Site icon Vistara News

Murder case: ಡಾನ್‌ ಆಗೋ ಗೀಳಿನಿಂದ ಅಮಾಯಕನನ್ನು ಇರಿದು ಕೊಂದ ಮಾಜಿ ಶಾಸಕನ ಪುತ್ರ!

Young man kills innocent business man in order to become don!

Young man kills innocent business man in order to become don!

ಕಲಬುರಗಿ: ದೊಡ್ಡವರ ಮಕ್ಕಳ ದುರಾಸೆಗಳು, ಗೀಳುಗಳು, ಧಿಮಾಕುಗಳು ಎಂಥಾ ಪಾತಕ ಕೃತ್ಯಕ್ಕೂ ಪ್ರೇರೇಪಿಸುತ್ತವೆ. ಅದರಲ್ಲೂ ಯಾರೋ ಮಾಡಿಟ್ಟ ಆಸ್ತಿ, ದೊಡ್ಡ ದೊಡ್ಡ ಕಾರು, ಗೆಳೆಯರ ಬಳಗ ಇದ್ದರಂತೂ ಶೋ ಮಾಡುವುದಕ್ಕೇನೂ ಕೊರತೆ ಇರುವುದಿಲ್ಲ. ಕಲಬುರಗಿಯಲ್ಲಿ ನಡೆದಿದ್ದೇ ಇದು. ಡಾನ್‌ ಆಗಬೇಕು ಎಂಬ ಗೀಳು ಹೊಂದಿದ್ದ ಯುವಕನೊಬ್ಬ ಅಮಾಯಕ ಉದ್ಯಮಿಯೊಬ್ಬನನ್ನು ಕೊಂದೇ ಬಿಟ್ಟಿದ್ದಾನೆ. ಈ ಕೊಲೆಗಾರ ಮಾಜಿ ಶಾಸಕನ ಪುತ್ರ. ಮಾಜಿ ಶಾಸಕ ನಾಗರಾಜ ಹೊಡೆಲ್‌ ಪುತ್ರ ಸ್ವರಾಜ್ ಅಲಿಯಾಸ್ ಸಾಹಿಲ್ (Swaraj alias sahil) ಎಂಬಾತನೇ ಈ ದುಷ್ಟ.

ಕಲಬುರಗಿ ನಗರದ ಪೂಜಾ ಕಾಲೊನಿಯಲ್ಲಿ ಭಾನುವಾರ ರಾತ್ರಿ ಪ್ರಮೋದ್‌ ಎಂಬ 24 ವರ್ಷದ ಉದ್ಯಮಿಯನ್ನು ಕೊಲೆ ಮಾಡಲಾಗಿತ್ತು. ತಂಡವೊಂದು ಮಹೀಂದ್ರಾ ಥಾರ್‌ ಕಾರಿನಲ್ಲಿ ಅಡ್ಡಾದಿಡ್ಡಿ ಇಂಡಿಕೇಟರ್‌ ಹಾಕಿಕೊಂಡು ಹೋಗುತ್ತಿದ್ದುದನ್ನು ಪ್ರಶ್ನಿಸಿದ್ದಕ್ಕಾಗಿ ಪ್ರಮೋದ್‌ ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು.

ಕೊಲೆಗಾರ ಸೂರಜ್‌ ಮತ್ತು ನಾಗರಾಜ ಹೊಡೆಲ್‌

ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಚಂದನಕೇರಾ ಗ್ರಾಮದ ನಿವಾಸಿ ಪ್ರಮೋದ್ (24) ಟ್ರಾನ್ಸ್‌ಪೋರ್ಟ್ ಉದ್ಯಮ ಮಾಡಿಕೊಂಡಿದ್ದರು. ಪ್ರಮೋದ್ ಕಲಬುರಗಿ ನಗರದ ಪೂಜಾ ಕಾಲೋನಿಯಲ್ಲಿ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದ. ಭಾನುವಾರ ರಾತ್ರಿ ಪ್ರಮೋದ್ ಕೆಲಸ ಮುಗಿಸಿ ತನ್ನ ಮಾವ ಅವಿನಾಶ್‌ ಅವರ ಜತೆ ಬೈಕ್‌ನಲ್ಲಿ ಮಾವ ಅವಿನಾಶ್‌ ಅವರನ್ನು ಕೂರಿಸಿಕೊಂಡು ಮನೆಗೆ ಹೋಗುತ್ತಿದ್ದರು. ಈ ವೇಳೆ ಅವರ ಎದುರು ಭಾಗದಲ್ಲಿ ಬಾರ ಹಿಲ್ಸ್ ಬಳಿ ಮಹೀಂದ್ರಾ ಥಾರ್ ಜೀಪೊಂದು ಸಾಗುತ್ತಿತ್ತು. ಅದರಲ್ಲಿದ್ದ ಯುವಕರು ಲೆಫ್ಟ್ ರೈಟ್ ಎರಡೂ ಇಂಡಿಕೇಟರ್ ಹಾಕಿಕೊಂಡು ಹೋಗುತ್ತಿದ್ದರು. ಹಿಂಬದಿ ಬರುತ್ತಿದ್ದ ಬೈಕ್‌ಗೂ ಸೈಡ್ ಕೊಡದೆ ಸಾಗುತ್ತಿದ್ದರು. ಸುಮಾರು ಒಂದು ಕಿಲೋಮೀಟರ್‌ ವರೆಗೂ ಬೈಕ್‌ಗೆ ಸೈಡ್ ಕೊಡದೆ ಇಂಡಿಕೇಟರ್ ಹಾಕಿಕೊಂಡು ಹೋಗುತ್ತಿದ್ದರು. ಕೊನೆಗೆ ಒಂದು ಹಂತದಲ್ಲಿ ಕಾರಿಗಿಂತ ಮುಂದೆ ಹೋದ ಪ್ರಮೋದ್ ಮತ್ತು ಆತನ ಮಾವ ಅವಿನಾಶ್ ʻʻಇಂಡಿಕೇಟರ್ ಸರಿಯಾಗಿ ಹಾಕಿ…ನಮಗೆ ಗೊಂದಲ ಆಗ್ತಿದೆʼʼ ಎಂದು ಹೇಳಿದರು.

ಆಗ ಜೀಪಿನಿಂದ ಇಳಿದ ಯುವಕರ ಗುಂಪು ಜಗಳಕ್ಕೆ ನಿಂತಿದ್ದಲ್ಲದೆ ಪ್ರಮೋದ್‌ ಅವರಿಗೆ ಮನಬಂದಂತೆ ಚಾಕು ಇರಿದು ಎಸ್ಕೇಪ್ ಆಗಿತ್ತು!

ಮಾಜಿ ಶಾಸಕನ ಪುತ್ರನೇ ಕೊಲೆಗಾರ

ಈ ನಡುವೆ ಕೊಲೆ ಪ್ರಕರಣದ ಬೆನ್ನು ಹತ್ತಿದ ಪೊಲೀಸರಿಗೆ ಅಚ್ಚರಿ ಕಾದಿತ್ತು. ಯಾಕೆಂದರೆ ಕೊಲೆ ಮಾಡಿದ್ದು ಮಾಜಿ ಶಾಸಕ ನಾಗರಾಜ್‌ ಹೊಡೆಲ್‌ ಅವರ ಪುತ್ರ ಸ್ವರಾಜ್‌ ಅಲಿಯಾಸ್‌ ಸಾಹಿಲ್‌. ಮಹೀಂದ್ರಾ ಥಾರ್‌ ಓಡಿಸುತ್ತಿದ್ದ ತನ್ನನ್ನು ಒಬ್ಬ ಬೈಕ್‌ನವನು ಪ್ರಶ್ನಿಸಿದ್ದರಿಂದ ಸಿಟ್ಟಿಗೆದ್ದ ಆತ ಚಾಕುವಿನಿಂದ ಇರಿದು ಕೊಲೆಯನ್ನೇ ಮಾಡಿದ್ದಾನೆ.

ಡಾನ್‌ ಆಗಬೇಕು ಎಂಬ ಗೀಳು

ಸ್ವರಾಜ್‌ ಅಲಿಯಾಸ್‌ ಸಾಹಿಲ್‌ಗೆ ಬೇಕಾದಷ್ಟು ದುಡ್ಡು ಮತ್ತು ಐಷಾರಾಮಿ ಕಾರುಗಳಿದ್ದವು. ಹೀಗಾಗಿ ಅಹಂಕಾರವೂ ತಲೆಗೇರಿತ್ತು. ಅದರ ಜತೆಗೆ ತನ್ನನ್ನು ಎಲ್ಲರೂ ಡಾನ್‌ ರೀತಿಯಲ್ಲಿ ಟ್ರೀಟ್‌ ಮಾಡಬೇಕು. ಭಾಯ್‌ ಎಂದು ಕರೆಯಬೇಕು ಎಂಬ ಗೀಳು ಹೊಂದಿದ್ದ! ಹೀಗಾಗಿ ಪ್ರಮೋದ್‌ ಕೈಗೆ ಸಿಕ್ಕಿದ್ದೇ ಅವನನ್ನು ಚೆನ್ನಾಗಿ ದಬಾಯಿಸಿದ್ದಲ್ಲದೆ, ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಆತ ಆಗಲೇ ಹಲವು ರೌಡಿಸಂ ಕೃತ್ಯಗಳನ್ನು ನಡೆಸಿ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದ್ದ.

ಕಳೆದ ಭಾನುವಾರ ಘಟನೆ ನಡೆದಾಗ ಕಾರಿನಲ್ಲಿ ಸ್ವರಾಜ್‌ ಅಲಿಯಾಸ್‌ ಸಾಹಿಲ್‌ ಮತ್ತು ಇನ್ನೊಬ್ಬ ಸಣ್ಣ ವಯಸ್ಸಿನ ಹುಡುಗನಿದ್ದ. ಅವರಿಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: Murder Attempt: ಕುಟುಂಬಗಳ ನಡುವೆ ಆಸ್ತಿ ಜಗಳ; ಮಚ್ಚಿನಿಂದ ಅಟ್ಟಾಡಿಸಿ ಹೊಡೆದು ನಾಲ್ವರ ಮೇಲೆ ಹಲ್ಲೆ

Exit mobile version