Site icon Vistara News

Yadagiri News: ಆದಾಯಕ್ಕಿಂತ‌ ಅಧಿಕ ಆಸ್ತಿ ಹೊಂದಿರುವ ಆರೋಪ; ಯಾದಗಿರಿ ಡಿಎಚ್ಒ ಅಮಾನತು

Yadagiri News

ಯಾದಗಿರಿ: ಆದಾಯಕ್ಕಿಂತ‌ ಅಧಿಕ ಆಸ್ತಿ ಹೊಂದಿರುವ ಆರೋಪ ಎದುರಿಸುತ್ತಿರುವ ಯಾದಗಿರಿ ಡಿಎಚ್ಒ ಡಾ. ಪ್ರಭುಲಿಂಗ್ ಮಾನಕರ್ ಅವರನ್ನು ಅಮಾನತು ಮಾಡಲಾಗಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಪ್ರಭುಲಿಂಗ್ ಮಾನಕರ್ ಅವರನ್ನು ಅಮಾನತು ಮಾಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಡಳಿತಾಧಿಕಾರಿ ಆದೇಶ ಹೊರಡಿಸಿದ್ದಾರೆ. ಇಲಾಖೆ ವಿಚಾರಣೆ ಹಾಗೂ ಕ್ರಿಮಿನಲ್ ಪ್ರಕರಣ ಬಾಕಿ ಇರಿಸಿ ಅಮಾನತುಗೊಳಿಸಲಾಗಿದೆ. ಡಿಎಚ್ಒಯಿಂದ ನೇರವಾಗಿ ಕಲಬುರ್ಗಿ ತಾಲೂಕಿನ ಆಳಂದ ಸಾರ್ವಜನಿಕ ತಾಲೂಕು ಆಸ್ಪತ್ರೆಗೆ ವರ್ಗಾವಣೆ ಮಾಡಲಾಗಿದೆ (Yadagiri News).

ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕ ದೂರು ಹಿನ್ನಲೆಯಲ್ಲಿ ಕಳೆದ ಕೆಲ ತಿಂಗಳ ಹಿಂದೆ ಲೋಕಾಯುಕ್ತ ದಾಳಿ ನಡೆದಿತ್ತು. ಡಾ. ಪ್ರಭುಲಿಂಗ್ ಮಾನಕರ್ ಅವರ ಯಾದಗಿರಿಯ ಕಚೇರಿ, ಮನೆ ಹಾಗೂ ಕಲಬುರ್ಗಿ ಮನೆ ಮೇಲೆ ದಾಳಿ ನಡೆಸಿ ಪರಿಶೀಲಿಸಲಾಗಿತ್ತು.

ಕಾಲುವೆಗೆ ಬಿದ್ದ ಬೈಕ್; ಓರ್ವ ನಾಪತ್ತೆ

ಬೆಳಗಾವಿ: ರಸ್ತೆ ಗುಂಡಿಗೆ ಬಿದ್ದ ಬೈಕ್‌ ಬಳಿಕ ಆಯ ತಪ್ಪಿ ಕಾಲುವೆಗೆ ಬಿದ್ದಿರುವ ಘಟನೆ ಬೆಳಗಾವಿ ತಾಲೂಕಿನ ಅಲತಗಾ ಗ್ರಾಮದಲ್ಲಿ ‌ಶನಿವಾರ ರಾತ್ರಿ ನಡೆದಿದೆ. ಘಟನೆಯಲ್ಲಿ ಹಿಂಬದಿ ಸವಾರ ಓಂಕಾರ್ ಅರುಣ್ ಪಾಟೀಲ್ ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದು ನಾಪತ್ತೆಯಾಗಿದ್ದು, ಬೈಕ್‌ ಓಡಿಸುತ್ತಿದ್ದ ಜ್ಯೋತಿನಾಥ್‌ ಪಾಟೀಲ್ ಈಜಿ ದಡ ಸೇರಿದ್ದಾರೆ. ಓಂಕಾರ್ ಅರುಣ್ ಪಾಟೀಲ್ ಪತ್ತೆಗಾಗಿ ಹುಡುಕಾಟ ನಡೆಸಲಾಗುತ್ತಿದೆ. ರಾತ್ರಿಯಿಂದಲೇ ಕಾರ್ಯಾಚರಣೆ ಆರಂಭವಾಗಿದ್ದು, ಡಿಸಿಪಿ ಸ್ನೇಹಾ, ತಹಶಿಲ್ದಾರ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಎನ್‌ಡಿಆರ್‌ಎಫ್‌ ತಂಡವೂ ಸ್ಥಳದಲ್ಲಿದ್ದು, ಶೋಧ ಕಾರ್ಯಾಚರಣೆ ಮುಂದುವರಿದಿದೆ.

PSI Death: ನಿನ್ನೆ ಬೀಳ್ಕೊಡುಗೆ ಪಡೆದ ಪಿಎಸ್‌ಐ ಇಂದು ಹೃದಯಾಘಾತದಿಂದ ಸಾವು; 30 ಲಕ್ಷ ರೂ. ಲಂಚಕ್ಕೆ ಶಾಸಕ ಒತ್ತಡ ಹಾಕಿದ್ದರಿಂದ ಖಿನ್ನತೆ?

ಯಾದಗಿರಿ ಕೈ ಶಾಸಕ, ಪುತ್ರನ ವಿರುದ್ಧ ಎಫ್‌ಐಆರ್‌

ಯಾದಗಿರಿ: ಪಿಎಸ್ಐ ಪರಶುರಾಮ ಸಾವು ಪ್ರಕರಣಕ್ಕೆ (PSI Parshuram Death Case) ಸಂಬಂಧಿಸಿದಂತೆ ಅವರ ಪತ್ನಿ ಶ್ವೇತಾ ಕೊಟ್ಟ ದೂರಿನನ್ವಯ ಯಾದಗಿರಿ ಕಾಂಗ್ರೆಸ್‌ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ್ ಹಾಗೂ ಪುತ್ರ ಪಂಪಣ್ಣಗೌಡ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಬಿಎನ್ಎಸ್ ಸೆಕ್ಷನ್ 108 ಅಡಿ ಪ್ರಕರಣ ದಾಖಲಾಗಿದ್ದು, ಕೇಸ್‌ನಲ್ಲಿ ಎ1 ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ್, ಎ2 ಪುತ್ರ ಪಂಪನಗೌಡ ಹೆಸರು ಉಲ್ಲೇಖಿಸಲಾಗಿದೆ. ಸತತ ಪ್ರತಿಭಟನೆಗೆ ಮಣಿದ ಪೊಲೀಸ್ ಇಲಾಖೆ, ಕೊನೆಗೂ ಎಫ್ಐಆರ್ ದಾಖಲಿಸಿಕೊಂಡಿದೆ.

ಕೇಸ್ ದಾಖಲಾಗುತ್ತಿದ್ದಂತೆ ಶಾಸಕನ ಮೊಬೈಲ್ ಸ್ವಿಚ್ ಆಫ್

ಪಿಎಸ್‌ಐ ಪರಶುರಾಮ ಸಾವು ಪ್ರಕರಣದಲ್ಲಿ ಕೇಸ್ ದಾಖಲಾಗುತ್ತಿದ್ದಂತೆ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಹಾಗೂ ಅವರ ಪುತ್ರ ಪಂಪಣ್ಣಗೌಡ ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ. ಕೇಸ್ ದಾಖಲಾಗಿದ್ದರಿಂದ ಅಪ್ಪ-ಮಗ ತಲೆ ಮರೆಸಿಕೊಂಡಿದ್ದು, ಬೆಂಗಳೂರಿಗೆ ತೆರಳಿರುವ ಶಂಕೆ ವ್ಯಕ್ತವಾಗಿದೆ.

ಏನಿದು ಪ್ರಕರಣ?

ಯಾದಗಿರಿ ನಗರ ಠಾಣೆಯಲ್ಲಿ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪರಶುರಾಮ (34) ಅವರು ಹೃದಯಾಘಾತದಿಂದ ಶುಕ್ರವಾರ (ಆ. 2) ನಿಧನರಾಗಿದ್ದರು. ಇತ್ತೀಚೆಗೆ ಸೈಬರ್ ಕ್ರೈಮ್ (Cyber Crime) ಪಿಎಸ್ಐ ಆಗಿ ವರ್ಗಾವಣೆಗೊಂಡಿದ್ದ ಪರಶುರಾಮ, ಮೊನ್ನೆಯಷ್ಟೇ ನಗರ ಠಾಣೆಯಲ್ಲಿ ಅಭಿಮಾನದ ಬೀಳ್ಕೊಡುಗೆ ಪಡೆದಿದ್ದರು. ಪೊಲೀಸ್ ಕ್ವಾರ್ಟರ್ಸ್‌ ನಿವಾಸದಲ್ಲಿ ಶುಕ್ರವಾರ ಹಠಾತ್ ಹೃದಯಾಘಾತದಿಂದ ಸಾವಿಗೀಡಾಗಿದ್ದರು.ಸ್ಥಳೀಯ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಲಂಚದ ಹಣಕ್ಕಾಗಿ ಹೇರುತ್ತಿದ್ದ ಒತ್ತಡದಿಂದಲೇ ಪತಿಗೆ ಹೃದಯಾಘಾತ ಉಂಟಾಗಿದೆ ಎಂದು ಪಿಎಸ್‌ಐ ಪತ್ನಿ ಶ್ವೇತಾ ಗಂಭೀರ ಆರೋಪ ಮಾಡಿ, ಸ್ಥಳೀಯ ದಲಿತ ಸಂಘಟನೆಗಳೊಂದಿಗೆ ಪ್ರತಿಭಟನೆ ನಡೆಸಿ ಶಾಸಕ, ಪುತ್ರನ ವಿರುದ್ಧ ದೂರು ನೀಡಿದ್ದರು.

Exit mobile version