Site icon Vistara News

Lok Sabha Election 2024: ಯಾರೂ ಗೆರೆ ದಾಟುವಂತಿಲ್ಲ: ಕೈ ಒಳಜಗಳಕ್ಕೆ ಡಿಕೆಶಿ ವಾರ್ನಿಂಗ್;‌ ಮೋದಿ ಬಂದರೂ ಹೆದರಲ್ಲ!

Lok Sabha Election 2024 and DK Shivakumar attack on Amit Shah and PM Narendra Modi for road show in Bangalore Rural constituency

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಸಂಬಂಧ ಕಾಂಗ್ರೆಸ್‌ (Congress Karnataka) ಪಕ್ಷದಲ್ಲಿ ಎಲ್ಲ ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. ಆದರೆ, ಕೋಲಾರ ಲೋಕಸಭಾ ಕ್ಷೇತ್ರ (Kolar Lok Sabha constituency) ಸೇರಿದಂತೆ ಹಲವು ಕಡೆ ಟಿಕೆಟ್‌ ವಂಚಿತರಿಂದ ಅಸಮಾಧಾನ ಎದುರಾಗಿದೆ. ಆದರೆ, ಇದಕ್ಕೆ ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ (DK Shivakumar) ಖಡಕ್‌ ಎಚ್ಚರಿಕೆಯನ್ನು ನೀಡಿದ್ದು, ಗುಂಪು ರಾಜಕೀಯಕ್ಕೆ ಅವಕಾಶವಿಲ್ಲ. ಯಾವುದೇ ಸಚಿವರು, ಶಾಸಕರು ಪಕ್ಷದ ಲಕ್ಷ್ಮಣ ರೇಖೆ ದಾಟಲು ಸಾಧ್ಯವಿಲ್ಲ. ಗೆಲ್ಲುವುದು ಮುಂದಿನ ಮಾತು ಎಂದು ಗುಡುಗಿದ್ದಾರೆ. ಇನ್ನು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ರೋಡ್‌ ಶೋಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah Road Show) ಅಲ್ಲ ಪ್ರಧಾನಿ ನರೇಂದ್ರ ಮೋದಿ (PM Narendra Modi) ಬಂದರೂ ಹೆದರಲ್ಲ ಎಂದು ಹೇಳಿದ್ದಾರೆ.

ಕೆಪಿಸಿಸಿ ಕಚೇರಿ ಬಳಿ ಮಾಧ್ಯಮದವರೊಂದಿಗೆ ಕೋಲಾರದ ರಾಜಕೀಯ ವಿದ್ಯಮಾನಗಳ ಬಗ್ಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ನಾನು ಸಚಿವ ಕೆ.ಎಚ್. ಮುನಿಯಪ್ಪ, ಬೇರೆ ನಾಯಕರ ಜತೆ ಚರ್ಚೆ ಮಾಡಿದ್ದು, ಎಲ್ಲರೂ ತಮ್ಮ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇಲ್ಲಿ ಗುಂಪು ರಾಜಕೀಯಕ್ಕೆ ಅವಕಾಶವಿಲ್ಲ. ಶಿಸ್ತು ಇಲ್ಲಿ ಬಹಳ ಮುಖ್ಯ. ಯಾವುದೇ ಸಚಿವರು, ಶಾಸಕರು ಪಕ್ಷದ ಲಕ್ಷ್ಮಣ ರೇಖೆ ದಾಟಲು ಸಾಧ್ಯವಿಲ್ಲ ಎಂದು ಹೇಳಿದ್ದೇವೆ. ಗೆಲ್ಲುವುದು ಬಿಡುವುದು ಬೇರೆ ವಿಚಾರ. ಪಕ್ಷದಲ್ಲಿ ಶಿಸ್ತು ಕಾಪಾಡಿ ರಾಜ್ಯ ಹಾಗೂ ಪಕ್ಷದ ಹಿತಕ್ಕೆ ಕೆಲಸ ಮಾಡಬೇಕು. ವಿರೋಧ ವ್ಯಕ್ತಪಡಿಸಿದ ನಾಯಕರು ಕ್ಷಮೆ ಕೇಳಿದ್ದಾರೆ, ಮುನಿಯಪ್ಪ, ಸಚಿವ ಸುಧಾಕರ್ ಸೇರಿದಂತೆ ಇತರೆ ಶಾಸಕರು, ನಾಯಕರು ಪಕ್ಷದ ಆದೇಶ ಪಾಲಿಸಬೇಕು. ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಸಾಮಾನ್ಯ ಕಾರ್ಯಕರ್ತ, ಮಾಜಿ ಮೇಯರ್ ಪುತ್ರ ಯುವ ಅಭ್ಯರ್ಥಿಗೆ ಪಕ್ಷ ಟಿಕೆಟ್ ನೀಡಿದ್ದು, ಎಲ್ಲರೂ ಒಟ್ಟಾಗಿ ಅವರನ್ನು ಗೆಲ್ಲಿಸಿಕೊಂಡು ಬರಬೇಕು” ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ.

ಕೋಲಾರದಲ್ಲಿ ಗೆಲ್ಲುವ ಅವಕಾಶವಿದ್ದರೂ ಒಳ ಏಟು ಬೀಳುವ ಸಾಧ್ಯತೆ ಇದೆಯಾ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್‌, “ಯಾವ ಒಳಏಟೂ ಇಲ್ಲ. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಪರಿಶಿಷ್ಟ ಜಾತಿ ಬಲಪಂಥೀಯರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯ ಮಾಡಿದರು. ಅದನ್ನು ತಪ್ಪು ಎಂದು ಹೇಳುವುದಿಲ್ಲ. 10 ಕ್ಷೇತ್ರಗಳಲ್ಲಿ ಎಡಪಂಥೀಯರು ಹೆಚ್ಚಾಗಿದ್ದು, ನಾವು ರಾಜ್ಯದ ಹಿತವನ್ನು ನೋಡಬೇಕಿದೆ. ಎಲ್ಲವನ್ನೂ ಲೆಕ್ಕಾಚಾರ ಮಾಡಿ ಟಿಕೆಟ್ ನೀಡಿದ್ದೇವೆ ಎಂದು ಹೇಳಿದರು.

ಬಿಜೆಪಿಯಿಂದ ಕಿರುಕುಳ

ಲೋಕಸಭೆ ಚುನಾವಣೆಯಲ್ಲಿ ಸೋಲಿನ ಭೀತಿಯಿಂದಾಗಿ ಕೇಂದ್ರ ಬಿಜೆಪಿ ಸರ್ಕಾರ, ಕಾಂಗ್ರೆಸ್ ಮತ್ತು ಕಮ್ಯುನಿಷ್ಟ್ ಪಕ್ಷ ಸೇರಿದಂತೆ ವಿರೋಧ ಪಕ್ಷಗಳಿಗೆ ತೆರಿಗೆ ಇಲಾಖೆಯಿಂದ ನೊಟಿಸ್ ಜಾರಿ ಮಾಡಿ ಕಿರುಕುಳ ನೀಡುತ್ತಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದರು.

1800 ಕೋಟಿ ರೂಪಾಯಿ ತೆರಿಗೆ ಪಾವತಿಸಬೇಕು ಎಂದು ಆದಾಯ ತೆರಿಗೆ ಇಲಾಖೆ ಕಾಂಗ್ರೆಸ್ ಪಕ್ಷಕ್ಕೆ ನೋಟಿಸ್ ಜಾರಿ ಮಾಡಿದೆ. ಇದು ಪ್ರಜಾಪ್ರಭುತ್ವ ದೇಶ. ಆದರೂ ಬಿಜೆಪಿ ಸರ್ಕಾರ ಅಧಿಕಾರಿಗಳ ಮೂಲಕ ವಿರೋಧ ಪಕ್ಷಗಳಿಗೆ ಕಿರುಕುಳ ನೀಡುತ್ತಿದೆ. ಸೂರ್ಯ ಮುಳುಗುತ್ತಾನೆ, ಮತ್ತೆ ಹುಟ್ಟುತ್ತಾನೆ. ಇಲ್ಲಿ ಯಾವುದೂ ಶಾಶ್ವತವಲ್ಲ. ಕಾಂಗ್ರೆಸ್ ಹಾಗೂ ಇಂಡಿಯಾ ಮೈತ್ರಿಕೂಟಕ್ಕೆ ಬಿಜೆಪಿ ಸರ್ಕಾರ ಬೆದರಿದೆ. ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ ಎಂದು ಅವರಿಗೆ ಅರಿವಾಗಿದೆ. ಹೀಗಾಗಿ ಅವರು ಎಲ್ಲರಿಗೂ ಕಿರುಕುಳ ನೀಡುತ್ತಿದ್ದಾರೆ.

ನನಗೂ ನೋಟಿಸ್ ಬಂದಿದೆ

ನನ್ನ ವಿರುದ್ಧದ ಪ್ರಕರಣ ಮುಕ್ತಾಯವಾಗಿದ್ದರೂ ನಿನ್ನೆ ರಾತ್ರಿ ನನಗೆ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಜಾರಿ ಮಾಡಲಾಗಿದೆ. ಕರ್ನಾಟಕದಿಂದ ಆಯ್ಕೆಯಾಗಿರುವ ಹಾಲಿ ಕೇಂದ್ರ ಸಚಿವರು ಸೇರಿದಂತೆ ಅನೇಕ ಬಿಜೆಪಿ ನಾಯಕರ ವಿರುದ್ಧವೂ ಪ್ರಕರಣಗಳಿವೆ. ಕಳೆದ ನಾಲ್ಕೈದು ವರ್ಷಗಳಿಂದ ಆ ಪ್ರಕರಣಗಳಲ್ಲಿ ಯಾವುದೇ ವಿಚಾರಣೆ, ನೊಟೀಸ್, ಆರೋಪಪಟ್ಟಿ ಸಲ್ಲಿಕೆ, ಕ್ರಮ ಇಲ್ಲವಾಗಿದೆ. ಕೇವಲ ಕಾಂಗ್ರೆಸ್ ನಾಯಕರನ್ನು ಮಾತ್ರ ಗುರಿ ಮಾಡಲಾಗುತ್ತಿದೆ. ಬಿಜೆಪಿ ಸೇರಿದರೆ ಮಾತ್ರ ಬಿ ರಿಪೋರ್ಟ್ ಸಲ್ಲಿಕೆ ಮಾಡಿ ಅವರ ವಿರುದ್ಧ ಪ್ರಕರಣ ಮುಚ್ಚಿಹಾಕಲಾಗುತ್ತದೆ” ಎಂದು ತಿಳಿಸಿದರು.

ಇದನ್ನೂ ಓದಿ: Lok Sabha Election 2024: ಕರ್ನಾಟಕದಲ್ಲಿ ಮತದಾನ ನಡೆಯುವ 2 ದಿನವೂ ಸಾರ್ವತ್ರಿಕ ರಜೆ ಘೋಷಣೆ

ಅಮಿತ್‌ ಶಾ ಅಲ್ಲ, ಮೋದಿ ಬಂದರೂ ಹೆದರಲ್ಲ

ಕೇಂದ್ರ ಸಚಿವ ಅಮಿತ್ ಶಾ ಅವರು ಚನ್ನಪಟ್ಟಣದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಂಡಿದ್ದು ಡಿ.ಕೆ. ಸಹೋದರರನ್ನು ಟಾರ್ಗೆಟ್ ಮಾಡಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್, ನಾವು ಬಲಿಷ್ಠವಾದಷ್ಟು ನಮಗೆ ಹೆಚ್ಚು ಶತ್ರುಗಳು, ನಾವು ಬಲಿಷ್ಠವಾದಷ್ಟು ನಮಗೆ ಹೆಚ್ಚು ಅಧಿಕಾರ. ನಮಗೆ ಇದು ಹೊಸತಲ್ಲ. ಅಮಿತ್ ಶಾ ಅವರಾದರೂ ಬರಲಿ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಾದರೂ ಬರಲಿ. ಯಾವುದಕ್ಕೂ ನಾವು ಹೆದರಲ್ಲ. ನಾವು ರಾಜಕೀಯವಾಗಿ ಎಚ್.ಡಿ. ದೇವೇಗೌಡರು, ಅವರ ಪುತ್ರ ಎಚ್.ಡಿ. ಕುಮಾರಸ್ವಾಮಿ, ಸೊಸೆ ಹಾಗೂ ಮೊಮ್ಮಗನನ್ನು ಎದುರಿಸಿದ್ದೇವೆ. ನಮ್ಮ ಜನಕ್ಕೆ ಪ್ರಜ್ಞೆ ಇದೆ. ಕೋವಿಡ್ ಸಮಯದಲ್ಲಿ ಸುರೇಶ್ ಹೊರತಾಗಿ ರಾಜ್ಯ ಮತ್ತು ದೇಶದಲ್ಲೇ ಕೋವಿಡ್ ಶವಗಳನ್ನು ಮಣ್ಣು ಮಾಡಿದ ಮತ್ತೊಬ್ಬ ನಾಯಕ ಇಲ್ಲ. ಈಗ ಮಾತನಾಡುತ್ತಿರುವವರು ಆಗ ಎಲ್ಲಿ ಹೋಗಿದ್ದರು? ಮನೆ ಮನೆಗೆ ಔಷಧಿ, ಆಹಾರ ಕಿಟ್ ನೀಡಿದ್ದು ಈಗ ಮಾತನಾಡುತ್ತಿರುವವರಲ್ಲ. ಕೇವಲ ಕಾಂಗ್ರೆಸ್ ಮತ್ತು ಸುರೇಶ್ ಮಾತ್ರ ಎಂದು ತಿಳಿಸಿದರು.

ಸಾಮಾಜಿಕ ಜಾಲತಾಣಗಳಲ್ಲಿ ಕಲ್ಲು ವರ್ಸಸ್ ಹೃದಯ, ದರೋಡೆ ವರ್ಸಸ್ ಹೃದಯವಂತ ಎಂದು ಬಿಂಬಿಸುತ್ತಿರುವ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್, “ಕಲ್ಲು ಪ್ರಕೃತಿ, ಕಡಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ” ಎಂದು ತಿರುಗೇಟು ನೀಡಿದರು.

Exit mobile version