗೌಡ ಕಾರನ್ನು ಅಲ್ಲಿ ಬಿಟ್ಟು ಓಡಿ ಹೋಗಿದ್ದ. ಆಪ್ತ ಗೆಳೆಯನನ್ನೇ ಗುರಾಣಿಯಾಗಿಟ್ಟುಕೊಂಡು ಹೊರಟ ಪೊಲೀಸರಿಗೆ ಕೆಂಪೇಗೌಡ ಇನ್ನೊಬ್ಬ ಸ್ನೇಹಿತನ ಮನೆಯಲ್ಲಿ ಇರುವ ಬಗ್ಗೆ ಕ್ಲೂ ಸಿಕ್ಕಿತು.

ಆ ಮನೆ ಇದ್ದಿದ್ದು ತುಮಕೂರು ತಾಲೂಕಿನ ಗುಬ್ಬಿಯಲ್ಲಿ. ಪೊಲೀಸರು ಅಲ್ಲಿಗೆ ಧಾವಿಸಿದರಾದರೂ ಚಾಣಾಕ್ಷ ಕೆಂಪೇ ಗೌಡ ಅಲ್ಲಿಂದಲೂ ಪರಾರಿಯಾಗಿದ್ದ. ಆತನನ್ನು ಬೆನ್ನಟ್ಟಿ ತುಮಕೂರು ಮಾರ್ಗವಾಗಿ ಡಾಬಸ್‌ ಪೇಟೆಗೆ ಬಂದರು. ಆಗ ಅವರಿಗೆ ಸಿಕ್ಕಿದ ಮಾಹಿತಿ ಕೆಂಪೇಗೌಡ ಡಾಬಸ್‌ ಪೇಟೆಯಲ್ಲಿದ್ದಾನೆ ಎಂದು!

ಅಲ್ಲಿ ಸ್ನೇಹಿತರು ಆತನನ್ನು ಬಚ್ಚಿಟ್ಟಿದ್ದರು. ಇತ್ತ ಪೊಲೀಸರು ಮನೆಯತ್ತ ಧಾವಿಸಿ ಬರುತ್ತಿದ್ದಾರೆ ಎಂದು ತಿಳಿಯುತ್ತಿದ್ದಂತೆಯೇ ಕೆಂಪೇಗೌಡ ಅಲ್ಲಿಂದಲೂ ತಪ್ಪಿಸಿಕೊಳ್ಳಲು ಯತ್ನಿಸಿದ. ಆದರೆ, ಈ ಬಾರಿ ಅವನ ಪ್ರಯತ್ನ ಫಲಿಸಲಿಲ್ಲ. ಸುಮಾರು ಒಂದು ಕಿಮೀ. ದೂರಕ್ಕೆ ಚೇಸ್‌ ಮಾಡಿದ ಪೊಲೀಸರು ಆತನನ್ನು ಹಿಡಿದೇ ಬಿಟ್ಟಿದ್ದಾರೆ.

ಕಬ್ಬನ್ ಪಾರ್ಕ್ ಇನ್ಸ್‌ಪೆಕ್ಟರ್ ಚೈತನ್ಯ ಹಾಗೂ ವಿವೇಕ ನಗರ ಇನ್ಸ್ ಪೆಕ್ಟರ್ ಶಾಂತಕುಮಾರ್ ನೇತೃತ್ವದ ತಂಡ ಈ ಸಾಹಸಿಕ ಕಾರ್ಯಾಚರಣೆಯನ್ನು ನಡೆಸಿತ್ತು. ಈ ನಡುವೆ ಪರಾರಿಯಾಗುವ ಮುನ್ನ ಕೆಂಪೇಗೌಡ ನೆಲಮಂಗಲದಲ್ಲಿ ತನ್ನ ಮೊಬೈಲನ್ನು ನೆಲಕ್ಕೆ ಹೊಡೆದಿದ್ದ. ಈಗ ಪೊಲೀಸರು ಆ ಮೊಬೈಲಿನ ಚೂರುಗಳನ್ನು ಜೋಡಿಸುತ್ತಿದ್ದಾರೆ.

ಇದನ್ನೂ ಓದಿ | Voter data | ಮಾವನ ಮನೆಯಲ್ಲಿ ದಾಖಲೆ ಬಚ್ಚಿಟ್ಟು ಪರಾರಿ ಆದ ರವಿಕುಮಾರ್‌ ನಿಜಕ್ಕೂ ಯಾರು? ಇಲ್ಲಿದೆ ಸಮಗ್ರ ವಿವರ

Exit mobile version