Site icon Vistara News

Brass utensils | ತಾಮ್ರ, ಹಿತ್ತಾಳೆ ಪಾತ್ರೆಗಳ ಬಳಕೆ: ಕೆಲವು ಸಲಹೆಗಳು

brass utensils

ಮನೆಯಲ್ಲಿ ಹಳೆಕಾಲದ ಪಾತ್ರೆಗಳಿವೆಯೇ? ʻಹಳೆ ಪಾತ್ರೆ ಯಾಕಿಟ್ಟುಕೊಳ್ಳಲಿ?ʼ ಎಂದು ಮೂಗು ಮುರಿಯಬೇಡಿ. ಪ್ರಶ್ನೆ ಇದ್ದಿದ್ದು ಹಳೆ ಪಾತ್ರೆ ಎಂದಲ್ಲ, ಹಳೆಯ ಕಾಲದ ಪಾತ್ರೆ ಎಂದು. ಹಾಳಾದ ಬಾಣಲೆ, ಕೈ ಕಿತ್ತು ಹೋದ ಕುಕ್ಕರ್‌ ಮುಚ್ಚಳಗಳಂಥ ಪಾತ್ರೆಗಳ ಬಗ್ಗೆ ಅಲ್ಲ ಇಲ್ಲಿ ಮಾತನಾಡುತ್ತಿರುವುದು. ಅಜ್ಜಿಯ ಕಾಲದ ಹಿತ್ತಾಳೆ ಮತ್ತು ತಾಮ್ರದ ಪಾತ್ರೆ, ಕಡಾಯಿಗಳ ಬಗ್ಗೆ ಕೇಳಿದ್ದು. ಸ್ವಲ್ಪ ಅನುಕೂಲ ಇದ್ದವರ ಮನೆಗಳಲ್ಲಿ ಹಳೆಯ ಬೆಳ್ಳಿ ಪಾತ್ರೆಗಳೂ ಇದ್ದಿರಬಹುದು. ಯಾವುದೋ ಎಕ್ಸ್‌ಚೇಂಜ್‌ ಆಫರ್‌ ಬಗ್ಗೆ ಪ್ರಚಾರಕ್ಕಲ್ಲ ಕೇಳುತ್ತಿರುವುದು. ಬೆಳ್ಳಿ, ತಾಮ್ರ ಮತ್ತು ಹಿತ್ತಾಳೆ ಪಾತ್ರೆಗಳಲ್ಲಿ ಅಡುಗೆ ಮಾಡುವುದರಿಂದ ಆರೋಗ್ಯಕ್ಕೆ ಆಗುವ ಅನುಕೂಲಗಳ ಬಗೆಗಿನ ಮಾತುಕತೆಯಿದು.

ಸ್ಟೀಲ್‌ ಪಾತ್ರೆಗಳು, ಗಾಜಿನ ಅಥವಾ ನಾನ್‌ಸ್ಟಿಕ್‌ ಪಾತ್ರೆಗಳು ಮಾತ್ರವೇ ಈಗಿನ ಅಡುಗೆ ಮನೆಗಳಲ್ಲಿ ಕಾಣಸಿಗುತ್ತವೆ. ಕಾಲಕ್ಕೆ ತಕ್ಕಂತೆ ನಡೆಯುವುದರಲ್ಲಿ ತಪ್ಪೇನಿಲ್ಲ. ಹಾಗಂತ ಇದರರ್ಥ ಹಳೆಯದನ್ನೆಲ್ಲಾ ಬಿಡಬೇಕೆಂದೂ ಅಲ್ಲ. ಹಳೆಯ ಕಾಲದ ತಾಮ್ರ, ಹಿತ್ತಾಳೆಯ ಪಾತ್ರೆಗಳನ್ನು ನಿಭಾಯಿಸುವುದು ಕಷ್ಟ. ಫಳಫಳ ಎನಿಸುವುದಕ್ಕೆ ಪದೇಪದೆ ಹುಳಿ ಹಾಕಿ ಉಜ್ಜಬೇಕು, ಮೊದಲಿನಂತೆ ಕಲಾಯಿ ಹಾಕುವವರೂ ಇಲ್ಲ ಈಗ- ಇಂಥ ಎಲ್ಲಾ ತಕರಾರುಗಳೂ ಸಮ್ಮತವೇ. ಆದರೆ ಆರೋಗ್ಯಕ್ಕೆ ಆಗುವ ಅನುಕೂಲಗಳ ಬಗ್ಗೆ ನಾವೀಗ ಒಮ್ಮತಕ್ಕೆ ಬರಬಹುದಲ್ಲ. ಅದರಲ್ಲೂ ಇತ್ತೀಚೆಗೆ ದೊರೆಯುವ ತಾಮ್ರ ಮತ್ತು ಹಿತ್ತಾಳೆಯ ಪಾತ್ರೆಗಳು ಬಳಕೆಗೆ ಸರಳ ಮತ್ತು ನೋಡುವುದಕ್ಕೆ ಸುಂದರ.

ಪೌಷ್ಟಿಕಾಂಶ ಕಾಪಿಡುತ್ತದೆ: ತಾಮ್ರ, ಹಿತ್ತಾಳೆಯ ಪಾತ್ರೆಗಳು ಒಮ್ಮೆ ಬಿಸಿಯಾದರೆ ದೀರ್ಘಕಾಲದವರೆಗೆ ಬಿಸಿ ಕಾಯ್ದುಕೊಂಡಿರುತ್ತವೆ. ಮಾತ್ರವಲ್ಲ, ಇಡೀ ಪಾತ್ರೆ ಒಂದೇಸಮ ಬಿಸಿಯಾಗುತ್ತದೆ, ಹೆಚ್ಚು-ಕಡಿಮೆ ಇಲ್ಲದಂತೆ. ಇದರಿಂದ ಇಂಥ ಪಾತ್ರೆಗಳಲ್ಲಿ ಮಾಡುವ ಅಡಿಗೆಗಳನ್ನು ದೀರ್ಘಕಾಲ ಬೆಂಕಿಯಲ್ಲಿ ಇಡುವುದು ಬೇಡ. ಸ್ವಲ್ಪ ಕಾಲ ಉರಿಯಲ್ಲಿಟ್ಟರೂ ಸಾಕು, ಉಳಿದಂತೆ ಪಾತ್ರೆಯ ಶಾಖಕ್ಕೇ ಬೇಯುವ ಪ್ರಕ್ರಿಯೆ ಜಾರಿಯಲ್ಲಿರುತ್ತದೆ. ಒಲೆಯ ಕಾವಿನಲ್ಲಿ ಹಾಗೆಯೇ ಬಿಟ್ಟರೆ ದೀರ್ಘಕಾಲದವರೆಗೆ ಬಿಸಿ ಕಾಪಾಡಿಕೊಂಡು, ಮತ್ತೆಮತ್ತೆ ಬಿಸಿ ಮಾಡುವ ಸಮಸ್ಯೆಯನ್ನು ನಿವಾರಿಸುತ್ತದೆ. ಹಾಗಾಗಿ ಪೌಷ್ಟಿಕಾಂಶ ಮತ್ತು ಇಂಧನ- ಎರಡೂ ಉಳಿಯುತ್ತವೆ.

ಸೋಂಕುಗಳಿಗೆ ಕಡಿವಾಣ: ತಾಮ್ರ ಮತ್ತು ಹಿತ್ತಾಳೆಯಲ್ಲಿಟ್ಟ ಆಹಾರದ ಸೇವನೆಯಿಂದ ದೇಹದ ರೋಗನಿರೋಧಕ ಶಕ್ತಿ ವರ್ಧಿಸುತ್ತದೆ. ಅದರಲ್ಲೂ ನೆಗಡಿ-ಕೆಮ್ಮು-ದಮ್ಮಿನಂಥ ಸಮಸ್ಯೆಗಳಿಗೆ ಪದೇಪದೆ ತುತ್ತಾಗುವವರಿಗೆ ಬೆಳ್ಳಿ, ತಾಮ್ರ ಅಥವಾ ಹಿತ್ತಾಳೆ ಪಾತ್ರೆಯಲ್ಲಿಟ್ಟ ನೀರು ಕುಡಿಸುವ ಪದ್ಧತಿ ಹಿಂದಿನಿಂದಲೂ ಜಾರಿಯಲ್ಲಿದೆ.

ಸಮಸ್ಯೆಗಳಿಗೆ ಪರಿಹಾರ: ಅಂದರೆ ಜೋತಿಷಿಗಳಲ್ಲಿ ಹೋಗುವಂಥ ಸಮಸ್ಯೆಗಳಲ್ಲ, ಆರೋಗ್ಯದ ಕಿರಿಕಿರಿಗಳು. ಹಿತ್ತಾಳೆ ಪಾತ್ರೆಗಳಲ್ಲಿ ಅಡುಗೆ ಮಾಡುವುದರಿಂದ, ರಕ್ತದಲ್ಲಿ ಹಿಮೋಗ್ಲೋಬಿನ್‌ ವೃದ್ಧಿಗೆ ಸಹಾಯಕವಾಗುತ್ತದೆ. ತಾಮ್ರದ ಪಾತ್ರೆಯ ನೀರು ಕುಡಿಯುವುದರಿಂದ ದೇಹದಲ್ಲಿ ಉರಿಯೂತಗಳು ಕಡಿಮೆಯಾಗುತ್ತವೆ. ಕೀಲುನೋವಿನಂಥ ಸಮಸ್ಯೆಗಳಿಗೆ ಇದು ಉಪಯುಕ್ತ.

ಇದನ್ನೂ ಓದಿ | Hair care | ಫಳಫಳಿಸುವ ತಲೆಕೂದಲಿಗೆ ಸತ್ವಯುತ ಆಹಾರವೇ ಮೂಲ

ತೂಕ ಇಳಿಕೆ: ನಮ್ಮ ದೇಹದ ಜೀರ್ಣಾಂಗವನ್ನು ಚುರುಕುಗೊಳಿಸುವಂಥ ಅಂಶಗಳು ಈ ಲೋಹಗಳಿಗಿವೆ. ಹಾಗಾಗಿ ಆಸಿಡಿಟಿ, ಅಜೀರ್ಣ, ವಾಯುಪ್ರಕೋಪ, ಮಲಬದ್ಧತೆಯಂಥ ಸಮಸ್ಯೆಗಳನ್ನು ದೂರಮಾಡಲು ನೆರವಾಗುತ್ತದೆ. ಹೊಟ್ಟೆಯನ್ನು ಸ್ವಚ್ಛವಾಗಿಟ್ಟು, ಪೌಷ್ಟಿಕಾಂಶಗಳನ್ನು ಹೀರಿಕೊಳ್ಳಲು ದೇಹಕ್ಕೆ ನೆರವಾಗುತ್ತದೆ. ಜೀರ್ಣಾಂಗದ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಮೂಲಕ, ದೇಹದಲ್ಲಿ ಕೊಬ್ಬು ಶೇಖರವಾಗುವುದನ್ನು ತಡೆದು, ತೂಕ ಇಳಿಸುವುದಕ್ಕೂ ಸಹಕಾರಿಯಾಗುತ್ತದೆ. ಮಾತ್ರವಲ್ಲ, ನಮ್ಮ ಕಣ್ಣು ಮತ್ತು ಚರ್ಮದ ಆರೋಗ್ಯವನ್ನೂ ಉತ್ತಮಪಡಿಸುತ್ತದೆ.

ಹೃದಯಾರೋಗ್ಯ: ರಕ್ತದೊತ್ತಡವನ್ನು ಕಡಿಮೆ ಮಾಡುವ ಗುಣ ತಾಮ್ರಕ್ಕಿದೆ. ಈ ಲೋಹಗಳನ್ನು ನಿಯಮಿತವಾಗಿ ಬಳಸಿದಲ್ಲಿ ಕೊಲೆಸ್ಟ್ರಾಲ್‌ ಮತ್ತು ರಕ್ತದೊತ್ತಡ ನಿಯಂತ್ರಣಕ್ಕೆ ನೆರವು ದೊರೆತು ಹೃದಯಾರೋಗ್ಯ ಉತ್ತಮಪಡಿಸಲು ಅನುಕೂಲವಾಗಲಿದೆ. ದೇಹಕ್ಕೆ ಅಗತ್ಯವಿರುವ ಸೂಕ್ಷ್ಮ ಪೋಷಕಾಂಶಗಳನ್ನು ಒದಗಿಸಿ, ಆಹಾರದ ಗುಣಮಟ್ಟ ಮತ್ತು ರುಚಿಯನ್ನು ಹೆಚ್ಚಿಸುವಲ್ಲಿ ತಾಮ್ರ ಮತ್ತು ಹಿತ್ತಾಳೆಯ ಪಾತ್ರೆಗಳು ಉತ್ತಮ ಆಯ್ಕೆ.

ಇದನ್ನೂ ಓದಿ | Storing Food | ಆಹಾರದ ಸತ್ವ ಕೆಡದಂತೆ ರಕ್ಷಿಸಿಕೊಳ್ಳುವುದು ಹೇಗೆ?

Exit mobile version