Site icon Vistara News

Parliament Session: ಇಂದು ಮತ್ತೆ 3 ಎಂಪಿ ಸಸ್ಪೆಂಡ್! 143ಕ್ಕೇರಿದ ಅಮಾನತು ಸಂಸದರ ಸಂಖ್ಯೆ

3 more opposition mps suspended and total number goes up to 143

ನವದೆಹಲಿ: ಸಂಸತ್ತಿನಿಂದ (Parliament Session) ಸಂಸದರನ್ನು ಅಮಾನತು (MPs Suspended) ಮಾಡುವ ಪ್ರಕ್ರಿಯೆ ಬುಧವಾರವೂ ನಿಂತಿಲ್ಲ. ಕಲಾಪಕ್ಕೆ ಅಡ್ಡಿಪಡಿಸಿದ್ದಾರೆಂದು ಆರೋಪಿಸಿ ಲೋಕಸಭೆಯಿಂದ (Lok Sabha) ಬುಧವಾರವೂ ಮತ್ತೆ ಮೂವರನ್ನು ಅಮಾನತು ಮಾಡಲಾಗಿದೆ. ಥಾಮಸ್ ಚಾಜಿಕಾಡನ್, ಕೆ ಸಿ ಮಣಿ ಮತ್ತು ಎ ಎಂ ಆರಿಫ್ ಅವರು ಸಸ್ಪೆಂಡ್ ಆದ ಸಂಸದರು. ಸಂಸತ್ತಿನ ಉಳಿದ ಅವಧಿಗೆ ಅವರನ್ನು ಅಮಾನತು ಮಾಡಲಾಗಿದೆ. ಈ ಮೂವರು ಅಮಾನತ್ತಿನೊಂದಿಗೆ ಸಸ್ಪೆಂಡ್ ಆದ ಸಂಸದರ ಸಂಖ್ಯೆ 143ಕ್ಕೆ ಏರಿಕೆಯಾಗಿದೆ.

ಸಂಸತ್ತಿನಲ್ಲಿ ನಡೆಯುತ್ತಿರುವ ಅಡೆತಡೆಗಳು ಮತ್ತು ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಸ್ಪೀಕರ್ ಈ ನಿರ್ಧಾರ ಕೈಗೊಂಡಿದ್ದಾರೆ. ಅಧಿವೇಶನದ ಸುಗಮ ಕಾರ್ಯನಿರ್ವಹಣೆಯ ಬಗ್ಗೆ ಕಳವಳ ವ್ಯಕ್ತವಾಗಿದೆ. ಅಮಾನತುಗೊಂಡ ಸಂಸದರುಚಳಿಗಾಲದ ಅಧಿವೇಶನದ ಉಳಿದ ಅವಧಿಯ ಕಲಾಪದಲ್ಲಿ ಭಾಗವಹಿಸಲು ಅನುಮತಿಸಲಾಗುವುದಿಲ್ಲ.

ನಿನ್ನೆಯೂ ಸಂಸದರನ್ನು ಅಮಾನತು ಮಾಡಲಾಗಿತ್ತು!

ಚಳಿಗಾಲದ ಅಧಿವೇಶನ (Winter Session) ನಡೆಯುತ್ತಿರುವ ಲೋಕಸಭೆಯಲ್ಲಿ (Parliament Session) ಅಮಾನತು ಪರ್ವ ಮುಂದುವರಿದಿದ್ದು, ಮತ್ತೆ 49 ಸಂಸದರನ್ನು ಅಮಾನತುಗೊಳಿಸಲಾಗಿದೆ. ಸೋಮವಾರ ಉಭಯ ಸದನಗಳಿಂದ 78 ಪ್ರತಿಪಕ್ಷ ಸಂಸದರನ್ನು (ಲೋಕಸಭೆಯಿಂದ 33 ಮತ್ತು ರಾಜ್ಯಸಭೆಯಿಂದ 45) ಅಮಾನತುಗೊಳಿಸಲಾಗಿತ್ತು.

ಸಂಸತ್ತಿನ ಭದ್ರತಾ ಉಲ್ಲಂಘನೆಯ ವಿಷಯದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿಕೆ ನೀಡುವಂತೆ ಒತ್ತಾಯಿಸಿ ಸದನದೊಳಗೆ ಸಂಸದರು ಪ್ಲೇಕಾರ್ಡ್‌ಗಳನ್ನು ತಂದರು ಮತ್ತು ಘೋಷಣೆಗಳನ್ನು ಕೂಗಿದರು. ಈ ಅಶಿಸ್ತಿನ ವರ್ತನೆ ಮತ್ತು ಕಲಾಪಕ್ಕೆ ಅಡ್ಡಿಪಡಿಸಿದ ಸಂಸದರನ್ನು ಅಮಾನತುಗೊಳಿಸಲಾಯಿತು. ಈ ಅಮಾನತುಗಳನ್ನು ವಿರೋಧಿಸಿ ಇಂಡಿಯಾ ಮೈತ್ರಿಕೂಟದ ಪಕ್ಷಗಳು ಸಂಸತ್ತಿನ ಚಳಿಗಾಲದ ಅಧಿವೇಶನದ ಉಳಿದ ಅವಧಿಯನ್ನು ಸಂಪೂರ್ಣವಾಗಿ ಬಹಿಷ್ಕರಿಸಲು ನಿರ್ಧರಿಸಿವೆ.

ಸಂಸತ್ತಿನ ಭದ್ರತಾ ಉಲ್ಲಂಘನೆಯ ವಿಷಯದಲ್ಲಿ ಪ್ರತಿಪಕ್ಷದ ಸದಸ್ಯರು ಸದನದಲ್ಲಿ ಗದ್ದಲವನ್ನು ಮುಂದುವರೆಸಿದ ಪರಿಣಾಮ ರಾಜ್ಯಸಭೆಯನ್ನು ಮಂಗಳವಾರದ ಊಟಕ್ಕೂ ಮೊದಲೆ ಎರಡು ಬಾರಿ ಮುಂದೂಡಲಾಯಿತು. ಸ್ಪೀಕರ್, ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಅವರ ವರ್ತನೆಯನ್ನು ಟಿಎಂಸಿ ನಾಯಕ ಕಲ್ಯಾಣ್ ಬ್ಯಾನರ್ಜಿ ಮಿಮಿಕ್ರಿ ಮಾಡಿದರು. ಇದನ್ನು ರಾಹುಲ್‌ ಗಾಂಧಿ ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿಕೊಳ್ಳುತ್ತಿದ್ದರು. ಇದನ್ನು ಪ್ರಸ್ತಾಪಿಸಿದ ಸಭಾಪತಿ, ಇದು ನಾಚಿಕೆಗೇಡಿನ ಸಂಗತಿಯಾಗಿದೆ, ಯಾವುದಕ್ಕೂ ಮಿತಿ ಇರಬೇಕು ಎಂದು ಟೀಕಿಸಿದರು.

ಈ ಸುದ್ದಿಯನ್ನೂ ಓದಿ : Parliament Session: ಅಮಿತ್ ಶಾ ಹೇಳಿಕೆಗೆ ಆಗ್ರಹಿಸುತ್ತಿದ್ದ 90 ಸಂಸದರು ಅಮಾನತು!

ಮಧ್ಯಾಹ್ನ ಸದನ ಸಭೆ ಸೇರಿದ ಕೂಡಲೇ ಸಭಾಪತಿ ಜಗದೀಪ್ ಧನ್‌ಕರ್ ಅವರು ಹಿರಿಯ ಕಾಂಗ್ರೆಸ್ ಸದಸ್ಯ ದಿಗ್ವಿಜಯ ಸಿಂಗ್ ಅವರನ್ನು ಅವ್ಯವಸ್ಥೆ ಉಂಟುಮಾಡಿದ್ದಕ್ಕಾಗಿ ಎಚ್ಚರಿಸಿ ಕುಳಿತುಕೊಳ್ಳುವಂತೆ ಸೂಚಿಸಿದರು. “ನಾನು ಸ್ವಲ್ಪ ಸಮಯದ ಹಿಂದೆ ಟಿವಿ ಚಾನೆಲ್‌ನಲ್ಲಿ ನೋಡಿದೆ. ಅಧಃಪತನಕ್ಕೆ ಮಿತಿಯೇ ಇಲ್ಲದಂತಾಗಿದೆ. ನಿಮ್ಮ ಪಕ್ಷದ ಹಿರಿಯ ನಾಯಕರೊಬ್ಬರು ಮತ್ತೊಬ್ಬ ಸಂಸದರ ಅಸಂಸದೀಯ ವರ್ತನೆಯನ್ನು ವಿಡಿಯೋ ಮಾಡುವುದನ್ನು ನಾನು ನೋಡಿದ್ದೇನೆ. ಅವರು ನಿಮಗಿಂತ ದೊಡ್ಡ ನಾಯಕ ಕೂಡ” ಎಂದು ಛೇಡಿಸಿದರು. “ಪ್ರಜ್ಞಾವಂತಿಕೆ ಮಾತ್ರ ಮೇಲುಗೈ ಸಾಧಿಸಬೇಕು. ಕನಿಷ್ಠ ಕೆಲವು ಸ್ಥಳಗಳನ್ನಾದರೂ ಬಿಟ್ಟುಬಿಡಿ” ಎಂದು ಹೇಳಿದರು.

ಈ ಸುದ್ದಿ ಬಗ್ಗೆ ನಿಮ್ಮ ಏನಿಸಿಕೆ ಏನು, ಕಮೆಂಟ್ ಮಾಡಿ ತಿಳಿಸಿ

Exit mobile version