Site icon Vistara News

Viral Video: ಅಪ್ಪ-ಮಗನ ಗುದ್ದಾಟದಿಂದ ಮೂವರು ಅಮಾಯಕರ ಸ್ಥಿತಿ ಗಂಭೀರ!

Viral Video


ಮನೆಯವರ ಜಗಳ ಯಾವಾಗಲೂ ಮನೆಯೊಳಗೆ ನಡೆಯಬೇಕು ಮತ್ತು ಅದು ಮನೆಯೊಳಗೆ ಇತ್ಯರ್ಥವಾಗಬೇಕು. ಒಂದು ವೇಳೆ ಅದು ಬೀದಿಗೆ ಬಂದರೆ ಮರ್ಯಾದೆ ಹೋಗುವುದಲ್ಲದೇ ಸಾರ್ವಜನಿಕರಿಗೂ ಇದರಿಂದ ಹಾನಿಯಾಗುತ್ತದೆ ಎಂಬುದಕ್ಕೆ ಮಹಾರಾಷ್ಟ್ರದ ಅಂಬರ್‌ನಾಥದಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ತಂದೆಯಿಂದ ಕುಪಿತನಾಗಿದ್ದ ಅಂಬರ್‌ನಾಥ್ ನಿವಾಸಿ ಬಿಂದೇಶ್ವರ್ ಶರ್ಮಾ ಮಂಗಳವಾರ ಸಂಜೆ 5 ಗಂಟೆ ಸುಮಾರಿಗೆ ತನ್ನ ತಂದೆಯ ಫಾರ್ಚೂನರ್ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಐವರು ಗಾಯಗೊಂಡಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಆರೋಪಿ ಬಿಂದೇಶ್ವರ್ ಶರ್ಮಾ ಅವರ ತಂದೆ, ನಿವೃತ್ತ ಹಿರಿಯ ರಕ್ಷಣಾ ಅಧಿಕಾರಿ ಸತೀಶ್ ಶರ್ಮಾ, ತಮ್ಮ ಮಗ ಮತ್ತು ಸೊಸೆಯ ನಡುವಿನ ವಿವಾದವನ್ನು ಬಗೆಹರಿಸಲು ಥಾಣೆಯ ಅಂಬರ್‌ನಾಥ್‍ಗೆ ಬಂದಿದ್ದರು. ಅವರು ಬಿಂದೇಶ್ವರನ ಮನೆಯನ್ನು ತಲುಪಿದಾಗ, ಅವರು ಅಲ್ಲಿ ಅವನನ್ನು ಕಾಣಲಿಲ್ಲ. ಆ ನಂತರ ಸೊಸೆಯನ್ನು ಸಮಾಧಾನಪಡಿಸಿದ ನಂತರ ಅವರು ಮುಂಬೈಗೆ ಹಿಂದಿರುಗಲು ಮುಂದಾದರು. ಆಗ ಅವರು ಅಂಬರ್‌ನಾಥ್‌ನ 7 ಸ್ಟಾರ್‌ ಹೋಟೆಲ್ ಸಮೀಪಿಸುತ್ತಿದ್ದಂತೆ, ಬಿಂದೇಶ್ವರ್ ತನ್ನ ಸಫಾರಿ ಕಾರಿನಲ್ಲಿ ಹಿಂದಿನಿಂದ ವೇಗವಾಗಿ ಬರುತ್ತಿರುವುದನ್ನು ಅವರು ನೋಡಿದರು. ಬಿಂದೇಶ್ವರ್ ತನ್ನ ಕುಟುಂಬದೊಂದಿಗೆ ಮಾತನಾಡಲು ಬಯಸುತ್ತಾನೆ ಎಂದು ಭಾವಿಸಿ ಅವನ ತಂದೆ ತನ್ನ ಡ್ರೈವರ್ ಬಳಿ ಕಾರನ್ನು ರಸ್ತೆ ಬದಿಯಲ್ಲಿ ನಿಲ್ಲಿಸುವಂತೆ ಹೇಳಿ, ಕಾರಿನಿಂದ ಕೆಳಗಿಳಿದರು.

ಬಿಂದೇಶ್ವರ್ ಮಾತ್ರ ಕಾರನ್ನು ನಿಲ್ಲಿಸದೆ, ನಿಲ್ಲಿಸಿದ್ದ ತಂದೆಯ ಕಾರನ್ನು ಓವರ್‌ಟೇಕ್‌ ಮಾಡಿ, ಡ್ರೈವರ್‌ನಿಗೆ ಡಿಕ್ಕಿ ಹೊಡೆದು ಸುಮಾರು 100 ಅಡಿ ಮುಂದೆ ಎಳೆದುಕೊಂಡು ಹೋದ. ನಂತರ ಅವನು ಕಾರನ್ನು ಯು-ಟರ್ನ್ ತೆಗೆದುಕೊಂಡು ತಂದೆಯ ಕಾರಿಗೆ ಗುದ್ದಿದ್ದಾನೆ. ಇದರಿಂದ ಅವರ ತಂದೆಯ ಕಾರಿನ ಹಿಂಭಾಗದಲ್ಲಿ ನಿಲ್ಲಿಸಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಇದರಿಂದ ಅವರ ತಂದೆಯ ಕಾರಿನ ಡ್ರೈವರ್ ಮತ್ತು ಬೈಕಿನಲ್ಲಿದ್ದ ಇಬ್ಬರ ಸ್ಥಿತಿ ಗಂಭೀರವಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.

ಇದನ್ನೂ ಓದಿ:ಸೂಪರ್ ಮಾರ್ಕೆಟ್‍ನೊಳಗೇ ಒಳ ಉಡುಪು ಕಳಚಿ ಬ್ರೆಡ್ ಟ್ರೇನಲ್ಲಿಟ್ಟ ಯುವತಿ!

ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಸಂತ್ರಸ್ತರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಆರೋಪಿ ತಲೆಮರೆಸಿಕೊಂಡಿದ್ದು, ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿ ತನ್ನ ತಂದೆಯೊಂದಿಗೆ ವಿವಾದ ಹೊಂದಿದ್ದಾನೆ. ಮುಂಬೈನಲ್ಲಿ ವಾಸಿಸುವ ಸತೀಶ್ ಮಂಗಳವಾರ ತನ್ನ ಪತ್ನಿ ಮತ್ತು ಕಿರಿಯ ಮಗ ಮತ್ತು ಚಾಲಕನೊಂದಿಗೆ ವಿವಾದವನ್ನು ಪರಿಹರಿಸಲು ಥಾಣೆಯ ಅಂಬರ್‌ನಾಥ್‌ಗೆ ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Exit mobile version